ಪ್ರೀತಿಯ ಮಕ್ಕಳೇ, ಬೇಸಿಗೆ ರಜೆ ಮುಗಿಯಿತು. ಹಾಗಂತ ನೀವು ಬೇಸರ ಪಡಬೇಕಾಗಿಲ್ಲ. ಸಂಪಿಗೆ ಬಯಲಲ್ಲಿ ನೀವು ಯಾವಾಗ ಬೇಕಾದರೂ ಆಟವಾಡಬಹುದು. ಈ ವಾರ ನಾವು ನಿಮಗೆ ಪುಟಾಣಿ ಕವಯತ್ರಿಯೊಬ್ಬಳನ್ನು ಪರಿಚಯಿಸುತ್ತಿದ್ದೇವೆ. ಚುಪ್ರಿ ಎಂಬ ಸುಪ್ರೀತಾಳನ್ನು ಪರಿಚಯಿಸಿದ್ದಾರೆ ಅವರ ಪಕ್ಕದ ಮನೆಯ ಅಕ್ಕ, ಲೇಖಕಿ, ಚೇತನಾ ತೀರ್ಥಹಳ್ಳಿ.
ಸುಪ್ರೀತಾ ಹನ್ನೆರಡು ವರ್ಷದ ಪುಟಾಣಿ. ಪುಟಾಣಿ ಅಂದರೆ ತಪ್ಪಾದೀತೇನೋ? ಅವಳ ಮಾತುಗಳನ್ನ ಕೇಳಿದವರು ಹಾಗನ್ನುವ ಸಾಹಸವನ್ನೆಂದೂ ಮಾಡಲಾರರು. ಸುಪ್ರೀತಾಗೆ ಬರೆಯೋದು ಅಂದ್ರೆ ವಿಪರೀತ ಆಸಕ್ತಿ. ಇವಳಿನ್ನೂ ನಮ್ಮ ನೆರೆಗೆ ಬಂದು ಎರಡು ತಿಂಗಳೂ ಆಗಿಲ್ಲ. ಏಪ್ರಿಲ್ ಎಕ್ಸಾಮ್ ಮುಗಿಸಿ ಶಿವಮೊಗ್ಗದಿಂದ ಬೆಂಗಳೂರಿಗೆ ಟ್ರಾನ್ಸ್ಫರ್ ಅದ ಅಪ್ಪನೊಂದಿಗೆ ಬಂದಿಳಿದ ಈ ಹುಡುಗಿ ಅವರಮ್ಮನಿಗಿಂತ ಮೊದಲೇ ನಮ್ಮೆಲ್ಲರಿಗೆ ಅತ್ಯಂತ ಆಪ್ತಳಾಗಿಬಿಟ್ಟಳು.
ಸುಪ್ರೀತಾ ಬಲು ತುಂಟ ಹುಡುಗಿ. ಅವರಮ್ಮ ಪಲ್ಲೆ ಮಾಡಲು ಹೆಚ್ಚಿಟ್ಟ ಬೆಂಡೆಕಾಯಿಯನ್ನು ಯಾವುದೋ ಮಾಯದಲ್ಲಿ ನೀರಿಗೆ ಹಾಕಿರುತ್ತಾಳೆ. ಚಪಾತಿ ಹಿಟ್ಟಲ್ಲಿ ಬಾತುಕೋಳಿ ಮಾಡಿ ಅದಕ್ಕೆ ಕಣ್ಣು ಅಂಟಿಸಲು ಸಾಸಿವೆ ಡಬ್ಬ ಹುಡುಕುತ್ತಾಳೆ. ಹುಡುಕಿ, ಮನೆ ತುಂಬ ಚೆಲ್ಲಿ, ಅವರಮ್ಮನ ಕೈಲಿ ಬೈಸಿಕೊಳ್ತಾಳೆ. ರಂಗೋಲಿ ಇಡಲಿಕ್ಕೆ ಹೋಗಿ, ಅದನ್ನು ಮತ್ತೆ ಮತ್ತೆ ನೀರು ಹಾಕಿ ತೊಳೆದು ಗೇಟಿನ ಎದುರು ಕೊಚ್ಚೆ ರಾಡಿ ಮಾಡಿ ಅದರೊಳಗೆ ಪಚಪಚನೆ ಕುಣಿಯುತ್ತಾಳೆ! ಇಷ್ಟೆಲ್ಲಾ ಇದ್ದರೂ. ಪೆನ್ನು ಪುಸ್ತಕ ಹಿಡಿದ ಕೂಡಲೆ ಈ ಹುಡುಗಿಯ ಗಾಂಭೀರ್ಯ ನೋಡಬೇಕು ನೀವು! ಆ ಸುಪ್ರೀತಾಳೇ ಬೇರೆ, ಈ ಇವಳೇ ಬೇರೆ!!
