ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ; ಅಮಿತಾವ್ ಘೋಷ್ ಬರೆದ ‘ಸೀ ಆಫ್ ಪೊಪಿಸ್’    
ಸುದರ್ಶನ್
ಶನಿವಾರ, 15 ಆಗಸ್ಟ್ 2009 (09:26 IST)
ಅಮಿತಾವ್ ಘೋಷರ ‘ಸಿ ಆಫ್ ಪೊಪಿಸ್’

೨೦೦೮ರ ಮ್ಯಾನ್ ಬುಕರ್ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಆಯ್ಕೆಗೊಂಡಿದ್ದ ಅಮಿತಾವ್ ಘೋಷರ ‘ಸೀ ಆಫ್ ಪೊಪಿಸ್’ (Sea of Poppies) ಕಾದಂಬರಿ ಪರಿಚಯ:

ಈವತ್ತು ನಾವು ಬದುಕುವ ಹಾಗು ಯೋಚಿಸುವ ಪರಿಗೂ ಬ್ರಿಟೀಷರು ಕಲ್ಕತ್ತಾದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಶುರು ಮಾಡಿದ್ದಕ್ಕೂ ತಾಳೆ ಹಾಕಿ ಚಿಂತಿಸುವುದೇ ಹಲವರಿಗೆ ದೇಶಭ್ರಷ್ಟ ಯೋಚನೆಯಂತೆ ಕಾಣುವ ಹೊತ್ತಿದು. ವಸಾಹತು ಕೇಂದ್ರಿತ ವಿವರಣೆಯನ್ನು ಧಿಕ್ಕರಿಸುವ, ತನ್ಮೂಲಕ ಆ ತಾಳೆಯನ್ನು ಮೀರಬೇಕೆನ್ನುವ ವಸಾಹತೋತ್ತರವನ್ನೂ ಮೀರುವ ತುರ್ತು ಒಂದು ಪಕ್ಕೆಗೆ ತಿವಿಯುತ್ತಿದ್ದರೆ, ಆ ಕೊಂಡಿಯ ಹಂಗೇ ಬೇಡ ಎಂಬ ಗದ್ದಲದ ಸಂತೆಯಲ್ಲಿ ಕೂತು‘ಸೀ ಆಫ್ ಪೊಪಿಸ್’ ಓದಬೇಕಾಗಿರುವುದನ್ನು ಮರೆಯುವಂತಿಲ್ಲ. ಹತ್ತೊಂಬತ್ತನೇ ಶತಮಾನದ ಒಂದು ಅರ್ಥಪೂರ್ಣ ಕಾಲಘಟ್ಟದಲ್ಲಿ ನಿಂತು ಹಿಂದಕ್ಕೂ ಮುಂದಕ್ಕೂ ನೋಡುವ ಅವಕಾಶ ಕಲ್ಪಿಸುವ ಕೃತಿ ಅದು. ಹಲವಾರು ಮಜಲುಗಳಲ್ಲಿ ನಾವೇನು ‘ಆಗಿದ್ದೇವೋ’ ಅದನ್ನು ಮತ್ತೆ ಮತ್ತೆ ವಿಮರ್ಶಿಸಿಕೊಳ್ಳಲು ಅವಕಾಶ ಕಲ್ಪಿಸುವ ಕೃತಿ ಕೂಡ ಹೌದು.

