ಕಾಶ್ಮೀರವನ್ನು ನೋಡಿಯೇ ಇಲ್ಲದ ಆದರೆ ಮತ್ತೂ ಮತ್ತೂ ಆತಂಕವಾದಿಗಳ ದಾಳಿಗೆ, ಧರ್ಮಗಳ ಮೂಲಕ ಅಲ್ಲಿನ ಜನರನ್ನು ಒಡೆದು ಆಳುತ್ತಿರುವವರ ದಾಳಿಗೆ ಒಳಗಾಗುತ್ತಲೇ ಇರುವ ಕಾಶ್ಮೀರ ಕುರಿತು ನನಗೆ ಯಾವಾಗಲೂ ಭಯ ಮಿಶ್ರಿತ ಕುತೂಹಲ. ಕಾಶ್ಮೀರ ನನಗೆ ರಮ್ಯವಾಗಿ ಎಂದಾದರೂ ಕಂಡಿದ್ದರೆ ಅದು ಅದು ಶಮ್ಮಿ ಕಪೂರ್, ಶಶಿ ಕಪೂರ್ ಅವರ ಸಿನಿಮಾಗಳಲ್ಲಿ. ಇತ್ತೀಚಿನ ಪೆಹಲ್ಗಾಮ್ ಅಟ್ಯಾಕ್ವರೆಗೂ ಉಗ್ರಗಾಮಿಗಳ ಅಟ್ಟಹಾಸದ ಪ್ರಕರಣಗಳನ್ನೆ ಕೇಳುತ್ತಾ ಬಂದಿದ್ದೇನೆ. ಹೊರಗಿನವರು ಸಾಲದು ಅಂತ ನಮ್ಮ ರಾಜಕಾರಣಿಗಳ ಧರ್ಮದಾಟ ಬೇರೆ! ಅಯ್ಯೋ ಭಾರತಮಾತೆ…
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣದ ನಾಲ್ಕನೆಯ ಬರಹ
ಕಾಶ್ಮೀರ ಎಂದರೆ ಮೊದಲೆಲ್ಲ ಅದು ಭುವಿಯ ಮೇಲಿನ ಸ್ವರ್ಗ ಎಂದೆನ್ನುವುದನ್ನು ಕೇಳುತ್ತಿದ್ದೆವು. ಆದರೀಗ ಕಾಶ್ಮೀರ ಎಂದು ಯಾರಾದರೂ ಅಂದರೂ ಸಾಕು, ‘ಮತ್ತೇನಾಯ್ತು? ಯಾರು ಎಲ್ಲಿ ಅಟ್ಯಾಕ್ ಮಾಡಿದರು? ಎಷ್ಟು ಜನ ಸತ್ತಿರಬಹುದು…?’ ಎನ್ನುವ ಆಲೋಚನೆಗಳೇ ಮೊದಲು ಬರೋದು. ಒಂದಾ ಎರಡಾ ಅಲ್ಲಿ ನಡೆದ ದಾಳಿಗಳು! ಸದಾ ಒಂದು ರೀತಿಯ ಭಯದಲ್ಲೇ ಅಲ್ಲಿನ ಜನ ಬದುಕ್ತಾರೇನೋ ಅನಿಸುತ್ತದೆ ನಮಗೆ. ಆದರೆ ತೀರ ನಾವಿಲ್ಲಿ ಊಹಿಸಿಕೊಳ್ಳುವಷ್ಟು ಆತಂಕದ ದಿನಗಳು ಈಗಿಲ್ಲವಂತೆ ಅಲ್ಲಿ. ಆರಾಮಾಗಿ ನಾವು ಮಾಲ್ಗಳಿಗೆ ಹೋಗಿ ಬರ್ತೀವಿ ಈಗ, ಅಲ್ಲಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳೂ ಆಗ್ತಿವೆ; ಆದರೂ ಅವುಗಳ ಸಂಖ್ಯೆ ಕಡಿಮೆ. ಆದರೂ ಇಲ್ಲಿ ನೀವೆಲ್ಲ ಇಷ್ಟು ಬಿಂದಾಸ್ ಆಗಿ ಇರೋದನ್ನ ನೋಡಿದ್ರೆ ಜಲಸ್ ಆಗುತ್ತೆ ನನಗೆ, ಅಷ್ಟರ ಮಟ್ಟಿಗೆ ನಾವು ಮುಕ್ತವಾಗಿ ಬದುಕ್ತಿದ್ದೀವಿ ಎಂದುಕೊಂಡರೂ ಭಯದ ನೆರಳೊಂದು ಸದಾ ನಮ್ಮನ್ನ ಹಿಂಬಾಲಿಸುತ್ತಲೇ ಇರುತ್ತದೆ. ಹೀಗೆ ಹೇಳಿದವಳು ಒಂದೊಮ್ಮೆ ಅಲ್ಲಿನ ಟಿವಿ ವಾರ್ತಾ ವಾಚಕಿಯಾಗಿದ್ದ ಕಾಶ್ಮೀರದ ಯುವ ಕವಿ, ನದೀಮ್ ಶೌಕಿಯಾ ಜಾನ್. ಅವರನ್ನೆಲ್ಲ ಅಲ್ಲಿನ ವಾತಾವರಣ ಅದೆಷ್ಟು ಹೆದರಿಸಿ ಇಟ್ಟಿದೆಯೆಂದರೆ ಆಕೆ ಯಾರನ್ನೂ ನಂಬುವುದಿಲ್ಲ. ಸದಾ ಒಂದು ಎಚ್ಚರದ ರಕ್ಷಾ ಕವಚವೊಂದು ಧರಿಸಿಯೇ ಇರ್ತಾಳೆ ಎನ್ನುವಂತೆ ಅವಳ ವರ್ತನೆ, ಮಾತುಕತೆ.
ಆಕೆ ನನಗೆ ಸಿಕ್ಕಿದ್ದು ಶ್ರೀಹರ್ಷ ಸಾಲಿಮಠ ಅವರು 2025ರ ಫೆಬ್ರವರಿ ತಿಂಗಳಲ್ಲಿ ದಾವಣಗೆರೆಯಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಅಕ್ಷರ ಹಬ್ಬ’ದಲ್ಲಿ. ಮೂರೂ ದಿನ ನಾನು ಮತ್ತು ಶೌಕಿಯಾ ಹೋಟೆಲಿನ ಒಂದೇ ಕೋಣೆಯಲ್ಲಿದ್ದೆವು.
ಕಾಶ್ಮೀರವನ್ನು ನೋಡಿಯೇ ಇಲ್ಲದ ಆದರೆ ಮತ್ತೂ ಮತ್ತೂ ಆತಂಕವಾದಿಗಳ ದಾಳಿಗೆ, ಧರ್ಮಗಳ ಮೂಲಕ ಅಲ್ಲಿನ ಜನರನ್ನು ಒಡೆದು ಆಳುತ್ತಿರುವವರ ದಾಳಿಗೆ ಒಳಗಾಗುತ್ತಲೇ ಇರುವ ಕಾಶ್ಮೀರ ಕುರಿತು ನನಗೆ ಯಾವಾಗಲೂ ಭಯ ಮಿಶ್ರಿತ ಕುತೂಹಲ. ಕಾಶ್ಮೀರ ನನಗೆ ರಮ್ಯವಾಗಿ ಎಂದಾದರೂ ಕಂಡಿದ್ದರೆ ಅದು ಅದು ಶಮ್ಮಿ ಕಪೂರ್, ಶಶಿ ಕಪೂರ್ ಅವರ ಸಿನಿಮಾಗಳಲ್ಲಿ. ಇತ್ತೀಚಿನ ಪೆಹಲ್ಗಾಮ್ ಅಟ್ಯಾಕ್ವರೆಗೂ ಉಗ್ರಗಾಮಿಗಳ ಅಟ್ಟಹಾಸದ ಪ್ರಕರಣಗಳನ್ನೆ ಕೇಳುತ್ತಾ ಬಂದಿದ್ದೇನೆ. ಹೊರಗಿನವರು ಸಾಲದು ಅಂತ ನಮ್ಮ ರಾಜಕಾರಣಿಗಳ ಧರ್ಮದಾಟ ಬೇರೆ! ಅಯ್ಯೋ ಭಾರತಮಾತೆ…