ನನಗೆ ಈ ಹುಡುಗಿ ತುಂಬ ಇಷ್ಟವಾಗಿದ್ದೇ ಈ ಕಾರಣಕ್ಕೆ. ನನಗೆ ಮಾತ್ರವಲ್ಲ, ಮನೆಯ ಸುತ್ತಮುತ್ತಲಿನವರೆಲ್ಲ ಇವಳನ್ನು ಇಷ್ಟ ಪಡುತ್ತಾರೆ. ಸದಾ ಒಬ್ಬರಲ್ಲ ಒಬ್ಬರು ‘ಚುಪ್ರಿ... ಚುಪ್ರಿ...' ಅಂತ ಕರೆಯೋದು ಕೇಳಿಸುತ್ತಲೇ ಇರುತ್ತದೆ.
ಈ ನಮ್ಮ ಚುಪ್ರಿ ಬರೆದ ಒಂದೆರಡು ಕವಿತೆಗಳು ಇಲ್ಲಿವೆ...
ಮೀನಿಗೆ ನೀರು ಹೆಗೋ
ನಮಗೆ ಭೂಮಿ ಹಾಗೆ.
ನೀರಿಂದ ಹೊರತೆಗೆದ ಮೀನು,
ಭೂಮಿಯಿಂದ ಹೊರಬಿದ್ದ ನಾನು...
ಹೇಗೋ ಹಾಗೇ
ಲೋಕದಾಚೆ ಇರುವ ಪ್ರಾಣಿಗಳೂನು!
ನಿಜ್ಜ ಹೇಳ್ತೀನಿ... ಮೊದ್ಲು ನನ್ಗೆ ಈ ಕವಿತೆ ಅರ್ಥವಾಗಿರಲಿಲ್ಲ! ಅವಳ್ನ ಕೇಳಿದ್ದಕ್ಕೆ ಏನಂದ್ಲು ಗೊತ್ತಾ? "ಅಕ್ಕಾ, ಈಗ ನಾವು ನೀರಲ್ಲೇ ಇದ್ರೆ ಸಾಯ್ತೀವಲ್ವ? ಯಾಕಂದ್ರೆ ಅಲ್ಲಿ ಆಕ್ಸಿಜನ್ನಿರಲ್ಲ. ಅದ್ಕೆ ನಾವು ಆಕ್ಸಿಜನ್ನಿಲ್ದೆ ಬದ್ಕಕ್ಕಾಗಲ್ಲ ಅಂದ್ಕೊಳ್ತೀವಿ. ಮೀನುಗಳು ನೀರಿಲ್ದೆ ಬದ್ಕಕ್ಕಾಗಲ್ಲ ಅಂದ್ಕೊಳ್ತಾವೆ. ಹಾಗೇ ಬೇರೆ ಲೋಕದ ಜೀವಿಗಳು ಎನೋ ಮಾಡ್ಕೊಂಡು ಬದ್ಕಿರ್ತಾವೆ. ನಾವು ಅಲ್ಲಿ ಆಕ್ಸಿಜನ್ನಿಲ್ದೆ ಪ್ರಾಣಿಗಳೇ ಇರಲ್ಲ ಅಂದ್ಕೊಳ್ತೀವಿ!"
