ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರ ಬರೆದ ಕವಿತೆ.
ಇನ್ನು ಉಳಿದಿರುವುದು
ನನಗಿರುವ ಬೆರಳಿನಷ್ಟೇ ದಿನಗಳು
ನಿನ್ನ ನೋಡಲು
ಮತ್ತೆ ಕೂಡಿಟ್ಟಿರುವೆ, ತುಂಬಿಕೊಂಡಿರುವೆ
ಎಂದಿನಂತೆ ಇಂದೂ ಮರೆತಿರುವೆ ಕೂಡಾ
ಇಲ್ಲೊಂದು ಎಲೆ ಗಾಳಿಯಲ್ಲಿ ಬಳುಕಿಕೊಂಡು,
ಏನೋ ಬೇಕೆಂಬಂತೆ ನಾಚುತ್ತಿದೆ
ಒಂದೇ ಒಂದು ಧೀರ್ಘ ಉಸಿರು
ಈ ಚಲಿಸುವ ರಸ್ತೆ, ಮರ, ಬೆಳಗಿನ
ಮುದ್ದು ಆಕಾಶ, ಓಡಿ ಓಡಿ
ನನ್ನನ್ನು ಅಲ್ಲಿಗೆ ತಲುಪಿಸುತ್ತದೆ
ಮುಂದೆ.. ಏನೆಂದು ಗೊತ್ತಿಲ್ಲದಂತೆ
ನೀನು ಬೀಗಿಕೊಂಡು ತಣ್ಣಗೆ ನಗುತ್ತಿರುವೆ
ಇರು, ಈಗಷ್ಟೇ ಬಂದಿರುವೆನೆಂದೇ?
ಮೊದಲು ಎಲ್ಲಿ ಮುತ್ತಿಡಲಿ ಮೆತ್ತಗೆ?
ಹೇ ಪರಮಾತ್ಮ! ಎಲ್ಲಿಂದ ಹೇಗೆ ನುಸುಳಿದೆ
ಮೈಯ್ಯಲ್ಲಿ ಬಚ್ಚಿಟ್ಟ ಚಿಟ್ಟೆಗಳನ್ನು ಹಾರಿಸಿ
ಕಣ್ಣು ಹೇಗೆ ತೆರೆಯಲಿ, ಕಿವಿಯ ಆಳದಲ್ಲಿ
ಮೂಗು, ಕುತ್ತಿಗೆ ಕಚ್ಚಿ ನಿನ್ನ ನಾಲಗೆ, ಎಂಜಲು
ಸಣ್ಣಗೆ ಬೆವರಿ, ಬೆಚ್ಚಗಾಗಿ ಏದುಸಿರು ಬಿಡುತ್ತಿರುವ ನನ್ನ ಎದೆ
ಅಷ್ಟೇ ಗೊತ್ತು ನನಗೆ
ಎಣಿಸಿದ ಬೆರಳುಗಳನ್ನು ಅಮುಕಿ ಮುರಿದು ಬಿಡು
ಕಾಣುವ ಹೂಗಳೇ ಮುಷ್ಟಿ ಹಿಡಿದುಹಾಗೇ ನಗುತ್ತಿರಿ,
ಹರಿಯುವ ಹಾವಾಗಿರುವೆ, ಹಾ.. ಸುಖಿಸುತ್ತಿರುವೆ
ಹೇ ಪರಮಾತ್ಮ! ಇನ್ನು ತಡೆಯಬೇಡ
ಕಿಬ್ಬೊಟ್ಟೆಗೆ ಸರಿಯಾಗಿ ತಲೆಯಿಡು
ಕೈತುಂಬಾ ಹಿಡಿದು ಒತ್ತಿಕೋ
ತೊಟ್ಟಿಗೆ ತೊಟ್ಟು ತಾಗಿಸಿ
ಮೆತ್ತಗೆ ಆಡುವಷ್ಟು ಕಾಲವಿದೆ ನಮಗೆ
ನನ್ನ ಸಂಧಿ ಸಂಧಿಗಳಲ್ಲಿ ನಿನ್ನನ್ನು ಹಡೆದೇ ತೀರುವೆ
ತೊಡಿಸಿ ಬಿಡು ನಿನ್ನ ಆಭರಣ
ಒಳಗೆ ಏನಾದರು ಪರಿಮಳದ ಮಾತಾಡು
ನನಗೆ ಅವಸರಿಲ್ಲ.. ನಿನಗೂ?
ನಮ್ಮ ಉಸಿರು ಇನ್ನಷ್ಟು ದೂರ ಓಡುವುದಿದೆ
ಮತ್ತೆ ನಾ ಅಳುವುದೇಕೆ?
ಬಿಡಿಸಿಕೊಳ್ಳಲು ಹೆಣಗಾಡುವುದೇಕೆ?
ಮುಂದೆ,
ಒಂದು ಊರು, ಒಂದೇ ಮನೆ
ಮತ್ತು ಅಲ್ಲಿ ನಿಗೂಢವಾಗಿ
ಕಳೆದುಹೋಗಿರುವ ನಾನು
ಅದೊಂದು ಮಗುವೋ, ನೀನೋ
ಗಾಢ ನಿದ್ದೆಯಲ್ಲಿ ಮುಖ ಹುದುಗಿಸಿ
ಸವರುತ್ತಿದೆ
ಇಷ್ಟೇ ತೆರೆದ ದುಂಡು ಬಾಯಿಗೆ
ದುಂಡು ಮೊಲೆಯಿಟ್ಟು ಬಿಡುವೆ
ಬದುಕುವುದಾದರೆ ಇದೊಂದು ಘಳಿಗೆ
ಇನ್ನು ಉಳಿದಿರುವುದು
ನನಗಿರುವ ಬೆರಳಿನಷ್ಟೇ ದಿನಗಳು
ನಿನ್ನ ನೋಡಲು