ಪತ್ರಕರ್ತ ಮಿತ್ರ ಹನುಮಂತ ಹಾಲಿಗೇರಿ ಅವರ ‘ಕೆಂಗುಲಾಬಿ’ ಕಾದಂಬರಿಯ ಓದು ದುಗುಡಗೊಳಿಸುವಂಥದ್ದು. ವೇಶ್ಯಾಜಗತ್ತಿನ ಒಳಪದರುಗಳ ಯಾತನೆಯ ನಾಡಿಮಿಡಿತ ಓದಿನ ನಂತರವೂ ಬಹುಕಾಲ ತಾಕುತ್ತದೆ. ಮನಸ್ಸು ಮಮ್ಮಲ ಮರುಗುತ್ತದೆ. ಎಲ್ಲವೂ ಸುಂದರವಾಗಿ ಕಾಣುವ ಈ ಹೊತ್ತಿನಲ್ಲಿ, ಹಾಗೆ ಕಂಡದ್ದು ಮಾತ್ರ ಪಥ್ಯವಾಗುವ ಜಾಯಮಾನದಲ್ಲಿ, ವೇಶ್ಯೆಯರ ದಾರುಣ ಬದುಕಿನ ಪುಟಗಳನ್ನು ತೆರೆಯುವುದೆಂದರೆ ತುಸು ಕಷ್ಟದ ಕೆಲಸ. ಅಂತಹ ಪುಟಗಳ ಕಾದಂಬರಿ ‘ಕೆಂಗುಲಾಬಿ’.
ಕಾದಂಬರಿಯ ನಾಯಕ ಮಲ್ಲೇಶಿ ಬಾಗಲಕೋಟೆ ಸಮೀಪದ ಭೀಮನಕೊಪ್ಪದ ತಾರವ್ವ ಜೋಗತಿಯ ಮಗ. ಸ್ವತಃ ದೇವದಾಸಿಯ ಮಗನಾಗಿ, ಅದರೆಲ್ಲಾ ನೋವು ಅಪಮಾನಗಳಿಗೆ ಒಳಗಾದವನು. ತನ್ನ ಹಳ್ಳಿಯ ಪಟ್ಟಭದ್ರರ ಹಿತಾಸಕ್ತಿಗೆ ಎದುರಾಗಿ ಬಾಲ್ಯದಲ್ಲಿಯೇ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಲು ಹೆಣಗುವವ. ಲೈಂಗಿಕ ಕಾರ್ಯಕರ್ತರ ಪರ ಕಾಳಜಿಯ ಎನ್.ಜಿ.ಓಗಳಲ್ಲಿ ಕೆಲಸ ಮಾಡುತ್ತಾ ಅವರ ಬದುಕಿನಲ್ಲಿ ಬದಲಾವಣೆ ತರುವ ಕನಸು ಕಾಣುವವನು.
ಕಾದಂಬರಿ ಸದ್ಯದ ಲೈಂಗಿಕ ಕಾರ್ಯಕರ್ತರ ಬದುಕಿನ ಹಲವು ಮುಖಗಳನ್ನು ತೋರುತ್ತದೆ. ಈ ವ್ಯವಸ್ಥೆ ಅಸಹಾಯಕ ಹೆಣ್ಣುಗಳನ್ನು ಹೇಗೆ ವೇಶ್ಯಾವಾಟಿಕೆಗೆ ದೂಡುತ್ತದೆ ಎನ್ನುವುದರ ಚಿತ್ರಣವಿದೆ. ಹನುಮಂತ ಅವರು ತಮ್ಮ ಮಾತುಗಳಲ್ಲಿ ‘ಇಲ್ಲಿ ನಾನು ಲೈಂಗಿಕವೃತ್ತಿ ಸರಿ ಅಥವಾ ತಪ್ಪು ಎಂದು ವಾದಿಸಲು ಹೋಗಿಲ್ಲ. ಈ ಕೃತಿ ಓದಿದ ನಂತರ ನಿಮ್ಮೊಳಗೆ ಮೂರ್ತಗೊಳ್ಳುವ ತೀರ್ಮಾನಕ್ಕೆ ನೀವೇ ಜವಾಬ್ದಾರರು’ ಎನ್ನುತ್ತಾರೆ. ಆ ಮೂಲಕ ಲೈಂಗಿಕ ಕಾರ್ಯಕರ್ತರ ಬದುಕನ್ನು ಎದುರಿಗಿಟ್ಟು ಆ ಬಗ್ಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಂತೆಯೂ, ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ನಿರೂಪಿಸುತ್ತಾ ಹೋಗುತ್ತಾರೆ.
