Advertisement
ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ದಿನದ ಕವಿತೆ

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ದಿನದ ಕವಿತೆ

ಅಪ್ಪನ ಮೊಂಡ ಕುಡ

ಧಕ್ ಧಕ್ ಧಕ್
ಎತ್ತಿ ಕುಣಿಸುತ್ತದೆ ಅಪ್ಪನನ್ನು ಈ ಕುಡ
ಒಮ್ಮೊಮ್ಮೆ ಕೆಡವುತ್ತದೆ ಕೂಡ
ಅಪ್ಪನ ಕುಂಟೆಯ ಕುಡವೀಗ
ಮೊಂಡವಾಗಿದೆ
ಮಾತು ಕೇಳುವುದಿಲ್ಲ

ಹಣಿಸಬೇಕಿದೆ
ಆದರೆ
ಮೊನ್ನೆ ಬಿದ್ದ ಮಳೆಗೆ
ಕಮ್ಮಾರನ ಜೋಪಡಿಯಲ್ಲೀಗ
ಇದ್ದಿಲು ಹಸಿ-ಹಸಿ
ಉರುವಲಿಲ್ಲ!

ಫಸಲನು ಕಬಳಿಸಿಬಿಡುವಷ್ಟು
ಹೊಲದಲ್ಲೀಗ ಜೇಕು ಬೆಳೆದಿದೆ
ಕುಡ ಮೊಂಡವಾಗಿದೆ
ಸ್ವಲ್ಪ ದೂರ ಹರಗುವಷ್ಟರಲ್ಲಿ
ಮತ್ತೆ
ಧಕ್ ಧಕ್ ಧಕ್

ಎತ್ತುಗಳು ಕಾಲ ಕಸುವ ಹಾಕಿ
ಮೀಟಿದರೂ ಒಮ್ಮೊಮ್ಮೆ
ಎದ್ದು ಬರುವುದಿಲ್ಲ ಈ ಕುಡ
‘ಹೆಳವನ ಮಾಡೆನ್ನನು’ ಎಂದನಲ್ಲ ಬಸವ
ಅಷ್ಟು ಮೊಂಡೇನು?
ಕುಂಟೆಗುಂಟ ಅಂಗಾತ ಬಿದ್ದ ಕುಡವ
ಹೋಳು ಮಗ್ಗಲಾಗಿಸಿದ ಎಡಗೈಯ ಆಸರೆಗೆ
ಮೇಲೇಳುತ್ತದೆ ಕುಡ
ಬಲಗೈಯ ಕುರ್ಚಿಗೆ
ಕುಡವ ಸರ್ರನೆಳೆಯುವಾಗ
ಗುಪ್ಪೆಯಾಗಿ ನೆಲಕ್ಕೆ ಬೀಳುತ್ತದೆ
ಗರಿಕೆ, ಜೇಕು, ಕಡ್ಡಿ, ಕಸ ಇತ್ಯಾದಿ

ಬೆವರ ಹನಿಗಳು ತೊಟ್ಟಿಕ್ಕುತ್ತವೆ ನೆಲಕ್ಕೆ
ಉಸ್ಸೆನ್ನುತ್ತಾನೆ ಅಪ್ಪ ಕಳೆಯ ಕಂಡು
ಮತ್ತೆ ಕುಂಟೆಯ ಅಂಗಾತ ಕೆಡುವುತ್ತಾನೆ
ನಿಟ್ಟುಸಿರ ಬಿಟ್ಟು
ಮೊಂಡ ಕುಡವ ಹಳಿಯುತ್ತಾ..

ಅಲ್ಲಿ ದೂರದ ಹೊಲದಲ್ಲಿನ ಸಂಕಷ್ಟ
ಊರಿಂದ ದೂರವಿದ್ದು ಓದುವ
ನನಗೂ ಈಗೀಗ ಸ್ಪಷ್ಟ ;
ವಿಸ್ಮೃತಿಗೊಳಗಾಗದ ಕುಡಗಳು
ಯಾವ ಕುಲುಮೆಯಿಂದ
ಬಂದಿದ್ದವು ಎಂದು?
ನೆನಪಾಗುತ್ತದೆ ಎಲ್ಲ
ಶತಮಾನದಿಂದ ಮೊಂಡಾದ ಕುಡಗಳ
ಸಂತತಿ ಇಲ್ಲಿ ಬಹಳಿವೆ ಎಂದು

ಕೇಳಿದರಂತೆ ನೆನ್ನೆ
ಅಪ್ಪ ಕುಡ ಹಣಿಸಲೆಂದು ಹೋದಾಗ
ನಿನ್ನದು ಜಟ್ಕಾನಾ ಅಥವಾ ಹಲಾಲ್?
ಅದಕ್ಕೆ ಅಪ್ಪ…
‘ನನ್ನದು ಮೊಂಡ ಕುಡ’
ಎಂದನಂತೆ!

