Advertisement
ಡಾಕ್ಟರ್ ಸೂರ್ಯ ಕುಮಾರ್ ನೆನಪುಗಳ ಮೆರವಣಿಗೆ ಇಂದಿನಿಂದ

ಡಾಕ್ಟರ್ ಸೂರ್ಯ ಕುಮಾರ್ ನೆನಪುಗಳ ಮೆರವಣಿಗೆ ಇಂದಿನಿಂದ

ಜನನ ಮರಣಗಳನ್ನೆರಡನ್ನೂ ನೋಡುವ ವೈದ್ಯ ವೃತ್ತಿ ಇತರ ವೃತ್ತಿಗಳಿಂದ ವಿಭಿನ್ನವಾದುದು. ಜನರ ನಂಬಿಕೆ, ಭಾವನೆಗಳನ್ನು ಗಮನಿಸಿಕೊಂಡು ಅವರಿಗೆ ಚಿಕಿತ್ಸೆ ನೀಡಬೇಕು. ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರಂತೂ ಎಷ್ಟೋ ನ್ಯಾಯದಾನ ಪ್ರಕ್ರಿಯೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವವರು. ಕೊಡಗಿನ ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಅಂತಹ ವೃತ್ತಿಯಲ್ಲಿ ಸಂತೋಷ ಕಾಣುವವರು. ಜೀವನವನ್ನು ಸಂಭ್ರಮಿಸುವ ವ್ಯಕ್ತಿತ್ವ ಅವರದು. ಅವರು ‘ನೆನಪುಗಳ ಮೆರವಣಿಗೆ’ ಸರಣಿ ಬರಹದಲ್ಲಿ ವೈದ್ಯಲೋಕದ ಕಥೆಗಳನ್ನು ಹೇಳಲಿದ್ದಾರೆ. 

 

ಡಾಕ್ಟರ್ ಎಂಬ ಶಬ್ದಕ್ಕೆ ಅನೇಕ ವ್ಯಾಖ್ಯಾನಗಳು ಇವೆ. ವೈದ್ಯ ಎಂಬುದು ಒಂದು ರೀತಿಯ ಉದ್ಯೋಗ ಕೂಡ ಅಲ್ಲಾ. ಎಲ್ಲ ವೈದ್ಯರು ಒಂದೇ ರೀತಿಯಲ್ಲಿ ಪಾಠ ಕಲಿತವರು ಅಲ್ಲ. ಇದರಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋ, ಸಿದ್ಧ, ನಾಟಿ ವೈದ್ಯ ಇತ್ಯಾದಿ ಅನೇಕ ವಿಭಾಗಗಳು ಇದ್ದು, ಅದನ್ನು ಕಲಿತವರು ಆ ಪದ್ಧತಿಯಲ್ಲಿ ಪರಿಣಿತರಾಗಿರುತ್ತಾರೆ. ಒಂದೊಂದು ಪದ್ಧತಿಯಲ್ಲಿ ಇರುವ ತನ್ನದೇ ಆದ ವಿಶಿಷ್ಟ ಕಲೆಗಳನ್ನು ಆಯಾಯ ಪದ್ಧತಿಯಲ್ಲಿ ಕಲಿತವರು ಕರಗತ ಮಾಡಿ ಕೊಂಡಿರುತ್ತಾರೆ. ಆ ವೈದ್ಯರು ಆ ವಿಷಯಗಳಲ್ಲಿ ತಜ್ಞರು.

ಹಾಗೆಯೇ ಬೇರೆ ಪತಿಗಳಲ್ಲಿ ಕಲಿಯದಿರುವ ಅವರು, ತಾವು ಕಲಿತ ಚಿಕಿತ್ಸಾ ವಿಭಾಗದಲ್ಲಿ ಮಾತ್ರ ಚಿಕಿತ್ಸೆಯನ್ನು ನೀಡಬೇಕು ಎಂದು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ತೀರ್ಪುಗಳು ಕೂಡ ಅನೇಕ ಬಾರಿ ಬಂದಿವೆ. ಅಲೋಪತಿಯನ್ನು ಕಲಿತ ನಾನು ಯಾವುದೇ ಆಯುರ್ವೇದದ ಔಷಧವನ್ನು ನನ್ನ ರೋಗಿಗಳಿಗೆ ಕೊಡುವಂತಿಲ್ಲ. ಹಾಗೆಯೇ ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ದ, ನಾಟಿ ಕಲಿತವರು, ಅಲೋಪತಿ ಔಷಧಿಯನ್ನು ಕೊಡಬಾರದು ಎಂದು ಸುಪ್ರೀಂಕೋರ್ಟ್ ಸಾರಿ ಸಾರಿ ಹೇಳಿದೆ.

ಅಲೋಪತಿಯಲ್ಲಿ ಓದಿದವರು, ಸಾಮಾನ್ಯ ವೈದ್ಯ, ವೈದ್ಯಕೀಯ ತಜ್ಞ, ಶಸ್ತ್ರ ಚಿಕಿತ್ಸೆಯ ತಜ್ಞ, ಮೂಳೆಯ ತಜ್ಞ, ಕಣ್ಣಿನ ವೈದ್ಯ , ಮಾನಸಿಕ ತಜ್ಞ ಇತ್ಯಾದಿ ಬೇರೆ ವಿಭಾಗಗಳಲ್ಲಿ ಹೆಚ್ಚಿನ ಪರಿಣಿತಿ ಹೊಂದಿರುತ್ತಾರೆ. ಈಗಂತೂ ಮುಂದುವರೆದು ಹೆಚ್ಚಿನ ಸ್ನಾತಕೋತರ ಪದವಿಗಳು ಕೂಡಾ ಇವೆ. ಮೂಳೆಗೆ ಬೇರೆ, ನರಕ್ಕೆ ಬೇರೆ, ಮೂಳೆಯ ಗಂಟುಗಳಿಗೆ ಇನ್ನೊಬ್ಬ, ಕಣ್ಣಿಗೊಬ್ಬರು, ಕಣ್ಣಿನೊಳಗೆ ಇರುವ ನರಕ್ಕೆ ಒಬ್ಬರು ಎಂಬಸ್ಟು ತಜ್ಞರು ಇದ್ದಾರೆ. ಇವರು ತಾವು ಪರಿಣಿತಿ ಹೊಂದಿದ ಆಯಾಯ ವಿಭಾಗದ ರೋಗಿಗಳ ಚಿಕಿತ್ಸೆ ಮಾಡುತ್ತಿರುತ್ತಾರೆ.