ಕಾದಂಬರಿ ಓದುತ್ತಾ ಹೋದಂತೆ ‘ಸಲಾಂ ಬಾಂಬೆ’ ತರಹದ ಸಿನೆಮಾ ನೆನಪಾಗುತ್ತವೆ. ವೇಶ್ಯಾಜಗತ್ತಿನ ದಿನ ಬದುಕಿನ ತವಕ ತಲ್ಲಣ, ಒಳ ಬಂಡಾಯ ಎಲ್ಲವನ್ನೂ ತುಂಬಾ ಸೂಕ್ಮವಾಗಿ ಚಿತ್ರಿಸಿದ್ದಾರೆ. ಹಕ್ಕೊತ್ತಾಯದ ಹೋರಾಟವನ್ನು ಮಾಡುವ ಕಾರಣ, ಲೈಂಗಿಕ ಕಾರ್ಯಕರ್ತರು ಪ್ರೆಸ್ ಮೀಟ್ ಒಂದನ್ನು ಕರೆದಿರುತ್ತಾರೆ. ಅಲ್ಲಿನ ಪತ್ರಕರ್ತರ ಪ್ರಶ್ನೆ ಮತ್ತು ವೇಶ್ಯೆಯರ ಉತ್ತರ ವ್ಯವಸ್ಥೆಯ ಎರಡು ಮುಖಗಳನ್ನು ಕಾಣಿಸುವಂತಿವೆ. ಲೈಂಗಿಕ ಕಾರ್ಯಕರ್ತೆಯೊಬ್ಬಳು ಹೇಳುವ ಮಾತು ಹೀಗಿದೆ.. ‘ನಾನು ಕಣ್ಣೀರು ಹಾಕಲ್ಲ. ಯಾಕ ಹಾಕಲ್ಲ ಅಂತ ಕೇಳಿದ್ರೆ ಅತ್ತು ಅತ್ತು ಕಣ್ಣೀರು ಖಾಲಿಯಾಗಿವೆ. ಅತ್ತರೂ ಕೂಡ ನಮ್ಮ ಬದುಕು ಬದಲಾಗೋದು ಎಲ್ಲಿ?’ ಎಂದು ವಿಷಾದ ವ್ಯಕ್ತಪಡಿಸುತ್ತಾಳೆ.
ವೇಶ್ಯಾವಾಟಿಕೆಯ ಬಗ್ಗೆ ಸಾಮಾನ್ಯವಾಗಿ ಎತ್ತುವ ಸುಧಾರಣಾವಾದಿ ಪ್ರಶ್ನೆಗಳನ್ನು ಕಠೋರ ಪರೀಕ್ಷೆಗೆ ಒಳಪಡಿಸಿದಂತಿದೆ ಇಲ್ಲಿನ ಕಥನ. ಮಲ್ಲೇಶಿ ತಾನು ಹಳ್ಳಿಯೊಂದರಲ್ಲಿ ಎನ್.ಜಿ.ಒ ಕಾರ್ಯಕರ್ತನಾಗಿ ಕೆಲಸ ಮಾಡುವಾಗ ಶಾರದಳೊಂದಿಗೆ ಪ್ರೇಮಾಂಕುರವಾಗುತ್ತದೆ. ಆ ಶಾರಿ ಮತ್ತೆ ಸಿಗುವುದು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಾಗ. ಆಗ ತನ್ನ ದುರಂತದ ಬದುಕನ್ನು ಬಿಚ್ಚಿಡುತ್ತಾಳೆ. ಹರೆಯದಲ್ಲಿ ಪ್ರೀತಿಸಿದ ಶ್ಯಾರಿ ವೇಶ್ಯೆಯಾಗಿ ಸಿಕ್ಕಾಗ ಮಲ್ಲೇಶಿಗೆ ಹೇಳುವ ಮಾತುಗಳು ಮಾರ್ಮಿಕವಾಗಿವೆ ‘..