ಅವರು ಏನೇ ಆದರೂ ನನ್ನ ಜೊತೆಗಿನ ಸಂಪರ್ಕವನ್ನು ಎಂದೂ ಕಳೆದುಕೊಳ್ಳಲಿಲ್ಲ. ಸುಬ್ಬಯ್ಯಶೆಟ್ಟಿ ಅವರು ಮೊದಲು ಮಾಡಿ ಆ ಕಾಲದ ಎಲ್ಲ ಹಿರಿಯ ಕಿರಿಯ ಗೆಳೆಯರು ಇಂದಿಗೂ ಸಂಪರ್ಕದಲ್ಲಿದ್ದಾರೆ. ಈ ಕಾರಣದಿಂದಲೇ ಮೊಹಿದ್ದೀನ್ ಅವರು ನಿಧನರಾಗುವ ಮೂರು ದಿನಗಳ ಮುಂಚೆ ಫೋನ್ ಮಾಡಿದ್ದು. ನಾವು ಸಮಯ ಸಿಕ್ಕಾಗಲೆಲ್ಲ ಭೇಟಿಯಾಗುತ್ತಲೇ ಇದ್ದೆವು. ನಡೆದಾಡಲಿಕ್ಕಾಗದೆ ಬಹಳ ನೋವು ಅನುಭವಿಸಿದರು. ಅವರಿಗೆ ತಮ್ಮ ಅನಾರೋಗ್ಯದ ಬಗ್ಗೆ ಬಹಳ ಬೇಸರವಾಗಿತ್ತು. ಏಕೆಂದರೆ ಸದಾ ಚಟುವಟಿಕೆಯಿಂದ ಇರಬೇಕೆನ್ನುವ ಸೇವಾ ಮನೋಭಾವದ ಗಂಭೀರ ವ್ಯಕ್ತಿ ಅವರಾಗಿದ್ದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 84ನೇ ಕಂತು ನಿಮ್ಮ ಓದಿಗೆ

“ಕಡಲತೀರದ ನಿಷ್ಠಾವಂತ ತತ್ತ್ವಬದ್ಧ ರಾಜಕಾರಣಿ ಮಾಜಿ ಸಚಿವ ಬಿ.ಎ. ಮೊಹಿದ್ದೀನ್ (5.5.1938)-10.7.2018)ಅವರು ಸಂಜಯನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಇಂದು ಮುಂಜಾನೆ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇನೆ.” ಎಂದು ಅಂದು ಬೆಳಿಗ್ಗೆ 9.16ಕ್ಕೆ ನನ್ನ ಸಮಾಜವಾದಿ ಮಿತ್ರ ಅಲಿಬಾಬಾ ವಾಟ್ಸಾಪ್ ಮೂಲಕ ತಿಳಿಸಿದರು.

ಧಾರವಾಡದಲ್ಲಿದ್ದ ನನಗೆ ದಿಗಿಲಾಯಿತು. ಅವರು ಮೊನ್ನೆ ತಾನೆ ದೂರವಾಣಿ ಮೂಲಕ ಮಾತನಾಡಿದ್ದರು. ‘ವಾರ್ತಾಭಾರತಿ’ಯಲ್ಲಿ ನಿನ್ನ ಲೇಖನ ಓದ್ತಾ ಇರ್ತೀನಿ ಎಂದರು. ಈಗ ಒಂದು ಲೇಖನ ಓದಿ ಫೋನ್ ಮಾಡ್ತಿದೀನಿ ಎಂದರು. ನನಗೆ ಬಹಳ ಖುಷಿಯಾಯಿತು. ‘ವಾರ್ತಾಭಾರತಿ’ ಕನ್ನಡದ ಪರಿಪೂರ್ಣ ಜಾತ್ಯತೀತ ಪತ್ರಿಕೆ. ಅದು ರಾಜ್ಯದ ಎಲ್ಲೆಡೆ ಸಿಗುವಂತಾಗಬೇಕು; ನಂಬರ್ 1 ಪತ್ರಿಕೆ ಆಗಬೇಕು ಎಂಬುದು ನನ್ನ ಆಶಯ ಎಂದು ತಿಳಿಸಿದೆ. ಹೌದು ಯಾವ ಕಾಲಕ್ಕೂ ಪತ್ರಿಕೆಗಳು ಮತ್ತು ರಾಜಕಾರಣಿಗಳು ಸೆಕ್ಯೂಲರ್ ಆಗಿ ಇದ್ದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವದ ವಾತಾವರಣ ನಿರ್ಮಾಣವಾಗಲು ಸಾಧ್ಯ. ‘ವಾರ್ತಾಭಾರತಿ’ಯನ್ನು ಆ ನಿಟ್ಟಿನಲ್ಲಿ ಬೆಳೆಸುವುದು ಅವಶ್ಯವಾಗಿದೆ ಎಂದು ಹೇಳುತ್ತ ದಿನೇಶ್ ಅಮೀನ್ ಮಟ್ಟು ಅವರನ್ನು ಜ್ಞಾಪಿಸಿಕೊಂಡರು.

