ಕರಾವಳಿ ಭಾಗದ ರಾಜಕಾರಣಿ ಮುಖ್ಯಮಂತ್ರಿಯಾಗಿ ಹನ್ನೊಂದು ತಿಂಗಳ ಕಾಲ ಅಧಿಕಾರ ನಡೆಸಿ ನಿರ್ಗಮಿಸುತ್ತಿರುವ ಡಿ.ವಿ.ಸದಾನಂದ ಗೌಡರು ಸದಾ ಹಸನ್ಮುಖಿ. ಅಧಿಕಾರ ತ್ಯಜಿಸಬೇಕಾದ ನೋವನ್ನೂ ನಗುತ್ತಲೇ ಅನುಭವಿಸುತ್ತಿದ್ದಾರೆ. ಎರಡೂವರೆ ದಶಕಗಳ ಸಕ್ರಿಯ ರಾಜಕಾರಣದಲ್ಲಿ ಸದಾನಂದ ಗೌಡರ ಅಧ್ಯಾಯ ಕಳಂಕ ರಹಿತ. ಭ್ರಷ್ಟಾಚಾರದ ಸುಳಿಗೆ ಸಿಲುಕದೆ, ಅನೇಕ ಒತ್ತಡಗಳ ನಡುವೆಯೂ ಅಧಿಕಾರ ನಿರ್ವಹಿಸಿದ್ದಾರೆ. ಭ್ರಷ್ಟಾಚಾರದ ಮೂಟೆ ಹೊತ್ತುಕೊಂಡವರ ನಡುವೆಯೂ ಸ್ವಚ್ಛವಾಗಿಯೇ ಅವರು ಉಳಿದದ್ದು ನಿಜಕ್ಕೂ ಅಚ್ಚರಿಯೇ ಸರಿ. ಭೂಹಗರಣ, ಗಣಿಧೂಳು ರಾಜಕಾರಣವನ್ನು ಆವರಿಸಿಕೊಂಡಿದ್ದಾಗಲೇ ಅಧಿಕಾರದ ಕುರ್ಚಿಗೆ ಬಂದ ಸದಾನಂದ ಗೌಡರು ಅಧಿಕಾರಕ್ಕೆ ತಂದವರಿಂದಾಗಿಯೇ ಅಧಿಕಾರ ಕಳೆದುಕೊಂಡಿರುವುದು ದುರಂತ.
ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಗಲಿಗೆ ಹೆಗಲು ಕೊಟ್ಟವರಲ್ಲಿ ಸದಾನಂದ ಗೌಡರು ಕೂಡಾ ಮುಖ್ಯರು ಎನ್ನುವುದನ್ನು ಮರೆಯುವಂತಿಲ್ಲ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರ ಹಂಚಿಕೊಂಡಾಗ ಪಕ್ಷದ ಅಧ್ಯಕ್ಷರಾಗಿದ್ದವರು ಸದಾನಂದ ಗೌಡರು. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ನಿಭಾಯಿಸುವಾಗ ಯಡಿಯೂರಪ್ಪ ಇಡುತ್ತಿದ್ದ ಪ್ರತಿಯೊಂದು ಹೆಜ್ಜೆಯ ಹಿಂದೆ ಸದಾನಂದರ ಬಲವಿತ್ತು. ಒಂದು ರೀತಿಯಲ್ಲಿ ಕರ್ನಾಟಕದ ಇತಿಹಾಸದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕೊಟ್ಟ ಸಮ್ಮಿಶ್ರ ಸರ್ಕಾರ ಉತ್ತಮವೆಂದೇ ಹೇಳಬೇಕು. ಅರಸು, ಗುಂಡೂರಾವ್, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ಧರಂ ಸಿಂಗ್ ಮುಂತಾದವರಿಗಿಂತ ಭಿನ್ನವಾಗಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ನಿರ್ವಹಿಸಿದ್ದರು.
ಉಪಮುಖ್ಯಮಂತ್ರಿಯಾಗಿ ಯಡಿಯೂರಪ್ಪ ತಮ್ಮ ರಾಜಕೀಯ ಪಯಣದ ಅನುಭವ ಮತ್ತು ಅಭಿಲಾಶೆಯನ್ನು ಆಗ ಈಡೇರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಸದಾನಂದ ಗೌಡರು ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದ್ದರ ಹಿಂದೆ ಗೌಡರ ಶ್ರಮವೂ ಇತ್ತು. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅಧಿಕಾರ ತ್ಯಜಿಸುವ ಸಂದರ್ಭ ಬಂದಾಗ ಪಟ್ಟು ಹಿಡಿದು ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದರು.
ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಅದೇ ರಾಜಕೀಯದ ಗುಣವಿಶೇಷತೆ. ಯಡಿಯೂರಪ್ಪ ಮತ್ತು ಸದಾನಂದ ಗೌಡರು ಪರಸ್ಪರ ವೈರಿಗಳಾಗುತ್ತಾರೆಂದು ಯಾರೂ ಊಹಿಸದಿರಲು ಕಾರಣಗಳಿದ್ದವು. ಬದಲಾದ ರಾಜಕೀಯ ಸಂದರ್ಭದಲ್ಲಿ ಈ ಇಬ್ಬರೂ ಬದ್ಧ ವೈರಿಗಳಾಗಿಬಿಟ್ಟರು. ಸದಾನಂದ ಗೌಡರು ತನ್ನ ಹಿಡಿತದಲ್ಲೇ ಇರಬೇಕೆನ್ನುವ ಮಹತ್ವಾಕಾಂಕ್ಷೆ ಯಡಿಯೂರಪ್ಪ ಅವರಿಗಿತ್ತು ಮತ್ತು ಅದು ಸಹಜವೂ ಆಗಿತ್ತು. ಈ ಒಂದೇ ಕಾರಣಕ್ಕಾಗಿಯೇ ಉಳಿದೆಲ್ಲರನ್ನು ಬದಿಗೆ ಸರಿಸಿ ಯಡಿಯೂರಪ್ಪ ಸದಾನಂದ ಗೌಡರಿಗೆ ಪಟ್ಟ ಕಟ್ಟಿಸಿದ್ದರು. ಆದರೆ ದಿನ ಕಳೆದಂತೆ ಯಡಿಯೂರಪ್ಪ ಅವರು ಅಂದುಕೊಂಡಂತೆ ನಡೆದುಕೊಳ್ಳಲು ಸದಾನಂದ ಗೌಡರಿಗೆ ಆಗಲಿಲ್ಲ ಮತ್ತು ಅದು ಸಾಧ್ಯವೂ ಇರಲಿಲ್ಲ. ಇದು ಯಡಿಯುರಪ್ಪ ಅವರಿಗೂ ಗೊತ್ತಿತ್ತು. ಆದರೆ ಅವರಿಗೂ ಆ ಸಂದರ್ಭದಲ್ಲಿ ಸದಾನಂದ ಗೌಡರ ಜೊತೆ ಹಾಗೆ ನಡೆದುಕೊಳ್ಳುವುದು ಅನಿವಾರ್ಯವಾಗಿತ್ತು.
ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡರೆ ತಾನು ಸಂಕಷ್ಟಕ್ಕೆ ಬೀಳಬೇಕಾಗುತ್ತದೆ ಎನ್ನುವ ಸಂಗತಿಯೂ ಗೊತ್ತಿತ್ತು. ಆದರೆ ಆಗ ಹೈಕಮಾಂಡ್ ಕೃಪಾಕಟಾಕ್ಷ ಗೌಡರ ಮೇಲಿತ್ತು. ಹಿರಿಯ ಜೀವ ಅಡ್ವಾಣಿ, ಸುಷ್ಮಾ, ರಾಜನಾಥ್ ಸಿಂಗ್, ಜೈಟ್ಲಿ, ನಿತಿನ್ ಗಡ್ಕರಿ, ಅನಂತ್ ಕುಮಾರ್ ಸಹಿತ ಹೈಕಮಾಂಡ್ ನೂರಕ್ಕೆ ನೂರು ಬೆಂಬಲವಿತ್ತು. ಇಂಥ ಕಾಲಘಟ್ಟದಲ್ಲಿ ಯಡಿಯೂರಪ್ಪ ಒಂದೊಂದೇ ದಾಳ ಉರುಳಿಸುತ್ತಾ ಹೋಗಿ ಕಡೆಯದಾಗಿ ಮುಖ್ಯಮಂತ್ರಿ ಪಟ್ಟವನ್ನೇ ಆವರಿಸಿಕೊಂಡರು.
