’ಬರೆಯುವ ಪ್ರಾಮಾಣಿಕತೆ ಮುಖ್ಯವೇ ಹೊರತು, ಪ್ರಕಾರಗಳಲ್ಲಿ ಪರಿಶುದ್ಧತೆ ಅಲ್ಲ’ ಎಂದು ಲಂಕೇಶ್ ಯಾರನ್ನೋ ಉದಾಹರಿಸುತ್ತಾ ಹೇಳುತ್ತಾರೆ. ಹಾಗೆಯೇ ಇನ್ನೊಂದು ಕಡೆ ಹೇಳುತ್ತಾರೆ ’ಪಂಚೇಂದ್ರಿಯಗಳು ಜಾಗೃತವಾಗಿರುವವ ಒಳ್ಳೆಯ ಗದ್ಯವನ್ನು ಬರೆಯಬಲ್ಲ, ಆದರೂ ತುಂಬಾ ಎಚ್ಚರಿಕೆಯಿಂದ ಬರೆದಷ್ಟೂ ಕೆಟ್ಟ ಗದ್ಯವಾಗುತ್ತದೆ’ ಎಂದು.
ಸುಮ್ಮನೇ ನನ್ನ ಪಂಚೇಂದ್ರಿಯಗಳಿಗೆ ದಕ್ಕಿದ್ದನ್ನು ದಾಖಲಿಸುತ್ತಾ ಸಾಗಿದಂತೆ ಅದು ಪದ್ಯ, ಕತೆಯ ರೂಪವನ್ನೋ ಕಾದಂಬರಿಯ ರೂಪವನ್ನೋ ಪಡೆದುಕೊಂಡಿರಬಹುದು. ಅದು ಕೇವಲ ಆಕಸ್ಮಿಕ ಮಾತ್ರ.
ನೀಲು, ಬೋದಿಲೇರ್ ಮತ್ತು ಮಂಜುನಾಥ ವಿಎಂರ ಪ್ರಭಾವದಿಂದ ಹೆಣ್ಣು, ಕಾಮ, ಪ್ರೇಮದ ಕವನಗಳನ್ನು ರಚಿಸುತ್ತಿದ್ದೆ. ಒಮ್ಮೆ ಎಲ್.ಎನ್. ಮುಕುಂದರಾಜ್ ಅವರು ೧೨ನೇ ಶತಮಾನದ ಕುಶಲಕರ್ಮಿ ಕಾರ್ಮಿಕರು ತಮ್ಮ ವೃತ್ತಿ ಪರಿಭಾಷೆಯಲ್ಲಿ ಕಾವ್ಯ ರಚಿಸುತ್ತಿದ್ದದ್ದನ್ನು ಪರಿಚಯಿಸಿದರು. ಅಂದಿನಿಂದ ಅದೇ ಹೆಣ್ಣು, ಕಾಮ, ಪ್ರೇಮಕ್ಕೆ ನನ್ನ ವೃತ್ತಿ ಪರಿಕರಗಳನ್ನು ಆಯೋಜಿಸಿ ಬರೆಯಲು ಶುರುಮಾಡಿದೆ. ಕ್ರಮೇಣ ಅದು ಗೆದ್ದಿತು ಕೂಡ.
ಹೆಜ್ಜೆಗಳು
ನೀನು ಹೆಜ್ಜೆ ಊರುವ ಜಾಗವನ್ನು ನಾನು ಚೆನ್ನಾಗಿ ಗುರುತಿಸಬಲ್ಲೆ!
ಅಲ್ಲಿ ಯಾವಾಗಲೂ ಮಳೆ ಬಿದ್ದ ಗುರುತು ಇರುವುದಿಲ್ಲ.
ನೀನು ಶುಷ್ಕ ಒಣಭೂಮಿಯನ್ನು ಅದೇಕೆ ಆರಿಸಿಕೊಂಡಿದ್ದೀ?
ಆದರೆ ನಿನಗೆ ಗೊತ್ತಿಲ್ಲ; ಅಲ್ಲಿಂದ ಹತ್ತು ಹೆಜ್ಜೆ ಹಿಂದೆ ಬಂದರೆ ಸಾಕು,
ಘನ ಸರ್ಕಾರದವರು ಕನಸುಗಳು ಬೀಳುವ ಮರಗಳನ್ನು ನೆಟ್ಟಿದ್ದಾರೆ.
ಅಥವಾ,
ಪಕ್ಕಕ್ಕಾದರೂ ಚಲಿಸಿಬಿಡು!
ಹೂದಾನಿಯ ನೀರ ಹನಿಗಳು ಹೂವಿನ ಪಕಳೆಗಳ
ಮೂಲಕ ಇಳಿದು ನಿರ್ಮಿಸಿದ, ತಾವರೆ ಹೂವಿನ ಕೊಳವನ್ನು
ಕಣ್ತುಂಬಿಸಿಕೊಳ್ಳಬಹುದು.
