Advertisement
ಅಕ್ಷಯಾಂಬರ: ಬೇಲೂರು ರಘುನಂದನ್ ಬರೆದ ಕವಿತೆ

ಅಕ್ಷಯಾಂಬರ: ಬೇಲೂರು ರಘುನಂದನ್ ಬರೆದ ಕವಿತೆ

ಅಕ್ಷಯಾಂಬರ

ಮೊಟ್ಟೆಯೊಡೆದ ಚಿಟ್ಟೆ
ಕನಸುಗಳ ಕಟ್ಟುತ್ತಾ ನೂಲು ಬಿಟ್ಟಿತ್ತು
ಕಣ್ಮನಗಳಲಿ ಕಾರುಣ್ಯ ಮೂಡಿ
ನೇಯ್ದ ಮೊದಲ ನೇಯ್ಗೆ
ಮಗ್ಗದಲಿ ಬಣ್ಣದ ಸೀರೆಯಾಗಿತ್ತು

ಲಟಾ ಪಟಾ, ಪಟಾ ಲಟಾ
ಮಗ್ಗದ ಸದ್ದು
ನೇಯುವವರ ಬೀದಿ ತುಂಬಾ ಆವರಿಸಿತ್ತು
ಬೆವರಲ್ಲೇ ಅದ್ದಿ ತೆಗೆದ ನೂಲುಗಳು
ಸಂಕಟವ ತೊಟ್ಟು
ಜಗದ ಬಟ್ಟೆಯಾಗಿತ್ತು

ದೇಹ ಬೇಡಿದಷ್ಟೂ ಅಳತೆ
ಉಡುವಷ್ಟು ಅಕ್ಷಯಾಂಬರ
ನೇಕಾರರ ಯಾವ ಮನೆಯಲ್ಲೂ
ಅಕ್ಷಯಪಾತ್ರೆಗಳಿಲ್ಲ
ನೇಯುವ ಮಗ್ಗ ಸುಮ್ಮನಾದರೆ
ನೇಕಾರನಿಗೆ ಅನ್ನವಿಲ್ಲ

ನಾರನ್ನು ಹೆಕ್ಕಿತಂದ ಹಕ್ಕಿಯಂತೆ
ಸಿಕ್ಕು ಸಿಕ್ಕುಗಳನ್ನು ಬಿಡಿಸಿ
ತೊಡಲು ಉಡಲು
ದೇಹವೆಂಬ ಗೂಡಿಗೆ ಬಟ್ಟೆ ನೇದ

ಸುಳ್ಳುಗಳನ್ನು ನೇಯದ
ಮಗ್ಗ ಸತ್ಯ ನುಡಿಯುತ್ತದೆ
ನೇಯುವಾಗ ನೂಲು ಬಿಟ್ಟರೆ ಬಟ್ಟೆ
ಅಂದ ಬಿಟ್ಟು ಬಂಧ ಶೂನ್ಯ
ನೇಕಾರ ಸತ್ಯವನೇ ನೇದ
ಉಟ್ಟವರು ತೊಟ್ಟವರು
ಮೆರೆದು ಮಿಂಚಿದವರು
ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ

About The Author

ಬೇಲೂರು ರಘುನಂದನ್

ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ, ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ.

1 Comment

  1. Bhoomika

    ?????‍♀️

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