ಸದಾನಂದ ಗೌಡರ ಬೆಂಬಲಕ್ಕೆ ನಿಂತು ಯಡಿಯೂರಪ್ಪ ಅವರನ್ನು ದೂರವಿರಿಸಿದ್ದ ಹೈಕಮಾಂಡ್ ನಾಯಕರು ಒಬ್ಬೊಬ್ಬರಾಗಿ ಗೌಡರನ್ನು ಕೈಬಿಡತೊಡಗಿದರು. ಯಡಿಯೂರಪ್ಪ, ಬಿಜೆಪಿ, ಅಧಿಕಾರ ಉಳಿಸಿಕೊಳ್ಳುವುದು ಹೈಕಮಾಂಡ್ಗೆ ಅದೆಷ್ಟು ಅನಿವಾರ್ಯ ಎನ್ನುವ ಸ್ಥಿತಿಯನ್ನು ತರುವಲ್ಲಿ ಯಡಿಯೂರಪ್ಪ ಸಫಲರಾದರು. ಮೌನಕ್ಕೆ ಅದೆಂಥ ಬಲವಿರುತ್ತದೆ ಎನ್ನುವುದನ್ನು ಯಡಿಯೂರಪ್ಪ ಈ ಮೂಲಕ ಸಾಧಿಸಿ ತೋರಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಂದ ಹಿಗ್ಗಾಮುಗ್ಗಾ ಟೀಕಿಸಿಕೊಂಡು ಮಂಡಿಯೂರಿದ್ದು ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯ ಸರಕು. ಉಕ್ಕಿನ ಮನುಷ್ಯ ಕೂಡಾ ಸದಾನಂದ ಗೌಡರ ಬೆನ್ನು ತಟ್ಟಿ, ಗದ್ಗದಿತರಾಗಿ ಕೈಹಿಡಿದು ಕುರ್ಚಿಯಿಂದ ಇಳಿಸಿರುವುದು ಯಡಿಯೂರಪ್ಪ ಅವರ ರಾಜಕೀಯ ನಡೆಗೆ ಸಿಕ್ಕ ಬಹುದೊಡ್ಡ ಗೆಲುವು.
ಹನ್ನೊಂದು ತಿಂಗಳು ಸದಾನಂದ ಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪಯಣ ಮುಗಿಸಿದ್ದಾರೆ ಅನ್ನುವುದಕ್ಕಿಂತ ಪಯಣಕ್ಕೆ ತಡೆಯೊಡ್ಡಿಸಿಕೊಂಡರು ಎನ್ನುವುದೇ ಸೂಕ್ತ. ಅಧಿಕಾರ ಮುಖ್ಯವಲ್ಲ, ಆದರೆ ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡೆ, ಏನೇನು ಕಾಣ್ಕೆ ಕೊಟ್ಟೆ ಎನ್ನುವುದು ಮುಖ್ಯ. ಅದನ್ನೇ ಸದಾನಂದ ಗೌಡರು ಹೇಳುತ್ತಿದ್ದಾರೆ. ಕರ್ನಾಟಕದ ಸದಾನಂದ ಗೌಡರ ಅಧಿಕಾರಕ್ಕೆ ಪ್ರತಿಪಕ್ಷಗಳಿಂದ ಅಡ್ಡಿಯಾಗಲಿಲ್ಲ, ಆಡಳಿತ ಪಕ್ಷವೇ ಪ್ರತಿಪಕ್ಷದ ಕೆಲಸ ಮಾಡಿತು ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಹೇಗೆ ಜೀರ್ಣಿಸಿಕೊಳ್ಳುತ್ತದೋ ಗೊತ್ತಿಲ್ಲ. ‘ಆಪರೇಷನ್ ಕಮಲ’ದ ತಾಕತ್ತನ್ನು ಹೈಕಮಂಡ್ ಅರಿತಿದೆಯೋ ಗೊತ್ತಿಲ್ಲ. ಸದಾನಂದ ಗೌಡರ ನಿರ್ಗಮನ ರಾಜಕೀಯ ಪಕ್ಷಗಳಿಗೆ ಹೊಸ ಪಾಠ, ಬಿಜೆಪಿಗೂ ಕೂಡಾ. ಸದಾನಂದ ಗೌಡರ ನಗುವಿನ ಹಿಂದೆ ಹೆಪ್ಪುಗಟ್ಟಿರುವ ನೋವು ಕಾಣಿಸುವುದಿಲ್ಲ. ಯಾಕೆಂದರೆ ಸದಾನಂದರು ಈಗ ನೋವನ್ನೂ ಗೆದ್ದವರು. ಬಿಜೆಪಿ ಅವರನ್ನು ಮೆಚ್ಚದಿದ್ದರೂ ಕರ್ನಾಟಕದ ಜನರು ಮೆಚ್ಚಿಕೊಂಡಿದ್ದಾರೆ. ಯಾಕೆಂದರೆ ಕಾರಣವಿಲ್ಲದೆ, ಕಾರಣವಲ್ಲದ ಕಾರಣಕ್ಕಾಗಿ ಅಧಿಕಾರ ಹರಣವಾಗಿದೆ, ಮುಂದೆ ?.