ಎಲ್ಲೆಲ್ಲೂ ಬೆಳಕು, ಯಾವ ದಿಕ್ಕಿನಲ್ಲಿ ನಡೆದರೆ ಹುಡುಕುತ್ತಿರುವ ವಿಳಾಸ ತಲುಪುತ್ತೇನೆಯೋ ಅರಿಯದೇ ನಿಂತಿದ್ದೇನೆ, ಹೀಗೆ ನಿಂತಿರುವುದು ನಾನು ಮಾತ್ರ ಅಲ್ಲ. ನನ್ನೊಡನೆ ಹಲವಾರು ಮಂದಿ. ಅವರನ್ನೆಲ್ಲ ಕೇಳಿದೆ ‘ನೀವೆಲ್ಲಿ ಹೊರಟಿದ್ದೀರಿ' ಅವರೆಲ್ಲ? ‘ನಾವೂ ಅಲ್ಲಿಗೇ ಹೊರಟಿದ್ದೇವೆ' ಎನ್ನುತ್ತಾರೆ. ಇಷ್ಟೆಲ್ಲ ಜನರಿದ್ದರೂ ಅಲ್ಲಿಗೆ ಹೋಗುವ ದಾರಿ ಮಾತ್ರ ತಿಳಿಯುತ್ತಿಲ್ಲ ಒಬ್ಬರಿಗೂ. ಕುಳಿತಿರುವಂತೆಯೇ ದೂರದಲ್ಲಿ ಚಿಕ್ಕ ಚುಕ್ಕಿಯೊಂದು ಮಿನುಗುತ್ತಿರುವಂತೆ ಅನಿಸಿ ಎಲ್ಲರೂ ಆ ದಿಕ್ಕಿನಲ್ಲಿಯೇ ದಿಟ್ಟಿಸಲಾರಂಭಿಸುತ್ತೇವೆ. ನೋಡುತ್ತಿರುವಂತೆಯೇ ಆ ಮಿಣುಕು ನಕ್ಷತ್ರದಂತೆ ಕಾಣಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಅದು ನಕ್ಷತ್ರವಲ್ಲ... ದೀಪ ಎಂಬುದು ಅರಿವಾಗಿ ಆಶ್ಚರ್ಯವೂ! ನಿಧಾನವಾಗಿ ದೀಪ ಹಣತೆಯೊಳಗಿನ ದೀಪವಾಗಿ, ಹಣತೆಯ ದೀಪ ಹೆಣ್ಣೊಬ್ಬಳ ಬೊಗಸೆಯೊಳಗಿನ ಹಣತೆಯಾಗಿ , ದೀಪ ಹಿಡಿದ ಬೊಗಸೆ ಹೆಣ್ಣೊಬ್ಬಳ ಕೈಯಾಗಿ, ಕೊನೆಯಲ್ಲಿ ಹೆಣ್ಣೊಬ್ಬಳು ಬೊಗಸೆಯಲ್ಲಿ ಬೆಳಗುವ ಹಣತೆ ಹಿಡಿದು ನಮ್ಮೆಡೆಗೇ ನಡೆದು ಬರುತ್ತಿದ್ದಾಳೆ ಎಂಬುದು ಅರಿವಾಗಿ.... ಹಾಗೆಯೇ ಹಿಂದೆಯೇ ಸಾವಿರಾರು ದೀಪಗಳು, ದೀಪಗಳ ಸಾಲು.
