Advertisement
ಪ್ರಜ್ಞಾ ಮತ್ತಿಹಳ್ಳಿ ಬರೆದ ಈ ದಿನದ ಕವಿತೆ

ಪ್ರಜ್ಞಾ ಮತ್ತಿಹಳ್ಳಿ ಬರೆದ ಈ ದಿನದ ಕವಿತೆ

……ಮಧ್ಯಾಹ್ನ

ತಿಳಿ ಗುಲಾಬಿ ಪರದೆಗಳು
ನೆಟ್ಟಗೆ ನಿಂತಿವೆ ಕೊಂಚವೂ ಅಲ್ಲಾಡದೆ
ನೀಲಿಕುಚ್ಚಿನ ಗಂಟೆದಾರಗಳು
ಟಣ್ಣನೆ ಓಲಾಡುವ
ಅವಕಾಶಕ್ಕಾಗಿ ಕಾದಿವೆ
ಬಿಮ್ಮನೆ ಬಿಗಿದ ಮಧ್ಯಾಹ್ನವೊಂದು
ಮೆಲ್ಲನುರುಳಿತ್ತಿದೆ ಗಾಳಿಯರಸುತ್ತ
ಚೂರೂ ಧಾವಂತವಿಲ್ಲದೆ

ನಸುಕಿನ ಗಡಿಬಿಡಿಯ
ಜನರನ್ನು ಅವರ ಡಬ್ಬಿಗೂಡಿ
ಹೊರದಬ್ಬಿ ನಿರಾಳವಾದವಳು
ಕಾಲು ಚಾಚಿದ್ದಾಳೆ ಸೋಫಾದ
ಮೇಲೊಂದು ಕಸೂತಿಯಂತೆ
ಫ್ಯಾನಿನ ಗಾಳಿಗೆ ರೆಪ್ಪೆ ಕೂಡಿದೆ
ಅರ್ಧ ಓದಿದ ಕತೆ ಮುಂದುವರಿದಿದೆ
ಅರೆ ಎಚ್ಚರದ ಮಂಪರಿನಲ್ಲೇ

ಎತ್ತರೆತ್ತರ ಕೋಟೆ ಗೋಡೆಯ
ಸಣ್ಣ ಕಿಂಡಿಯಾಚೆ ಮೂತಿ
ಚಾಚಿದ ತೋಪುಗಳು ಗುರಿಯಿಕ್ಕಿ
ನೋಡುತ್ತಿವೆ ಹಸಿರು ಕಾಲ್ದಾರಿಗಳತ್ತ
ರಾಚುವ ರಣಬಿಸಿಲಿಗೆ ಮೈತೆರೆದ
ಕೆರೆಯಲೆಗಳು ಫಳಫಳ ಮಿನುಗಿ
ದಡದ ಕಲ್ಲಿಗೆ ಮುತ್ತು ಕೊಡುತ್ತಿವೆ

ನವಿಲುಗಣ್ಣಿನ ರೇಶಿಮೆ ಸೆರಗು
ಮರೆಮಾಡಲು ಸೋತ ತುಂಬು
ಮೈಮಾವಿನ ರಾಜಕುವರಿ
ಮಲ್ಲಿಗೆ ಪೊದೆ ಚಾಚಿದ ಕಿಡಕಿಗೊರಗಿ
ಸರಳಿಗೊತ್ತಿದ ಅವಳ ಮೈ ನಿಗಿನಿಗಿ ಗಂಧ

ಚಿರತೆ ಮಾಟದ ಹುಡುಗ
ಕೂತ ಕುದುರೆಯೇ ಬಿಸಿಯೇರುವ
ಹುರಿಮೈ ಬಿಲ್ಲಂತೆ ಬಾಗಿಸಿ
ಉಸಿರು ಹೂಬಾಣ ಮಾಡಿ
ಕೊಳಲೂದುತ್ತಾನೆ
ಕಣಕಣವೂ ಜುಮುಗುಡುವ
ನಾದ ಕಚಗುಳಿಗೆ ನವಿರಾಗಿ
ನಡುಗುವ ಮೈ ಇಷ್ಟಿಷ್ಟೇ
ಅರಳುತ್ತ ಸುಡುಸುಡು ಕೇದಗೆ

ಥಟ್ಟನೆ ಕೆಳಬಿದ್ದ ಪುಸ್ತಕ
ಕಣ್ಬಿಟ್ಟರೆ ಕಿರಲುವ ಫೋನು
ಎದ್ದು ಕೂತರೆ ದಿಂಬಿನ ಮೇಲೊಂದು
ಮಲ್ಲಿಗೆಯೆಸಳು ಅರೆರೆ
ಇದೆಲ್ಲಿಂದ ಬಂತು?
ಕಿಡಕಿಯಾಚೆ ಕುದುರೆ ಕೆನೆದ ಸದ್ದು

About The Author

ಪ್ರಜ್ಞಾ ಮತ್ತಿಹಳ್ಳಿ

ಪ್ರಜ್ಞಾ ಮತ್ತಿಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಸಹ ಪ್ರಾಧ್ಯಾಪಕರು. ಸಾಹಿತ್ಯ ರಂಗಭೂಮಿ ಮತ್ತು ಯಕ್ಷಗಾನಗಳು ಇವರ ಆಸಕ್ತಿಯ ಕ್ಷೇತ್ರಗಳು. ಕವಿತೆ, ಕತೆ, ಪ್ರಬಂಧ. ನಾಟಕ, ಪ್ರವಾಸ ಕಥನ ಈ ಎಲ್ಲ ಪ್ರಕಾರಗಳೂ ಸೇರಿದಂತೆ ಎಂಟು ಪುಸ್ತಕಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಕಡೆ ಇವರ ಬರಹಗಳು ಗುರುತಿಸಿಕೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