ಶೈಕ್ಷಣಿಕ ವರ್ಷ ಆರಂಭವಾಗಿದೆ. ನನ್ನ ಮಗಳಿಗೀಗ ಆರು ವರ್ಷ. ಅವಳದೇ ಪ್ರಾಯದ ಮಕ್ಕಳು ನಮ್ಮ ನೆರೆಯಲ್ಲಿ ಸಾಕಷ್ಟಿದ್ದಾರೆ. ಆ ಮಕ್ಕಳಾಗಲೇ ಶಾಲೆ ಸೇರಿ ಮೂರು ವರ್ಷಗಳಾಗಿವೆ. ಯಾವ ಮಕ್ಕಳನ್ನು ಕೇಳಿದರೂ ನಾನು ಆ ಕೆಜಿ, ಈ ಕೆಜಿ ಎಂದು ಹೇಳುತ್ತವೆ. ಸಣ್ಣ ಬಾಲ್ಯವನ್ನು ನಮ್ಮಲ್ಲಿಯೇ ಕಳೆದ ನನ್ನ ಮಗಳನ್ನು ನಿನ್ನೆ ಶಾಲೆಗೆ ಸೇರಿಸಲು ತೀರ್ಮಾನಿಸಿದೆ. ಅದೂ ನಾನು ಓದಿದ ಅಂದರೆ ವೆಂಕಟಾಲ (ಬೆಂಗಳೂರಿನ ಯಲಹಂಕ)ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ.
ನಾನು ಅಲ್ಲಿ ಕಲಿಯುವಾಗ ಸುಮಾರು ನೂರಕ್ಕೂ ಹೆಚ್ಚಿನ ಮಕ್ಕಳು ಇದ್ದೆವು. ಶಾಲೆಯ ಕಟ್ಟಡ ಸಣ್ಣದಾಗಿತ್ತು. ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಿಗೆ ಮಾತ್ರ ಕೋಣೆಯಲ್ಲಿ ಪಾಠ ನಡೆಯುತ್ತಿತ್ತು. ಒಂದು ಮತ್ತು ಎರಡನೇ ತರಗತಿಯ ಮಕ್ಕಳು ಮರದ ಕೆಳಗೆ ಪಾಠ ಕೇಳುವ ವ್ಯವಸ್ಥೆ ಇತ್ತು. ಅಂದು ಆ ಶಾಲೆಯಲ್ಲಿ ಇದ್ದ ಶಿಕ್ಷಕರು ಸ್ನೇಹಿತರಂತೆ ಯಾವುದೇ ಮೌಢ್ಯವನ್ನು ತುಂಬದೇ ಪಾಠ ಮಾಡುತ್ತಿದ್ದರು. ನಮ್ಮ ಶಾಲೆಯ ಮುಖ್ಯ ಶಿಕ್ಷಕರು ದೇವಸ್ಥಾನದ ಅರ್ಚಕರಾಗಿದ್ದರೂ ಸಹ ಶಾಲೆಯಲ್ಲಿ ದೇವರುಗಳನ್ನು ವ್ಯಂಗ್ಯವಾಡಿಕೊಂಡು ನಮಗೆ ಪಾಠ ಮಾಡುತ್ತಿದ್ದರು. ಈಗಿನಷ್ಟು ಅಗಲವಾಗಿ ಹೈವೇ ಕೂಡ ಬೆಳೆದಿರಲಿಲ್ಲ. ಸುಂದರಮ್ಮ ಎಂಬ ಶಿಕ್ಷಕಿ ಬಸ್ಸಿನಲ್ಲಿ ಬಂದದ್ದು ನಮ್ಮ ಕಣ್ಣಿಗೆ ಬಿದ್ದರೆ, ಬಸ್ಸಿನ ಹಿಂದೆಯೇ ಓಡಿ ಗೇಟಿನ ಮತ್ತು ಕೊಠಡಿಗಳ ಬೀಗವನ್ನು ಪೈಪೋಟಿಯಲ್ಲಿ ಪಡೆದುಕೊಳ್ಳುತ್ತಿದ್ದೆವು. ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುತ್ತಿತ್ತು. ಮುಖ್ಯ ಶಿಕ್ಷಕರು ಹೆಚ್ಚಿನ ಕೊಠಡಿ ವ್ಯವಸ್ಥೆಗಾಗಿ ಶಿಕ್ಷಣ ಇಲಾಖೆಗೆ ಅರ್ಜಿ ಬರೆದು ಅಥವಾ ತಾವೇ ಖುದ್ದಾಗಿ ಭೇಟಿ ಕೊಟ್ಟು ವಿನಂತಿಸಿಕೊಳ್ಳುತ್ತಿದ್ದರು.