(ಚಿತ್ರ: ಅಂತರ್ಜಾಲ)

ವೈದ್ಯಕೀಯದಲ್ಲಿ, ಅನಾಟಮಿ, ಫಿಸಿಯಾಲಜಿ, ಮೈಕ್ರೋಬಯಾಲಜಿ, ಪೆತೋಲಜಿ ಮತ್ತಿತರ ವಿಭಾಗಗಳು ಕೂಡ ಇವೆ. ಈ ವಿಭಾಗಗಳಲ್ಲಿ ಅವರು ಮನುಷ್ಯನ ಶರೀರ, ಶರೀರದಲ್ಲಿ ನಡೆಯುವ ಕ್ರಿಯೆ, ಸೂಕ್ಷ್ಮಾಣುಗಳು, ಶರೀರದಲ್ಲಿ ಆಗುವ ಬದಲಾವಣೆ ಇತ್ಯಾದಿ ಗಳ ಬಗ್ಗೆ ಕಲಿತು ಪರಿಣಿತರಾಗುವ ಇವರಿಗೆ, ರೋಗಿಗಳೊಂದಿಗೆ ನೇರ ಸಂಪರ್ಕ ಇರುವುದಿಲ್ಲ.

ನಾನು ಕಲಿತ ವಿಧಿವಿಜ್ಞಾನ ಶಾಸ್ತ್ರ ಇಂತಹ ಒಂದು ವಿಭಿನ್ನವಾದ ವಿಷಯ. ಆದರೆ ಇದು ಒಂದು ಬಹಳ ವಿಚಿತ್ರವಾದ ವಿಭಾಗ. ನಾವು ದಿನಪೂರ್ತಿ ಹೊಡೆದಾಟ, ಬಡಿದಾಟ, ಗಾಯ, ಕೊಲೆ, ವಿಷ ಸೇವನೆ, ಆತ್ಮಹತ್ಯೆ, ಅತ್ಯಾಚಾರ ಮತ್ತು ಶವಗಳ ಮಧ್ಯೆ ವ್ಯವಹರಿಸುವವರು.

ಕಾನೂನು, ಪೊಲೀಸ್, ವಕೀಲರು, ನ್ಯಾಯಾಲಯದ ಮತ್ತು ವೈದ್ಯಕೀಯದ ಮಧ್ಯದ ಕೊಂಡಿ ನಾವು… ಇಂತಹ ಒಂದು ವಿಶೇಷವಾದ ಪರಿಣಿತಿಯಲ್ಲಿ ನಾನು ಅನುಭವಿಸಿ, ಕಲಿತ ಪಾಠಗಳು ಅನೇಕ. ದಿನವೂ ಸಾವು,ಬದುಕಿನ ಮಧ್ಯೆ ಕಾರ್ಯಭಾರ ನಡೆಸುವ ನನಗೆ ಜನನ ಮತ್ತು ಮರಣ ದಿನನಿತ್ಯದ ನೋಟ. ಮಗುವಿನ ಜನನವಾದಾಗ ಅದರ ತಂದೆ, ತಾಯಂದಿರು ಅನುಭವಿಸುವ ಸಂತೋಷವನ್ನು ನೋಡಿ ಆನಂದಿಸಿದ್ದೇನೆ. ರೋಗಿಯ ಮರಣದೊಂದಿಗೆ, ಅವರ ಮನೆಯವರ ದುಃಖದಲ್ಲಿ ಪಾಲುಗಾರರಾಗಿದ್ದೇನೆ. ಯಾವುದೇ ಮನುಷ್ಯ ಜನನ, ಮರಣದ ಆ ಕಲ್ಪನೆಯನ್ನು ನೋಡಿ ಹೇಳಬೇಕೆ ಹೊರತು ಅನುಭವಿಸಿ ಹೇಳುವ ಸಾಧ್ಯತೆ ವಿರಳ. ಜನನವನ್ನ ವಿವರಿಸಲು ಆ ಮಗುವಿಗೆ ಬುದ್ಧಿ ಬೆಳೆದಿಲ್ಲ.

ಮರಣದ ಆ ಕ್ಷಣದ ಪರಿಸ್ಥಿತಿಯನ್ನು ಹೇಳಲು ಆತ ಉಳಿದಿರುವುದಿಲ್ಲ.

ಈ ಎರಡೂ ಪರಿಸ್ಥಿತಿಯಲ್ಲಿ ರೋಗಿಗಳ ಜೊತೆಯಲ್ಲಿ ಬರುವ ಜನರ ಭಾವನೆಗಳು ಬೇರೆ ಬೇರೆಯಾಗಿ ಅವರ ಪ್ರತಿಕ್ರಿಯೆಗಳು ಕೂಡ ಬೇರೆ ಬೇರೆಯಾಗಿರುತ್ತದೆ.. ಜನನ ಆದಾಗ ಸಂತೋಷದಿಂದ ಹಾಡಿ ಕುಪ್ಪಳಿಸುವ ಜನ, ವೈದ್ಯರನ್ನು ಇಂದ್ರ-ಚಂದ್ರ ದೇವೇಂದ್ರ ಎಂದು ಹೊಗಳುತ್ತಿರುತ್ತಾರೆ. ಆದರೆ ಅದೇ ಜನರಿಗೆ, (ನಮ್ಮ ತಪ್ಪಿಲ್ಲದಿದ್ದರೂ) ಕೆಲವೊಮ್ಮೆ ಆಗುವ ಒಂದು ಸಣ್ಣ ಪ್ರಮಾದದಿಂದ, ನಾವುಗಳು ಒಮ್ಮೆಲೆ ದೇವಲೋಕದಿಂದ ಕೆಳಗೆ ಬಿದ್ದು, ಪಾತಾಳ ಸೇರಿದ ರಾಕ್ಷಸ ರಾಗುತ್ತೇವೆ. ವೈದ್ಯನೆಂಬುವನು ಎಂದೂ ದೇವರಾಗಲು ಸಾಧ್ಯವಿಲ್ಲ. ನಾವು ನಿಮಿತ್ತ ಮಾತ್ರ. ನಮ್ಮ ಕೈಯಲ್ಲಿ ಆಗುವ ಎಲ್ಲಾ ಪ್ರಯತ್ನಗಳನ್ನು ಮಾಡಿಕೊಂಡು ರೋಗಿಯ ಜೀವವನ್ನು ಉಳಿಸಿಕೊಳ್ಳಬೇಕು ಅಥವಾ ಅವರ ಕಷ್ಟ ಕಾರ್ಪಣ್ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬೇಕು ಎನ್ನುವುದು ಒಬ್ಬ ವೈದ್ಯನ ಆಲೋಚನೆ ಆಗಿರುತ್ತದೆ. ಅಧ್ಯಯನ ಮುಗಿದು ಪದವಿ ಪ್ರದಾನ ಮಾಡುವ ದಿನದಂದು ವೈದ್ಯ ತಾನು ಒಂದು ಪ್ರಮಾಣವನ್ನು ತೆಗೆದುಕೊಳ್ಳುತ್ತಾನೆ.

ಇದನ್ನು ಹಿಪ್ಪೋ ಕ್ರೆಟಿಕ್ ಪ್ರಮಾಣ ಅಥವಾ ಡಿಕ್ಲರೇಷನ್ ಆಫ್ ಜಿನೇವಾ ಎಂದು ಕರೆಯುತ್ತಾರೆ.
ಇದರಲ್ಲಿ ಇರುವ ಮುಖ್ಯ ಅಂಶಗಳು ಈ ಕೆಳಗಿನವು.

ತನ್ನ ಇಡೀ ಜೀವನವನ್ನು ಬೇರೆಯವರ ನೋವನ್ನು ಕಡಿಮೆ ಮಾಡಲು ಮುಡಿಪಾಗಿ ಇಡುತ್ತೇನೆ. ನನ್ನ ಅಧ್ಯಾಪಕರಿಗೆ, ಸಹಜವಾಗಿಯೇ ಸಿಕ್ಕಬೇಕಾದ ಗೌರವ ಮತ್ತು ಕೃತಜ್ಞತೆಗಳನ್ನು ಕೊಡುತ್ತೇನೆ.ಎಂದಿಗೂ ಬೇರೆಯವರಿಗೆ ಬೇಕೆಂದೇ ತೊಂದರೆ ಮಾಡುವುದಿಲ್ಲ ಮತ್ತು ಎಲ್ಲಿಯವರೆಗೆ ನನ್ನ ಕೈಯಿಂದ ಸಾಧ್ಯವಾಗುತ್ತದೊ ಅಲ್ಲಿಯವರೆಗೆ ಬೇರೆಯವರ ನೋವುಗಳನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡುತ್ತೇನೆ. ನನ್ನ ರೋಗಿಗಳ ಆರೋಗ್ಯವೇ ನನ್ನ ಮೊದಲ ಆದ್ಯತೆ. ನನ್ನಲ್ಲಿ ಅವರು ಹೇಳಿದ ಎಲ್ಲಾ ಗುಪ್ತ ವಿಷಯಗಳನ್ನು ನನ್ನಲ್ಲಿ ಮಾತ್ರ ಇಟ್ಟುಕೊಂಡು ಅದನ್ನು ಯಾರಿಗೂ ತಿಳಿಸುವುದಿಲ್ಲ. ಜಾತಿ, ಮತ, ಧರ್ಮ, ಹಿರಿಯ-ಕಿರಿಯ, ಬಡವ-ಬಲ್ಲಿದ ಎಂಬ ಯಾವ  ವ್ಯತ್ಯಾಸಗಳನ್ನು ನಾನು ಮಾಡುವುದಿಲ್ಲ -ಎಂದು ಭಾಷೆ ಕೊಟ್ಟಿರುತ್ತಾನೆ.

ಇದು ಒಂದು ಬಹಳ ವಿಚಿತ್ರವಾದ ವಿಭಾಗ. ನಾವು ದಿನಪೂರ್ತಿ ಹೊಡೆದಾಟ, ಬಡಿದಾಟ, ಗಾಯ, ಕೊಲೆ, ವಿಷ ಸೇವನೆ, ಆತ್ಮಹತ್ಯೆ, ಅತ್ಯಾಚಾರ ಮತ್ತು ಶವಗಳ ಮಧ್ಯೆ ವ್ಯವಹರಿಸುವವರು.

ಇದೇ ರೀತಿ, ನಮ್ಮಲ್ಲಿಗೆ ಬರುವ ರೋಗಿಗಳು ಕೂಡ ವಿಭಿನ್ನವಾಗಿರುತ್ತಾರೆ. ಇಂದು ನೋಡಿದ ಕೇಸಿನಂತೆ ನಾಳೆಯೂ ಇರಬಹುದು ಎಂದು ನಂಬಿ ಕುಳಿತರೆ ನಾವು ಹಳ್ಳಕ್ಕೆ ಬೀಳುವುದು ಖಂಡಿತ.

ನನ್ನ ವೈದ್ಯ ಜೀವನದಲ್ಲಿ ಸಾಮಾನ್ಯ ರೋಗದಿಂದ ಹಿಡಿದು ವಿಶೇಷವಾದ ರೋಗಿಗಳನ್ನು ಕಂಡಿದ್ದೇನೆ. ಸುಮಾರು ನಲ್ವತ್ತು ವರ್ಷ ವೈದ್ಯನಾಗಿ ಸೇವೆ ಸಲ್ಲಿಸಿದ ನಾನು, ಕೊನೆಗೂ ಸರಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬಂದು, ಒಂದು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಸೇರಿಕೊಂಡು, ಇಂದಿಗೂ ನನ್ನ ವಿದ್ಯಾರ್ಥಿಗಳಿಗೆ ಜ್ಞಾನ ಪಸರಿಸುವ ಕೆಲಸ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ.

ವೈದ್ಯಕೀಯ ಜೀವನವನ್ನು ನನ್ನದೇ ಊರಿನಲ್ಲಿ, ಒಂದು ಪುಟ್ಟ ಕ್ಲಿನಿಕ್ ನೊಂದಿಗೆ ಶುರು ಮಾಡಿದ ನಾನು, ಸರಕಾರಿ ಕೆಲಸ ಬಿಡುವ ಸಮಯಕ್ಕೆ, ಬಹಳಷ್ಟು ಮಂದಿಯ ಜೊತೆ ಒಡನಾಡಿ, ನೋಡಿ, ಅನುಭವಿಸಿ, ಅನೇಕ ವಿಷಯಗಳನ್ನು ಹೆಚ್ಚುವರಿಯಾಗಿ ಕಲಿತಿದ್ದೇನೆ.

ನಾನು ಕೆಲಸ ಮಾಡುತ್ತಿದ್ದ ಕೊಡಗು ಒಂದು ವೈವಿಧ್ಯಮಯ ಜಿಲ್ಲೆ. ಇಲ್ಲಿನ ಜನರು ಬೇರೆಯವರ ರೀತಿ ಅಲ್ಲ. ಇವರು ತಾವೇ ಸ್ವತಃ ಕಷ್ಟಪಟ್ಟು, ತಮ್ಮ ತೋಟಗಳಲ್ಲಿ ದುಡಿದು, ಒಂದು ಕುಟುಂಬವಾಗಿ  ಇರುವಂತಹವರು. ವರ್ಷಕೊಮ್ಮೆ ಬರುವ ಕಾಫಿ, ಯಾಲಕ್ಕಿ, ಕರಿಮೆಣಸು ಮಾರಿ ಇಡೀ ವರ್ಷ ಸಂತೋಷದಿಂದ ದಿನ ಕಳೆಯುವವರು ಇವರು, ಜಮ್ಮ ಹಿಡುವಳಿದಾರರು. ಅಂದರೆ ಜನ್ಮ ಸಿದ್ಧಹಕ್ಕಿನಿಂದ ಕೆಲವು ವಿಶೇಷ ಹಕ್ಕುಗಳನ್ನು ಪಡೆದವರು. ಇಲ್ಲಿ ಅವರು ತಮ್ಮ ಆಸ್ತಿಪಾಸ್ತಿಗಳನ್ನು ತಾವು ಅನುಭವಿಸಬಹುದೇ, ಹೊರತುಪಡಿಸಿ, ಬೇರೆಯವರಿಗೆ ಮಾರುವಂತಿಲ್ಲ. ಮಾರುವುದಾದರು ತಮ್ಮದೇ ಕುಟುಂಬದವರಿಗೆ ಮಾರಬೇಕು.

