ಈ ವಾರದ ಮಕ್ಕಳ ಸಂಪಿಗೆಯಲ್ಲಿ ಸಂಕೇತ್ ಪಿ.ಭಾರತೀಶ್ ಎನ್ನುವ ಬಹುಮುಖ ಪ್ರತಿಭೆಯ ಪರಿಚಯ. ಚಿತ್ರಕಲೆ, ಕಾವ್ಯರಚನೆ, ಸಂಗೀತ, ನೃತ್ಯ, ನಟನೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನ ತೊಡಗಿಸಿಕೊಂಡಿರುವ ಸಂಕೇತ್ ಎಲ್ಲದರಲ್ಲೂ ಒಂದು ಕೈ ಮುಂದು.
ಹಾಸನದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಸಂಕೇತ್ ಈಗ ಎಂಟರಿಂದ ಒಂಭತ್ತನೇ ತರಗತಿಗೆ ಹೋಗುವ ಖುಷಿಯಲ್ಲಿದ್ದಾನೆ. ಚಿಕ್ಕಂದಿನಿಂದಲೂ ಬಣ್ಣಗಳು ಅಂದರೆ ಆಸೆ ಇಟ್ಟುಕೊಂಡಿರುವ ಹುಡುಗ ಅವುಗಳನ್ನ ಬಳಸಿ ಚಂದ ಚಂದದ ಚಿತ್ರಗಳನ್ನ ಬಿಡಿಸುತ್ತಾನೆ. ‘ನಿನಗೆ ಯಾವುದೋ ಚಿತ್ರವನ್ನ ನೋಡಿ ಅದರಂತೆ ಬರೆಯೋದು ಇಷ್ಟವಾ, ಇಲ್ಲ ನೀನೇ ಕಲ್ಪನೆ ಮಾಡಿಕೊಂಡು ಬಿಡಿಸೋದು ಇಷ್ಟವಾ?’ ಅಂದರೆ ‘ಎರಡೂ ಇಷ್ಟ. ಎರಡೂ ರೀತಿಯಲ್ಲೂ ಬಿಡಿಸುತ್ತೇನೆ’ ಅಂತ ನಗುತ್ತಾನೆ.
ನೀಲಿ, ಬಿಳಿ ಬಣ್ಣಗಳು ಅವನ ಇಷ್ಟದ ಬಣ್ಣಗಳು. ಗಾಢ ಬಣ್ಣಗಳನ್ನ ಹೆಚ್ಚೆಚ್ಚು ಬಳಸಿ ಚಿತ್ರ ಬರೆಯೋದು ಅವನಿಗಿಷ್ಟ. ನದಿ,ತೊರೆ, ಮರ, ಕೆರೆ, ಕಮಲ, ಗುಡಿ ಗೋಪುರಗಳಿಂದ ಶುರುವಾಗಿ ಹಂಪಿಯ ವಿರೂಪಾಕ್ಷ, ಬಸವಣ್ಣ, ಭಗತ್ ಸಿಂಗ್ ವರೆಗೆ ಎಲ್ಲರನ್ನೂ ಈತ ತನ್ನ ಕುಂಚದಿಂದ ಚಿತ್ರಿಸಿದ್ದಾನೆ.

ಸಂಕೇತ್ ಕೇವಲ ಚಿತ್ರ ಕಲಾವಿದ ಮಾತ್ರವಲ್ಲ. ಒಳ್ಳೆಯ ಕವಿ ಕೂಡ. ತನ್ನ ಹದಿಮೂರನೇ ವಯಸ್ಸಿನಲ್ಲೇ ಚೊಚ್ಚಲ ಕವನ ಸಂಕಲನವನ್ನ ಪ್ರಕಟಿಸುವ ಮೂಲಕ ಈಗಾಗಲೇ ಅಧಿಕೃತವಾಗಿ ಕವಿ ಅಂತ ಕೂಡ ಕರೆಸಿಕೊಂಡಿದ್ದಾನೆ. ೨೦೦೮ರ ಮಾರ್ಚ್ ನಲ್ಲಿ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಂಕೇತನ ‘ಕಲರವ’ ಕವನ ಸಂಕಲನ ಬಿಡುಗಡೆಯಾಗಿದೆ. ಅದೇ ವೇಳೆ ಸಂಕೇತನ ಚಿತ್ರಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವೂ ನಡೆದಿದೆ.
ಧಾರವಾಡದ ರಾಜ್ಯಮಟ್ಟದ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಕೇತ್ , ೨೦೦೮ರ ಧಾರವಾಡ ಚಿಣ್ಣರ ಮೇಳದ ಉದ್ಘಾಟಕನಾಗಿ ಆಯ್ಕೆ ಆದದ್ದು ಹೆಮ್ಮೆಯ ವಿಚಾರ. ೨೦೦೭-೦೮ ರಲ್ಲಿ ಜಿಲ್ಲಾ ಮಟ್ಟದಲ್ಲಿ ಕಲಾ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಈ ಪ್ರತಿಭೆ, ೨೦೦೮ರ ನವೆಂಬರ್ ೧೪ ರಂದು ಶ್ರವಣ ಬೆಳಗೊಳದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಕವಿಗೋಷ್ಠಿಯಲ್ಲಿ ಭಾಗವಹಿಸಿ ಬಾನುಲಿಯಲ್ಲಿ ಕಾವ್ಯವಾಚನ ಮಾಡಿದ್ದಾನೆ. ೨೦೦೮ರ ಜುಲೈನಲ್ಲಿ ಇತನ ಬಹುಮುಖ ಪ್ರತಿಭೆ ಕುರಿತು ಹಾಸನ ಆಕಾಶವಾಣಿಯಲ್ಲಿ ಸಂದರ್ಶನ ಪ್ರಸಾರವಾಗಿದೆ.
ಕೇಂದ್ರ ಸರ್ಕಾರದ ಸಿಸಿಆರ್ ಟಿ ಸ್ಕಾಲರ್ ಶಿಪ್ ಪುರಸ್ಕೃತ ಸಂಕೇತ್, ಧರ್ಮಸ್ಠಳ ಆಯುರ್ವೇದ ಕಾಲೇಜು, ಪ್ರೇರಣಾ ವಿಕಾಸ ವೇದಿಕೆ, ಶಾಂತಲಾ ಫೈನ್ಸ್ ಆಟ್ಸ್, ಹೊಯ್ಸಳ ಉತ್ಸವ, ಬಿಜಿಎಸ್ ತೋಟಗಾರಿಕೆ, ಎಂಸಿಇ, ಎಂಸಿಎಫ್ ಗ್ರಾಹಕ ವೇದಿಕೆ ಮುಂತಾದ ಕಡೆಗಳಲ್ಲಿ ಚಿತ್ರಕಲಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾನೆ. ಅನೇಕ ಕಡೆ ಕವನ ವಾಚನ ಮಾಡಿದ್ದಾನೆ. ರಾಜ್ಯ ಸರ್ಕಾರ ಕೂಡ ಈತನ ಪ್ರತಿಭೆ ಗುರುತಿಸಿ ನಗದು ಪುರಸ್ಕಾರ ನೀಡಿದೆ.
ಚಿತ್ರ ಬಿಡಿಸೋದು, ಕವಿತೆ ಬರೆಯೋದಲ್ಲದೆ, ಕ್ಲೇ ಮಾಡಲಿಂಗ್, ಸಂಗೀತ, ನೃತ್ಯ, ಅಭಿನಯ, ಪ್ರಬಂಧ ರಚನೆ, ಪುಷ್ಪಾಲಂಕಾರ ಮುಂತಾದ ಹವ್ಯಾಸಗಳು ಈತನಿಗಿವೆ. ನೂರಾರು ಹಳೆಯ ಅಂಚೆ ಚೀಟಿಗಳು ಈತನ ಸಂಗ್ರಹದಲ್ಲಿವೆ. ಕ್ರಿಕೆಟ್ ಆಟದಲ್ಲಿ ಕೂಡ ತನ್ನ ಪ್ರತಿಭೆ ಪ್ರದರ್ಶಿಸಿರುವ ಸಂಕೇತ್ ೨೦೦೬-೦೭ರಲ್ಲಿ ೧೩ ವರ್ಷದೊಳಗಿನ ಕ್ರಿಕೆಟ್ ತಂಡದಲ್ಲಿ ಹಾಸನ ಜಿಲ್ಲೆಯನ್ನು ಪ್ರತಿನಿಧಿಸಿದ್ದಾನೆ.

ವಿವೇಕಾನಂದ, ಭಗತ್ ಸಿಂಗ್, ಕುವೆಂಪು, ಅಬ್ದುಲ್ ಕಲಾಂ, ಲಿಯೋನಾರ್ಡೋ ಡಾ ವಿಂಚಿ ಈತನ ಮೆಚ್ಚಿನ ವ್ಯಕ್ತಿಗಳು. ಸಂಕೇತ್, ಹಾಸನದ ದೇಸಾಯಿ ಹವ್ಯಾಸಿ ಚಿತ್ರಕಲಾ ಶಾಲೆಯಲ್ಲಿ ದೇಸಾಯಿ ಗುರುಗಳ ಬಳಿ ಚಿತ್ರಕಲೆಯನ್ನ ಅಭ್ಯಾಸ ಮಾಡುತ್ತಿದ್ದಾನೆ.
ಹಾಸನದ ಸಿ.ಕೆ. ಭಾರತೀಶ್, ಹೆಚ್. ಆರ್ ಪರಿಮಳ ಸಂಕೇತನ ತಂದೆ-ತಾಯಿ. ಏರೋನಾಟಿಕಲ್ ಇಂಜಿನಿಯರ್ ಆಗಬೇಕು ಅನ್ನುವುದು ಈ ಹುಡುಗನ ಕನಸು.
ಸಂಕೇತನ ಪ್ರತಿಭೆ ಬಗ್ಗೆ ಓದಿ ನಿಮಗೇನನಿಸಿತು? ನಿಮಗೆ ತಿಳಿದಿರುವ, ನಿಮ್ಮ ಪಕ್ಕದ ಮನೆಯವರೂ ಆಗಿರಬಹುದಾದ ಇಂತಹ ಪುಟಾಣಿ ಪ್ರತಿಭೆಗಳ ಕುರಿತು ಮಕ್ಕಳ ಸಂಪಿಗೆಗೆ ಬರೆಯಿರಿ. ಅವರ ಕಥೆ, ಕವಿತೆ, ಲೇಖನ, ಚಿತ್ರಗಳನ್ನು editor@kendasampige.com ಗೆ ಕಳುಹಿಸಿ ಕೊಡಿ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸೋಣ.