ಪ್ರೀತಿಯ ಮಕ್ಕಳೇ, ಹಾಗೂ ಮಕ್ಕಳನ್ನು ಪ್ರೀತಿಸುವ ದೊಡ್ಡವರೇ,
ಈಗಾಗಲೇ ಮಕ್ಕಳ ಸಂಪಿಗೆಯಲ್ಲಿ ನೀವು ಚಿಣ್ಣರು ಬಿಡಿಸಿದ ಹಲವು ಚಿತ್ರಗಳನ್ನು ನೋಡಿದ್ದೀರಿ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಅವರ ಗ್ರಹಿಕೆ ಹಾಗೂ ಅಭಿವ್ಯಕ್ತಿ ಒಮ್ಮೊಮ್ಮೆ ಬೆರಗಿಗೆ ತಳ್ಳುತ್ತದೆ. ನಾವು ಮಕ್ಕಳೆಂದು ಉಪೇಕ್ಷೆ ಮಾಡುವ ಪುಟಾಣಿಗಳು ಒಮ್ಮೊಮ್ಮೆ ನಮಗಿಂತಲೂ ಪ್ರಬುದ್ಧರಾಗಿ ಚಿಂತಿಸಿರುತ್ತಾರೆ. ಕುಂಚ ಕೈಯಲ್ಲಿಡಿದ ಮಗುವಿನ ಮನಸ್ಸಿನಲ್ಲಿ ಸಾವಿರ ಬಣ್ಣಗಳ ಕಾಮನಬಿಲ್ಲು ಮೂಡಿರುತ್ತದೆ. ಅಪ್ಪನ ಕನ್ನಡಕ ಸಿಕ್ಕಿಸಿ ಕವಿತೆ ಬರೆಯಲೊರಟ ತುಂಟ ಹುಡುಗಿಯಲ್ಲಿ ಅವರಮ್ಮನ ಕೈಬಳೆಗಳ ಶಬ್ದವೂ ಕಾವ್ಯವಾಗಿ ಕರಗುತ್ತದೆ. ಮಕ್ಕಳಿಗೆ ಅವರದೇ ಆದ ಕಲ್ಪನಾ ಪ್ರಪಂಚವಿದೆ, ಅದನ್ನು ಸಹಜವಾಗಿ ಅರಳಲು ದೊಡ್ಡವರು ಬಿಡಬೇಕು. ನಿಮ್ಮ ಮಗು ಚಿತ್ರ ಬಿಡಿಸಿದರೆ, ಹನಿಗವನ ಬರೆದರೆ ಅದನ್ನು ಪ್ರೋತ್ಸಾಹಿಸಿ. ಅವರಿಗೆ ಸಂಪಿಗೆ ಆಟದ ಬಯಲು ಪರಿಚಯಿಸಿ. ಎಲ್ಲ ಮಕ್ಕಳಿಗೆ ಶುಭಕೋರುತ್ತಾ, ಈ ವಾರ ಹಾಸನದ ಇನ್ನೊಬ್ಬ ಪ್ರತಿಭೆ ಅಪ್ರಮೇಯನನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ.
ಅಪ್ರಮೇಯನ ಹೆಸರಿನಲ್ಲಿ ರೇಖಾಗಣಿತದ ಸಾಧನೀಯ ತತ್ವ ನಿಯಮವಿದೆ. ಆದರೆ ಸಂಖ್ಯೆಗಳೊಂದಿಗಿನ ಆಟಕ್ಕಿಂತ ಆತನಿಗೆ ಇಷ್ಟವಾಗಿರುವುದು ಕುಂಚದ ಗೆಳೆತನ. ಹಾಸನದ ವಿಜಯಾ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ ಒಂಭತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಈ ಪುಟಾಣಿ ಕಲಾವಿದ ಲ್ಯಾಂಡ್ಸ್ಕೇಪ್ ಚಿತ್ರಗಳಿಗೆ ಬಣ್ಣ ತುಂಬುತ್ತಾನೆ. ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾನೆ. ನಿನಗೆ ಯಾರ ಚಿತ್ರ ಇಷ್ಟ ಎಂದು ಕೇಳಿದರೆ, ನನಗೆ ದೇಸಾಯಿ ಸರ್ ಅವರ ಚಿತ್ರ ಇಷ್ಟ, ಬಿ.ಕೆ.ಎಸ್ ವರ್ಮ ಅವರ ಚಿತ್ರ ಇಷ್ಟ, ಕನ್ನಡದ ಎಲ್ಲ ಚಿತ್ರಕಲಾವಿದರ ಚಿತ್ರ ಇಷ್ಟ ಎನ್ನುತ್ತಾನೆ. ಮತ್ತೆ ವರ್ಲ್ಡ್ ಫೇಮಸ್ ಕಲಾವಿದರು ಯಾರೂ ಇಷ್ಟ ಇಲ್ಲವಾ ಎಂದರೆ, ಅವರು ಯಾರೂ ಇಷ್ಟ ಇಲ್ಲ, ನನಗೆ ಕನ್ನಡದ ಕಲಾವಿದರೇ ಇಷ್ಟ ಎಂದು ಉತ್ತರಿಸುತ್ತಾನೆ.
ಅದೆಲ್ಲಾ ಸರಿ ಅಪ್ರಮೇಯ, ಮುಂದೆ ಏನಾಗ್ತೀಯ ಎಂದರೆ ಸಾಪ್ಟ್ವೇರ್ ಎಂಜಿನೀಯರ್ ಆಗುತ್ತೀನಿ ಎನ್ನುವ ಸಿದ್ಧ ಉತ್ತರ ಕೊಡುತ್ತಾನೆ. ಸಾಪ್ಟ್ವೇರ್ ಎಂಜಿನೀಯರ್ ಆದರೆ ನಿನಗೆ ಚಿತ್ರ ಬಿಡಿಸಲು ಸಮಯ ಎಲ್ಲಿ ಸಿಗುತ್ತದೆ ಎಂದರೆ, ಅದೆಲ್ಲಾ ಏನೇ ಬಂದರೂ ನಾನು ಚಿತ್ರ ಬಿಡಿಸುವುದು ಮಾತ್ರ ನಿಲ್ಲಿಸುವುದಿಲ್ಲ ಎನ್ನುತ್ತಾನೆ. ಅರಣ್ಯ ಇಲಾಖೆಯಲ್ಲಿ ವೃತ್ತಿಯಲ್ಲಿರುವ ಪ್ರಭಂಜನ್ ಹಾಗೂ ಸುಷ್ಮಾ ಅವರ ಮಗ ಅಪ್ರಮೇಯ. ಈ ಪುಟ್ಟ ಕಲಾವಿದನ ಚಿತ್ರ ನಿಮಗೂ ಇಷ್ಟವಾಗಿರಬೇಕಲ್ಲಾ?
ನಿಮಗೆ ಪರಿಚಯವಿರುವ ಇಂತಹ ಪುಟಾಣಿಗಳ ಕುರಿತು ನಮಗೆ ಬರೆದು ಕಳುಹಿಸಿ. ಅವರ ಮುದ್ದು ಪ್ರತಿಭೆಯನ್ನು ನಾವು ಪ್ರಕಟಿಸುತ್ತೇವೆ. ಈ ವಾರದ ಮಕ್ಕಳ ಸಂಪಿಗೆ ನೋಡಿ ನಿಮಗೇನನಿಸಿತು, ನಮಗೆ ಬರೆಯಿರಿ.