ಈಗೀಗ ಗಾಳಿಸುದ್ದಿಗಳೇ ಮಾಧ್ಯಮದ ಜೀವಾಳವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದೆ. ಬೆಂಗಳೂರಿಗೆ ಬಾ ಮಾತನಾಡೋಣ ಎಂದರು. ಜುಲೈ 14ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ. ಬಂದಾಗ ಭೇಟಿಯಾಗುವೆ ಎಂದು ತಿಳಿಸಿದೆ. ಇಂದು ಜುಲೈ 10ರಂದು ಅವರ ನಿಧನದ ವಾರ್ತೆ ಕೇಳಿದೆ! ಬಜ್ಪೆ ಅಬ್ದುಲ್ ಖಾದರ್ ಮೊಹಿದ್ದೀನ್ ಅವರ ನನ್ನ ಸ್ನೇಹ 42 ವರ್ಷಗಳಷ್ಟು ಹಳೆಯದಾಗಿತ್ತು. ಅವರ ತಾಯಿ ಹಲೀಮಾ. ಅವರು ಜನಿಸಿದ್ದು ಮಂಗಳೂರು ತಾಲ್ಲೂಕಿನ ಬಜ್ಪೆ ಗ್ರಾಮದಲ್ಲಿ. ಪತ್ನಿಯ ಹೆಸರು ಖತೀಜಾ. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು.

ನಮ್ಮ ಮೊದಲ ಭೇಟಿಯ ವೇಳೆ ಅವರಿನ್ನೂ ಶಾಸಕ ಕೂಡ ಆಗಿದ್ದಿಲ್ಲ. ಅವರನ್ನು ಮೊದಲಿಗೆ ನೋಡಿದ್ದು ಇಂದಿಗೆ ಅರ್ಧ ಶತಮಾನದಷ್ಟು ಹಿಂದೆ, ತುಂಗಭದ್ರಾ ಅಣೆಕಟ್ಟಿನ ವಸತಿಗೃಹದಲ್ಲಿ. ಅಲ್ಲಿ ಕೆ.ಪಿ.ಸಿ.ಸಿ.ಯ ಸಭೆ ನಡೆದಿತ್ತು. ಆಗ ನಾನು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು ಎಡಪಂಥೀಯ ಗೆಳೆಯರ ಜೊತೆಗೂಡಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎ.ಐ.ಎಸ್.ಎಫ್ ವಿದ್ಯಾರ್ಥಿ ಸಂಘಟನೆ ಪ್ರಾರಂಭಿಸಿದ್ದೆ. ಮಹಾದೇವ ಹೊರಟ್ಟಿ ಅವರು ಧಾರವಾಡದಲ್ಲಿ ಉತ್ತರ ಕರ್ನಾಟಕದ ಯುವಕರ ಯಶಸ್ವಿ ಸಮ್ಮೇಳನ ಮಾಡಿದ್ದರು. ಅವರ ಜೊತೆಗಿನ ಗೆಳೆತನದಿಂದಾಗಿ ಹೊಸಪೇಟೆ ಬಳಿಯ ತುಂಗಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ನಡೆದ ಕೆ.ಪಿ.ಸಿ.ಸಿ. ಸಭೆಯ ಸ್ಥಳಕ್ಕೆ ಹೋಗಲು ಸಾಧ್ಯವಾಯಿತು. ಆಗ ಅಲ್ಲಿ ಮೊಹಿದ್ದೀನ್ ಅವರನ್ನು ಮೊದಲ ಬಾರಿಗೆ ನೋಡಿದೆ. ಗೆಳೆಯರು ಅವರನ್ನು ‘ಪ್ರೊಫೆಸರ್ʼ ಎಂದು ಕರೆಯುತ್ತಿದ್ದರು. ಅವರು ಮರಗುಳಿ ಸ್ವಭಾವದವರಿರಬೇಕು; ಆದ್ದರಿಂದ ಗೆಳೆಯರು ಹೀಗೆ ಕರೆಯುತ್ತಿರಬೇಕು ಎಂದು ಭಾವಿಸಿದೆ. ಅವರು ನನಗೆ ಜುಲ್ಪಿಕರ್ ಅಲಿ ಭುಟ್ಟೊ ಹಾಗೆ ಕಾಣಿಸಿದರು. ಎತ್ತರದ ವ್ಯಕ್ತಿತ್ವವುಳ್ಳ ಅವರು ಬೆಳ್ಳಗಿನ ಸುಂದರ ಪುರುಷರಾಗಿದ್ದರು.

