ಕಮಲಮ್ಮನವರಿಗೆ ಇನ್ನಿಲ್ಲದ ಆತಂಕವಾಗಿತ್ತು. ಮಗಳ ಮದುವೆಗಾಗಿ ಖರೀದಿಸಿದ್ದ ಎಲ್ಲಾ ಒಡವೆಗಳು ಇದ್ದರೂ ಮಗಳು ಇಷ್ಟಪಟ್ಟು ಆರಿಸಿದ್ದ ಕೆಂಪು ಹರಳಿನ ಸಣ್ಣ ಉಂಗುರದ ಸುಳಿವೇ ಇರಲಿಲ್ಲ. ಮಧ್ಯಾಹ್ನದಿಂದ ಅವರು ಹುಡುಕದ ಜಾಗವಿಲ್ಲ, ತಡಕದ ಮೂಲೆಯಿಲ್ಲ. ರೂಮಿನಲ್ಲಿದ್ದ ಬೀರು, ಹಾಸಿಗೆ, ಮಂಚ ಎಲ್ಲವನ್ನೂ ಎಳೆದೆಳೆದು ನಾಲ್ಕಾರು ಬಾರಿ ಹುಡುಕಿ ಸುಸ್ತಾಗಿದ್ದರು. ಅವರ ಮನದಲ್ಲಿ ಅದನ್ನು ಕದ್ದವರ ಬಗ್ಗೆ ಸಂಶಯ ಮೂಡಿತ್ತು. ಎಷ್ಟು ಸಾರಿ ಹುಡುಕಿದರೂ ಉಂಗುರ ಸಿಗದೇ ಹೋದಾಗ ಆ ಸಂಶಯ ಬೆಳೆದು ಹೆಮ್ಮರವಾಗಿತ್ತು. ಆದರೂ ಮನಸ್ಸಿನ ಮೂಲೆಯಲ್ಲಿ ಅದನ್ನು ಒಪ್ಪಿಕೊಳ್ಳಲು ಆಗದೇ ಅವರು ಚಡಪಡಿಸುತಿದ್ದರು. ಧಾರೆಯ ರೇಸಿಮೆ ಸೀರೆ ಮತ್ತು ಆ ಉಂಗುರದೊಂದಿಗಿದ್ದ ಎಲ್ಲಾ ಒಡವೆಗಳನ್ನು ಕೊನೆಯ ಬಾರಿ ನೋಡಿದವಳು ಅವಳೇ.. ಮನೆಗೆಲಸದ ಕೆಂಪಿ. ಅವಳು ಹೋದ ಮೇಲೆ ಎಲ್ಲಾ ಒಡವೆಗಳನ್ನು ಅವುಗಳ ಬಾಕ್ಸುಗಳಲ್ಲಿ ಜೋಪಾನವಾಗಿಟ್ಟಾಗ ಉಳಿದದ್ದು ಉಂಗುರದ ಬಾಕ್ಸು. ಅದರೊಳಗೆ ಉಂಗುರ ತೆಗೆದಿಡಲು ನೋಡಿದಾಗ ಅಲ್ಲಿ ಉಂಗುರ ಕಾಣದೇ ಅವರಿಗೆ ಆತಂಕವಾಗಿತ್ತು. ಅವಳು ನೋಡಿ ಎಲ್ಲವನ್ನೂ ಅವರೆದುರಿಗೇ ಸೀರೆಯೊಂದಿಗೆ ಇಟ್ಟು ಹೋಗಿದ್ದರೂ ಅವಳು ಯಾವ ಮಾಯದಲ್ಲಿ ಆ ಉಂಗುರವನ್ನು ಕದ್ದಳೆಂದು ಅವರಿಗೆ ತಿಳಿದಿರಲಿಲ್ಲ. ಆದರೂ ಇಷ್ಟು ವರ್ಷಗಳಿಂದ ಮನೆಯಲ್ಲಿ ಕೆಲಸ ಮಾಡುತಿದ್ದರೂ ಎಂದೂ ಇಂತಹ ಕೆಲಸ ಮಾಡಿದವಳಲ್ಲ... ಇಂದೇಕೆ ಇಂತಹ ಕೆಲಸ ಮಾಡಿದಳು ಎಂಬ ಚಿಂತೆ ಕಮಲಮ್ಮನವರ ತಲೆಯನ್ನ ಕೊರೆಯುತಿತ್ತು. ವಯಸ್ಸಾದ ಮೇಲೆ ಮನುಷ್ಯನಿಗೆ ದುರಾಸೆ ಜಾಸ್ತಿಯಾಗುತ್ತದೇನೋ ಎಂದು ಮನಸ್ಸಿನಲ್ಲಿಯೇ...