Advertisement
ಗೀತಾ ಹೆಗಡೆ ಬರೆದ ಎರಡು ಕವಿತೆಗಳು

ಗೀತಾ ಹೆಗಡೆ ಬರೆದ ಎರಡು ಕವಿತೆಗಳು

ಮುಗುಳುನಗುವ ಬುದ್ಧ

ಬುದ್ಧನ ಮುಖವಾಡ ಹೊತ್ತು
ತಿರುಗುತ್ತಿದ್ದಾರೆ ಅವರೆಲ್ಲ!
ಹೊರಳಿಸಿದರೆ ಇಷ್ಟಿಷ್ಟೇ ಕತ್ತು
ಮುರಿದರೆ ಮೈ ಬಿಚ್ಚಿದರೆ ಅಂಗೈ
ಗಮನಿಸಿದರೆ ತಿಳಿದೀತು-
ಹರಿದು ಹಂಚಿದ ಚೆಹರೆ!

ನಸುಗಣ್ಣು ತೆರೆದು ಮುಗುಳು-
ನಗುವ..ಬುದ್ಧ!
ಅರಳಿದ ಕಣ್ಣಲ್ಲಿ ಜಗ-
ಝಗಿಸುವ ಜಗ

ತಲೆಯ ಗುಂಗುರಲ್ಲಿ ಮಡುವು-
ಗಟ್ಟಿದ ಶಾಂತಿ- ಹಣೆಯಲ್ಲಿ-
ವಿರಕ್ತಿಯ ರೇಕುಗಳು

ಸುಡುವ ಸಂಕಟಗಳನೆಲ್ಲ
ತಣಿಸಿ ಅಣಕಿಸುವಂತೆ
ಉಬ್ಬಿದ ಗಲ್ಲಗಳೊಳಗೆ
ಜಗದ ದುಗುಡವ ಅಲ್ಲ-
ಗಳೆದು, ಸುಖವ ಅರೆದು ಅಡಗಿ-
ಸಿದ ಕಾಂತಿ

ಹುಡುಕುತ್ತಿದ್ದಾರೆ- ಬೋಧಿ-
ವೃಕ್ಷವನ್ನು; ಜನುಮ ಜನುಮ-
ವೆತ್ತಿದರೂ ಸಿಗಲಿಲ್ಲ-
ವಲ್ಲ- ಇನ್ನೂ!

ಒಂದು ಬೀಜದ ಮೊಳಕೆ ನೂರ-
ಹನ್ನೊಂದು ಜೀವ ಬಿತ್ತಿ
ಅದರ ಪುಣ್ಯ-ಪಾಪ, ವೇಷ-ಕೋಶ
ಮರಮರಳಿ ಬುದ್ಧಿ-ಭಾವ ಸುತ್ತಿ- ಮೆತ್ತಿ-
ಕೊಳುವ ಸಂಸ್ಕಾರ- ಭಿತ್ತಿ!

ಬುದ್ಧನ ಮುಖ-
ವಾಡ ಹೊತ್ತು, ತಿರು-ತಿರುಗಾ-
ಡುತ್ತಲೇ ಇದ್ದಾರೆ ಅವರೆಲ್ಲ
ಬುದ್ಧತನದ ಭಿಕ್ಷೆಗೆ..ನವ-
ರಂಧ್ರಗಳ ಗಂಗಾಳ-
ಹೊತ್ತು..!

ಸ್ತ್ರೀ

ನಾನು ವಜ್ರ-
ಅನಂತತೆಯ ಕುಲುಮೆಯಲ್ಲಿ,
ಅಂತಃಸ್ಸತ್ವದ ಹೊಳಪಿನಲ್ಲಿ,
ದೃಢ ಬಲಿಷ್ಠತೆಯಲ್ಲಿ..

ನಾನು ಮುಕ್ತ-
ಪರಿಕಲ್ಪಿತ ಮಾನಾಪಮಾನಗಳ
ಭ್ರಮೆಗಳಿಂದ,
ಅನೈತಿಕತೆಯ ಸೋಕಿನಿಂದ,
ನೈತಿಕ ದುರಹಂಕಾರದಿಂದ..

ನಾನು ಔನ್ನತ್ಯ-
ಎಲ್ಲವನ್ನೂ ನಾನು ಕಾಣಬಲ್ಲೆ;
ಯಾರೂ ನನ್ನನ್ನು ತಲುಪಲಾರರು..

ನಾನು ಕ್ಷಮೆ-
ಸಕಲ ಸಾಪೇಕ್ಷ್ಯ ಪೊಳ್ಳುತನಗಳಿಗೆ;
ವರ್ಣಮಯ ವಿಭ್ರಮೆಗಳಿಗೆ..

ನಾನು ಆನಂದ-
ನನ್ನೊಳಗೆ..ನನ್ನೊಳಗೆ..ನನ್ನೊಳಗೆ!

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