ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು. ಮನೆಯಲ್ಲಿ ಬೆಳೆಯುತ್ತಿದ್ದ ತರಕಾರಿ, ಸೊಪ್ಪುಗಳಿರಲಿ, ಮನೆಯ ಸುತ್ತಮುತ್ತಲೂ ಸಿಗುತ್ತಿದ್ದ ಸೊಪ್ಪುಗಳಾಗಿರಲಿ ಅವುಗಳ ಸದುಪಯೋಗ ಹೇಗೆನ್ನುವುದು ಅವರಿಗೆ ತಿಳಿದಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

ಅವಳಿಂದ ಫೋನ್‌ ಬಂದಾಗ ಎಂದಿನಂತೆ ಕ್ಷೇಮಸಮಾಚಾರದ ವಿಷಯ ಕುರಿತು ಮಾತನಾಡಲು ಫೋನ್‌ ಮಾಡಿದ್ದಾಳೆ ಎಂದುಕೊಂಡಿದ್ದೆ. ನನ್ನ ಲೆಕ್ಕಾಚಾರ ತಪ್ಪಾಗಿತ್ತು. ನಾವೆಲ್ಲ ಮರುದಿನ ಮಧ್ಯಾಹ್ನದ ಊಟಕ್ಕೆ ಅವರ ಮನೆಗೆ ಬರುವಂತೆ ಕರೆದಿದ್ದಳು. ʻಏನು ವಿಶೇಷ?ʼ ಎಂದು ಕೇಳಿದ್ದೆ. ʻಏನಿಲ್ಲ. ಬಹಳ ದಿನ ಆಯ್ತು ನಾವೆಲ್ಲರೂ ಸೇರಿ ಒಟ್ಟಾಗಿ ಊಟಮಾಡಿ, ಅದಕ್ಕೆʼ ಎಂದು ಹೇಳಿದಳು. ʻಒಂದು ಊಟ ಹೋದರೆ ಕೋಟಿ ಲಾಭʼ ಇದೆಯೋ ಇಲ್ಲವೋ? ಆದರೆ ಒಂದಿನದ ಅಡಿಗೆ ಕೆಲಸಕ್ಕೆ ವಿರಾಮ ದೊರೆಯಿತು ಅಂತ ʻಆಯಿತುʼ ಎಂದೆ.

ಇತ್ತೀಚೆಗಷ್ಟೆ ದೊಡ್ಡ ಮನೆಯನ್ನು ಕೊಂಡುಕೊಂಡಿದ್ದ ಅವರ ಮನೆಯ ಗೃಹಪ್ರವೇಶಕ್ಕೆ ಹೋಗಿ ಗಡದ್ದಾಗಿ ಊಟ ಹೊಡೆದು ಬಂದು ಆರುತಿಂಗಳು ಕಳೆದಿದ್ದುವೇನೋ? ಮನೆಯ ಸುತ್ತಲೂ  ಒಂದಿಷ್ಟು ಜಾಗವಿದ್ದು ಗಿಡಗಳನ್ನು ಬೆಳೆಸಲು ಅನುಕೂಲಕರವಾಗಿದೆ ಎಂದು ಅಂದು ಮಾತನಾಡಿಕೊಂಡಿದ್ದೆವು. ಈಗ ಹೊಸ ಮನೆಯ ಅಂಗಳ ಹಸಿರಿನಿಂದ ಕಂಗೊಳಿಸುತ್ತಿತ್ತು. ಈ ಬಾರಿಯ ಅತ್ಯಂತ ಸೆಖೆಯಲ್ಲಿಯೂ  ಅವರ ಮನೆಯಲ್ಲಿ ಅಷ್ಟೊಂದು ಸೆಖೆ ಎನಿಸುತ್ತಿರಲಿಲ್ಲ. ಒಂದಿಷ್ಟು ಹರಟೆಯ ನಂತರ ಊಟ ಮಾಡಿದೆವು. ಆವತ್ತಿನ ಅಡಿಗೆಗೆ ಆಕೆ ಬಳಸಿದ್ದುದೆಲ್ಲ ಅವರ ತೋಟದಲ್ಲಿ ಬೆಳೆದ ತರಕಾರಿಯೇ ಎನ್ನುವುದು ತಿಳಿಯಿತು. ಬದನೆಕಾಯಿ ವಾಂಗಿಬಾತ್‌, ಸೊಪ್ಪಿನ ಹುಳಿ, ಸೊಪ್ಪು-ಕಾಳುಗಳ ಪಲ್ಲೆ, ಮಜ್ಜಿಗೆಹುಲ್ಲಿನ ತಂಬುಳಿ ಹೀಗೆ ಎಲ್ಲವೂ ಮನೆಯ ತೋಟದಲ್ಲಿ ಬೆಳೆದುದರಿಂದ ತಯಾರಿಸಿದ ವ್ಯಂಜನಗಳೇ. ಸಾವಯವ ತರಕಾರಿಗಳು ಎನ್ನುತ್ತ ಸವಿದೆವು. ಎಲ್ಲವುದಕ್ಕೂ ರಾಸಾಯನಿಕಗಳನ್ನು ಸುರಿಯುತ್ತಿರುವ ಈ ದಿನಗಳಲ್ಲಿ ಇಂತಹ ಅವಕಾಶ ಸಿಗುವುದು ತೀರ ಅಪರೂಪವೇ. ಮನೆಯ ಸುತ್ತಲಿನ ಜಾಗದಲ್ಲಿ ಪೂಜೆಗೆ ಬೇಕಿರುವಷ್ಟು ಮಾತ್ರ ಹೂವಿನ ಗಿಡಗಳನ್ನು ಬೆಳೆಸಿದ್ದರು. ಮನೆಯ ಹಿಂಭಾಗದಲ್ಲಿ ಸುಮಾರು ಮೂವತ್ತಡಿ ಅಗಲ ಹದಿನೈದು ಅಡಿ ಉದ್ದವಿದ್ದ ಜಾಗವೆಲ್ಲ ಒಂದಿಷ್ಟು ಸೊಪ್ಪು, ತರಕಾರಿ ಗಿಡಗಳಿಂದ ನಳನಳಿಸುವುದನ್ನು ಕಂಡು ಸಂತೋಷವಾಯಿತು.

ಉರಿಯುವ ಬೇಸಿಗೆಯಲ್ಲಿ ತರಕಾರಿಯ ಬೆಲೆ ಗಗನಕ್ಕೇರುವುದು ಪ್ರತಿವರ್ಷದ ವಾಸ್ತವ. ಹಾಗಂತ ತರಕಾರಿಗಳನ್ನು ಕೊಳ್ಳದೆ ಅಡಿಗೆ ಮಾಡುವುದು ಅಸಾಧ್ಯದ ಮಾತು. ಅದರಲ್ಲಿಯೂ ನಗರ ಪ್ರದೇಶದಲ್ಲಿ ಬದುಕುವವರಿಗೆ ಕೊಳ್ಳುವುದು ಅನಿವಾರ್ಯವೂ ಹೌದು. ಕೆಲವರು ತಮ್ಮ ಮನೆಯ ಪಾಟುಗಳಲ್ಲಿ, ಇನ್ನು ಕೆಲವರು ತಾರಸಿ ತೋಟವೆಂದು  ತರಕಾರಿಯನ್ನು ಬೆಳೆಸುವುದಿದೆ. ಆದರೆ ಅದು ಮಿತವಾಗಿ ಬಳಕೆಗೆ ಸಿಗುವಷ್ಟು ಮಾತ್ರ. ಒಮ್ಮೆ ಪಕ್ಕದ ನಿವೇಶನ ಖಾಲಿ ಇದ್ದರೆ ಒಂದೆರಡು ಗಿಡವನ್ನೋ, ಬಳ್ಳಿಯನ್ನೋ ನೆಡುವುದರ ಮೂಲಕ ತರಕಾರಿ ಬೆಳೆದಿದ್ದೇವೆ ಎಂದು ಸಮಾಧಾನ ಹೊಂದುವುದೂ ಇದೆ. ಆದರೂ ಪ್ರತಿದಿನದ ಬಳಕೆಗೆ ಕೊಳ್ಳುವುದು ಅನಿವಾರ್ಯವೇ. ನಗರ ಮಾತ್ರವಲ್ಲ, ಈಗ ಹಳ್ಳಿಯ ಜನರೂ ತರಕಾರಿ ಕೊಳ್ಳುವ ರೂಢಿಯನ್ನು ಬೆಳೆಸಿಕೊಂಡಿದ್ದಾರೆ. ನಮ್ಮ ಅಮ್ಮ, ಅಜ್ಜಿಯರ ಕಾಲದಲ್ಲಿ ಮನೆಯಲ್ಲಿ ಏನಾದರೂ ವಿಶೇಷವಿದ್ದರೆ ಮಾತ್ರ ಪೇಟೆಯಿಂದ ತರಕಾರಿ ಬರುತ್ತಿತ್ತು. ಕೆಲವೊಮ್ಮೆ ಚಿಕ್ಕಪುಟ್ಟ ಸಮಾರಂಭವಿದ್ದರೆ ಅಕ್ಕಪಕ್ಕದ ಮನೆಯಿಂದ ತರಕಾರಿ ಸರಬರಾಜಾಗುವುದೂ ಇತ್ತು. ಮನೆಯ ತೋಟದಲ್ಲಿ, ಹಿತ್ತಲಿನಲ್ಲಿ  ಬೆಳೆಯುತ್ತಿದ್ದ ತರಕಾರಿಗಳು ಜೊತೆಗೆ ಬಾಳೆಕಾಯಿ, ಹಲಸಿನ ಕಾಯಿ, ವಿವಿಧ ಬಗೆಯ ಸೊಪ್ಪುಗಳು ಸಹಾಯಕ್ಕೆ ಬರುತ್ತಿದ್ದವು. ಆಗೆಲ್ಲ ಐವತ್ತೋ ನೂರೋ ಜನ ಸೇರುತ್ತಾರೆಂದರೆ ಮನೆಯವರು, ಬಂಧುಬಳಗವೆಲ್ಲ ಸೇರಿಕೊಂಡು ಅಡುಗೆ ಮಾಡುತ್ತಿದ್ದರು. ಹಾಗಾಗಿ, ತರಕಾರಿಯ ವಿನಿಯೋಗ ಲೆಕ್ಕಾಚಾರದಲ್ಲಿ ನಡೆಯುತ್ತಿತ್ತು.
• ಗ್ರಾಮೀಣ ಪ್ರದೇಶದಲ್ಲಿ ಹಿಂದೆ ತರಕಾರಿ ಬೆಳೆಯುವುದು ವಿಶೇಷವಾಗಿರಲಿಲ್ಲ. ಮನೆಯ ಹಿಂದಿನ ಅಥವಾ ಮುಂದಿನ ಹಿತ್ತಿಲಿನಲ್ಲಿ ಹೂಗಿಡಗಳಿಗೆ ಮಾತ್ರ ಜಾಗ ಎನ್ನುವ ಧೋರಣೆ ಇರಲಿಲ್ಲ. ಹೂವಿನ ಗಿಡಗಳ ಜೊತೆಗೆ, ದಿನನಿತ್ಯದ ಅಗತ್ಯಗಳನ್ನು ಪೂರೈಸುವಷ್ಟು ತರಕಾರಿಗಳನ್ನೂ ಬೆಳೆಯುತಿದ್ದರು. ಬೇಸಿಗೆಯಲ್ಲಿ ಅಂಗಳದ ಮೂಲೆಯಲ್ಲಿ ಚಪ್ಪರಕ್ಕೆ ಹಬ್ಬಿಸಿರುವ ತೊಂಡೆಬಳ್ಳಿ ತನ್ನ ಒಡಲತುಂಬ ಕಾಯಿಗಳನ್ನು ತುಂಬಿಕೊಂಡು ನಗುತ್ತಿತ್ತು. ಈಗಿನಂತೆ ನಲ್ಲಿಯ ಸವಲತ್ತು ಇಲ್ಲದಿದ್ದರೂ ಬೇಸಿಗೆಯಲ್ಲಿ ಪಾತ್ರೆಗಳನ್ನು ತೊಳೆಯುವ ಜಾಗ ಬದಲಾಗಿ ತೊಳೆದ ನೀರು ಬಳ್ಳಿಯ ಬುಡವನ್ನು ಸೇರುತ್ತಿತ್ತು. ಅನುಕೂಲ ಇರುವವರು ಬೇಸಿಗೆ ಹಿತ್ತಿಲು