ಇಲ್ಲಿ ಕುಟುಂಬದ ಹೆಸರಿಗೆ ಬಹಳ ಪ್ರಾಮುಖ್ಯತೆ ಇದೆ. ಯಾರನ್ನು, ಎಲ್ಲಿ ಕಂಡರು ಹಿರಿಯರ ಕಾಲು ಹಿಡಿದು ನಮಸ್ಕರಿಸುವುದು ಇಲ್ಲಿನ ವಿಶೇಷತೆ. ಅದು ಪೇಟೆಯ ಮಧ್ಯವೇ ಇರಲಿ, ಯಾವುದೇ ಸಮಾರಂಭವು ಇರಲಿ. ಹಿರಿಯರ ಕಾಲಿಗೆ ಕಿರಿಯರು ನಮಸ್ಕರಿಸಲೇ ಬೇಕು. ಇದಕ್ಕೆ ಅಪವಾದ ಸಾವಿನ ಮನೆ, ಮತ್ತು ಹಾಸಿಗೆಯಲ್ಲಿ ಮಲಗಿ ಕೊಂಡಿರುವ ವ್ಯಕ್ತಿಯ ಕಾಲು ಮಾತ್ರಾ.

ಜನರು ಒಬ್ಬರನ್ನು ಒಬ್ಬರು ಕಂಡ ಕೂಡಲೇ ಕೇಳುವ ಮೊದಲ ಪ್ರಶ್ನೆ “ಚಾಯಿತೆ ಉಳ್ಳಿರಾ” ಅಂದರೆ ನೀವು ಚೆನ್ನಾಗಿ ಅಥವಾ ಆರೋಗ್ಯವಾಗಿ ಇದ್ದೀರಾ. ನಂತರದ ಪ್ರಶ್ನೆ “ನಿಂಗ ದಾಡ” ಅಂದರೆ ನೀವು ಯಾವ ಮನೆತನದವರು.

(ಫೋಟೋಗಳು: ಅಬ್ದುಲ್‌ ರಶೀದ್)

ಆಸ್ಪತ್ರೆಗೆ ರೋಗಿಯಾಗಿ ಬಂದ ವ್ಯಕ್ತಿ,  ನಾವು ಏನು, ಎತ್ತ ಅಂತ ಕೇಳುವ ಮೊದಲೇ ಡಾಕ್ಟರನ್ನು ಕೇಳುವ ಮೊದಲ ಪ್ರಶ್ನೆ! ರೋಗಿ, ನಾನೋ, ಇಲ್ಲಾ ಬಂದವರೋ ಎಂದು ಕೆಲವೊಮ್ಮೆ ನನಗೆ ಆಶ್ಚರ್ಯ ಆಗುತ್ತಿತ್ತು. ಅಷ್ಟೊಂದು ಆತ್ಮೀಯತೆ ಇಲ್ಲಿ. ಮನೆಯ ಹೆಸರು ಕೇಳಿದೊಡನೆ,”ಓಹ್, ನನ್ನ ಅಮ್ಮನ, ತಮ್ಮನ, ಹೆಂಡತಿಯ, ಅಣ್ಣನ ಮಾವ ಆ ಮನೆಯವರು ಎಂದು ಸಂಬಂಧ ಕಲ್ಪಿಸುವ ಇಲ್ಲಿಯ ಜನ, ಕೌಟುಂಬಿಕವಾಗಿ ಬಲಿಷ್ಠರು.

ಅದೇನೋ ಗೊತ್ತಿಲ್ಲಾ, ನಮ್ಮ ಜನಕ್ಕೆ ಸ್ವಲ್ಪ ಗತ್ತು ಜಾಸ್ತಿ… ಎಷ್ಟೇ “ದೊಡ್ಡ” ಡಾಕ್ಟರ್ ಆಗಲಿ, ಅಧಿಕಾರಿಗಳಾಗಲಿ, ಇಲ್ಲಿನವರ ಮಾತಿನಲ್ಲಿ, ಎಲ್ಲರೂ ಅವನು-ಇವನು, ಏಕವಚನ. ಅದರಲ್ಲೂ ಕೆಲವರಂತೂ, ನಾನು ‘ಅವಂಡ ಪಕ್ಕ’ (ಅವನ ಬಳಿ ) ಹೋಗಿದ್ದೆ, ಇಲ್ಲಾ, ಇನ್ನಿತರರ ಹೆಸರು ಹೇಳಿ ಸಂಭಾಷಣೆ ನಡೆಸುವವರು. ಹೆಸರಿನ ಮುಂದೆ ಡಾಕ್ಟರ್ ಎಂಬ ಶಬ್ದ ಬರುತ್ತಿದ್ದದ್ದು ಹಿಂದಿನ ಕಾಲದಲ್ಲಿ ಕಡಿಮೆ.

ಹಿಂದಿನ ಕಾಲ ಅಂದರೆ ಸ್ವಾತಂತ್ರ ಬಂದು ಕೆಲವು ವರ್ಷಗಳವರೆಗೆ ಇಲ್ಲಿನ ಕುಗ್ರಾಮಗಳಾದ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಗರ್ವಾಲೆಯಂತಹ ಊರುಗಳು ಪೇಟೆಯಿಂದ ಅನೇಕ ಕಿಲೋಮೀಟರ್ ದೂರದಲ್ಲಿ ಇದ್ದು, ಅಲ್ಲಿಗೆ ರಸ್ತೆ ಆಗಲಿ, ಕರೆಂಟ್ ಆಗಲಿ, ಫೋನ್ ಯಾವುದು ಇರಲಿಲ್ಲ. ಆಗ ಅಲ್ಲಿ ಇದ್ದ ಜನರು ತಾವು ಬೆಳೆದ ತರಕಾರಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಪೇಟೆಯ ಸಂತೆಗೆ ಬರುತ್ತಿದ್ದರು. ಆದರೆ ವಿಶೇಷ ಏನೆಂದರೆ, ಗಂಡಸರು ಅಲ್ಲಿಂದ ಬರುವಾಗ ತಲೆಯಮೇಲೆ ಒಂದು ಹ್ಯಾಟ್, ಮೈ ಮುಚ್ಚಲು ಕೋಟ್, ಕಾಲಿಗೆ ಧರಿಸಿದ್ದ ಪ್ಯಾಂಟ್ ಅನ್ನು ಅರ್ಧ ಮಡಿಚಿ ಕೊಂಡು ಕಾಡು, ತೊರೆಗಳನ್ನು ದಾಟಿ ಬರುವ ಅವರನ್ನು ನೋಡಿದ ಹೊರಗಿನವರು ಆಶ್ಚರ್ಯ ಪಡುತ್ತಿದ್ದರು. ಅದು ಎಷ್ಟು ಕೊಳೆ ಆದರೂ, ಎಷ್ಟೇ ಹರಿದು, ಚಿಂದಿಯಾಗಿದ್ದರೂ, ಅವರು ಅದರ ಬಗ್ಗೆ ತಲೆಕೆಡಿಸಿ ಕೊಂಡರವರಲ್ಲ. ಶುಕ್ರವಾರದ ಸಂತೆಗೆ ಬರುವಾಗ ಅದನ್ನು ಧರಿಸಿಕೊಂಡೇ ಬರುತ್ತಿದ್ದರು.