ಇಲ್ಲವಾದರೆ,
ಅದೇ, ನಿನ್ನನ್ನೇ ಆವರಿಸಿಕೊಂಡಂತೆ ಕಾಣುತ್ತಿದೆಯಲ್ಲಾ?
ಆ ಬೃಹದಾಕಾರದ ಪರ್ವತವನ್ನು ಪಟಪಟನೇ ಏರಿಬಿಡು!
ಅದರ ತುದಿಯಲ್ಲಿ ತಂಪಾದ ಮಳೆ ಬೀಳುವ ಮೋಡಗಳು
ಸಾಲಗಟ್ಟಿ ತೇಲುತ್ತಿವೆ.
ಆದರೆ,
ಎಚ್ಚರ ಗೆಳತಿ ಮುಂದೆ ಮಾತ್ರ ಚಲಿಸಿ ಬಿಡಬೇಡ!
ಅಲ್ಲಿ ಇದೇ ಸರ್ಕಾರದವರು ಕೃತಕ ಜೌಗು ಪ್ರದೇಶವನ್ನು ಏರ್ಪಡಿಸಿದ್ದಾರೆ.
ನೀನು ಅದರ ಆಳಕ್ಕೆ ಇಳಿದಂತೆ, ಕಾದ ಕಬ್ಬಿಣದ ಸರಳುಗಳು
ನಿನ್ನ ಮೇಲೇರುತ್ತವೆ.
ಆಗ ನಾನು ನಿನ್ನ ಹೆಜ್ಜೆಯನ್ನು
ಗುರುತಿಸುವ ’ನನ್ನ ಕಣ್ಣುಗಳಿಗೆ ಸಾವನ್ನು ದಯಪಾಲಿಸಿ’
ಎಂದು ಇದೇ ಸರ್ಕಾರಕ್ಕೆ ಅರ್ಜಿ ಹಾಕಬೇಕಾಗಿ ಬರಬಹುದು.
ಅವಳು ಚಂಡಮಾರುತದ ಸುಳಿಗಳು
ಅವಳಾತ್ಮದ ಮೇಲೆ ಹಾಯಿದೋಣಿಯನ್ನು
ಬಲು ಎಚ್ಚರದಿಂದ ಚಲಾಯಿಸುವೆನು.
ಚಂಡಮಾರುತ ಬೀಸುವ ಕಡೆಗೆ ಚಲಿಸುವೆನಾದರೂ
ಅದರ ವಿರುದ್ಧದೆಡೆಗೆ ಸಾಗಿದಂತೆ ಭಾಸವಾಗುತ್ತದೆ.
ಅವಳು ಇಡೀ ಭೂಮಂಡಲವನ್ನೇ ಹೊದ್ದು
ಮಲಗಿರುವಂತೆ ಕಾಣುತ್ತಾಳೆ.
ಅಲ್ಲಲ್ಲಿ ಅವಳ ಸುಳಿಗಳ ಸೆಳೆತಕ್ಕೆ ಒಳಗಾಗುವೆನು.
ಆದರೂ ಆ ಸುಳಿಗಳು ನನ್ನ ಹಾಯಿದೋಣಿಯನ್ನು
ಸೆಳೆಯುವಷ್ಟು ಬಲಿಷ್ಠವಲ್ಲವೆಂಬುದು ತೃಪ್ತಿ ಕೊಡುತ್ತದೆ.
ಅಷ್ಟಕ್ಕೇ ಸೋಲೊಪ್ಪದ ಅವಳು
ಅವಳ ಅಲೆಗಳ ಉಬ್ಬರ ಹೆಚ್ಚಿಸಿ ಅಲ್ಲಲ್ಲಿ
ನಿಶೆಯ ವಾತಾವರಣವನ್ನು ಏರ್ಪಡಿಸುತ್ತಾಳೆ.
ವಾರ್ಡ್ರೋಬ್ಗಳಲ್ಲಿ ಅವಳು
ನಿರ್ಭಾವುಕತೆಯ ಮುಖಹೊತ್ತ ಅವಳು
ಅರಳುವುದು ನನ್ನ ವಾರ್ಡ್ರೋಬ್ಗಳಲ್ಲಿ.
ಹಾಗೆ ಅರಳಿದ ಅವಳು ತನ್ನ ಹೊಸಾ
ಮೈಕಾಶೀಟನ್ನು ಆಕ್ರಮಣಕಾರಿ ಅಂಟುದ್ರವ್ಯದಿಂದ,
ನನ್ನ ವಾರ್ಡ್ರೋಬ್ನ ಬಾಗಿಲಿಗೆ ಅಂಟಿಸಿ ಸುಖಿಸುವಳು.