ಈಗ ಕಾಲ ಬದಲಾಗಿದೆ.
ಶಾಲೆಗೆ ಹೊಸ ಕಟ್ಟಡ ಕಟ್ಟಲಾಗಿದೆ. ಉಸ್ತುವಾರಿ ಸಮಿತಿಯನ್ನು ನೇಮಿಸಲಾಗಿದೆ. ಹೈವೇಯನ್ನು ಅಗಲಮಾಡಿ ಶಾಲೆಯ ಗೇಟನ್ನು ಬೀಳಿಸಲಾಗಿದೆ. ಹೈವೇ ರಸ್ತೆಗಾಗಿ ಹಳೆಯ ಕಟ್ಟಡವನ್ನು ಇನ್ನೆರಡು ತಿಂಗಳಲ್ಲಿ ಬೀಳಿಸಲಾಗುತ್ತದೆ. ಉಸ್ತುವಾರಿ ಸಮಿತಿ ಸ್ವಾತಂತ್ರ್ಯೋತ್ಸವದ ದಿನ ಮಾತ್ರ ಕಾರ್ಯನಿರ್ವಹಿಸಿ, ಮಕ್ಕಳ ಮೂತಿಗೆ ಚಾಕ್ಲೇಟ್ ಅನ್ನು ಬಳಿಯುತ್ತದೆ. ಅದೇ ಉಸ್ತುವಾರಿಯ ಸದಸ್ಯರ ಮಕ್ಕಳು ಕಾನ್ವೆಂಟಿನ ಬಸ್ಸುಗಳ ಸೀಟಿನ ಸುಖ ಅನುಭವಿಸುತ್ತಿದ್ದಾರೆ. ಈಗ ಇರುವ ಮುವ್ವತ್ತು ಮಕ್ಕಳನ್ನು ಅಲ್ಪಸ್ವಲ್ಪ ಅಕ್ಕರೆಯಿಂದ ನೋಡಿಕೊಳ್ಳುತ್ತಿರುವುದು ವಿದೇಶಿ ಶಾಲೆಯ (ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್) ಮಕ್ಕಳು ಮಾತ್ರ. ಅವರು ಇಲ್ಲಿ ಓದುವ ಮಕ್ಕಳಿಗೆ ಬೂಟು, ಬಟ್ಟೆ, ಕಾಮಿಕ್ ಪುಸ್ತಕಗಳು ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದೆ. ಉಸ್ತುವಾರಿ ಸಮಿತಿಯ ಸದಸ್ಯರು ಅದೇ ವಿದೇಶಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಯಾರ ಶಿಫಾರಸ್ಸು ಪಡೆಯಬೇಕೆಂದು ಕೇಳುತ್ತಿರುತ್ತಾರೆ. ಇಸ್ಕಾನ್ ಎಂಬ ಕಾರ್ಪೋರೇಟ್ ಶೈಲಿಯ ದೇವಸ್ಥಾನ ಮಕ್ಕಳ ಊಟಕ್ಕೆ ಕಾಂಟ್ರಾಕ್ಟ್ ಪಡೆದುಕೊಂಡಿದೆ.