ಶೌಕಿಯಾಳ ಸಂಬಂಧಿಕರಲ್ಲೇ ಇಬ್ಬರು ಹೆಣ್ಣುಮಕ್ಕಳು ಉಗ್ರಗಾಮಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದರಂತೆ… ಮಾತಾಡ್ತಾ ಮಾತಾಡ್ತಾ ಒಂದು ವಿಷಯ ಹೇಳಿದ್ಲು. ಅದನ್ನ ಕೇಳಿ ಏನ್ ಹೇಳಬೇಕೋ ತಿಳಿಯದೇ ಮಾತು ಕಳೆದುಕೊಂಡೆ. ಹಿಂದೊಮ್ಮೆ ನಮ್ಮದೇ ಮಿಲಿಟರಿಯ ಸೈನಿಕರು ಇಡೀ ಊರೊಂದರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ, ಈಗ ಆ ಊರಿನ ಗಂಡುಮಕ್ಕಳಿಗೆ ಯಾರೂ ಹೆಣ್ಣು ಕೊಡದಂತೆ ಆಗಿ ಹೋಗಿದೆಯಂತೆ! ಬೇಲಿಯೇ ಎದ್ದು ಹೊಲ ಮೇಯ್ದ ಕತೆ ನಿಜವಾದುದೇಕೆ….
ಇಂಥ ಘೋರ ಅನ್ಯಾಯಗಳು ನಡೆದ ನಡೆಯುತ್ತಿರುವ ನೆಲದ ಈ ಕವಿ ನದೀಮ್ ಶೌಕಿಯಾ ಅವರ ಎರಡು ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಅವುಗಳನ್ನು ನಿಮಗಾಗಿ ಇಲ್ಲಿ ಹಂಚಿಕೊಳ್ಳುತ್ತಿರುವೆ.
1. ಮರುಸ್ಥಲ್ (ಮರುಭೂಮಿ)
ಬನ್ನಿ ಒಮ್ಮೆ ಆ ಮರುಭೂಮಿಯೆಡೆಗೆ
ಹೇಳುವೆ ಹನಿಗಣ್ಣಾಗಿ ವ್ಯಥೆಯಿಂದ ಕೂಡಿದ ಒಳಗುದಿಯ
ಬನ್ನಿ ಜೊತೆಯಾಗಿ ಸ್ವಲ್ಪ ದೂರ ಹೇಳುವೆ ಮನದ ಬೇಗುದಿಯ
ಸತಾಯಿಸುತ್ತಿದೆ ಒಂಟಿತನ ನನ್ನೊಳಗೆ
ಭಯದ ದಿನಗಳನು ಕುಕ್ಕಿ ಕುಕ್ಕಿ ಹೆಕ್ಕಿ ಹಾಕುತ್ತಿದೆ ನೆನಪಪಕ್ಷಿ ಎದೆಯೊಳಗೆ
ರಕ್ತಸಿಕ್ತ ಮಾಡಿದೆ ನನ್ನನು ಕಿತ್ತೆಸೆದು ನನ್ನ ಮೂಲ ಬೇರುಗಳನು
ಉಳಿಸಿಹೋಗಿದೆ ಜೊತೆಗೆ ಇಲ್ಲಿ ರಾಶಿ ರಾಶಿ ಬೂದಿಯನು
ಉಪ್ಪಿನ ಹೊದಿಕೆ ನನ್ನ ಗಾಯಗಳಿಗೆ
ಹೊಸ್ತಿಲಾಚೆಗೆ ಕಾಲಿಡದ ನಿರ್ಬಂಧದ ಅಭಿಶಾಪ
ಯಾವ ಅವಕಾಶವನ್ನೂ ಬಿಡಲಿಲ್ಲ ಅವರೋ ಇವರೋ ನನ್ನವರೋ ಇರಿಯುತ್ತಾರೆ ಆಯುಧಗಳ ಹಂಗಿಲ್ಲದೆ
ಸವತಿಯಂಥ ಕಾಲ