ತನ್ನ ಪೂರ್ವಗ್ರಹಿ ಕನಸುಗಳನ್ನು
ಅಲ್ಲಿನ ಡ್ರಾಯರ್ಗಳಲಿ ಸಂಗ್ರಹಿಸಿ
ನಿಲುವುಗನ್ನಡಿಗೆ ನಿವೃತ್ತಿ ಘೋಷಿಸುವಳು.
ನಾನು ಬಡಗಿ:
ವಾರ್ಡ್ರೋಬಿನ ಕೆಲಸ ಮುಗಿದ ತಕ್ಷಣ,
ನನ್ನನ್ನು ಅವಳ ಒಳಉಡುಪಿನ ಜೊತೆ ತೂಗುಹಾಕಿ
ಬಾಗಿಲು ಭದ್ರಪಡಿಸುವಳು.
ಅಲ್ಲಿ ಒಳಗೆ,
ನಾಳಿನ ನನ್ನ ಕ್ರಿಯಾಶೀಲತೆಗೆ
ನಿರಂತರವಾಗಿ ಸೆಣಸುವೆನು.
ಪ್ಲೈವುಡ್
ಸತತ ಬೆಂಕಿಯುಂಡೆಗಳ ದಾಳಿಯಾದರೂ
ಸುಡಲಾರಳು; ಅವಳ ಸುತ್ತ ಅಗ್ನಿ ನಿರೋಧಕ
ಪ್ಲೈವುಡ್ನಿಂದ ಕ್ಯಾಬಿನ್ ನಿರ್ಮಿಸಿದ್ದೇನೆ.
ಆದರೂ ಚೀತ್ಕರಿಸುತ್ತಾಳೆ.
ಅದರ ಮೈ ಸುಡುವ ಹಬೆಯಿಂದಲ್ಲ,
ಮಳೆ ತರಿಸುವ ಅವಳ ಆತ್ಮವನ್ನೂ ಸಹ
ವಾಟರ್ಪ್ರೂಫ್ ಪ್ಲೈವುಡ್ನಿಂದ ಬಂಧಿಸಿದ್ದೇನೆ.
ಆ ಬೆಂಕಿಯುಂಡೆಗಳ ಉಷ್ಣತೆಯು
ಗರಿಷ್ಠ ಮಿತಿಯನ್ನು ಮೀರಿದಾಗ
ಅವಳ ಆತ್ಮವನ್ನು ಬಂಧನದಿಂದ ಬಿಡಿಸುತ್ತೇನೆ.
ಆದರೆ ಏನು ಮಾಡಲಿ?
ಆ ಹೊತ್ತಿಗೆ ಮಳೆಗಾಲ ಮುಗಿದು ಪ್ಲೈವುಡ್ನ
ಪದರಗಳು ಒಂದೊಂದಾಗಿ ಕಳಚಿಕೊಳ್ಳುತ್ತಿರುತ್ತವೆ.
ಕದ
ನನ್ನ ಕೋಣೆಯ ಕದ ತೆರೆದಾಗಲೆಲ್ಲ
ಆಕಳಿಸುತ್ತದೆ.
ಅದರ ಕೀಲುಗಳಿಗೆ ತೈಲ ಲೇಪಿಸಿದರೂ
ಬಡರಾಕ್ಷಸನ ಹಾಗೆ ಅರಚುತ್ತದೆ.
ನಾನು ಬಾಯಾರಿದಾಗಲೆಲ್ಲ ನೀರು ಕುಡಿದು,
ಕದ ಮುಚ್ಚಿ, ಕಿಲುಬುಗಟ್ಟಿದ ಅಗಳಿ ಹಾಕಿ,
ಅವಳನ್ನು ಪ್ರೇಮಿಸಲು ಹಿಂಸಿಸುವೆನು.
ಅವಳು ಆ ಕತ್ತಲ ಕೋಣೆಯಿಂದ
ವರ್ಣರಹಿತ ಕನಸುಗಳನ್ನು ನನ್ನೆಡೆಗೆ
ವರ್ಗಾಯಿಸಲು ಪ್ರಯತ್ನಿಸುವಳು;
ನನ್ನ ಪ್ರೇಮಹಿಂಸೆ ಮುಂದುವರೆದಿರುತ್ತದೆ.
ಆದರೆ ಅವಳು, ಅವಳ ಕೊನೆಯ ಅಸ್ತ್ರವೆಂಬಂತೆ
ಆ ಬಡರಾಕ್ಷಸನನ್ನು ಪ್ರೇಮಿಸುತ್ತ
ನಿದ್ದೆಗೆ ಜಾರುವಳು.