ಬಯಲ ಬದುಕು ….
ಹಚ್ಚಲು ದೀಪವಿಲ್ಲ
ಹೊದ್ದು ಮಲಗಲು ಹಚ್ಚಡವಿಲ್ಲ
ನೆಲದ ಬುತ್ತಿ ಉಂಡು
ಮೈಯ ಉಸಿರ ಬಸಿದು
ದಣಿವರಿದು ಮರೆವ ಎಲ್ಲ
ಇಹ ಪರದ ನಾಕವ
ಊರು ಯಾವುದಾದರೇನು ?
ದಾರಿ ಹೇಗಿದ್ದರೇನು?
ಅಂಜು -ಅಳುಕಿಗೆ
ಇಲ್ಲಿ ತಾವಿಲ್ಲಾ ….
ಒಲೆ ಉರಿದಷ್ಟೇ ತಾಪ
ಬದುಕಿಗೂ ಇದ್ದರು
ಕ್ಷೀಣಿಸದ ಭರವಸೆ ಚಿಂತೆಗಳಿಗೆ ಇಲ್ಲಿ
ಜಾಗವಿಲ್ಲ ಹೋಗುವ ಹಾದಿಗೆ
ಜೊತೆಯಿಲ್ಲ…..
ಹಸಿದು ಉಣ್ಣುವದು ಗೊತ್ತು
ಬಯಲ ರುಚಿಗೆ ಸಮಯಾವುದಿತ್ತು ?
ಬಟ್ಟೆ ಹರಿದರು ಹೃದಯ ಒಡೆದಿಲ್ಲ
ಯಾಕೆಂದರೆ ಅದು
ನಂಜಿನ ತಾಣವಲ್ಲ ….
ಬಯಲ ಬಾಳಿಗೆ
ಒಲುಮೆ ಜೋಳಿಗೆ
ಹರಿಯುತಿಹುದು ಜೀವನ
ಪಾತ್ರಗಳ ಬದಲಿಸುತ ನಿಂತ
ನೀರಾಗದೆ ನಿರಾಳವಾಗಿ …..
ರೇಶ್ಮಾಗುಳೇದಗುಡ್ಡಾಕರ್ ಬಳ್ಳಾರಿ ಜಿಲ್ಲೆಯ, ಕೊಟ್ಟೂರು ಪಟ್ಟಣದವರು
ಓದುವುದು ಇವರ ಹವ್ಯಾಸ
![](https://kendasampige.com/wp-content/uploads/2020/12/ks-profile.jpg)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