ನನಗ ಮನಸ್ಸ ಇಲ್ಲ ಮೈ ಮಾತ್ರ ಐತಿ. ಇಲ್ಲಿ ಯಾರ ಜತೆನೂ ಮನಸ್ಸು ಬಳಸುವ ಸಂದರ್ಭ ಬರಲೇ ಇಲ್ಲ. ಬಳಸಲಾರದ ಮನಸ್ಸು ಜಂಗು ತಿಂದು ಹಾಳಾಗಿ ಹೋತು, ಆದ್ರ ಮೈ ಇಡೀ ದಿನವೆಲ್ಲಾ ಬಳಕೆ ಆಗಿ ಆಗಿ ಸವೆದು ಹೋಗಿ ಇದಿಷ್ಟು ಉಳದೈತಿ. ಇದು ಯಾವತ್ತು ಕೆಟ್ಟು ಬಂದ್ ಅಕ್ಕೈತೋ ಅವತ್ತು ನನ್ನ ಪುಟ ಮುಗದ್ಹಂಗ’ ಎನ್ನುವ ಮಾತು ಇಡೀ ವೇಶ್ಯಾ ಜಗತ್ತಿನ ಒಳನುಡಿಯಂತೆ ಪ್ರತಿದ್ವನಿಸುತ್ತದೆ. ಲೈಂಗಿಕ ಕಾರ್ಯಕರ್ತರ ವಾಸಸ್ಥಳದ ಚಿತ್ರಣ. ಪೊಲೀಸರು, ವಕೀಲರು, ಡಾಕ್ಟರುಗಳು, ಘರವಾಲಿಗಳು, ಮಧ್ಯವರ್ತಿಗಳು, ರೌಡಿಗಳು, ಪಿಂಪ್ಗಳು, ಬಾಡಿಗೆ ಗಂಡಂದಿರು ಇವರೆಲ್ಲರೊಂದಿಗೆ ಹೆಣಗುವ ವೇಶ್ಯೆಯರ ಬದುಕಿನ ನಾನಾ ಮುಖಗಳು ಇಲ್ಲಿ ಎದುರಾಗುತ್ತವೆ.
ಈಚಿನ ದಿನಗಳಲ್ಲಿ ವೇಶ್ಯೆಯರ ಬದುಕನ್ನು ವಸ್ತುವಾಗಿಸಿಕೊಂಡ ಬಂದ ಕಾದಂಬರಿಗಳು ಕಡಿಮೆ. ನಳಿನಿ ಜಮಿಲಾ ಅವರ ಸೆಕ್ಸ ವರ್ಕರ್ ಒಬ್ಬಳ ಆತ್ಮಕಥನ, ರೇವತಿ, ಲಿವಿಂಗ್ ಸ್ಮೈಲ್ ವಿದ್ಯಾ ಅವರ ಹಿಜಿಡಾಗಳ ಸೆಕ್ಸ್ ಬದುಕಿನ ಆತ್ಮಕಥನಗಳು ಕನ್ನಡಕ್ಕೆ ಬಂದಿವೆ. ಇವು ಸದ್ಯದ ಲೈಂಗಿಕ ಕಾರ್ಯಕರ್ತರ ದಾರುಣ ಬದುಕಿನ ಅನುಭವವನ್ನು ಕನ್ನಡಕ್ಕೆ ದಾಟಿಸಿವೆ. ಕೆಂಗುಲಾಬಿ ಕಾದಂಬರಿಯ ನಿರೂಪಣೆಯ ಶೈಲಿ ಕೂಡ ಆತ್ಮಕಥಾನಕದ ಮಾದರಿಯದು. ಇಲ್ಲಿನ ಅನುಭವಲೋಕ ಕರ್ನಾಟಕದ ಒಳನಾಡಿನದು. ನಮ್ಮ ಕಾಲವನ್ನು ಲೈಂಗಿಕ ಕಾರ್ಯಕರ್ತರ ಬದುಕಿನ ಕಣ್ಣೋಟದ ಮೂಲಕ ನೋಡುವ ಕಾರಣಕ್ಕೆ ಈ ಕಾದಂಬರಿ ಮುಖ್ಯವಾಗುತ್ತದೆ. ಅ.ನ.ಕೃ ಮೊದಲಾದವರು ಕಾಣಿಸಿದ ವೇಶ್ಯೆಯರ ಬದುಕಿನ ಲೋಕ ಈಗ ಮತ್ತಷ್ಟು ಸಂಕೀರ್ಣತೆಯ, ಅಮಾನವೀಯತೆಯ ಮೈ ಪಡೆದಿದೆ. ಇದೂ ಕೂಡ ಜಾಗತೀಕರಣದ ಮಹಿಮೆಯೆ.
ಆಳದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಎಳೆಯಿರುವ, ಮೇಲುನೋಟಕ್ಕೆ ಸಾಮಾಜಿಕ ಕಾಳಜಿಯ ಮುಖಹೊತ್ತ ಎನ್.ಜಿ.ಓಗಳನ್ನು ಅವಿಮರ್ಶಾತ್ಮಕವಾಗಿ ನೋಡಿರುವುದು ಈ ಕಾದಂಬರಿಯ ದೊಡ್ಡ ಮಿತಿಯಾಗಿದೆ. ಇಲ್ಲಿ ವೇಶ್ಯಾಜಗತ್ತಿನ ಬಗ್ಗೆ ತನಗೆ ತಿಳಿದ ಎಲ್ಲಾ ಸಂಗತಿಗಳನ್ನು ಹೇಳಲೇಬೇಕೆಂಬ ಹಟಕ್ಕೆ ಬಿದ್ದಂತೆ ಕೆಲವೆಡೆ ಕಾದಂಬರಿ ಕೃತಕವಾಗಿಯೂ ವಿಸ್ತರಿಸಿಕೊಂಡಂತಿದೆ. ಕಾದಂಬರಿಯ ಮುಖಪುಟದಲ್ಲಿ ವೇಶ್ಯಾಜಗತ್ತಿನ ಅನಾವರಣ ಎನ್ನುವ ಉಪ ಶೀರ್ಷಿಕೆಯ ಅಗತ್ಯವೂ ಇರಲಿಲ್ಲ. ಮುಖ್ಯವಾಗಿ ಇಲ್ಲಿನ ವಿವರಗಳನ್ನೆಲ್ಲಾ ನೇಯ್ದು ಕಲಾಕೃತಿಯನ್ನಾಗಿಸುವಲ್ಲಿ ಕಾದಂಬರಿಕಾರರು ಸೋತಿದ್ದಾರೆ. 
ಇಂತಹ ಮಿತಿಗಳಾಚೆಯೂ, ನಮ್ಮ ಕಾಲದ ನೋವಿನ ಜಗತ್ತನ್ನು ಮಾನವೀಯವಾಗಿ ಕಾಣಿಸಿದ ಕಾರಣಕ್ಕೆ ‘ಕೆಂಗುಲಾಬಿ’ ಮುಖ್ಯವಾಗುತ್ತದೆ. ಹಾಗಾಗಿ ಹನುಮಂತ ಹಾಲಿಗೇರಿಯವರು ಅಭಿನಂದನಾರ್ಹರು. ಲೈಂಗಿಕ ಕಾರ್ಯಕರ್ತರಲ್ಲಾದ ಬದಲಾವಣೆ, ಹಕ್ಕೊತ್ತಾಯಕ್ಕಾಗಿ ಹೋರಾಡುವ ಮನೋಭಾವ, ತನ್ನತನವನ್ನೂ, ತನ್ನನ್ನು ವೇಶ್ಯಾವೃತ್ತಿಗೆ ದೂಡಿದ ವ್ಯವಸ್ಥೆಯ ಬಗೆಗಿನ ಆಕ್ರೋಶಕ್ಕೆ ರಾಜಕೀಯ ಶಕ್ತಿ ಬರುತ್ತಿರುವ ಸೂಕ್ಷ್ಮತೆಯನ್ನು ಗ್ರಹಿಸಲು ಒಮ್ಮೆ ಓದಬಹುದಾದ ಕಾದಂಬರಿ ‘ಕೆಂಗುಲಾಬಿ’.
ಕೆಂಗುಲಾಬಿ (ಕಾದಂಬರಿ)
ಲೇ: ಹನುಮಂತ ಹಾಲಿಗೇರಿ
ಪುಟ: 14+೧೨೨, ಬೆಲೆ: ೬೦.೦೦
ಚೆ ಪುಸ್ತಕ, ವೆಂಕಟಾಲ, ಯಲಹಂಕ, ಬೆಂಗಳೂರು-೬೪