ಟ್ರಿಲಜಿಯಾಗಿ ಹೊರಬರಲಿರುವ ಈ ಎಪಿಕ್ ಗಾಥೆಯ ಮೊದಲ ಕಾದಂಬರಿ ‘ಸೀ ಆಫ್ ಪೊಪಿಸ್’ ಮೂರು ಭಾಗಗಳಲ್ಲಿದೆ. ‘ನೆಲ’, ‘ನದಿ’ ಹಾಗು ‘ಕಡಲು’. ನೆಲದಿಂದ ಸಿಡಿದು, ನದಿಯಲಿ ಕೊಚ್ಚಿಹೋಗಿ ಕಡಲು ಸೇರುವ ಕತೆಗಳು ಹಾಗು ಪಾತ್ರಗಳು ನಮ್ಮೊಳಗೂ ಬಿರುಗಾಳಿ ಎಬ್ಬಿಸಿ, ಸಮತೋಲನ ತಪ್ಪಿಸಿ, ತುಯ್ದಾಡಿಸಿ ಬಿಡುತ್ತವೆ. ನೆಲದ ಮೇಲಿನ ಬೆಳಕು, ಕತ್ತಲು; ನದಿಯ ನೀರಿನ ಸುಳಿ ಸೆಳೆತ; ಕಡಲಿನ ಕಪ್ಪು ನೀರು ಹಾಗು ಬಿಡುಗಡೆ ಒಂದು ಅನಿವಾರ್ಯವಾಗಿ, ಒಂದು ಅವ್ಯಾಹತವಾಗಿ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಹಿಂದೆ ಸ್ಲೇವ್-ಶಿಪ್ ಆಗಿದ್ದ ಆದರೆ ಈಗ indentured labourers - ಗಿರ್ಮತೀಯ ಕೂಲಿಗಳನ್ನು ತುಂಬಿಕೊಂಡು ಮಾರೀಷಿಯಸಿಗೆ ಹೊರಟ ಐಬಿಸ್ ಎಂಬ ಹಡಗು ತನ್ನ ಒಡಲಲ್ಲಿ ನಡೆಯುವ ರೋಚಕ ಘಟನೆಗಳಿಂದ, ರೋಮಾಂಚನಕಾರಿ ತಿರುವುಗಳಿಂದ ನಮ್ಮನ್ನು ಸ್ಥಂಭಿತರನ್ನಾಗಿಸಿ ಅಗಾಧ ಕಡಲಿನಲ್ಲಿ ತೇಲಿಹೋಗುತ್ತದೆ.

ಅಮಿತಾವ್ ಘೋಷರ ಗಂಗಾನದಿ ಹಾಗು ಅದರ ಸಾವಿರಾರು ಉಪನದಿಗಳ ಎಡೆಗಳಲ್ಲಿದ್ದ ನೂರಾರು ವರ್ಷಗಳ ಬೇಸಾಯ ಪದ್ಧತಿಯನ್ನು ಮುರಿಯುವ ಮೂಲಕ ಬ್ರಿಟೀಷರು ಅಲ್ಲಿನ ಬದುಕಿನ ಬೆನ್ನೆಲುಬನ್ನೇ ನಾಶ ಮಾಡಿದ ಹೊತ್ತದು. ಮುಕ್ತ ಮಾರುಕಟ್ಟೆಯ ಮೂಲಕ ಚೀನಾಕ್ಕೆ ಅಫೀಮು ಮಾರಿ ಸಿರಿವಂತವಾಗುವುದೇ ಪ್ರಗತಿಯ ಹಾಗು ಸ್ವಾತಂತ್ರ್ಯದ ಸಂಕೇತ ಎಂದು ಬಗೆದು ಚೀನಾದ ಎದುರು ಯುದ್ಧಕ್ಕೆ ಸಜ್ಜಾಗಿ ನಿಂತ ಹೊತ್ತದು. ಆಫೀಮಿಗಾಗಿ poppy - ಗಸಗಸೆ ಬೆಳೆಯಲು ಉತ್ತೇಜಿಸಿ, ಒತ್ತಾಯಿಸಿ, ಬಲವಂತ ಮಾಡಿ ಇಂಡಿಯಾದ ರೈತರನ್ನು ಒಂದು ಕಡೆ ಬಗ್ಗು ಬಡಿದು, ಇನ್ನೊಂದು ಕಡೆ ಚೀನಾದ ಜನರಿಗೆ ಅಫೀಮಿನ ಮತ್ತು ಹಿಡಿಸಿ, ಹುಚ್ಚು ಏರಿಸಿ ತಾವು ಸಂಪತ್ತಿಗರಾಗಲು ಹೊರಟ ಬ್ರಿಟೀಷರನ್ನು ದ್ವೇಷಿಸುವುದು ತುಂಬಾ ಸುಲಭ. ಆದರೆ ಸಾವಧಾನದಿಂದ ಬ್ರಿಟೀಷ್ ಪಾತ್ರಗಳನ್ನೂ ಎಲ್ಲರಂತೆ ಪರಿಚಯಿಸಿ, ಚಿತ್ರಿಸಿ ಸಾದರ ಪಡಿಸುವುದು ಅಮಿತಾವ್ ಘೋಷರಂತಹ ಬರಹಗಾರರಿಗೆ ಮಾತ್ರ ಸಾಧ್ಯವೇನೋ ಅನಿಸದೇ ಇರದು.

