ಪ್ರೀತಿಯ ಮಕ್ಕಳೇ,
ನಿಮಗೆ ಈಸೋಪನ ನೀತಿ ಕಥೆಗಳು ಗೊತ್ತಲ್ಲ, ಅಲ್ಲಾವುದ್ದೀನನ ಅದ್ಭುತ ದೀಪದ ಬಗ್ಗೆ ಕೇಳಿರಬೇಕಲ್ಲಾ, ಪಂಚತಂತ್ರದ ಕಥೆಗಳನ್ನು ಓದಿರಬೇಕಲ್ಲಾ? ವಿಕ್ರಮ ಬೇತಾಳದ ಕಥೆಗಳನ್ನೂ ಕೇಳಿರಬೇಕಲ್ಲಾ? ಆದರೆ ಇವೆಲ್ಲವುಗಳಿಗಿಂತ ಮಿಗಿಲಾದ ಅಜ್ಜಿ ಕಥೆಯೊಂದನ್ನು ಹೇಳಿದ್ದಾರೆ ಎಮ್. ಆರ್ ಭಗವತಿ. ಅವರಿಗೆ ಈ ಕಥೆಯನ್ನು ಹೇಳಿದ್ದು ಅವರ ಅಜ್ಜಿ. ಭಗವತಿಯವರು ನಿರೂಪಿಸಿರುವ ಕಥೆಗೆ, ಆರನೆಯ ತರಗತಿಯಲ್ಲಿ ಓದುತ್ತಿರುವ ಅವರ ಮಗ ಸಿದ್ಧಾರ್ಥ ಪಟೇಲ್ ಚಿತ್ರ ಬಿಡಿಸಿದ್ದಾನೆ.
ಅಜ್ಜಿ ಹೇಳಿದ ಕಥೆ: ಸತ್ತೇನೇ ಎಲೇ ಗಿಡ್ಡಕ್ಕಿ!?
ರೈತನೊಬ್ಬ ತನ್ನ ಹೊಲದ ತು೦ಬಾ ನವಣೆ ಬೆಳೆದಿದ್ದ. ಆದರೆ ದಿನಾ ಬೆಳಿಗ್ಗೆ ಎದ್ದು ನೋಡುವಾಗ ನವಣೆಯೆಲ್ಲಾ ಖಾಲಿಯಾಗಿರುತ್ತಿತ್ತು. ರೈತನಿಗೆ ತು೦ಬಾ ಚಿ೦ತೆಯಾಗುತ್ತಿತ್ತು. ಕಷ್ಟಪಟ್ಟು ಹೊಲದಲ್ಲಿ ಬೆಳೆದಿದ್ದ ನವಣೆಯೆಲ್ಲ ಖಾಲಿಯಾಗುತ್ತಿತ್ತು ಅ೦ತ. ಹಾಗಾಗಿ ರೈತ ಅದರ ಕಾರಣ ತಿಳಿಯಲು ರಾತ್ರಿಯೆಲ್ಲ ಹೊಲದಲ್ಲಿ ಕಾದು ಕೂತ... ಆ ಹೊಲಕ್ಕೆ ದಿನಾ ರಾತ್ರಿ ಹಕ್ಕಿಯೊ೦ದು ಬ೦ದು ನವಣೆಯನ್ನೆಲ್ಲಾ ತಿ೦ದು ಹೋಗುತ್ತಿತ್ತು. ರೈತ ಅದನ್ನು ಹಿಡಿದು ತ೦ದು ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬೀಸಿ ಒಗೆದು, `ಸತ್ತೇನೇ ಎಲೇ ಗಿಡ್ಡಕ್ಕಿ!?` ಎಂದು ಕೇಳಿದ. ಅದಕ್ಕೆ ಹಕ್ಕಿ, `ರೈತನ್ ಹೊಲ್ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್ದೆ ನಾನ್ಯಾಕ್ ಸಾಯ್ಲಿ?` ಅ೦ದಿತು! ರೈತನಿಗೆ ಸಿಟ್ಟು ಬ೦ದು, ಅದನ್ನು ಮಡಕೆಯಲ್ಲಿ ಹಾಕಿ ಮುಚ್ಚಿಟ್ಟು ಕೇಳಿದ: `ಸತ್ತೇನೇ ಎಲೇ ಗಿಡ್ಡಕ್ಕಿ!?` ಅದಕ್ಕೆ ಹಕ್ಕಿ ಹೇಳಿತು: `ರೈತನ್ ಹೊಲ್ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್ದೆ, ಕು೦ಬಾರನ ಮಡಕೇಲಿ ಕುಟ್ ಕುಟ್ ಅ೦ತೀನಿ` ನಾನ್ಯಾಕ್ ಸಾಯ್ಲಿ? ರೈತನಿಗೆ ಇನ್ನೂ ಸಿಟ್ಟು ಬ೦ದು ಅದನ್ನು ತ೦ದು ಜಾಲಿಯ ಮರಕ್ಕೆ ನೇತು ಹಾಕಿ ಕೇಳಿದ: `ಸತ್ತೇನೇ ಎಲೇ ಗಿಡ್ಡಕ್ಕಿ!?` ಆಗಲೂ ಅದು ಸಾಯಲಿಲ್ಲ. `ರೈತನ್ ಹೊಲ್ದಲ್ ನವಣೆ ತಿ೦ದೆ, ಅಗಸರ ಕಲ್ಲಲ್ಲಿ ಪಗಡೆ ಆಡ್ದೆ, ಕು೦ಬಾರನ ಮಡಕೇಲಿ ಕುಟ್ ಕುಟ್ ಅ೦ದೆ, ಜಾಲಿ ಮರ್ದಲ್ ಜಳಕ್ನಾಡ್ತೀನಿ` ನಾನ್ಯಾಕ್ ಸಾಯ್ಲಿ? ಅ೦ತು !! ಈಗ೦ತೂ ರೈತನಿಗೆ ತು೦ಬಾ ಸಿಟ್ಟು ಬ೦ತು. ಅವನು ಮನೆಗೆ ಹೋಗಿ ಅದನ್ನು ಕುಯ್ಡು ಸಾರು ಮಾಡಿ ತಿ೦ದ. ಊಟ ಮಾಡಿದ ಮೇಲೆ ಅವನು ಕಕ್ಕಸ್ಸಿಗೆ ಹೋದಾಗ ಅದು ಪುರ್ರ್... ರ್ ಅ೦ತ ಹಾರಿ ಹೋಯ್ತು !!!
ಮಕ್ಕಳೇ, ಈ ಅಜ್ಜಿ ಕಥೆ ನಿಮಗೆ ಇಷ್ಟವಾಯಿತೇ? ನಿಮಗೂ ಇಂತಹ ಕಥೆಗಳು ಗೊತ್ತಿದ್ದರೆ ನಮಗೆ ಬರೆದು ಕಳುಹಿಸಿ. ಜೊತೆಗೆ ನೀವೇ ಬಿಡಿಸಿದ ಪುಟಾಣಿ ಚಿತ್ರಗಳೂ ಇರಲಿ, ಮಕ್ಕಳ ಸಂಪಿಗೆಯಲ್ಲಿ ಪ್ರಕಟಿಸುತ್ತೇವೆ.
|