ಇದು ನಮಗೆ ಆಸ್ಪತ್ರೆಯಲ್ಲಿ ಕಾಣುತ್ತಿದ್ದ ಒಂದು ಅಪರೂಪದ ದೃಶ್ಯ. ಬೇರೆ ಕಡೆಯಿಂದ ಬಂದ ವೈದ್ಯರಿಗೆ ಇದು ಸ್ವಲ್ಪ ವಿಶೇಷವಾಗಿ ಕಾಣುತ್ತಿತ್ತು. ಹೊಸದಾಗಿ ಬಂದ ವೈದ್ಯರು ಕೆಲವೊಮ್ಮೆ ಇವರನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ಕಾಲವು ಮೂವತ್ತು ನಲ್ವತ್ತು ವರ್ಷದ ಹಿಂದೆ ಇತ್ತು. ಕೋಟ್, ಪ್ಯಾಂಟ್ ಅನ್ನು ನೋಡಿ ಅವರ ಸ್ಥಿತಿ ಗತಿಗಳ ಬಗ್ಗೆ ನಾವು ತೀರ್ಮಾನಿಸುವ ಪರಿಸ್ಥಿತಿ ಆಗಿನ ಕಾಲದಲ್ಲಿ ಇರಲಿಲ್ಲ. ಮನೆಯಲ್ಲಿ ಕಡುಬಡತನ ಇದ್ದರೂ ಕೂಡ ಅವರು ಧರಿಸುತ್ತಿದ್ದ ವೇಷಭೂಷಣಗಳು ಅದನ್ನು ನಮಗೆ ಬಹಿರಂಗ ಪಡಿಸುತ್ತಿರಲಿಲ್ಲ.

ಆದರೆ ಒಂದಂತೂ ಸತ್ಯ. ಈ ಕಷ್ಟ ಸಹಿಷ್ಣು ಜನರು ತುಂಬಾ ಮುಗ್ಧರು. ಹಾಗಾಗಿ ಇವರಿಗೆ ಚಿಕಿತ್ಸೆ ನೀಡಲು ನನಗೆ ಯಾವುದೇ ತೊಂದರೆ ಕಾಣುತ್ತಿರಲಿಲ್ಲ. ನಾವು ಹೇಳಿದ್ದನ್ನು ಶಿರಸಾವಹಿಸಿ, ಹೇಳಿದಂತೆಯೇ ಮಾಡುತ್ತಿದ್ದವರು ಈ ಮುಗ್ಧ ಜನರು. ಸಾಧಾರಣವಾಗಿ ಮಲೆನಾಡಿನ ಅನೇಕ ಜಿಲ್ಲೆಗಳಲ್ಲಿ ಇದು ನಮಗೆ ಕಾಣ ಸಿಗುತ್ತದೆ. ಬಹುಶಃ ಇದಕ್ಕೆಲ್ಲಾ ಮೂಲ ಕಾರಣ ಬ್ರಿಟಿಷರು ಮಲೆನಾಡಿನ ಜಿಲ್ಲೆಗಳಲ್ಲಿ ಬಹಳ ವರ್ಷಗಳ ಕಾಲ ಕಾಫಿ ತೋಟಗಳನ್ನು ಮಾಡುತ್ತಾ, ಇಲ್ಲಿ ರಾಜ್ಯಭಾರ ಮಾಡಿದವರು. ಅವರದೇ ವೇಷಭೂಷಣಗಳು ಮತ್ತು ಅವರು ಮಾಡುತ್ತಿದ್ದ ಕೆಲಸಗಳನ್ನು ಇಲ್ಲಿಯ ಜನ, ಕಲಿತು, ಅವರನ್ನು ನಕಲು ಮಾಡಿರಬೇಕು. ಇತರ ಕೆಲವು ಜಿಲ್ಲೆಗಳಲ್ಲಿ ಸಾಧಾರಣವಾಗಿ ಪಂಚೆ ಧರಿಸಿ, ಇಲ್ಲಾ ಪಟಾಪಟಿ ಚಡ್ಡಿ ಹಾಕಿಕೊಂಡು, ಯಾವುದೋ ಒಂದು ಸಮಾರಂಭಕ್ಕೆ ಮಾತ್ರ ಪ್ಯಾಂಟ್ ಹಾಕುವ ಕೆಲವು ಜನ, ಕೋಟ್ ಅನ್ನು ಯಾವುದೋ ಅಪರೂಪದ ಸಮಾರಂಭಗಳಿಗೆ ಮಾತ್ರ ಧರಿಸುತ್ತಿದ್ದರು. ಅದೇ ಕೆಲವು ಜಿಲ್ಲೆಗಳ ಜನ, ಆಸ್ಪತ್ರೆಗೆ ಬಂದಾಗ, ಅವರದೇ ಆದ ನಿಯಮಗಳನ್ನು ಇಟ್ಟುಕೊಂಡು, ಕೆಲವು ಕಡೆ ಹುಂಬರಂತೆ ವರ್ತಿಸುವುದನ್ನು ಕೂಡ ನೋಡಿದ್ದೇನೆ.

ಇದೆಲ್ಲಾ ನಾನು ಕೆಲಸಕ್ಕೆ ಸೇರಿದ ಸಮಯದಲ್ಲಿ ಇದ್ದ ಪರಿಸ್ಥಿತಿ. ಆದರೆ ಈಗ ಕಾಲ ಬದಲಾಗುತ್ತಿದೆ. ಮಕ್ಕಳೆಲ್ಲಾ ಬೆಂಗಳೂರು, ಮಂಗಳೂರಿಗೆ ಹೋಗಿ, ಕಾಲೇಜ್ ಮುಗಿದ ನಂತರ ಬರುವಾಗ, ನಯ ನಾಜೂಕು ಕಲಿತಿರುತ್ತಾರೆ. ಕನ್ನಡದಲ್ಲಿ ಬರೆದು, ಮಾತನಾಡಲು ಸ್ವಲ್ಪ ಕಷ್ಟ ಪಡುವ ಇಂದಿನ ಪೀಳಿಗೆ, ಇಂಗ್ಲಿಷಿನಲ್ಲಿ ನಿರರ್ಗಳ ವಾಗಿ ಮಾತನಾಡ ಬಲ್ಲರು. ಜೊತೆಗೆ ಕಂಪ್ಯೂಟರ್, ಗೂಗಲ್ ನಂತಹ ಜಾಲತಾಣಗಳನ್ನು ನೋಡಿ ಕೆಲವು ವಿಷಯಗಳನ್ನು ಅರ್ಧಂಬರ್ಧ ಕಲಿತು ಬಂದು,ನಮ್ಮನ್ನೇ ಪ್ರಶ್ನಿಸುವ ಸ್ಥಿತಿಯೂ ಇದೆ.