ಮಾಡಿ ತರಕಾರಿಗಳನ್ನು ಬೆಳೆಯುತ್ತಿದ್ದರು. ಕೆಲವರು ಗದ್ದೆಯಲ್ಲಿ, ಇನ್ನು ಕೆಲವರು ನೀರಿನ ಸವಲತ್ತು ಇರುವಲ್ಲಿ ತರಕಾರಿ ಬೆಳೆಯುವುದು ಮಾಮೂಲಾಗಿತ್ತು. ಗದ್ದೆಯ ಒಂದು ಭಾಗದಲ್ಲಿ ಹೊಂಡವನ್ನು ಅಗೆದು ಅಲ್ಲಿ ನೀರು ನಿಲ್ಲುವಂತೆ ಮಾಡಿ ಅಲ್ಲಿಂದ ನೀರನ್ನು ಕೊಡದಲ್ಲಿ ಎತ್ತಿ ಗಿಡಗಳಿಗೆ ನೀರುಣಿಸುವ ರೂಢಿ ಇತ್ತು. ಕೆಲವೊಮ್ಮೆ ಮನೆಯಲ್ಲಿ ಈ ಸವಲತ್ತು ಇಲ್ಲದ ಸ್ನೇಹಿತರಿಗೆ ಅಥವಾ ಬಂಧುಗಳಿಗೆ ಹಿತ್ತಿಲು ಹಾಕಲು ಅವಕಾಶವನ್ನು ಒದಗಿಸುತ್ತಿದ್ದರು. ಮಲೆನಾಡಿನ ಕೆಲವೆಡೆ ಮಗೆಕಾಯಿ (ಮಂಗಳೂರು ಸೌತೆ) ಬೆಳೆದು ಕಾಪಿಡುವ ರೂಢಿ ಇತ್ತು. ಈಗಲೂ ಹಿಂದಿನ  ತಲೆಮಾರಿನವರು ಇರುವ ಮನೆಗಳಲ್ಲಿ ಮಗೆಕಾಯಿ ಬೆಳೆಯುವುದನ್ನು ಕಾಣಬಹುದು.
ಬೇಸಿಗೆ ರಜೆಯಲ್ಲಿ ನಾವು ಊರಿಗೆ ಹೋದಾಗ  ಬೇಸಿಗೆ ಹಿತ್ತಿಲಿಗೆ ನೀರು ಹೊಯ್ಯಲು ಹೋಗುವವರ ಜೊತೆಯಲ್ಲಿ ಹೋಗಿ ಅವರ ಕೆಲಸದಲ್ಲಿ ನಾವೂ ಭಾಗಿಗಳಾಗುತ್ತಿದ್ದೆವು. ಎಳೆಯ ಮಗೆಕಾಯಿ ತಿನ್ನಲು ಸಿಗುತ್ತಿತ್ತು. ಹೀರೆಕಾಯಿ, ಬೆಂಡೆಕಾಯಿ, ಬದನೆ ಮುಂತಾಗಿ ಆಗತಾನೆ ಗಿಡದಿಂದ ಕೊಯ್ದುತಂದಿರುವ ತರಕಾರಿಗಳಿಂದ ತಯಾರಾದ ಅಡುಗೆಯನ್ನು ಸವಿಯುವುದೇ ಒಂದು ವಿಶೇಷವಾದ ಸೌಖ್ಯ. ಅತಿಯಾದ ಮಳೆಯ ಕಾರಣದಿಂದ ಮಳೆಗಾಲದ ಪ್ರಾರಂಭದಲ್ಲಿ ತರಕಾರಿ ಗಿಡಗಳು ಕೊಳೆತುಹೋಗುವುದೇ ಹೆಚ್ಚು. ಆಗ ಮಹಿಳೆಯರಿಗೆ ಸಹಾಯಕ್ಕೆ ಬರುವುದು ಈ ಮಗೆಕಾಯಿಯೇ. ಹೇಗೂ ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿ, ಹಲಸಿನ ತೊಳೆ ಮತ್ತು ಕಳಲೆಗಳು ಜೊತೆಗೆ ಇದ್ದೇ ಇರುತ್ತವೆ.