ಕಡಲನ್ನೇ ನೋಡಿರದ ದೀತಿಗೆ, ಕಡಲಿಂದ ನೂರಾರು ಮೈಲುಗಳ ತನ್ನ ಊರಲ್ಲೇ - ದೂರದಲ್ಲಿ ಹಕ್ಕಿಯಂತೆ ರೆಕ್ಕೆ ಬಿಚ್ಚಿದ ಹಾಯಿ ಹಡಗೊಂದು ಕಂಡಂತಾಗಿ, ಯಾವುದೋ ಪ್ರಯಾಣಕ್ಕೆ ನಾಂದಿ ಎಂದು ಅನಿಸುವುದುರ ಮೂಲಕ ಕತೆ ತೊಡಗುತ್ತದೆ. ಅಫೀಮು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಅವಳ ಗಂಡ - ಅಫೀಮಿನ ಚಾಳಿಗೆ ಬಿದ್ದು ನಶಿಸುತ್ತಿರುವವ. ಸಂಭೋಗವನ್ನು ಅರಿಯದ ವಯಸ್ಸಿನಲ್ಲಿ ಮದುವೆಯಾಗಿ, ನಂತರದ ಕೆಟ್ಟ ಗಳಿಗೆಯಲ್ಲಿ, ಅತ್ತೆ ಹಾಗು ಮೈದುನನ ದುಷ್ಟತೆಯಲ್ಲಿ, ಯಾರಿಗೆ ಬಸುರಾದೆ ಎಂದೂ ತಿಳಿಯದೆ ಪಡಕೊಂಡ ಅವಳ ಮಗಳು ಕಬೂತರಿ ಅವಳ ಜೀವದ ಜೀವ. ದುಷ್ಟ ಅತ್ತೆಗೆ ಊಟದಲ್ಲಿ ತುಸುತುಸುವೇ ಅಫೀಮು ಬೆರೆಸಿ ಅವಳನ್ನೂ ನಾಶಮಾಡುವ ದಿಟ್ಟೆ ಈ ದೀತಿ. ಆದರೆ ಗಂಡ ಸತ್ತಾಗ ಸೋತು ಸುಣ್ಣಾಗಿ ಸತಿ ಹೋಗುವುದೇ ತನ್ನ ವಿಧಿಯೆಂದು ಒಪ್ಪಿಕೊಳ್ಳುವವಳು. ಆದರೆ ಆ ವಿಧಿ ಆಕೆಯನ್ನು ಕಲುವ ಎಂಬ ಕುಲಹೀನನೊಂದಿಗೆ ಐಬಿಸ್ ಎಂಬ ಹಡಗಿನತ್ತ ಒಯ್ಯುವ ಕತೆ ದಟ್ಟವಾಗಿ ಮನಸ್ಸಿನಲ್ಲಿ ಹಬ್ಬುವಂತಹದು.