ಇಂತಹ ಒಂದು ವೈವಿಧ್ಯಮಯ ಜಿಲ್ಲೆಯಲ್ಲಿ ನನ್ನ ವೈದ್ಯಕೀಯ ಜೀವನದ ಹೆಚ್ಚಿನ ಸಮಯವನ್ನು ಕಳೆದಿದ್ದೇನೆ… ಸ್ನಾತಕೋತ್ತರದಲ್ಲಿ ವಿಧಿ ವಿಜ್ಞಾನ ಪರಿಣಿತಿಯನ್ನು ಹೊಂದಿ, ನಾನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಬಂದಾಗ, ಈ ವಿಭಾಗ ಏನು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ.

ಆ ಸಮಯದಲ್ಲಿ ಜಿಲ್ಲೆಯಲ್ಲಿ ಇದ್ದ ಏಕೈಕ ವಿಧಿ ವಿಜ್ಞಾನ ತಜ್ಞ, ನಾನು. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ಕ್ಲಿಷ್ಟಕರವಾದ, ಸಂಶಯಾಸ್ಪದ ಸಾವು ಸಂಭವಿಸಿದರೆ, ಯಾವುದೇ ಲೈಂಗಿಕ ಅಪರಾಧವಾದರೆ, ವಯಸ್ಸಿನ ದೃಢೀಕರಣ ಬೇಕಿದ್ದಲ್ಲಿ, ವಿಷಪ್ರಾಶನದ ವಿವರಗಳು ಬೇಕಿದ್ದಲ್ಲಿ ಪೊಲೀಸರು ನನ್ನ ಬಳಿ ಬಂದು ನನ್ನ ತಜ್ಞ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದರು. ಇತರ ವೈದ್ಯರು ಕೊಟ್ಟ ಅನೇಕ ವರದಿಗಳನ್ನು ತಂದು, ಅದು ಸರಿಯಾಗಿ ಇದೆಯೇ ಎಂದು ಕೂಡಾ ಕೇಳುತ್ತಿದ್ದರು.

ಹಾಗಾಗಿ ನನ್ನ ವೈದ್ಯಕೀಯ ಕ್ಷೇತ್ರದಲ್ಲಿ ನಾನು ಅನೇಕ ವಿಸ್ಮಯಗಳನ್ನು, ವಿಚಿತ್ರವಾದ ವಿಷಯ ಗಳನ್ನು ನೋಡಿ, ಅವುಗಳನ್ನು ಮತ್ತೆ ಅವಲೋಕಿಸಿದಾಗ, ಹಲವು ಬಾರಿ ನಾನು ಎಷ್ಟು ಅದೃಷ್ಟಶಾಲಿ ಅನಿಸುತ್ತದೆ. ಬಹುಶ ವೈದ್ಯನಾಗಿ,ವಿಧಿ ವಿಜ್ಞಾನ ತಜ್ಞ ನಾಗಿ ನನಗೆ ಸಿಕ್ಕಿದ ಅನುಭವಗಳು ಹೆಚ್ಚಿನವರಿಗೆ ಸಿಗುವ ಸಾಧ್ಯತೆಗಳು ಕಡಿಮೆ.

ಇದರ ವಿವರಗಳೊಂದಿಗೆ, ನಾನು ಕಂಡ ವಿಸ್ಮಯಗಳನ್ನು ಕೂಡಾ ಸದ್ಯಕ್ಕೆ ನಿಮ್ಮ ಮುಂದೆ ಇಡುತ್ತೇನೆ.

About The Author

ಡಾ. ಕೆ.ಬಿ. ಸೂರ್ಯಕುಮಾರ್

ಡಾ.ಕೆ.ಬಿ. ಸೂರ್ಯಕುಮಾರ್ ಅವರು ಹಿರಿಯ ವಿಧಿವಿಜ್ಞಾನ ತಜ್ಞರು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷ ವಿಧಿವಿಜ್ಞಾನ ಪರಿಣತರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆಯಲ್ಲಿಯೂ ವಿಧಿವಿಜ್ಞಾನ ತಜ್ಞರಾಗಿ ತಮ್ಮ ತಜ್ಞ ಸಲಹೆ ನೀಡಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಭಾಗದ ಪ್ರೊಫೆಸರ್. 'ವೈದ್ಯ ಕಂಡ ವಿಸ್ಮಯ' ಅವರು ಬರೆದ ಕೃತಿ.

34 Comments

  1. ಉಷಾ .ಎಸ್

    ಅಲ್ಲಿನ ಜನರ ಜೀವನವನ್ನು ಚೆನ್ನಾಗಿ ಪರಿಚಯಿಸಿದ್ದೀರಿ
    ಸಂತೋಷ

    Reply
  2. S usha

    ಮುನ್ನುಡಿ ಸುಂದರವಾಗಿದೆ

    Reply
  3. soumya Umesh

    ‘ವೈದ್ಯ ಕಂಡ ವಿಸ್ಮಯ ಜಗತ್ತು ‘ಎಂಬ ಅದ್ಭುತ ಅನುಭವ ಕಥನಗಳ ಲೇಖಕರಾದ , ನಮ್ ಮಡಿಕೇರಿ ಜನಗಳ ನೆಚ್ಚಿನ ಡಾಕ್ಟ್ರ ಬರಹಗಳು ‘ಕೆಂಡಸಂಪಿಗೆ ‘ ವೆಬ್ ಪೇಜಲ್ಲಿ ಬರುತ್ತಿರುವುದು ಸ್ವಾಗತಾರ್ಹ. ಬಹಳಷ್ಟು ಮಂದಿಗೆ ಒಂದೊಳ್ಳೆಯ ವೈದ್ಯಲೋಕದ ರೋಚಕ ಬರಹಗಳು ಸುಲಭದಲ್ಲಿ ಓದಲು ಸಿಗಲಿದೆ. ಶುಭವಾಗಲಿ ??

    ✍️ಡಾಕ್ಟ್ರ ಒಂದು ಕಾಲದ ಪೇಷಂಟ್. ಇವತ್ತಿನ ಅವರ ಬರಹಗಳ ಅಭಿಮಾನಿ ….ಸೌಮ್ಯ ಉಮೇಶ್.

    Reply
  4. Roopalatha

    Very interesting narration. If such informations were there in our time many,many would’ve taken forensic speciality. Honestly I read forensic for passing sake. Congratulations.