• ಆಯಾ ಋತುವಿಗೆ ಅನುಗುಣವಾಗಿ ತರಕಾರಿ ಗಿಡಗಳು ಸಿದ್ಧಗೊಳ್ಳುತ್ತಿದ್ದವು. ಬೀಜಗಳ ಸಂಗ್ರಹಣೆಯ ಕೆಲಸ ಮಹಿಳೆಯರದೇ ಆಗಿತ್ತು. ಮನೆಯ ಕೆಲಸಗಳ ಜೊತೆಗೆ ಇದೂ ಸೇರಿರುತ್ತಿತ್ತು. ಅಡುಗೆ ಮಾಡುವ ಹೊಣೆಯೂ ಅವರದೇ ಆಗಿದ್ದರಿಂದ ಆಯಾ ಕಾಲಕ್ಕನುಗುಣವಾಗಿ ಗಿಡ-ಬಳ್ಳಿಗಳು ತಯಾರಾಗುತ್ತಿದ್ದವು. ಮಳೆಗಾಲದ ಪ್ರಾರಂಭದಲ್ಲಿ ಸಂಗ್ರಹಿಸಿಟ್ಟಿದ್ದ ಬೀಜಗಳನ್ನು ಬಿತ್ತುವ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ʻಅಯ್ಯೋ ಎಲ್ಲಿಟ್ಟಿದ್ದಿ ಅಂತನೇ ನೆನಪಾಗ್ತಾ ಇಲ್ಲೆ. ಚೊಲೋ ಮೂರೆಲೆ ಬೆಂಡೆಬೀಜ ಆಗಿತ್ತುʼ ಅಂತಲೋ ʻಎಷ್ಟು ಚೊಲೋ ಜಾತಿ ಕರಡಿಗೆ ಬದನೆ ಆಗಿತ್ತು. ಬೀಜನೆಲ್ಲ ಇರುವೆ ನಿಂತು ಹಾಕಿದ್ದುʼ ಅಂತಲೋ ಹೇಳಿಕೊಂಡು ಸುಮ್ಮನಿರುವ ಜಾಯಮಾನ ಅವರದಾಗಿರಲಿಲ್ಲ. ಪಕ್ಕದ ಮನೆಯ ಅತ್ತಿಗೆ, ಕೆಳಗಿನ ಮನೆಯ ಅತ್ತೆ, ಮೇಲಿನ ಮನೆಯ ಅಕ್ಕ ಮುಂತಾದವರನ್ನು ಕೇಳಿ ಬೀಜವನ್ನು ತಂದು ಬಿತ್ತುತ್ತಿದ್ದರು. ದೀಪಾವಳಿ ಕಳೆದು ಮಳೆಗೆ ಬಿಡುಗಟ್ಟು ದೊರಕಿತೆಂದರೆ ಸೊಪ್ಪಿನ ಬೀಜಗಳನ್ನು ಹುಡುಕಿ ಮೊಳಕೆಕಟ್ಟಿ ಮೊಳಕೆಯೊಡೆಯುತ್ತಲೇ ಬಿತ್ತುತ್ತಿದ್ದರು. ಹೀಗೆ ಬಿತ್ತಿದ ಬೀಜಗಳನ್ನು ತಿನ್ನುವುದೆಂದರೆ ಇರುವೆಗೆ ಆಪ್ಯಾಯಮಾನ. ಅವುಗಳಿಗೆ ಆಹಾರವಾಗದಂತೆ ಪಾತಿಯ ಸುತ್ತಲೂ ಗೆಮಾಕ್ಷಿನ್ನಿನ ರಂಗೋಲಿ ಬರೆದರೂ ಒಮ್ಮೊಮ್ಮೆ ಬಿತ್ತಿದ ಬೀಜದ ಮೊಳಕೆಗಳು ಕಾಣೆಯಾಗುತ್ತಿದ್ದವು. ʻನಮ್ಮನೆಲ್ಲಿ ಬಿತ್ತರದ್ನೆಲ್ಲ ಇರುವೆ ತಿಂದುಬುಡ್ತುʼ ಅಂತ ಅಕ್ಕಪಕ್ಕದ ಮನೆಯಿಂದ ಸಸಿಗಳನ್ನು ತಂದು ಮತ್ತೆ ನೆಡುತ್ತಿದ್ದರು. ಇಲ್ಲವೆ ʻಮರಳಿ ಯತ್ನವ ಮಾಡುʼ ಎಂದು ವಿಕ್ರಮಾದಿತ್ಯನ ಹಾಗೆ ಮತ್ತೆ ಬೀಜಗಳನ್ನು ಬಿತ್ತುವ ಮೂಲಕ ಸಸಿಗಳನ್ನು ತಯಾರಿಸುತ್ತಿದ್ದರು. ಹೀಗೆ ಬೆಳೆಯುತ್ತಿದ್ದ ತರಕಾರಿಗಳು ಕೇವಲ ಮನೆಬಳಕೆಗೆ ಮಾತ್ರ ಎನ್ನುವಂತಿರಲಿಲ್ಲ. ನಾವು ಬೆಳೆದದ್ದನ್ನೆಲ್ಲ ನಾವೇ ತಿನ್ನಬೇಕು ಅಂತ ಯೋಚಿಸುತ್ತಿರಲಿಲ್ಲ. ನಾವು ಬೆಳೆದುದನ್ನು ದಿನವೂ ತಿಂದು ಬೇಸರವಾದರೆ, ಅಥವಾ ಮತ್ಯಾರದೋ ಮನೆಯಲ್ಲಿ ಸೊಪ್ಪೋ ತರಕಾರಿಯೋ ಇಲ್ಲವೆಂದಾದರೆ ನಮ್ಮನೆಯದು ಅಲ್ಲಿಗೆ ಹೋಗುತ್ತಿತ್ತು. ಅವರ ಮನೆಯಿಂದ ಬಂದಿರುವ ಸೊಪ್ಪೋ, ತರಕಾರಿಯೋ ನಮ್ಮನೆಯ ವ್ಯಂಜನದ ಭಾಗವಾಗುತ್ತಿತ್ತು.