ಆಗ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಾಗೂ ಮೊಹಿದ್ದೀನ್ ಅವರು ನಿಧನರಾದ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷರಾಗಿದ್ದ ರಮೇಶಕುಮಾರ, ಎಫ್.ಎಂ. ಖಾನ್, ಮುಂತಾದವರನ್ನು ನಾನು ಅಲ್ಲಿಯೆ ಮೊದಲಬಾರಿಗೆ ನೋಡಿದೆ. ಆಗ ಕೆ.ಎಚ್. ಪಾಟೀಲರು ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿದ್ದರು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದರು. ಕೆ.ಎಚ್. ರಂಗನಾಥ ಅವರು ಸಹಕಾರ ಸಚಿವರಾಗಿದ್ದರು.

ಆ ದಿನಗಳಲ್ಲಿ ಜೆ.ಪಿ. ಚಳವಳಿ ಜೋರಾಗಿತ್ತು. ಕಾಂಗ್ರೆಸ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಸಿ.ಪಿ.ಎಂ. ಕೂಡ ಜೆ.ಪಿ. ಚಳವಳಿಗೆ ಬೆಂಬಲ ನೀಡಿತ್ತು. ಆದರೆ ಸಿ.ಪಿ.ಐ. ನಿಲವು ಕಾಂಗ್ರೆಸ್ ಪರ ಇತ್ತು. ಕೋಮುವಾದಿ ಪಕ್ಷಗಳನ್ನು ಕೂಡ ತಮ್ಮ ಚಳವಳಿಯಲ್ಲಿ ಜೆ.ಪಿ. ಅವರು ಸೇರಿಸಿಕೊಂಡಿದ್ದರಿಂದ ಮತ್ತು ನನ್ನ ನೆಚ್ಚಿನ ಸಿ.ಪಿ.ಐ. ಪಕ್ಷ ಇಂದಿರಾ ಕಾಂಗ್ರೆಸ್ ಪರ ಇದ್ದುದರಿಂದ ನಾನು ಸಹಜವಾಗಿಯೆ ಕಾಂಗ್ರೆಸ್ ಗೆಳೆಯರ ಜೊತೆ ಇದ್ದೆ.

ಸಿ.ಪಿ.ಐ. ಪಾರ್ಲಿಮೆಂಟ್ ಒಳಗೆ ಜನಪರ ಬೇಡಿಕೆಗಳ ಈಡೇರಿಕೆಗಾಗಿ ಕಾಂಗ್ರೆಸ್‌ಗೆ ವಿರುದ್ಧವಾಗಿ ವಾಗ್ವಾದ ಮಾಡುತ್ತಿತ್ತು. ಆದರೆ ಹೊರಗಡೆ ಜೆ.ಪಿ. ಚಳವಳಿಯ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಿತ್ತು. ಸಂಪೂರ್ಣ ಕ್ರಾಂತಿಯ ಹೆಸರಿನಲ್ಲಿ ನಡೆಯುತ್ತಿದ್ದ ಜೆ.ಪಿ. ಚಳವಳಿ ತನ್ನ ಅಂತಿಮ ಘಟ್ಟದಲ್ಲಿ ಕೋಮುವಾದಿಗಳ ಪಾಲಾಗುವುದು ಎಂಬ ಕಾರಣಕ್ಕೆ ಆ ಚಳವಳಿಯ ವಿರುದ್ಧ ಸಿ.ಪಿ.ಐ. ಪ್ರಬಲ ವೈಚಾರಿಕ ಹೋರಾಟ ನಡೆಸಿತ್ತು.