ನಾನು ಈ ರೀತಿ ಬದಲಾದ ಶಾಲೆಗೆ ನನ್ನ ಮಗಳನ್ನು ಸೇರಿಸಲು ಮುಂದಾದಾಗ ಊರಿನ ಎಷ್ಟೋ ಜನ ’ನೀನು ಇಷ್ಟು ಬುದ್ಧಿ ತಿಳಿದು, ಗಂಡ ಹೆಂಡತಿ ಸಂಪಾದನೆ ಮಾಡಿಯೂ ಮಗಳನ್ನು ಈ ಕಿತ್ತುಹೋದ ಶಾಲೆಗೆ ಸೇರಿಸ್ತೀಯ? ಒಳ್ಳೆ ವಿದ್ಯೆ ಕೊಡಿಸಲು ಯಾವ್ದಾದ್ರೂ ಒಳ್ಳೇ ಕಾನ್ವೆಂಟಗೆ ಸೇರಿಸು’ ಎಂದು ಬುದ್ಧಿವಾದ ಹೇಳುವುದಕ್ಕೆ ಶುರುವಿಟ್ಟಿದ್ದರು. ’ವೃದ್ಧಾಶ್ರಮಗಳ ಬಗ್ಗೆ ನಿಮಗೆ ಗೊತ್ತಾ’ ಎಂದು ಪ್ರಶ್ನಿಸಿದೆ. ’ಹೇ ಅದು ಗೊತ್ತಿಲ್ವಾ’ ಎಂದು ಹುಮ್ಮಸ್ಸಿನ ಉತ್ತರ ಬಂತು. ’ಅವು ಹುಟ್ಟಿದ್ದು ಹೇಗೆ ಗೊತ್ತಾ’ ಮರುಪ್ರಶ್ನೆ ಎಸೆದೆ. ’ಪಾಪ ದಿಕ್ಕಿಲ್ಲದ ಅನಾಥರಿಗೆ ಅವು ಹುಟ್ಟಿರೋದು’ ಎಂದು ಎಸೆದ ಪ್ರಶ್ನೆಗೆ ವಿನಮ್ರವಾದರು. ’ಹಾಗಾದ್ರೆ, ವೃದ್ಧಾಶ್ರಮದಲ್ಲಿ ಇರುವವರೆಲ್ಲರೂ ಅನಾಥರಾ?’ ಎಂದದ್ದಕ್ಕೆ ಉತ್ತರವಿಲ್ಲ. ನಾನು ಮುಂದುವರೆದು ’ಅವು ಹುಟ್ಟಿಕೊಂಡಿದ್ದೇ ಕಾನ್ವೆಂಟ್ ಶಾಲೆಗಳ ಪ್ರಭಾವದಿಂದ’ ಎಂದು ಶಾಕ್ ಕೊಟ್ಟೆ. ಬೆಚ್ಚಿದ ಅವರು ’ಅದೆಂಗೆ ಹೇಳ್ತೀಯ?’ ಎಂದು ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಕೇಳಿದರು. ’ಹೇಗಂದ್ರೆ, ಆ ಪರಿಸರದಲ್ಲಿ ಕಲಿತ ಹೆಚ್ಚಿನ ಮಕ್ಕಳಿಗೆ ವರ್ಗ ತಾರತಮ್ಯ ನಿಧಾನವಾಗಿ ಮನಸ್ಸಿಗೆ ಇಳಿಯುತ್ತಿರುತ್ತದೆ. ಸಾಲಸೋಲ ಮಾಡಿ ಆ ಸ್ಕೂಲಿಗೆ ಫೀಸು ಕಟ್ಟಿದ್ದ ನಿಮ್ಮನ್ನು ನನ್ನ ಸ್ನೇಹಿತರಿಗೆ ಪರಿಚಯಿಸಲು ಹಿಂದು ಮುಂದು ನೋಡುತ್ತಾರೆ. ಯಾಕೆಂದರೆ ಅವರಿಗೆ ನಿಮ್ಮ ಸ್ಥಿತಿಯನ್ನು ಕಂಡು ಹೇಸಿಗೆ ಹುಟ್ಟಿರುತ್ತದೆ. ನಂತರ ಬೆಳೆದಂತೆ ಉದ್ಯೋಗಕ್ಕೆ ಫಾರಿನ್ ಕಂಪೆನಿಗಳಿಗೆ ಅರ್ಜಿ ಹಾಕಿ ಉದ್ಯೋಗ ಗಿಟ್ಟಿಸಿಕೊಂಡು ನಗರಗಳಿಗೆ ತೆರಳಿ, ಮಾಲ್, ಕ್ಲಬ್ಬು, ಪಬ್ಬುಗಳಲ್ಲಿ ತಿಂದು ತೇಗಿ ಮಿಕ್ಕಿದ ಹಣವನ್ನು ನಿಮಗೆ ಎಸೆಯುತ್ತಾರೆ. ಅದೇ ಕೆಲಸದಲ್ಲಿ ಬಡ್ತಿ ಸಿಕ್ಕು ವಿದೇಶಕ್ಕೆ ಹಾರಬೇಕಾದ ಸ್ಥಿತಿ ಎದುರಾದಾಗ ಅವರು ಹಾರುವ ವಿಮಾನದಿಂದ ನಿಮ್ಮನ್ನು ಇಂತಹ ವೃದ್ಧಾಶ್ರಮಗಳಿಗೆ ಎಸೆದು ಹೋಗುತ್ತಾರೆ’ ಅವರು ಇನ್ನೂ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿಯೇ ’ಹೇ ಎಲ್ಲಾ ಬೊಗಳೆ ಬಿಡ್ತೀಯ’ ಎಂದು ಜಾಗ ಖಾಲಿ ಮಾಡಲು ಶುರುವಿಟ್ಟರು. ಕೊನೆಗೆ ’ನಾನು ನನ್ನ ಮಗಳಿಗೆ ವಿದ್ಯೆಗಿಂತಲೂ ಮುಖ್ಯವಾಗಿ ಬದುಕುವುದು ಹೇಗೆಂದು ಕಲಿಸಿದರೆ ಸಾಕು. ಯಾಕೆಂದರೆ ನನಗೆ ಬದುಕು ಮಾತ್ರ ಮುಖ್ಯ’ ಎಂದು ಕಳಿಸಿಕೊಟ್ಟೆ.
ಈಗ ಅದೇ ಶಾಲೆಗೆ ಅವಳನ್ನು ಸೇರಿಸಿದ್ದೇನೆ. ನನಗೆ ಮೇಲಿನ ವ್ಯಕ್ತಿಗಳಿಗೆ ಕೊಟ್ಟ ಉತ್ತರ ಮತ್ತು ನಾನು ಓದಿದ ಶಾಲೆಗೆ ಅವಳನ್ನು ಸೇರಿಸಿದ್ದು ಬಹಳ ಹೆಮ್ಮೆ ಮತ್ತು ಖುಷಿಯನ್ನು ತಂದಿದೆ. ಅದಕ್ಕಾಗಿ ನಿನ್ನೆಯಲ್ಲಾ ಮನೆಯಲ್ಲಿ ಹಬ್ಬದ ಸಂಭ್ರಮವನ್ನು ಆಚರಿಸಿ ಬಿರ್ಯಾನಿ ತಿಂದೆವು.
