ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ಆಟದಲ್ಲಿ ಆಸಕ್ತಿ ಹೊಂದಿರುತ್ತಾರೆ. ಮಕ್ಕಳಂತೂ ಆಟಕ್ಕಾಗಿ ಹಾತೊರೆಯುತ್ತಾರೆ. ಮನುಷ್ಯನ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಆಟದ ಪರಿಕಲ್ಪನೆಯ ಕುರಿತು ಸ್ವಲ್ಪ ಸೂಕ್ಷ್ಮವಾಗಿ ಯೋಚಿಸಿದರೆ ಅದರ ಮತ್ತೊಂದು ಆಯಾಮ ನಮಗೆ ಕಾಣಿಸುತ್ತದೆ. ಎಲ್ಲಾ ಆಟಗಳೂ ಬದುಕಿಗೆ ಅತ್ಯಂತ ಮುಖ್ಯವಾಗಿರುವ ಒಂದು ಜ್ಞಾನವನ್ನು ನಮಗೆ ನೀಡಲು ಪ್ರಯತ್ನಿಸುತ್ತಿರುತ್ತವೆ. ಅದನ್ನು ಅರಿಯುವಷ್ಟು ಸೂಕ್ಷ್ಮತೆ ನಮಗಿರಬೇಕಷ್ಟೇ.
ಯಾವ ಆಟವನ್ನು ತೆಗೆದುಕೊಂಡರೂ ಒಂದಂತೂ ಸ್ಪಷ್ಟ. ಎಷ್ಟೇ ಪ್ರತಿಭೆಯಿದ್ದರೂ ಪ್ರತೀ ಬಾರಿಯೂ ಗೆಲುವೆಂಬ ಗುರಿಯನ್ನು ತಲುಪುವುದು ಕಷ್ಟ. ಆದರೆ ಪ್ರತೀ ಸೋಲೂ ತಪ್ಪು ಮಾಡುವ ಹೊಸ ಹೊಸ ಸಾಧ್ಯತೆಗಳನ್ನು ತೋರಿಸಿ ಕೊಡುತ್ತಲೇ ಇರುತ್ತದೆ. ಈ ಅನಂತವಾದ ಸೋಲಿನ ಸಾಧ್ಯತೆಗಳನ್ನು ಮೀರುವ ಕ್ರಿಯೆಯನ್ನು ಆಟದ ಸಂದರ್ಭದಲ್ಲಿ ‘ಅದೃಷ್ಟ’ ಎಂದೂ ಹೇಳುತ್ತಾರೆ. ಈ ಅದೃಷ್ಟದ ಸಾಧ್ಯತೆಗೆ ಹೆಚ್ಚಿನ ಒತ್ತು ನೀಡಿದಾಗ ಆಟ ಜೂಜಾಗಿಬಿಡುತ್ತದೆ. ಈ ‘ಅದೃಷ್ಟ’ದ ಆಯಾಮವನ್ನು ಆಚೆಗಿಟ್ಟು ಆಟಗಳ ಬಗ್ಗೆ ಚಿಂತಿಸಿದರೆ ಅವು ‘ಸೋಲು’ ಎಂಬ ಪರಮಸತ್ಯದ ಕುರಿತು ತಿಳಿವಳಿಕೆ ನೀಡುವ ಅಧ್ಯಾತ್ಮಿಕ ವ್ಯಾಯಾಮದಂತೆ ಕಾಣಿಸುತ್ತದೆ.