ಅವರಮ್ಮನ ಮುಖ ನೋಡಿದೆ. ಕಾರ್ಟೂನಲ್ಲಿ ಬಂದ ಏಲಿಯನ್ನುಗಳನ್ನ ನೋಡಿ ಚುಪ್ರಿ ಕೇಳಿದ ಪ್ರಶ್ನೆಗೆ ಅವಳಪ್ಪ ಅಲ್ಲೆಲ್ಲ ಜೀವಿಗಳು ಬದುಕೋಕೆ ಸಾಧ್ಯವಿಲ್ಲ ಅಂದಿದ್ರಂತೆ. ಅದನ್ನ ಒಪ್ಪೋದಕ್ಕೆ ಅವಳಿಗೆ ಕಷ್ಟವಾಯ್ತಂತೆ. ಅಮೇಲೆ ಅವಳ ಡ್ರಾಯಿಂಗ್ ಬುಕ್ಕಲ್ಲಿ ಈ ಪೊಯಮ್ ಸಿಕ್ತು ಅಂದ್ರು ಅವಳಮ್ಮ ಶಾಮಲಾ.
ಮಕ್ಕಳು ಅಂದ್ಕೊಂಡು ಉಪೇಕ್ಷೆ ಮಾಡಿಬಿಡ್ತೀವಿ... ಅವು ಎಷ್ಟೆಲ್ಲ ಪ್ರಬುದ್ಧವಾಗಿ ಯೋಚಿಸುತ್ತವೆ ನೋಡಿ!
ಈಗ, ಸುಪ್ರೀತಾಳ ಮತ್ತೊಂದು ಕವಿತೆ-
ಕಡೆದು ಕಡೆದು ನೋಯಿಸಿದರೂ
ಚಿಗುರುವುದು ಮರ
ಪೊಟ್ಟಣದ ಬಟಾಣಿಗೂ
ಉದ್ದುದ್ದ ಮೊಳಕೆ.
ಹಣ್ಣು ತಿಂದು
ಎಸೆದ ಬೀಜದಿಂದ ಮತ್ತೆ ಗಿಡ.
ಮನಸಿದ್ದರೆ ಮಾಡಬಹುದು
ಕಸದಿಂದ ರಸ
"ಇದನ್ಯಾಕೆ ಬರೆದೆ?" ನಾನು ಕೇಳಿದೆ. "ನಮ್ ಕೈ ಕಟ್ ಮಾಡಿದ್ರೆ ಮತ್ತೆ ಬರಲ್ವಲ್ಲ?" ಅಂತು ಹುಡುಗಿ. ಅವಳಜ್ಜನ ಗ್ಯಾಂಗರಿನ್ ಪಾದ ಕತ್ತರಿಸಿ ತೆಗೆದಾಗ ಪುಟ್ಟಿಗೆ ಅದು ಮತ್ತೆ ಬೆಳೆಯತ್ತೆ ಅಂತ ಹೇಳಿ ಸಮಾಧಾನ ಪಡ್ಸಿದ್ರಂತೆ. ಅದು ಸುಳ್ಳು ಅಂತ ಗೊತ್ತಾದಾಗ ಅವಳು ವಿಪರೀತ ಗಲಾಟೆ ಮಾಡಿಬಿಟ್ಲಂತೆ.
ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ! ಅವರ ಗ್ರಹಿಕೆಯ, ಅಭಿವ್ಯಕ್ತಿಯ ವ್ಯಾಪ್ತಿ ಬೆರಗಿಗೆ ತಳ್ಳುತ್ತದೆಯಲ್ಲವೇ?