ಸಮಕಾಲೀನ ಕನ್ನಡನಾಡಿನ ಅತ್ಯುತ್ತಮ ಕಟ್ಟಡ ವಿನ್ಯಾಸಗಾರ,ಬರಹಗಾರರಲ್ಲೊಬ್ಬರಾದ ನಾಗರಾಜ ವಸ್ತಾರೆ ಬಿಜಾಪುರ ಗೋಲಗುಮ್ಮಟದ ಕುರಿತು ಬರೆದದ್ದರ ಮೊದಲ ಕಂತು.
ಖಿಲ್ಜಿಗಳು, ತುಘಲಕರು ಮತ್ತು ಮುಘಲರು ಇಡೀ ಇಂಡಿಯಾವನ್ನು ಒಂದೇ ಹುಕುಮ್ಮತಿನಡಿಯಲ್ಲಿ ತರಲು ಹೆಣಗಿದರಾದರೂ ಈ ಜಂಬೂದ್ವೀಪವೆಂದೂ ಏಕಸ್ವಾಮ್ಯಕ್ಕೀಡಾಗಲಿಲ್ಲ. ದೆಹಲಿಯಲ್ಲಿ ಇಸ್ಲಾಮ್ ರಿಯಾಸತಿರುವ ಕಾಲಕ್ಕೇ ಗುಜರಾತ್, ಬಂಗಾಳ, ಮಾಳವ, ಪಂಜಾಬ್, ಕಾಶ್ಮೀರ ಮತ್ತು ದಖನಿನಲ್ಲಿ ಸ್ವತಂತ್ರ ಮುಸ್ಲಿಮ್ ಪ್ರಾಂತ್ಯಗಳಿದ್ದವೆಂದು ಚರಿತ್ರೆಯ ಉಲ್ಲೇಖ. ದಕ್ಷಿಣದ ಬಿಜಾಪುರ, ಗುಲ್ಬರ್ಗ, ಬೀದರ್ ಮತ್ತು ಗೋಲ್ಕೊಂಡಗಳ ಸುಲ್ತಾನತುಗಳನ್ನು ಹೊರತುಪಡಿಸಿದರೆ, ಈ ಮುಸ್ಲಿಂ ಪ್ರಾಂತ್ಯಗಳಲ್ಲಿ ದೆಹಲಿಗೆ ಸೇರಿಯೂ ಸೇರದ ವಿಭಿನ್ನ ಕಟ್ಟಡಗಾರಿಕೆ ಕಾಣಸಿಗುತ್ತದೆ. ಇಲ್ಲಿನ ಬನಾವಟುಗಳಲ್ಲಿ ಸ್ಥಳೀಯವಾದ ಮೂರ್ತಾಮೂರ್ತತೆಯನ್ನೂ, ಮನುಷ್ಯಕೌಶಲವನ್ನೂ ಒಳಗೊಂಡಿರುವ ತಂತಮ್ಮದೇ ಪ್ರಾದೇಶಿಕತೆಯಿದೆ. ಅಹ್ಮದಾಬಾದ್, ಮಾಂಡು, ಲಾಹೋರ್, ಬಾಂಗ್ಲಾದೇಶಗಳಲ್ಲೊಂದು ಸುತ್ತುಬಂದರೆ ಈ ‘ಆಬಾದು'ಗಳ ಸ್ಥಳೀಯತೆಗೆ ಸಾಕಷ್ಟು ಸಬೂತಾದೀತು. ಈ ಪ್ರಸ್ತಾಪದಲ್ಲಿ ದಖನನ್ನು ಹೊರತುಗೊಳಿಸಿದ್ದಕ್ಕೆ ಇನ್ನೊಂದೇ ಕಾರಣವಿದೆ. ಬಹುಮನಿ ಎನ್ನಲಾಗುತ್ತಿದ್ದ ದೊಡ್ಡ ಸಾಮ್ರಾಜ್ಯ ಮತ್ತು ಆದಿಲ್ ಶಾಹಿ ಎನ್ನಲಾಗುತ್ತಿದ್ದ ದಕ್ಷಿಣದ ಸುಲ್ತಾನತು ತನ್ನ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಪೂರ್ತಿಯಾಗಿ ದೆಹಲಿಯ ಜತೆಗಿನ ಲೇವಾದೇವಿಯಿಲ್ಲದೆ ಆಗಿದ್ದಂತೆ. ಯಾಕೆಂದರೆ ಇಲ್ಲಿನ...