    Reply
  5. sowmya

    ‘ವೈದ್ಯ ಕಂಡ ವಿಸ್ಮಯ ಜಗತ್ತು’ಎಂಬ ಅನುಭವ ಕಥನಗಳ ಲೇಖಕರಾದ ಡಾ ಸೂರ್ಯಕುಮಾರ್ ಬರಹಗಳು ಕೆಂಡ ಸಂಪಿಗೆ ಬ್ಲಾಗ್ನಲ್ಲಿ ಇಂದಿನಿಂದ ಬರುತ್ತಿರುವುದು ಸ್ವಾಗತಾರ್ಹ.ಇದರಿಂದ ಡಾಕ್ಟ್ರ ರೋಚಕ ಅನುಭವದ ಪುಟ್ಟ ಪುಟ್ಟ ಬರಹವು ಪ್ರತಿಯೊಬ್ಬರನ್ನು ತಲುಪಲು ಸಾಧ್ಯವಾಗುತ್ತದೆ. ನಾನು ಮತ್ತೊಮ್ಮ ಡಾಕ್ಟ್ರ ಬರಹಗಳನ್ನು ಓದಲು ಕಾತರದಿಂದ ಕಾಯುತ್ತಿರುವೆ.
    ✍️ಸೌಮ್ಯ ಉಮೇಶ್.

    Reply
    • Dr KASTURI S

      Hearty congratulations Sir, Would love to read your articles especially after reading your first published book” Vaidya kanda vismaya jagattu”. The person who loves to read detective stories will definitely enjoy your narrations .
      Your writings will definitely make young doctors to jump into your (ever curious) speciality.
      Introduction of various specialities for patients wellbeing & at the same time patients attitude towards doctors very well explained in a simple,straight & yet filled with maturity.

      Reply
  6. Iynanda prabhu

    ಕುತೂಹಲಭರಿತ ಪರಿಚಯಾತ್ಮಕ ಬರೆಹ.

    Reply
  7. Shareen

    Looking forward to many more. Enjoy reading your fluent writing and the connect you give to incidents whis literally make me a part of it. Since I have grown up seeing you in GHM some of the incidents and descriptions are old memories.
    All the best

    Reply
  8. Dr. R Prabhu

    Dealing with dead Searching for live events of the life in DEAD and making a meaningful explanation of the already dead person is a beutiful experience of the VIDHI VIGNYANA……VERY WELL EXPLAINED????

    Reply
  9. Dr chandra chooda

    ಚೆನ್ನಾಗಿದೆ, ನಿಮ್ಮಬಾಷಾ ಹಿಡಿತ ಮತ್ತು ಓದಿಸಿಕೊಂಡು ಹೋಗುವ ನಿಮ್ಮ ಶೈಲಿ ಚೆನ್ನಾಗಿದೆ. ಮುಂದಿನ ನಿಮ್ಮ ಬರಹಗಳನ್ನು ನಿರೀಕ್ಷುಸುತ್ತಾ. ಚಂದ್ರಚೂಡ.

    Reply
  10. Ashalatha, Mangaluru

    ಆರಂಭವೇ ಕುತೂಹಲ ಮೂಡಿಸಿದೆ.

    Reply
  11. Udayashankar

    ಸೊಗಸಾದ ಆರಂಭ…

    Reply
  12. ಕಾಂಚನ ಗೌಡ

    ನಮ್ಮ ಮನೆಯವರೆಲ್ಲರ ಆರೋಗ್ಯ ಮತ್ತು ರೋಗ ಇವರಿಗೆ ಚಿರಪರಿಚಿತ. ಆದರೆ ಇವರ ವೃತ್ತಿಯ ವೈಶಿಷ್ಟ್ಯ ಮತ್ತು ಇವರ ಮಹತ್ವ ನನಗೆ ಅರಿವಾದದ್ದು ಇವರ ಪುಸ್ತಕ ಓದದ ಮೇಲೆಯೆ. ಮುಂದಿನ ಸಂಚಿಕೆಗೆ ಕಾಯುತ್ತಿದ್ದೇನೆ.

    Reply
  13. Ananth

    ಸುಂದರವಾಗಿದೆ ಚಿತ್ರಣ ಡಾಕ್ಟರ್….

    Reply
  14. Poornima.

    Wonderful narration. My uncle is THE BEST.

    Reply
  15. ಷಂಶುದ್ದೀನ್

    ಡಾ. ಸೂರ್ಯಕುಮಾರ್ ಅವರು ವೈದ್ಯ ಮಾತ್ರ ವಲ್ಲ, ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಪರವಾನಗಿಯೂ ಒಳ್ಳೆಯ ಕೆಲಸ ಮಾಡಿದ್ದಾರೆ

    Reply
  16. Omshree

    ಬರವಣಿಗೆ ಅದ್ಭುತವಾಗಿ ಮೂಡಿಬಂದಿದೆ ಸರ್

    Reply
  17. ಲೋಕನಾಥ್ ಅಮಚೂರು

    ಮಗು ಜನಿಸಿದಾಗ ಅವರೊಂದಿಗೆ ಸಂತೋಷ ಪಟ್ಟಿದ್ಧೆನೆ,ಸಾವು ಸಂಭವಿಸಿದಾಗ ಅವರೊಂದಿಗೆ ನೋವನ್ನು ಅನುಭವಿಸಿದ್ದೆನೆ.ಎಂತಹ ಅದ್ಬುತ ವಾದ ಅನುಭವದ ಮಾತು. ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು ಸರ್.

    Reply
  18. Govind Hebbar

    Excellent article! The narration is captivating.
    Looking forward to reading more of such write-ups.

    Reply
  19. Sanjay

    Great begining..one gets very involved in the flow of events..best wishes..look forward to reading more such..

    Reply
  20. Govind Hebbar

    Excellent article! Narration is captivating. Looking forward to reading more of such write-ups.

    Reply
  21. Pushpa

    ಸರಳವಾದ ಶೈಲಿಯಲ್ಲಿ ಪೀಠಿಕೆಯನ್ನು ಬರೆದು ಕೊಡವ ಜನರ ಪರಿಚಯ, ಅವರೊಂದಿಗಿನ‌‌ ತಮ್ಮ ಸಂಬಂಧದ ವಿವರಣೆ ನೀಡಿದ್ದಾರೆ. ಅವರ ವೃತ್ತಿಜೀವನದ ಅನುಭವವನ್ನು ಮುಂದಕ್ಕೆ ಓದುವ ಕೌತುಕ ಇದ್ದೇ ಇದೆ.

    Reply
  22. Dr. S. V. Narasimhan

    ಡಾ. ಸೂರ್ಯಕುಮಾರ್ ಕೊಡಗಿನ ಜನರಿಗೆ ಸುಪರಿಚಿತರು. Down to earth ಎನ್ನುತ್ತಾರಲ್ಲ, ಅಂತಹ ಒಬ್ಬ ಸಹೃದಯ ಸ್ನೇಹಜೀವಿ. ಅವರ ಐದಾರು ದಶಕಗಳ ಅನುಭವದ ಸರಣಿ ಲೇಖನಗಳನ್ನು ಓದಲು ನಾವೆಲ್ಲ ಉತ್ಸುಕರಾಗಿದ್ದೇವೆ.

    Reply
  23. Dr. HB CHANDRASEKHAR

    Excellent narration by a very experienced physician with maturity and wisdom. Look forward to future articles.