ಇನ್ನೊಂದು ಕಡೆ, ಅಫೀಮು ಮಾರುವ ಇಂಗ್ಲೀಷ್ ಪಾದ್ರಿ ಬೆಂಜಮಿನ್ ಬರ್ನಮ್‌ ಎಂಬವನ ಕಪಟಕ್ಕೆ ಬಲಿಯಾಗಿ ಜಮೀನ್ದಾರಿ ರಾಜ ನೀಲ ರತನ್ ಹವಲ್ದಾರ್ ತನ್ನ ಆಸ್ತಿ-ಪಾಸ್ತಿ, ಗೌರವ, ಮಾನ, ಮರ್ಯಾದೆ, ಕುಟುಂಬ ಎಲ್ಲವನ್ನು ಕಳಕೊಳ್ಳುವುದಲ್ಲದೇ ಐಬಿಸ್‌ನಲ್ಲಿ ಗಡಿಪಾರಾಗುವುದು ನಮ್ಮನ್ನು ವಿಚಿತ್ರ ಸಂದಿಗ್ಧದಲ್ಲಿ ಸಿಕ್ಕಿಸುವ ಎಳೆ. ಅವನೊಡನೆ ಬಂಧಿತನಾಗಿರುವ ಚೀನಾದ ಅಫಾಟ್, ಅರೆಜೀವನಾಗಿ ನೀಲನಿಂದ ಮತ್ತೆ ಜೀವ ಪಡಕೊಂಡು ಉಳಿಯುತ್ತಾನೆ. ಭಾರತ, ಚೀನಾ ಹಾಗು ಬ್ರಿಟೀಷರ ವಿಭಿನ್ನ ಹಾಗು ಒಂದಕ್ಕೊಂದು ಒಗ್ಗದ ನಾರುಗಳನ್ನು ಕಾಲದ ತೀವ್ರತೆಯಲ್ಲಿ ಒಟ್ಟಾಗಿ ಬಿಗಿದು ಹೆಣೆದ ಹಿಂಸೆಯ ಒರಟು ಹಗ್ಗವಾಗಿ ಕಾಣುವ ಅಫಾಟ್‌ ಒಂದು ಅಭೂತಪೂರ್ವ ಪಾತ್ರ.

ಮತ್ತೊಂದು ಕಡೆ, ಅಂಬಿಗರ ಹುಡುಗ ಜೋದು ತನ್ನ ತಂದೆ, ತಾಯಿ, ಅಜ್ಜಿಯನ್ನು ಕಳಕೊಂಡು ಅನಾಥಭಾವದಲ್ಲಿ ಬಂದು ವಿಭಿನ್ನ ಸದಸ್ಯರ ಐಬಿಸ್ ಕುಟುಂಬಕ್ಕೆ ಸೇರಿಕೊಳ್ಳುತ್ತಾನೆ. ಹಾಗೆ ಸೇರಿಕೊಳ್ಳುವ ಮೊದಲು ತನ್ನ ಬಾಲ್ಯದ ಗೆಳತಿ, ಫ್ರಾನ್ಸಿನ ಬಾಟನಿಸ್ಟ್‌ ಒಬ್ಬನ ಮಗಳಾದ ಪಾಲೆಟ್ ಲಾಂಬೆರ್ಟ್‌ಳನ್ನು ಅರಸುತ್ತಾ ಬಂದಿರುತ್ತಾನೆ. ಪುತಲಿ, ಪಗಲಿ ಎಂದೆಲ್ಲಾ ಕರೆಸಿಕೊಳ್ಳುವ ಪಾಲೆಟ್‌ಳ ಹುಟ್ಟಿನ ಕಾಳರಾತ್ರಿ ಗೋದುವಿನ ತಂದೆ ತಾಯಿಯೇ, ಆಸ್ಪತ್ರೆಗೆಂದು ನದಿ ದಾಟಿಸುವಾಗ ಪಾಲೆಟ್‌ನ ತಾಯಿ ಇವರ ದೋಣಿಯಲ್ಲಿ ಪಾಲೆಟ್‌ಳನ್ನು ಹೆತ್ತು ತಾನು ಅಸುನೀಗಿದ್ದಾಳೆ. ಗೋದು ಕೂಡ ಹಸುಳೆ; ಅವನ ತಾಯಿಯೇ ತಬ್ಬಲಿ ಪಾಲೆಟ್‌ಗೆ ಮೊಲೆಯುಣಿಸಿ ಬದುಕಿಸಿದ್ದಾಳೆ, ಬೆಳೆಸಿದ್ದಾಳೆ. ಅದೇ ದೋಣಿ ದೊಡ್ಡವರಾದ ಮೇಲೆ ಅವರಿಬ್ಬರ ಕಣ್ಣ ಮುಂದೆಯೇ ಐಬಿಸ್‌ಗೆ ಡಿಕ್ಕಿ ಹೊಡೆದು