ತೊಂದರೆಗಳ ಬಿರುಗಾಳಿಗೆ ತತ್ತರಿಸಿ ಕಣ್ಮರೆಯಾಗುತ್ತಿವೆ ಹೂಗಳು
ಕುಸಿಯುತ್ತದೆ ಭರವಸೆ ಮಾತುಕತೆಯಲ್ಲಿಯೇ ಕಳೆದು ಹೊತ್ತು
ಬರೆಯುತ್ತಾರಾದರೂ ಯಾರು ಪರಸ್ಪರರ ವಿಧಿಯನ್ನು
ಹತಾಶೆ ದಣಿವಿನಲಿ ಗುರುತಿಸಲಿ ಹೇಗೆ ಯಾರನ್ನು
ದಂಡಿ ಭರವಸೆಗಳನ್ನು ನೀಡುತ್ತಾನೆ ಬಾಹುಬಲಿ
ಬನ್ನಿ ಒಮ್ಮೆ ಆ ಮರುಭೂಮಿಯೆಡೆಗೆ
ಹೇಳುವೆ ಹನಿಗಣ್ಣಾಗಿ ವ್ಯಥೆಯಿಂದ ಕೂಡಿದ ಒಳಗುದಿಯ.
***
2. ಸಂಚಿತ್
ಕಣ್ಣುಗಳಲ್ಲಿ ಸುಟ್ಟುಬೂದಿಯಾಗುತ್ತಿರುವ ದೃಶ್ಯ ಉಳಿದಿದೆ
ಆಡುವ ಮಾತುಗಳಲ್ಲಿ ಶವ ಹುಗಿದ ಮನ ಕಾಣುತ್ತಿದೆ
ಮನದ ಪ್ರೇಮ ಸರೋವರ ಮರುಭೂಮಿಯಾದಂತಿದೆ
ನನ್ನ ಅಸ್ತಿತ್ವದ ಬೇರುಗಳನ್ನು ಯಾರೋ ಕಿತ್ತು ಹಾಕಿದಂತಿದೆ
ತಾಳ್ಮೆಯ ಕನ್ನಡಿ ಎಂದೋ ಒಡೆದು ಹೋಗಿದೆ
ಕಾಲನ ಕೈಗೆ ಸಿಕ್ಕು ಸೂತ್ರ ಹರಿದ ಗಾಳಿಪಟವಾಗಿರುವೆ ನಾನು
ಯಾರಿಗೆ ಹೇಳಲಿ ಈ ಸ್ಥಿತಿಯ ಒಂಟಿತನಲ್ಲಿ ನೆನೆಯುತ್ತ ಛಿದ್ರವಾಗಿರುವೆ ನಾನು.

ಲೇಖಕಿ, ರಂಗ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರು. ನೀಲ ಕಡಲ ಭಾನು’ (ಕವನ ಸಂಕಲನ) ‘ಹೇಳತೇವ ಕೇಳ’ (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ‘ಮುಕ್ಕು ಚಿಕ್ಕಿಯ (ಕಾದಂಬರಿ) ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ ‘ಬೇಬಿ’ (ಅನುವಾದಿತ ನಾಟಕ) ಇವರ ಪ್ರಕಟಿತ ಕೃತಿಗಳು. ‘ಜನದನಿ’ (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಸಂಸ್ಥೆ) ಸಂಸ್ಥಾಪಕಿ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