    Reply
  24. Preethiraj Ballal

    Very nice sir.
    Looking forward to see many more of this kind..best wishes sir???????

    Reply
  25. Shubha ChaRITHA

    You have put tremendous work into this article sir, writing with exemplary kannada language that too with medical words is not a simple task! Hats off sir?.. May we all get to see more views and articles from you to spread this great work.. Congratulations and prayers sir.

    Reply
  26. Mythri

    ತುಂಬಾ ಚೆನ್ನಾಗಿದೆ ಅಂಕಲ್ ನಿಮ್ಮ ಬರವಣಿಗೆ. Great Uncle ನೀವು ಆವಾಗ ಜಿಲ್ಲೆಯ ಓಬ್ಬರೇ ವಿಧಿ ವಿಜ್ಞಾನ ತಜ್ಞರು??

    Reply
  27. Dr Sonirani

    Dr Suryakumar is my husbands uncle n my favourite uncle too,we r proud to say we belong to his family,since i got married 27 yrs bck to till now any health problem first we think of him first to ask what to do next and what medicine to take though we stay at bangalore and i am a dentist.He is down to earth,most his patients get well by his gentle talks only.May God bless u with all the happiness in the world.Ur simple narrration is too good.???

    Reply
  28. Nataraj Kesthur

    ಮಗು ಜನಿಸಿದಾಗ ಅವರೊಂದಿಗೆ ಸಂತೋಷ ಪಟ್ಟಿದ್ಧೆನೆ,ಸಾವು ಸಂಭವಿಸಿದಾಗ ಅವರೊಂದಿಗೆ ನೋವನ್ನು ಅನುಭವಿಸಿದ್ದೆನೆ.ಎಂತಹ ಅದ್ಬುತ ವಾದ ಅನುಭವದ ಮಾತು. ನಿಮ್ಮ ಬದುಕೆ ಅನುಭವದ ಭಂಡಾರ, ಕೊಡಗಿನ ಜನರ ಸಂಸ್ಕಾರದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು

    Reply
  29. Ashalatha

    ಹೆಸರೇ ಸುಚಿಸುವಂತೆ ಸೂರ್ಯ ನ ಕಿರಣ ಗಳಂತೆ ಕಂಗೊಳಿಸುವ ನಮ್ಮ ಡಾಕ್ಟರ್ ಸೇವೆ ಅಮೋಘ ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದ ಜನನ ಮರಣ ಎರಡ ರಲ್ಲೂ ಸುಖ ದುಃಖ ವನ್ನು ಸಮಾನ ವಾಗಿ ಹಂಚಿ ಕೊಂಡು ಜನರ ಭಾವನೆ ಗಳಿಗೆ ಸ್ಪಂದಿಸಿ ಸಮಾಧಾನಿ ಸಿದವರು. ನಮ್ಮ ಕುಟುಂಬ ನೋವನ್ನು ಅನುಭವಿಸಿದಾಗ ಸಮಾಧಾನಿ ಸಿ ಧ್ಯರ್ಯ ತುಂಬಿದ ಸರಳ ಸಜ್ಜನಿಕೆಯ ಡಾಕ್ಟರ್ ನೀವು. ಅಮ್ಮ ನಿಗೆ ಉಷಾರಿಲ್ಲದೆ ಆದಾಗ ಅಂದಾಜು ಮೂವತ್ತು ವರ್ಷಗಳ ಹಿಂದೆ ಮದ್ಯ ರಾತ್ರಿ ಯಲ್ಲಿ ಕರೆದುಕೊಂಡು ನಿಮ್ಮನೆಹತ್ತಿರ ಬಂದಾಗ ಕೂಡಲೇ ಬೇಸರಿಸದೆ ಅವರ ಜೀವವನ್ನು ಉಳಿಸಿದವರು ಈಗಲೂ ಅಮ್ಮ ನಾವೆಲ್ಲ ಅದನ್ನು ನೆನೆಸಿಕೊಂಡು ನಿಮಗೆ ಚಿರಋಣಿ ಯಾಗಿದ್ದೇವೆ ಮತ್ತೊಮ್ಮೆ ನಿಮ್ಮ ಬರವಣಿಗೆ ಯು ಜನರ ಕದ ತಟ್ಟಲಿ ಎಂಬುದು ನಮ್ಮ ಹಾರಯಿ ಕೆ ??

    Reply
  30. ಪಿ.ಜಿ. ಅಂಬೆಕಲ್

    ನೆನಪುಗಳ ಮೆರವಣಿಗೆ ಜೋರಾಗಿಯೇ ಸಾಗಿದೆ, ಪ್ರಸ್ತಾವನೆ ಆಕರ್ಷಕ. ಕೊಡಗಿನ ಜನರ ಸಂಸ್ಕೃತಿಯ ಪರಿಚಯ ಸೊಗಸಾಗಿದೆ. ಅನ್ಯರ ಸುಖ ದುಃಖಗಳಿಗೆ ಸ್ಪಂದಿಸುವ ಮನಸ್ಸು ನಮ್ಮ ವೈದ್ಯರದ್ದು. ಬರವಣಿಗೆ ಆಕರ್ಷಕವಾಗಿ ಓದುವ ಕುತೂಹಲ ಮೂಡಿಸುತ್ತದೆ. ಕಾತರದಿಂದ ಕಾಯುವಂತೆ ಮಾಡುತ್ತಿದೆ. ಮುಂದುವರಿಯಲಿ ಮೆರವಣಿಗೆ

    Reply
  31. Usha Vasan

    Excellent narration of events! Can’t wait to read the future postings!

    Reply
  32. ಮಂಜುನಾಥ ಪೈ

    ವೈದ್ಯಕಂಡ ವಿಸ್ಮಯದ ಈ ವಾರದ ಲೇಖನ ಓದಿ ತುಂಬಾ ಆನಂದವಾಯಿತು..ನೀವು ಬರೆಯುವ ಕನ್ನಡ ಭಾಷೆಯ
    ಶೈಲಿ ತುಂಬಾ ಚೆನ್ನಾಗಿದೆ. ನೀವು ಬರೆದ ಘಟಣೆಗಳು ಕೊತೂಹಲಕರವಾಗಿವೆ, ಮತ್ತು ಓದಲು ಉತ್ಸಾಹವನ್ನು ಕೊಡುತ್ತದೆ.
    ಕೊಡಗು ದೇಶದ ಜನತೆಯ ಸಂಸ್ಕಾರವನ್ನು ಬಹಳ ಚೆನ್ನಗಿ ವಿವರಿಸಿದ್ದೀರಿ.
    ನಿಮ್ಮ ಈ ಮೆರವಣಿಗೆ ಮುಂದಪವರಿಸಲು ದೇವರು ನಿಮಗೆ ಒಳ್ಳೆಯ.
    ಆರೋಗ್ಯವನ್ನು ಕರುಣಿಸಲಿ ಎಂದು ನಾನು ಪ್ರಾಥ್ತಿಸುತ್ತೇನೆ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