ನುಚ್ಚು ನೂರಾಗುವುದು ಹಲವು ಸ್ಥರದಲ್ಲಿ, ವಿಭಿನ್ನ ಧ್ವನಿಗಳನ್ನು ಹೊರಡಿಸುವ ರೂಪಕವಾಗುತ್ತದೆ. ಪಾಲೆಟ್‌ಳ ಅಜ್ಜಿಯ ಕತೆ ಇನ್ನೊಂದು ಬಗೆಯಲ್ಲಿ ಇವಳಲ್ಲಿ ಪುನರಾವರ್ತನೆಗೊಳ್ಳುವ ವಿಚಿತ್ರದಂತೆಯೇ, ವಿಧಿಯೊಡನೆ ಸೆಣಸುತ್ತಾ ತಮ್ಮತನ್ನವನ್ನು ಸ್ಥಾಪಿಸಿಕೊಳ್ಳುವ ಗುಣ ಎಲ್ಲ ಪಾತ್ರಗಳಲ್ಲೂ ಕಾಣುತ್ತದೆ. ದಬ್ಬಾಳಿಕೆ ಹಾಗು ಶೋಷಣೆಯ ಕರಾಳತೆಯ ಅಡಿಯಲ್ಲಿ ಅದನ್ನು ಮೀರಿಕೊಳ್ಳುವ, ಬಿಡುಗಡೆಯ ದಾರಿ ಕಂಡುಕೊಳ್ಳುವ ಅದಮ್ಯ ಶಕ್ತಿಯಿಂದ ಪಾತ್ರಗಳು ಇಲ್ಲಿ ಚಲಿಸುತ್ತವೆ.

ಅಲ್ಲದೆ ಕೂಲಿಗಳ ಮೇಲ್ವಿಚಾರಕನಾಗಿ ಹಡಗು ಹತ್ತಿರುವ ಬ್ರಾಹ್ಮಣ ನೊಬ್ ಕಿಸನ್ ಪಾಂಡ ಮಾ ತಾರಾಮಣಿ ತನ್ನೊಳಗೆ ಅಂತರ್ಧಾನವಾಗಿದ್ದಾಳೆಂದು ನಂಬಿದ್ದಾನೆ. ದೂರದ ದ್ವೀಪದಲ್ಲಿ ಆಕೆಗೊಂದು ದೇಗುಲ ಕಟ್ಟುವ ಕನಸ್ಸು ಕಂಡಿದ್ದಾನೆ. ತನ್ನ ಭಾಷೆ, ನಡೆ, ನುಡಿಯಿಂದಾಗಿ ವ್ಯಂಗ್ಯಪೂರ್ಣ ಪಾತ್ರವಾಗಿ ಕಂಡರೂ ಅದೊಂದು ಸಂಕೀರ್ಣವಾದ ಪಾತ್ರವೇ. ತನ್ನ ಹಿನ್ನೆಲೆಯನ್ನು ಮರೆಮಾಚಿಕೊಂಡು ಸಾಹಸದ ಬೆನ್ನು ಹತ್ತಿರುವ ಅಮೇರಿಕಾದ ಝಕಾರಿ ರೀಡ್ ಕೂಡ ಅದೇ ಹಡಗಿಗೆ ಬಂದು ಸೇರಿದ್ದಾನೆ. ಇವರೆಲ್ಲರ ಜತೆ ಸಣ್ಣಪುಟ್ಟ ಕತೆಗಳ ಕಳ್ಳಖದೀಮರನ್ನು, ಪೊಲೀಸರನ್ನು, ನಾವಿಕರನ್ನು, ಸಾಹಸಿಗಳನ್ನು, ಕೂಲಿಗಳನ್ನು ಐಬಿಸ್‌ ಹಡಗಿಗೆ ಘೋಷರು ಹತ್ತಿಸುತ್ತಾರೆ. ಎಲ್ಲರನ್ನೂ ತುಂಬಿಕೊಂಡು ಹೊಸ ದಿಗಂತದತ್ತ ತೇಲುವ ಆ ಐಬಿಸ್ ಹಡಗಿನಲ್ಲಿ ಕೈಗೆ ಮೆಹಂದಿ ಬಳಕೊಂಡು ಕೂಲಿಯಂತೆ ವೇಷಮರೆಸಿಕೊಂಡ ಬಿಳಿಯ ಹೆಣ್ಣೂ, ಬಿಳಿಯನೆಂದು ಹೇಳಿಕೊಂಡು ಕೆಲಸ ಗಿಟ್ಟಿಸುವ ಅರೆಕರಿಯನೂ, ತಪ್ಪು ಮಾಡಿ ಬಚ್ಚಿಟ್ಟುಕೊಂಡವರೂ, ತಪ್ಪು ಮಾಡದೆ ಸಿಕ್ಕಿಕೊಂಡವರೂ ನಮಗೆ ಸಿಗುತ್ತಾರೆ.