ಅದೇ ಸಂದರ್ಭದಲ್ಲಿ ಕೆ.ಎಚ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಫ್ಯಾಸಿಸ್ಟ್ ವಿರೋಧಿ ಸಮ್ಮೇಳನವನ್ನು ಹುಬ್ಬಳ್ಳಿಯ ಎ.ಕೆ. ಇಂಡಸ್ಟ್ರೀಸ್‌ ಆವರಣದಲ್ಲಿ ನಡೆಸಲಾಯಿತು. ಕೆ.ಎಚ್. ರಂಗನಾಥ ಮತ್ತು ಅವರ ಆಪ್ತಮಿತ್ರ ಹಾಗೂ ಸಚಿವ ಸುಬ್ಬಯ್ಯಶೆಟ್ಟಿ ಅವರು ಈ ಸಮ್ಮೇಳನದ ಸಿದ್ಧತೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು. ಸಮ್ಮೇಳನದ ಪೂರ್ವಭಾವಿ ಸಭೆಗಳ ಸಂದರ್ಭದಲ್ಲಿ ಈ ಇಬ್ಬರೂ ಸಚಿವರ ಜೊತೆ ಸಂಬಂಧ ಬಂದಿತು. ಸಿ.ಪಿ.ಐ. ನಾಯಕ ಕಾಮ್ರೇಡ್ ಎ.ಜೆ.ಮುಧೋಳ ಮುಂತಾದವರು ದಿನ ರಾತ್ರಿ ಕಾರ್ಯೋನ್ಮುಖರಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನನಗೆ ಅನೇಕ ಕಾಂಗ್ರೆಸ್ ಗಣ್ಯರ ಸಂಪರ್ಕ ಬಂದಿತು. ಅಷ್ಟೊತ್ತಿಗಾಗಲೇ ಚಿಲಿಯ ಅಧ್ಯಕ್ಷ ಅಲೆನ್ ಡೆ ಮತ್ತು ಬಾಂಗ್ಲಾ ಬಂಧು ಮುಜಿಬುರ್ ರಹಮಾನ್ ಅವರ ಕೊಲೆಗಳಾಗಿದ್ದವು. ನೊಬೆಲ್ ಪ್ರಶಸ್ತಿ ವಿಜೇತ ಎಡಪಂಥೀಯ ಕವಿ ಮತ್ತು ರಾಜತಾಂತ್ರಿಕ ಪಾಬ್ಲೊ ನೆರೂದಾ ಅವರು ಸಂಶಯಾಸ್ಪದವಾಗಿ ನಿಧನರಾಗಿದ್ದರು.

ಸಂಪೂರ್ಣ ಕ್ರಾಂತಿಯ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸಂಭವಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದರು. ಹೀಗೆ ಭಾವಿಸಿದ ಯುವ ನಾಯಕರಲ್ಲಿ ಬಿ.ಎ. ಮೊಹಿದ್ದೀನ್ ಮತ್ತು ರಮೇಶಕುಮಾರ ಅವರೂ ಸೇರಿದ್ದರು.

ಸಂಪೂರ್ಣ ಕ್ರಾಂತಿಯ ಹೆಸರಿನಲ್ಲಿ ಸೈನ್ಯಕ್ಕೆ ದಂಗೆ ಏಳಲು ಕರೆಕೊಡುವಂಥ ಘಟನೆಗಳು ಕೂಡ ಸಂಭವಿಸಿದಾಗ ಸಿದ್ಧಾರ್ಥ ಶಂಕರ ರಾಯ್ ಅವರು ಸಂವಿಧಾನಾತ್ಮಕವಾಗಿ ತುರ್ತುಪರಿಸ್ಥಿಯನ್ನು ಘೋಷಿಸುವ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಸಲಹೆ ನೀಡಿದರು ಎಂಬ ಮಾತು ಆಗ ಪ್ರಚಾರದಲ್ಲಿತ್ತು. ಕೊನೆಗೆ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿದರು.