• ಬೇಸಿಗೆಯಲ್ಲಿ ಬೆಳೆಯುತ್ತಿದ್ದ ತೊಂಡೆಕಾಯಿ, ಸೀಮೆಸೌತೆ ಮುಂತಾದ ಬಳ್ಳಿಗಳಿಂದ ಪಡೆಯುವ ತರಕಾರಿ ಒಂದೆಡೆಯಾದರೆ ಮಳೆಗಾಲದಲ್ಲಿ ಸೌತೆಕಾಯ, ಹೀರೇ, ಪಡವಲ, ಸೋರೆ, ಸಿಹಿಗುಂಬಳಗಳನ್ನು ಮಳೆಗಾಲದಲ್ಲಿ ಬೆಳೆಯುತ್ತಿದ್ದರು. ಸೌತೆ, ಸಿಹಿಗುಂಬಳ, ಸೋರೆ ಬಳ್ಳಿಗಳನ್ನು ನೆಲಕ್ಕೆ ಹಬ್ಬಿಸಿದರೆ ಬಿಟ್ಟಿರುವ ಕಾಯಿಗಳು ಕೊಳೆತುಹೋಗುತ್ತವೆ ಎಂದು ಮನೆಯ ಮೇಲೆ ಅಥವಾ ಕೊಟ್ಟಿಗೆಯ ಮಾಡಿಗೆ ಹಬ್ಬಿಸುತ್ತಿದ್ದರು. ಹೀರೆ, ಪಡವಲು, ಹುರುಳಿಕಾಯಿಗಳಿಗೆ ಚಪ್ಪರವೇ ಆಗಬೇಕು.  ಎಲ್ಲವನ್ನೂ ಅಂದಾಜಿಸಿ ಬೇಕಾದುದನ್ನು ತಾವೇ ಕೆಲವೊಮ್ಮೆ ಮನೆಯ ಗಂಡಸರ ಸಹಾಯ ಇಲ್ಲವೆ ಕೆಲಸದವರ ಸಹಾಯ ಪಡೆದು ಅಚ್ಚುಕಟ್ಟಾಗಿ ಚಪ್ಪರವನ್ನು ತಯಾರಿಸಿ ತರಕಾರಿಗಳನ್ನು ಬೆಳೆಯವುದು ಹೆಂಗಸರೇ ಆಗಿದ್ದರು.
ಆಗೆಲ್ಲ ಗಿಡಗಳಿಗೆ ಹುಳ ಬಿದ್ದರೆ ರಾಸಾಯನಿಕವನ್ನು ಸಿಂಪಡಿಸುವ ರೂಢಿ ಇರಲಿಲ್ಲ. ಕೊಟ್ಟಿಗೆ ಗೊಬ್ಬರ, ಅಡಕೆಸಿಪ್ಪೆ, ಒಣಗಿದ ಎಲೆಗಳನ್ನು ಹಾಕುತ್ತಿದ್ದುದರಿಂದ ಹುಳ ಬೀಳುತ್ತಿದ್ದುದು ಅಪರೂಪವೇ ಆಗಿತ್ತು. ಗೋಮೂತ್ರ ಬಳಕೆ ಹಿಂದಿನಿಂದಲೂ ಇತ್ತು. ಕೆಲವೊಮ್ಮೆ ಬೂದಿ, ಸುಣ್ಣ ಅಥವಾ ಉಪ್ಪು ಹಾಕುವುದರ ಮೂಲಕ ಹುಳವನ್ನು ಹತೋಟಿಗೆ ತರುತ್ತಿದ್ದರು.

• ʻಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆʼ ಎನ್ನುವ ಶಿಶುಗೀತೆಗಳನ್ನು ನಾವೆಲ್ಲ ಕೇಳಿದ್ದೇವೆ. ತೋಟ ಇರಲಿ, ಮನೆಯ ಅಂಗಳವೇ ಆಗಿರಲಿ ಗಿಡಗಳ ಅಗತ್ಯಗಳನ್ನು ಅರಿತು ಪೂರೈಸುವುದು ಸುಲಭದ ಮಾತಲ್ಲ. ಇದಕ್ಕೆಲ್ಲ ಬೇಕಿರುವುದು ಆಸಕ್ತಿ ಮತ್ತು ಶ್ರದ್ಧೆ. ಇವೆಲ್ಲ ಕೆಲಸ ಎಂದು ಭಾವಿಸದೆ ಜೀವನಕ್ರಮ ಎಂದು ತಿಳಿಯುತ್ತಿದ್ದ ದಿನಗಳವು. ಈಗ ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು. ಯಾರೊ ಮದುವೆಯಾಗುವ ಹುಡುಗಿಯ ಹತ್ತರ ಕೇಳಿದ್ದರು: ʻನಿಂಗೆ ಹಳ್ಳಿಲ್ಲಿರ ಹುಡುಗನೇ ಅಡ್ಡಿಲ್ಲೆ ಅಂತ ಹೇಳಿದ್ಯಡʼ ಅಂತ. ಅದಕ್ಕೆ ಆ ಹುಡುಗಿ ಹೇಳಿದ್ದಳು: ʻಹೌದು, ಯಂಗೆ ಆ ಪ್ಯಾಟೆ ಗೌಜು-ಗದ್ಲ ಎಲ್ಲ ಬ್ಯಾಡ. ಕೊಳ್ಳದೇ ಯಂತುದೂ ಸಿಕ್ತಿಲ್ಲೆ. ಮನೆ ಹತ್ರ ಒಂದು ತೊಂಡೆ ಬಳ್ಳಿ, ಅಥ್ವಾ ಸೀಮೆಸೌತೆ ಬಳ್ಳಿನೋ ಹಾಕ್ಯಂಡ್ರೆ ವರ್ಷ ಕಾಲಾವಧಿ ತರಕಾರಿ ಸಿಗ್ತು. ಎರಡೋ ಮೂರೋ ಬದ್ನೆಗಿಡ ಇದ್ರೆ ಬೇಕಷ್ಟು ತರಕಾರಿ ಆಗ್ತು. ಅಂಗಳ ಇದ್ರೆ ಸೊಪ್ನೂ ಬೆಳೆಯಲೆ ಆಗ್ತುʼ ಅಂತ. ತೀರ ಅಪರೂಪ ಆದ್ರೂ ಇತ್ತೀಚೆಗೆ ಹಳ್ಳಿ ಜೀವನವನ್ನು ಇಷ್ಟಪಟ್ಟು ಮದುವೆಯಾದ ಹುಡುಗಿಯನ್ನೂ ಕಂಡಿದ್ದೆ.

• ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ  ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು. ಮನೆಯಲ್ಲಿ ಬೆಳೆಯುತ್ತಿದ್ದ ತರಕಾರಿ, ಸೊಪ್ಪುಗಳಿರಲಿ, ಮನೆಯ ಸುತ್ತಮುತ್ತಲೂ ಸಿಗುತ್ತಿದ್ದ ಸೊಪ್ಪುಗಳಾಗಿರಲಿ ಅವುಗಳ ಸದುಪಯೋಗ ಹೇಗೆನ್ನುವುದು ಅವರಿಗೆ ತಿಳಿದಿತ್ತು. ತರಕಾರಿ ಮಾತ್ರವಲ್ಲ ಕೆಲವು ತರಕಾರಿ ಬೀಜಗಳ ಔಷಧೀಯ ಗುಣವನ್ನೂ ಅರಿತಿದ್ದರು. ಉರಿಮೂತ್ರ ಬಂದಿದೆ ಎಂದರೆ ಸಾಕು, ʻಅಷ್ಟೆನಾ ಅದ್ಕೆಲ್ಲ ಡಾಕ್ಟ್ರ ಹತ್ರ ಹೋಪದು ಬ್ಯಾಡ, ಮಗೆಬೀಜ ಆಗ್ಲಿ, ಸೌತೆಬೀಜನಾಗ್ಲಿ ಬೀಸಿ ಅದಕ್ಕೆ ಆಕಳಹಾಲು ಹಾಕಿ ಕುಡುದ್ರೆ ಗುಣವಾಗ್ತುʼ ಎನ್ನುವ ಸಲಹೆ ಬರುತ್ತಿತ್ತು. ಸಾಧ್ಯವಾದರೆ ಅವರೇ ಅದನ್ನು ಸಿದ್ಧಪಡಿಸಿ ಕೊಡುತ್ತಿದ್ದರು. ತುಸು ನೆಗಡಿ, ಗಂಟಲ ಕೆರೆತ ಅಂದರೆ ಸಾಂಬಾರು ಸೊಪ್ಪಿನ ಚಟ್ನಿ ತಯಾರಾಗುತ್ತಿತ್ತು. ಬಾಯಿಹುಣ್ಣು ಊಟಮಾಡೋದು ಕಷ್ಟ ಅಂದರೆ ಸಾಕು ʻಇರು, ನಾಳೆ ಬಸಳೆಸೊಪ್ಪಿನ ತಂಬುಳಿ ಮಾಡ್ತಿ, ಅದರಲ್ಲಿ ಊಟಮಾಡು ಗುಣವಾಗ್ತುʼ ಎನ್ನುತ್ತಿದ್ದರು ಅಮ್ಮ. ಹಾಗಾಗಿ, ಬಸಳೆ, ಒಂದೆಲಗ, ಕನ್ನೆಕುಡಿ, ಸಾಂಬಾರ್‌ಸೊಪ್ಪು ಇಂತಹ ಔಷಧೀಯ ಗುಣವನ್ನುಳ್ಳ ಸೊಪ್ಪಿನ ಗಿಡ-ಬಳ್ಳಿಗಳು ಮನೆಯ ಅಂಗಳದಲ್ಲಿ ಜಾಗ ಪಡೆಯುತ್ತಿದ್ದವು. ಬಸುರಿ, ಬಾಳಂತಿಯರಿಗೆ, ಚಿಕ್ಕಮಕ್ಕಳಿಗೆ, ಕಾಯಿಲೆಯವರಿಗೆ, ತೀರ ವಯಸ್ಸಾದವರಿಗೆ ಯಾವ ತರಕಾರಿ, ಸೊಪ್ಪುಗಳನ್ನು ಕೊಡಬೇಕು/ಕೊಡಬಾರದು ಎನ್ನುವ ಲೆಕ್ಕಾಚಾರವೂ ತಿಳಿದಿತ್ತು. ಮಗುವಿಗೆ ಸಾಕಾಗುವಷ್ಟು ಎದೆಹಾಲು ಸಿಗುತ್ತಿಲ್ಲ ಎಂದರೆ ಯಾವ ಸೊಪ್ಪಿನ ಅಡುಗೆಯಿಂದ ಅದು ಹೆಚ್ಚುತ್ತದೆ ಎನ್ನುವ ಸಂಗತಿಯೂ ಅವರಿಗೆ ಗೊತ್ತಿತ್ತು. ಇವೆಲ್ಲ ಅವರು ಎಲ್ಲಿಯೋ ಹೋಗಿ ಕಲಿತು ಬಂದವುಗಳಲ್ಲ. ಮನೆಯ ಹಿರಿಯರಿಂದ ಮತ್ತು ಬೇರೆಯವರಿಂದ ಕೇಳಿತಿಳಿದವು. ಪ್ರಾಯಶಃ ʻಊಟ ಬಲ್ಲವನಿಗೆ ರೋಗವಿಲ್ಲʼ ಎನ್ನುವ ಮಾತು ಹುಟ್ಟಿಕೊಂಡಿರುವುದು ಅದಕ್ಕಾಗಿಯೇ ಇರಬಹುದು.

  ತರಕಾರಿ ಬೆಳೆಯುವುದನ್ನು ಕುರಿತು ಆಲೋಚಿಸಲು ಮುಂದಾದರೆ ಅದರ ಸುತ್ತಲೂ ಎಷ್ಟೊಂದು ವಿಷಯಗಳು ತಳಕು ಹಾಕಿಕೊಂಡಿವೆ ಎನ್ನುವುದು ಗೊತ್ತಾಯಿತು.