***
ಅವಳನ್ನು ಶಾಲೆಗೆ ಸೇರಿಸುವಾಗ ನಡೆದ ಒಂದು ಘಟನೆ:
ಶಾಲೆಗೆ ಸೇರಿಸಲು ಹೋದಾಗ ಅಲ್ಲಿ ರಂಗಾಚಾರ್ಯ ಎಂಬ ಹೆಡ್ ಮಾಸ್ಟರ್ ಅರ್ಜಿಯನ್ನು ಕೊಟ್ಟು ’ತುಂಬಿ’ ಎಂದರು. ರಾಷ್ಟ್ರೀಯತೆ / ಮತ / ಜಾತಿಯ ಕಾಲಂನಲ್ಲಿ ರಾಷ್ಟ್ರೀಯತೆ ಮತ್ತು ಜಾತಿ ಎರಡನ್ನು ಮಾತ್ರ ತುಂಬಿ ಧರ್ಮದ ಕಾಲಂ ಅನ್ನು ಖಾಲಿ ಬಿಟ್ಟೆ. ಅದಕ್ಕೆ ಆ ಹೆಡ್ ಮಾಸ್ಟರ್ ಹಿಂದೂ ಎಂದು ಬರೆದರು. ನಾನು ವಿರೋಧಿಸಿದೆ. ಅದಕ್ಕೆ ’ಅವರು ಹಾಗಾದರೆ ಕ್ರಿಶ್ಚಿಯನ್ ಎಂದು ಸೇರಿಸಲಾ? ಮುಸ್ಲಿಂ ಎಂದು ಸೇರಿಸಲಾ?’ ಕುಹಕವಾಡುತ್ತಿದ್ದರು. ನಾನು ’ನನಗೆ ಯಾವ ಧರ್ಮವೂ ಮುಖ್ಯ ಅನಿಸುವುದಿಲ್ಲ, ಹಾಗಾಗಿ ಅದನ್ನು ಹಾಗೆಯೇ ಬಿಟ್ಟುಬಿಡಿ’ ಎಂದು ವಿನಂತಿಸಿಕೊಂಡೆ. ಅದಕ್ಕೆ ಅವರು ಯಾವುದೋ ವೇದವನ್ನು ಹೇಳುತ್ತಾ ಧರ್ಮದ ಉಪದೇಶವನ್ನು ಮಾಡುತ್ತಿದ್ದರು. ನಾನು ಅದನ್ನು ನಿರ್ಲಕ್ಷಿಸಿದೆ. ಅವರು ಕೊನೆಯ ಪ್ರಯತ್ನವಾಗಿ ’ಕಾನೂನಿನಲ್ಲಿ ಹಾಗಿದೆ ಹೀಗಿದೆ’ ಎಂದು ಏನೇನೋ ವದರುತ್ತಿದ್ದರು. ನಾನು ನನಗೆ ತಿಳಿದ ಒಬ್ಬ ಪ್ರಸಿದ್ಧ ವಕೀಲರಿಗೆ ಫೋನ್ ಕಾಲ್ ಮಾಡಿ ಸ್ಪಷ್ಟನೆ ಕೇಳಿದೆ. ಅದಕ್ಕೆ ಅವರು ಧರ್ಮವನ್ನು ದಾಖಲಿಸದೇ ಬಿಡುವುದು ನಿಮ್ಮ ಸ್ವಾತಂತ್ರ್ಯ ಎಂದು ಧೈರ್ಯ ತುಂಬಿದರು. ಆದರೂ ಆ ಮಾಸ್ಟರ್ ಸುಮ್ಮನೇ ತರಲೇ ಮಾಡುತ್ತಲೇ ಇದ್ದರು. ಕೊನೆಗೆ ನಾನು ‘ನಿಮಗೇನ್ರಿ ಪ್ರಾಬ್ಲಂ’ ಎಂದು ಧಬಾಯಿಸಿದೆ. ಅವರು ಗೊಣಗಿಕೊಂಡು ಹಿಂದೂ ಎಂಬ ಪದವನ್ನು ಹೊಡೆದು ಹಾಕಿದರು ಸಮಾಧಾನವಾಯ್ತು.
ನೆಮ್ಮದಿಯಿಂದ ಮನೆಗೆ ಬಂದೆ ಗಾಂಧಿ ಹೇಳಿದ ಮಾತು ‘ಧರ್ಮ ಅಥವಾ ಭಕ್ತಿ ಎಂಬುದು ನಾವು ಹಾಕಿಕೊಳ್ಳುವ ಒಳ ಉಡುಪಿನಂತೆ ಖಾಸಗಿಯಾಗಿರಬೇಕು’ ಎಂಬ ಮಾತು ಎದೆಯಲ್ಲಿ ಸುಳಿದು ಲಕಲಕಿಸುತ್ತಿತ್ತು!
ನಿಜವಾಗಿಯೂ ನಾವು ಧರ್ಮದ ಕಾಲಂ ತುಂಬಲೇಬೇಕೆ. ಧರ್ಮ ಖಾಸಗಿಯಾಗಿರುವುದು ಸರಿಯಲ್ಲವೇ?