ಎಂ.ಎ. ಮುಗಿದ ನಂತರ 1976ರಲ್ಲಿ ನಾನು ಮಹಾದೇವ ಹೊರಟ್ಟಿಯವರ ಪ್ರಯತ್ನದಿಂದ ಬೆಂಗಳೂರು ಸೇರಿ ರಂಗನಾಥ ಅವರ ಅವರ ಇಲಾಖೆಗೆ ಸಂಬಂಧಿಸಿದ ಮಾಸಪತ್ರಿಕೆ ‘ಕೃಷಿಪೇಟೆ’ಯ ಉಪ ಸಂಪಾದಕನಾದೆ. ರಂಗನಾಥ ಸಾಹೇಬರ ಮನೆಯಲ್ಲೇ ಉಳಿದುಕೊಳ್ಳುವ ಅವಕಾಶ ಲಭಿಸಿತು.

ಆಗ ಕಾಂಗ್ರೆಸ್‌ನಲ್ಲಿ ಎಡಪಂಥೀಯ ವಿಚಾರಧಾರೆಯುಳ್ಳ ಯುವಕರ ಬಗ್ಗೆ ಹೆಚ್ಚಿನ ಗೌರವವಿತ್ತು. ರಂಗನಾಥ ಸಾಹೇಬರಿಗೆ ನನ್ನ ಬಗ್ಗೆ ಪ್ರೀತಿಯಿತ್ತು. ಹೀಗಾಗಿ ಅವರ ಶಿಷ್ಯರಾದ ಮೊಹಿದ್ದೀನ್, ರಮೇಶಕುಮಾರ್, ವೀರಣ್ಣ ಮತ್ತಿಕಟ್ಟಿ, ಮಹಾದೇವ ಹೊರಟ್ಟಿ, ಅಶೋಕ ಪಟ್ಟಣ ಮುಂತಾದವರ ಕೂಡ ಹೆಚ್ಚಿನ ಆತ್ಮೀಯತೆ ಬೆಳೆಯಿತು. ರಂಗನಾಥ ಸಾಹೇಬರಿದ್ದ ಭವ್ಯ ಸರ್ಕಾರಿ ಮನೆಯ ಹೆಸರು ‘ಕ್ರೆಸೆಂಟ್ ಹೌಸ್’ ಎಂದು ಇತ್ತು. ನಾವೆಲ್ಲ ‘ಫ್ರೆಂಡ್ಸ್ ಆಫ್ ಕ್ರೆಸೆಂಟ್ ಹೌಸ್’ ಆದೆವು.

ಅದೇ ಸಂದರ್ಭದಲ್ಲಿ 20 ಅಂಶದ ಕಾರ್ಯಕ್ರಮಗಳನ್ನು ದೇವರಾಜ ಅರಸು ಗಂಭೀರವಾಗಿ ಕಾರ್ಯಗತಗೊಳಿಸತೊಡಗಿದರು. ದೇಶದಲ್ಲೇ ಪ್ರಥಮ ಬಾರಿಗೆ ಭೂಸುಧಾರಣಾ ಸಚಿವ ಹುದ್ದೆಯನ್ನು ಸೃಷ್ಟಿಸಿ ಸುಬ್ಬಯ್ಯಶೆಟ್ಟಿ ಅವರನ್ನು ಆ ಸ್ಥಾನಕ್ಕೆ ಸಚಿವರನ್ನಾಗಿಸಿದರು. ಜಮೀನುದಾರಿ ಮನೆತನದ ಸುಬ್ಬಯ್ಯ ಶೆಟ್ಟಿ ಅವರನ್ನು ಅರಸು ಅವರು ಭೂ ಸುಧಾರಣಾ ಸಚಿವ ಮಾಡಿದ್ದಕ್ಕೆ, “ಐ ನೀಡ್ ಎ ಡೈಮಂಡ್ ಟು ಕಟ್ ದ ಡೈಮಂಡ್ಸ್” ಎಂದು ಹೇಳಿದ್ದರು. ಜಾತ್ಯತೀತತೆಯಲ್ಲಿ ಅದಮ್ಯ ನಂಬಿಕೆಯಿಟ್ಟಿದ್ದ ಸುಬ್ಬಯ್ಯಶೆಟ್ಟರು ಜಮೀನುದಾರಿ ಮನೆತನಕ್ಕೆ ಸೇರಿದ್ದರೂ ಭೂಸುಧಾರಣೆಯ ಕಾರ್ಯವನ್ನು ಬಹಳ ಚಾಕಚಕ್ಯತೆಯಿಂದ ನಿಭಾಯಿಸಿದರು. ಆ ಕಾರ್ಯದಲ್ಲಿ ತಮ್ಮ ಹಾಗೂ ತಮ್ಮ ಸಂಬಂಧಿಕರ ಜಮೀನನ್ನೂ ಕಳೆದುಕೊಂಡರು. ಗೇಣಿದಾರರ ಪರವಾದ ದಿಟ್ಟ ನಿಲುವಿನಿಂದಾಗಿ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಯಿತು. ಇಂಥ ಒಂದು ಸಾಮಾಜಿಕ ಪ್ರಜ್ಞೆಯ ಗುಂಪಿನಲ್ಲಿ ಮೊಹಿದ್ದೀನ್ ಅವರು ಎದ್ದು ಕಾಣುತ್ತಿದ್ದರು. ಅವರ ಚಿಂತನೆಗಳು ಸಮಾಜವಾದಿ ನೆಲೆಯ ಮೇಲೆ ನಿಂತಿದ್ದು ಸಂಪೂರ್ಣ ಜಾತ್ಯತೀತವಾಗಿದ್ದವು.