ಐಬಿಸ್‌ನ ವಿವಿಧ ಅಟ್ಟಗಳಲ್ಲಿ ವಿವಿಧ ಆಟಗಳು, ಹೋರಾಟಗಳು, ವಿಜೃಂಭಣೆಗಳು, ಹಿಂಸೆಗಳು ಈ ಕಾದಂಬರಿಯಲ್ಲಿ ಅಸಮಾನ್ಯ ಸಹಜತೆಯಲ್ಲಿ ನಿರೂಪಿತವಾಗಿದೆ. ಮನುಷ್ಯತ್ವದ ಬಗ್ಗೆ ಒಂದು ಕ್ಷಣ ಅನುಮಾನ, ಮತ್ತೊಂದು ಕ್ಷಣ ಉನ್ಮಾದ, ಒಂದು ಕ್ಷಣ ಅಸಹನೆ, ಮತ್ತೊಂದು ಕ್ಷಣ ಪ್ರೀತಿ ಮತ್ತು ಆ ಎಲ್ಲ ಕ್ಷಣಗಳ ನಡುವಿನ ಲೆಕ್ಕವಿಲ್ಲದ ಹಲವಾರು ಭಾವಗಳಲ್ಲಿ ನಮ್ಮನ್ನು ಘೋಷರು ತುಯ್ದಾಡಿಸುತ್ತಾರೆ. ಐಬಿಸ್ ಹಡಗಿನ ಏರಿಳಿತ ಅವಕ್ಕೆಲ್ಲಾ ತಾಳ ಕುಟ್ಟುತ್ತಿದ್ದಂತೆ ಭಾಸವಾಗುತ್ತದೆ.

ತಮ್ಮ ಕೃತಿಯೊಂದಿಗೆ ಅಮಿತಾವ್ ಘೋಷ್ಕಾದಂಬರಿಯುದ್ದಕ್ಕೂ ಘೋಶರು ಬಳಸುವ ಹಲವು ಭಾಷೆಗಳು ಅತ್ಯಂತ ಕುತೂಹಲವನ್ನೂ, ನೈಜತೆಯನ್ನೂ ಕೃತಿಗೆ ತಂದುಕೊಟ್ಟಿದೆ. ಅವರ ಮಾನವಶಾಸ್ತ್ರದ ಹಿನ್ನೆಲೆ, ಭಾಷೆಯ ಬಗೆಗಿನ ಆಸ್ಥೆ ಹಾಗು ಹಲವು ವರ್ಷಗಳ ಆಳದ ಮತ್ತು ವಿಶಾಲವಾದ ಸಂಶೋಧನೆ ಇಲ್ಲಿ ಅವತರಿಸುವಾಗ ತುಸುವೂ ಕಲಾತ್ಮಕತೆ ಕಳಕೊಳ್ಳದೆ ಬೃಹತ್ ರೂಪದಲ್ಲಿ ಹೆಪ್ಪುಗಟ್ಟುತ್ತದೆ. ಕಾದಂಬರಿಯಲ್ಲಿ ಬರುವ ಹಲವು ನುಡಿಗಳ ನುಡಿಗಟ್ಟುಗಳನ್ನು ಅರ್ಥೈಸಲು ಲೇಖಕರೇ ತಮ್ಮ ವೆಬ್‌ಸೈಟಿನಲ್ಲಿ ಕೊಟ್ಟಿರುವ ‘The Ibis Chrestomathy’ ಒಂದು ಅಮೂಲ್ಯವಾದ ಸಂಗ್ರಹ. ಭೋಜಪುರಿ, ಉರ್ದು, ಬೆಂಗಾಲಿ, ಹಿಂದೂಸ್ತಾನಿ, ಹಲವು ಬಗೆಯ ಇಂಗ್ಲಿಷ್ ಅಲ್ಲದೆ ಇವೆಲ್ಲವೂ ಒಂದರಿಂದ ಮತ್ತೊಂದು ಕೊಟ್ಟು ಪಡಕೊಂಡು ರೂಪಿತವಾದ ನಡುಭಾಷೆಗಳು, ನುಡಿಗಟ್ಟುಗಳು ಅತ್ಯಂತ ಮನೋಹರವಾಗಿವೆ. ಬೆಂಗಾಲಿ ಬೆರೆತ ಹಿಂದೂಸ್ತಾನಿ, ಹಿಂದೂಸ್ತಾನಿ ಬೆರೆತ ಇಂಗ್ಲಿಷ್, ಇಂಗ್ಲಿಷ್ ಬೆರೆತ ಹಿಂದೂಸ್ತಾನಿ ಸುಲಲಿತವಾಗಿ ಪಾತ್ರಗಳ ಮಾತಿನಲ್ಲಿ ಹರಿದಾಡುತ್ತವೆ. ಪಕ್ಕಾ, ಬುರಾ, ಶೈತಾನ್, ಡೇಕೋ ಇವೆಲ್ಲಾ ಇಂಗ್ಲೀಷಿನೊಳಗೆ ಎಗ್ಗಿಲ್ಲದೆ ಒಂದಾಗುತ್ತವೆ. ಹೀಗೆ ಇಲ್ಲಿ ಭಾಷೆಯದೇ ಒಂದು ವಿಶಿಷ್ಟ ಪಾತ್ರ ಹಾಗು ಅದರ ಬಗ್ಗೆಯೇ ಒಂದು ಧೀರ್ಘ ಪ್ರಬಂಧ ಬರೆಯಬಹುದಾದಷ್ಟು ಸಂಗತಿಗಳಿವೆ.

ಚರಿತ್ರೆಯ ಒಂದು ಕಾಲಘಟ್ಟದ ಜನರ ಬದುಕನ್ನು ವಿಧಿ ರೂಪಿಸುತ್ತದೋ, ವಿಧಿಯೊಡನೆ ಸೆಣಸುತ್ತಾ ತಮ್ಮ ಬದುಕನ್ನು ಅವರು ರೂಪಿಸುಕೊಳ್ಳುತ್ತಾರೋ, ಅಥವಾ ಆ ಸೆಣಸಾಟದ ಪ್ರಕ್ರಿಯೆಯಲ್ಲಿ ಚರಿತ್ರೆಯ ಹಲವಾರು ವಿದ್ಯಮಾನಗಳು ಒಂದು ಜನಸಮೂಹದ ಭವಿಷ್ಯವನ್ನು ರೂಪಿಸುತ್ತದೋ ಎಂಬೆಲ್ಲಾ ಪ್ರಶ್ನೆಗಳ ವಿಚಿತ್ರ ವರ್ತುಲದಲ್ಲಿ ನಮ್ಮನ್ನು ಚಿಂತನೆಗೆ ತೊಡಗಿಸುವ ಅಮೂಲ್ಯವಾದ ಕೃತಿ ‘ಸೀ ಆಫ್ ಪೊಪಿಸ್’.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  4     Rating: 5    
 
 
ಸಂಬಂಧಿಸಿದ ಲೇಖನಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ಎರಡು ಕವಿತೆಗಳು