ಹಾಗೆ ನೋಡಿದರೆ ಆಧ್ಯಾತ್ಮ, ಆಧ್ಯಾತ್ಮಿಕತೆ ಎಂಬ ಪರಿಕಲ್ಪನೆಗಳ ಮೂಲ ನೆಲೆಯಿರುವುದೇ ಸೋಲನ್ನು ಹೇಗೆ ನಿರ್ವಹಿಸಬೇಕು ಎಂಬ ಹುಡುಕಾಟದಲ್ಲಿ. ಮನುಷ್ಯ ಸಂಸ್ಕೃತಿ ಈ ಹುಡುಕಾಟವನ್ನು ಆಟಗಳ ಮೂಲಕ ಕಲಿಸುತ್ತಿರುತ್ತದೆ. ಸೋಲೆಂಬುದು ಬದುಕಿನ ಪರಮಸತ್ಯಗಳಲ್ಲೊಂದು ಎಂಬುದನ್ನು ಬಹಳ ಸಣ್ಣ ವಯಸ್ಸಿನಲ್ಲೇ ಕಲಿಯುವುದಕ್ಕಾಗಿಯೇ ಆಟಗಳು ರೂಪುಗೊಂಡಿವೆಯೇನೋ?
ಹೀಗೆ ಆಟಗಳಲ್ಲಿ ಆಧ್ಯಾತ್ಮವನ್ನು ಹುಡುಕುವುದು ಒಂದು ರೀತಿ ಅತಿಯಲ್ಲವೇ ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿಬಹುದು. ನಿತ್ಯ ಜೀವನದ ಕ್ರಿಯೆಗಳಲ್ಲೇ ಅಸಾಧಾರಣವಾದ ಅಥವಾ ದೈವೀಕವಾದ ಯಾವುದೋ ಒಂದರ ಹುಡುಕಾಟ ವರ್ತಮಾನದ ವಿದ್ಯಮಾನವೇನಲ್ಲ. ಇದಕ್ಕೆ ಮನುಷ್ಯನ ಆಲೋಚನೆಯಷ್ಟೇ ದೊಡ್ಡ ಇತಿಹಾಸವಿದೆ. ಬೌಲರ್ ಒಬ್ಬ ಎಸೆಯುವ ಪ್ರತಿ ಚೆಂಡಿನ ಉದ್ದೇಶವೂ ಒಂದು ವಿಕೆಟ್ ಪಡೆಯುವುದು. ಆದರೆ ಪ್ರತಿಯೊಂದು ಚೆಂಡೂ ವಿಕೆಟ್ ಉರುಳಿಸಿದರೆ ಅದು ಆಟವೇ ಅಲ್ಲ. ಎದುರು ನಿಂತಿರುವ ಬ್ಯಾಟ್ಸ್ ಮನ್, ಅವನ ಕೈಯಲ್ಲಿರುವ ಬ್ಯಾಟ್, ಅವನದನ್ನು ಬಳಸುವುದರಲ್ಲಿ ಪಡೆದಿರುವ ನೈಪುಣ್ಯ, ಬೀಸುವ ಗಾಳಿಯ ವೇಗ, ದಿಕ್ಕು ಮುಂತಾದ ಅನೇಕ ಅಡೆತಡೆಗಳನ್ನು ಮೀರಿ ಚೆಂಡು ಚಲಿಸುವಂತೆ ಬೌಲರ್ ನೋಡಿಕೊಳ್ಳಬೇಕು. ಹೀಗೆ ಪರಿಸ್ಥಿತಿಯನ್ನು ಮೀರುವ ಒಂದು ಕ್ಷಣ ವಿಕೆಟ್ ಬೀಳುತ್ತದೆ. ಅಲ್ಲಿಯ ತನಕದ ಎಸೆತಗಳೆಲ್ಲಾ ಗುರಿತಲುಪುವ ಎಸೆತಕ್ಕಾಗಿ ನಡೆಸುವ ಹುಡುಕಾಟ. ಬ್ಯಾಟ್ಸ್ ಮನ್ ಕೂಡಾ ಅಷ್ಟೇ. ಬೌಲರ್ ನ ನಿಖರತೆಗೆ ಸವಾಲೊಡ್ಡುವ ಕ್ರಿಯೆಯಲ್ಲಿ ಅವನ ನಿಖರತೆಯ ಹುಡುಕಾಟವಿದೆ.