1969ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲರಾಗಿದ್ದ ಅವರು 1975ರಿಂದ 80ರ ವರೆಗೆ ದೇವರಾಜ ಅರಸು ನಾಯಕತ್ವದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1978ರಿಂದ 1983ರ ವರೆಗೆ ಬಂಟ್ವಾಳ ಕ್ಷೇತ್ರದ ಶಾಸಕರಾಗಿದ್ದರು. ನಂತರ ಬಂಟ್ವಾಳ ಕ್ಷೇತ್ರದಲ್ಲಿ ಟಿಕೆಟ್ ಸಿಗಲಿಲ್ಲ. ಹೀಗೆ ಮೋಸವಾದ ಕಾರಣ ಅವರು ಜನತಾ ದಳ ಸೇರಬೇಕಾಯಿತು. 1990ರಿಂದ 2002ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು. 1995ರಿಂದ 1999ರ ವರೆಗೆ ಜನತಾ ದಳದ ಜೆ.ಎಚ್. ಪಟೇಲ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ನಂತರ ಅವರು 2004ರಲ್ಲಿ ಕಾಂಗ್ರೆಸ್‌ಗೆ ಮರಳಿದರು. 2007ರಲ್ಲಿ ಎ.ಐ.ಸಿ.ಸಿ. ಸದಸ್ಯರಾದರು.

2016ರಲ್ಲಿ ಕರ್ನಾಟಕ ಸರ್ಕಾರ ಮೊಹಿದ್ದೀನ್ ಅವರಿಗೆ ದೇವರಾಜ ಅರಸು ಪ್ರಶಸ್ತಿ ಕೊಟ್ಟು ಗೌರವಿಸಿತು. ಅವರು ಬ್ಯಾರಿ ಸಮಾಜದಿಂದ ಬಂದ ಜಾತ್ಯತೀತ ವ್ಯಕ್ತಿಯಾಗಿದ್ದರು. ಬೆಂಗಳೂರಿನ ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಅವರನ್ನು “ಶತಮಾನದ ಬ್ಯಾರಿ” ಪ್ರಶಸ್ತಿ ಕೊಟ್ಟು ಗೌರವಿಸಿತು. ಆದರೆ ಅವರು ಇದನ್ನೆಲ್ಲ ಮೀರಿ ಬೆಳೆದವರಾಗಿದ್ದರು ಎಂಬುದಕ್ಕೆ 20.7.2018ರಂದು ಬಿಡುಗಡೆಯಾದ ಅವರ ಆತ್ಮಚರಿತ್ರೆ “ನನ್ನೊಳಗಿನ ನಾನು” ಸಾಕ್ಷಿಯಾಗಿದೆ.