‘ದೀಪಾವಳಿ' ಎಂಬ ಪದವೇ ಸೂಚಿಸುವಂತೆ ದೀಪಗಳ ಹಬ್ಬವೇ ದೀಪಾವಳಿ. ಬೆಳಕಿನ ಸಾಲುಗಳ ಹಬ್ಬವಿದು. ದೀಪವೆಂಬ ಪದವೇ ಚಂದ. ಅದರರ್ಥ ಇನ್ನೂ ಸೊಗಸು. ದೀಪವೆಂಬ ಪದಕ್ಕೆ ಒಂದೆರಡೇ ಅರ್ಥಗಳಿಲ್ಲ. ಕಂಡುಕೊಂಡಷ್ಟೂ ಮುಗಿಯದ ಅರ್ಥಗಳ ಮೊತ್ತವೇ ದೀಪ ಎನಿಸಿಬಿಡುತ್ತದೆ ಯೋಚಿಸಿದಷ್ಟೂ. ಹಾಗೆಯೇ ದೀಪಾವಳಿಯನ್ನು ಬಿಡಿಸಿ ‘ದೀಪ' ಎಂದರೆ ಬೆಳಕು, ‘ಅವಳಿ' ಎಂದರೆ ಸಾಲು ಎಂಬಷ್ಟೇ ಅರ್ಥದೊಳಗೆ ಮುಗಿಸಿಬಿಡುವುದು ಕಷ್ಟ. ಹಬ್ಬಗಳ ಹಿನ್ನೆಲೆ ಕಾಣುತ್ತ ಹೋದಂತೆ ಹಬ್ಬಗಳ ಹೆಸರು, ಆಚರಣಾ ವಿಧಾನಗಳ ಅರ್ಥ ವಿಸ್ತಾರವಾಗುತ್ತಾ ಹೋಗುತ್ತದೆ. ಆಚರಿಸುವ ಪ್ರತಿ ಹಬ್ಬಗಳಲ್ಲಿಯೂ ದೀಪ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ಆಕರಗಳು ಬೇರೆ ಅಷ್ಟೇ. ಕೆಲವೆಡೆ ಹಣತೆ, ಕೆಲವೆಡೆ ಕ್ಯಾಂಡಲ್. ಯಾವುದು ಏನೇ ಇದ್ದರೂ ದೀಪ ದೀಪವೇ. ದೀಪಕ್ಕೊಂದು ಬತ್ತಿ ಬೇಕೇ ಬೇಕು, ತೈಲವೂ ಬೇಕು. ತೈಲವೋ, ಬತ್ತಿಯೋ..... ಒಟ್ಟಿನಲ್ಲಿ ಎಲ್ಲರಿಗೂ ಬೇಕಾಗಿರುವುದು ಬೆಳಕೇ ವಿನಃ ಬೆಳಕಿನ ಮೂಲದ ವೈವಿಧ್ಯತೆಯೊಳಗಿನ ವ್ಯತ್ಯಾಸವಲ್ಲ. ವ್ಯತ್ಯಾಸಗಳ ವಿಂಗಡಣೆಯೂ ಅಲ್ಲ, ವಿಭಜನೆಯೂ ಅಲ್ಲ. ಬೇಕಾಗಿರುವುದು ಬೆಳಕು ಮಾತ್ರ.
ಪ್ರತಿದಿನ, ಪ್ರತಿ ಕ್ಷಣ ಬೇಕಾಗಿರುವ ದೀಪ ಪಡೆದಿರುವ ಉನ್ನತ ಸ್ಥಾನದ ಪ್ರತೀಕವೇ ಈ ದೀಪಾವಳಿ. ಅಂದು ಮನೆಯ ಮೂಲೆ ಮೂಲೆಗಳನೂ ಬಿಡದೇ ಹಣತೆ ಬೆಳಗಿಸಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ದೊರೆತು ಮೂಲೆ ಮೂಲೆಗಳಲೂ ಅಂಟಿಸಿದ ದೀಪಕ್ಕೆ ಆಸ್ತಿಕ ನಾಸ್ತಿಕರೆಲ್ಲರೊಳಗೂ ಅರ್ಥಮೂಡಿ ಪ್ರತಿ ಮನದ ಮೂಲೆಯೊಳಗೂ ದೀಪ ಉರಿಯುತ್ತಿದೆ ಇಂದು. ಉರಿವ ದೀಪ ಉರಿದು ಅಳಿದುಹೋಗುವ ಮುನ್ನ ಸದುಪಯೋಗವಾಗಬೇಕಾದುದಷ್ಟೇ ಉಳಿದದ್ದು. ಕತ್ತಲನ್ನು ಅಳಿಸುವ ಕಾರ್ಯದಂತೆಯೇ ಆರುತ್ತಿರುವ ದೀಪಗಳನು ಉರಿಸುವ ಕಾರ್ಯವೂ ದೀಪದಿಂದಲೇ ಆಗಬೇಕಾದದ್ದು. ಅರಿವು ಅಜ್ಞಾನವನು ಅರಿಯಬೇಕು. ಹಾಗೆಯೇ ಅಜ್ಞಾನ ಅರಿವಿನೊಳಗೆ ಬೆರೆತು ಅರಿವಾಗಬೇಕಾದ್ದು ದೀಪದೊಳಗಿನ ಈ ಮುಖದ ಅರ್ಥ. ‘ಅರಿವೇ ಗುರುವು' ದೀಪವೆಂದರೆ ಅರಿವು, ಜ್ಞಾನವೆಂದಾದ ಮೇಲೆ ದೀಪವೊಂದು ಶ್ರೇಷ್ಠ ಗುರುವು. ಕಾರ್ತೀಕ ಮಾಸದಲ್ಲಿ ಮನೆಮುಂದಿನ ತುಳಸೀಕಟ್ಟೆಯ ಮುಂದೆ ಬೆಳಗುವ ಹಣತೆಯ ಮುಂದೆ ಒಂದರ್ಧ ಗಂಟೆ ಕಳೆದರೆ ನಾವು ನಾವಾಗಿರದೇ ಮತ್ತೇನನ್ನೋ ಪಡೆದ ಭಾವ ನಮ್ಮನ್ನಾವರಿಸಿರುತ್ತದೆ. ಸುತ್ತಲಿನ ಅಗಾಧತೆ ರುಚಿಸುವುದಿಲ್ಲ. ದೀಪವೇ ನಿಮ್ಮನ್ನೆಳೆಯುತ್ತದೆ, ಒಂದೊಳ್ಳೆಯ ಮಾರ್ಗ ತೋರುತ್ತದೆ. ಮನಸ್ಸು ಹಗುರಾಗಿರುತ್ತದೆ. ‘ತೈಲಧಾರೆಯಂತೆ ಮನಸುಕೊಡೊ ಹರಿಯೇ' ಹೌದು, ಅಂತಹದೊಂದು ಮನಸು ಬೇಕು. ಬರಿಯ ತೈಲಧಾರೆಯಂತ ಮನಸಿದ್ದರೆ ಸಾಲದು, ಅಲ್ಲಿ ದೀಪವೂ ಉರಿಯುತ್ತಿರಬೇಕು.
ದೀಪದ ಹಿನ್ನೆಲೆ ಹುಡುಕುತ್ತ, ದೀಪದಿಂದ ಮುಂದೇನಾಗಬೇಕಿದೆ ಎಂಬುದ ಯೋಚಿಸುವ ಮೊದಲು ಇವತ್ತೇನು ಮಾಡುತ್ತಿದ್ದೇವೆ ಎಂಬುದನರಿವುದಕ್ಕಾಗಿ ದೀಪವೊಂದನ್ನು ಬೆಳಗಿಸೋಣ. ದೀಪದ ಬುಡದಲ್ಲಿನ ಕತ್ತಲೆಯನ್ನು ಹುಡುಕುವುದು ಬೇಡ, ಸುತ್ತಲಿನ ಬೆಳಕನ್ನು ಆಸ್ವಾದಿಸೋಣ. ‘ಓ ದೀಪವೇ....ಎಲ್ಲರನ್ನೂ ಕಾಪಾಡು...' ಎಂದು ದೀಪದ ಮುಂದೆರಗಿ ಬೇಡಿಕೊಳ್ಳುತ್ತಾ... ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
[ಚಿತ್ರ-ಚರಿತಾ]