ಈ ಇಬ್ಬರ ಅಥವಾ ಎರಡು ತಂಡಗಳ ನಿಖರತೆಯ ಹುಡುಕಾಟದಲ್ಲಿ ದೊರೆಯುವ ಸಂತೋಷ ಈ ಆಟದ ನಿಜವಾದ ಫಲಿತಾಂಶ. ಇಲ್ಲಿನ ಸೋಲು-ಗೆಲುವುಗಳು ಕೇವಲ ಆನುಷಂಗಿಕ ಮಾತ್ರ. ಬದುಕಿನ ಮಟ್ಟಿಗೂ ಇದು ನಿಜ. ಸಂಪೂರ್ಣತೆಯನ್ನು ಸಾಧಿಸುವುದು ಅಥವಾ ಸಾಧಿಸದೇ ಇರುವುದಕ್ಕಿಂತ ಈ ಪ್ರಯತ್ನದಲ್ಲಿ ದೊರೆಯುವ ಸಂತೋಷವೇ ನಿಜವಾದ ಬದುಕು. ಇದನ್ನು ಸ್ವಲ್ಪ ಸರಳೀಕರಿಸುವುದಾದರೆ ತಪ್ಪುಗಳನ್ನು ನಿರ್ವಹಿಸುವುದೇ ನಮ್ಮ ಬದುಕು ಎನ್ನಬಹುದು. ಈ ತಪ್ಪುಗಳನ್ನು ನಾವು ನಿರಾಕರಿಸುವುದೆಂದರೆ ನಾವು ನಮ್ಮ ಅಸ್ತಿತ್ವವನ್ನೇ ನಿರಾಕರಿಸಿಕೊಂಡಂತೆ.
ಮನುಷ್ಯ ‘ಎಲ್ಲವೂ ಅಲ್ಲ’ ಹಾಗೆಂದು ಅವನು ‘ಏನೂ ಅಲ್ಲ’ ಎಂದೂ ಹೇಳಲಾಗುವುದಿಲ್ಲ. ಈ ಎರಡರ ನಡುವಣ ಅವಕಾಶದೊಳಗೆ ಇರಬಹುದಾದ ಸತ್ಯವೊಂದರ ಹುಡುಕಾಟವನ್ನೇ ನಮ್ಮ ಎಲ್ಲಾ ಋಷಿಗಳು, ಸಂತರು, ತತ್ವಜ್ಞಾನಿಗಳು, ವಿಜ್ಞಾನಿಗಳು ನಡೆಸಿದ್ದು ಮತ್ತು ಈಗಲೂ ನಡೆಸುತ್ತಿರುವುದು. ಎಲ್ಲಾ ಕಾಲ, ದೇಶಗಳ ಋಷಿಗಳೂ ಒಂದು ಅಂಶವನ್ನಂತೂ ಸ್ಪಷ್ಟವಾಗಿಯೇ ಕಂಡುಕೊಂಡಿದ್ದಾರೆ. ನಮ್ಮ ತಪ್ಪುಗಳಿಗಾಗಿ ನಮ್ಮನ್ನು ಸೇರಿಸಿಕೊಂಡಂತೆ ನಾವು ಯಾರನ್ನೂ ದೂಷಿಸಬೇಕಾಗಿಲ್ಲ. ನಾವು ಅವುಗಳನ್ನು ಅರ್ಥಮಾಡಿಕೊಳ್ಳಬೇಕಷ್ಟೇ. ಈ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ನಮ್ಮ ‘ಮನುಷ್ಯತ್ವ’ವಿದೆ.
ಯಾವುದೋ ಒಂದು ಕೆಲಸವನ್ನು ‘ಸರಿಯಾಗಿ’ ಮಾಡುವುದು ಒಳ್ಳೆಯದಾಗಿದ್ದರೆ ಅದನ್ನು ಕೆಟ್ಟದಾಗಿ ಮಾಡುವುದೂ ಒಳ್ಳೆಯದೇ.
[ಚಿತ್ರ-ರಶೀದ್]