ಅವರು ಏನೇ ಆದರೂ ನನ್ನ ಜೊತೆಗಿನ ಸಂಪರ್ಕವನ್ನು ಎಂದೂ ಕಳೆದುಕೊಳ್ಳಲಿಲ್ಲ. ಸುಬ್ಬಯ್ಯಶೆಟ್ಟಿ ಅವರು ಮೊದಲು ಮಾಡಿ ಆ ಕಾಲದ ಎಲ್ಲ ಹಿರಿಯ ಕಿರಿಯ ಗೆಳೆಯರು ಇಂದಿಗೂ ಸಂಪರ್ಕದಲ್ಲಿದ್ದಾರೆ. ಈ ಕಾರಣದಿಂದಲೇ ಮೊಹಿದ್ದೀನ್ ಅವರು ನಿಧನರಾಗುವ ಮೂರು ದಿನಗಳ ಮುಂಚೆ ಫೋನ್ ಮಾಡಿದ್ದು. ನಾವು ಸಮಯ ಸಿಕ್ಕಾಗಲೆಲ್ಲ ಭೇಟಿಯಾಗುತ್ತಲೇ ಇದ್ದೆವು. ನಡೆದಾಡಲಿಕ್ಕಾಗದೆ ಬಹಳ ನೋವು ಅನುಭವಿಸಿದರು. ಅವರಿಗೆ ತಮ್ಮ ಅನಾರೋಗ್ಯದ ಬಗ್ಗೆ ಬಹಳ ಬೇಸರವಾಗಿತ್ತು. ಏಕೆಂದರೆ ಸದಾ ಚಟುವಟಿಕೆಯಿಂದ ಇರಬೇಕೆನ್ನುವ ಸೇವಾ ಮನೋಭಾವದ ಗಂಭೀರ ವ್ಯಕ್ತಿ ಅವರಾಗಿದ್ದರು.

ಮುಖತಃ ಅವರ ನನ್ನ ಕೊನೆಯ ಭೇಟಿ 2017ನೇ ಮೇ 14ರಂದು ಆಯಿತು. ಕಾಮ್ರೇಡ್ ಮುನೀರ ಕಾಟಿಪಳ್ಳ ಮುಂತಾದ ಗೆಳೆಯರು ಸೇರಿ ಮಂಗಳೂರಿನಲ್ಲಿ ಎರಡು ದಿನಗಳ ‘ಮುಸ್ಲಿಂ ಯುವ ಸಮಾವೇಶ’ ಏರ್ಪಡಿಸಿದ್ದರು. ಮೊಹಿದ್ದೀನ ಮತ್ತು ನಾನು ಕೂಡ ಈ ಸಮಾವೇಶದ ಉದ್ಘಾಟನಾ ಸಮಾರಂಭದ ಅತಿಥಿಗಳಾಗಿದ್ದೆವು. ಅಂದು ಅವರು 4 ದಶಕಗಳ ಹಿಂದಿನ ಉತ್ಸಾಹ ಮತ್ತು ಜಾತ್ಯತೀತ ನಿಲುವಿನಲ್ಲೇ ಮಾತನಾಡಿದ್ದನ್ನು ಕೇಳಿ ಅವರ ಮೇಲಿನ ನನ್ನ ಅಭಿಮಾನ ಇಮ್ಮಡಿಗೊಂಡಿತು. ಅವರು ಅನಾರೋಗ್ಯದಲ್ಲೂ ಅದೇ ಮಾನವೀಯ ಸ್ಪಂದನವನ್ನು ಉಳಿಸಿಕೊಂಡಿದ್ದರು. ಮನುಷ್ಯರನ್ನು ಮನುಷ್ಯರನ್ನಾಗಿ ಮಾತ್ರ ಕಾಣುವ ಅವರ ವ್ಯಕ್ತಿತ್ವ ಯಾವ ಉದಾತ್ತ ಮಾನವನಿಗಿಂತಲೂ ಕಡಿಮೆಯಾಗಿರಲಿಲ್ಲ. ಹೀಗಾಗಿ ಅವರು ಎಲ್ಲರೊಳಗೆ ಅಪರೂಪದ ವ್ಯಕ್ತಿಯಾಗಿದ್ದರು. ಅವರು ಒಬ್ಬ ವ್ಯಕ್ತಿಗತವಾದಿ ಆಗಿರದೆ ಒಂದು ಸಮೂಹವೇ ಆಗಿದ್ದರು. ಅಂತೆಯೆ ಈಗ ಒಂದು ಕಾಲದ ಇತಿಹಾಸವಾಗಿ ಉಳಿದರು.

ಜುಲೈ 14ರಂದು ನನಗೆ ಬರಲಿಕ್ಕೆ ಹೇಳಿ ಅವರು ಭೇಟಿಯಾಗದೆ ಹೋದರು. ಆದರೆ ನಿರಂತರ ನೆನಪಾಗಿ ಉಳಿದರು.