ಈ ಎಲ್ಲವನೂ ಬಡಿಬಡಿದು
ಹಣಿಯಬೇಕು
ಹತ್ತಿದ ಜಂಗು ತಿಕ್ಕಬೇಕು
ಕಸ ಕಿತ್ತು ಹೊಲ ಸ್ವಚ್ಛ ಮಾಡಬೇಕು
ಎಂದುಕೊಳ್ಳುವಾಗಲೆಲ್ಲ
ನೆನಪಾಗುತ್ತಾನೆ
ಸಂಗನ ಬಸವ

About The Author

ರಟ್ಟೀಹಳ್ಳಿ ರಾಘವಾಂಕುರ

ರಟ್ಟೀಹಳ್ಳಿ ರಾಘವಾಂಕುರ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಗ್ರಾಮದವರು. ಸಧ್ಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ  ಅಧ್ಯಯನ. ಪ್ಲಾಟ್ ಫಾರಂ ನಂ 3(ಕಿರುಕಾದಂಬರಿ) ಹಾಗೂ ಹಿಂಗಂದ್ರ ಹ್ಯಾಂಗ(ಕವನ ಸಂಕಲನ) ಪ್ರಕಟಿತ ಕೃತಿಗಳು. ಫೋಟೋಗ್ರಫಿ, ಸಾಹಿತ್ಯ, ಸಿನಿಮಾ, ಮುಖಪುಟ ವಿನ್ಯಾಸ ಆಸಕ್ತಿ ಕ್ಷೇತ್ರಗಳು.

4 Comments

  1. ಸೈಯದ್ ಬಿ ಕಬ್ಬಿಗೆರೆ

    *ನನ್ನ ಅನಿಸಿಕೆ.*

    ಕೆಲವು ಕಡೆ ನವ್ಯ ಕವಿತೆಯನ್ನೆ ಓದಿದಂತಾಯಿತು. ಇಲ್ಲಿ ಅಪ್ಪ ಮತ್ತು ಕುಡ ಪ್ರತಿಮೆಗಳಾಗಿ ಕೆಲಸ ಮಾಡುತ್ತಿವೆ. ಪರಂಪರೆಯಿಂದ ಬಂದ ಬದುಕು, ಅದರ ಮೇಲೆ ಸಮಕಾಲೀನ ಪಲ್ಲಟ, ಸಂಘರ್ಷಗಳ ತಿಕ್ಕಾಟಗಳಿವೆ. “ಶತಮಾನದಿಂದ ಮೊಂಡಾದ ಕುಡಗಳ
    ಸಂತತಿ ಇಲ್ಲಿ ಬಹಳಿವೆ” ಎನ್ನುವಲ್ಲಿ ಮೊಂಡುತನ ಮನಸ್ಸುಗಳ ವಿಡಂಬನೆ ಚೆನ್ನಾಗಿದೆ.
    “ಈ ಎಲ್ಲವನೂ ಬಡಿಬಡಿದು
    ಹಣಿಯಬೇಕು
    ಹತ್ತಿದ ಜಂಗು ತಿಕ್ಕಬೇಕು
    ಕಸ ಕಿತ್ತು ಹೊಲ ಸ್ವಚ್ಛ ಮಾಡಬೇಕು
    ಎಂದುಕೊಳ್ಳುವಾಗಲೆಲ್ಲ
    ನೆನಪಾಗುತ್ತಾನೆ
    ಸಂಗನ ಬಸವ” ಎನ್ನುವಲ್ಲಿ ಕವಿತೆಯ ವರ್ತಮಾನ ಸಮಾಜ ಸ್ಪಂದನ ಉದ್ದೇಶ ಯಶಸ್ಸು ಕಂಡಿದೆ. ಸಂಗನ ಬಸವ ನೆನಪಾಗುವಲ್ಲಿ ಇಂದು ಆತನ ಚಿಂತನೆಗಳ ಮರುಹುಟ್ಟಿನ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.
    ಒಟ್ಟಿನಲ್ಲಿ ಕವಿ, ಕವಿತೆ ಜನಸ್ಪಂದನ ಆಗಿರಬೇಕೆಂಬ ಉದ್ದೇಶವನ್ನು ಕವಿತೆ ಸಾಧಿಸಿದೆ, ಸಾರ್ಥಕ ಮಾಡಿದೆಂಬುದು ನನ್ನ ಅನಿಸಿಕೆ.

    Reply
  2. ಕಲ್ಲಪ್ಪ ಎಂ ಬಿ

    ಕವಿತೆಯು ರೈತರ ಬದುಕಿನ. ಬವಣೆಗಳು ಓಮ್ಮೆಗೆನೆ ನೆನಪಿಸುತ್ತದೆ . ರೈತರ ಮಕ್ಕಳು ವಿದ್ಯಾವಂತರು ಆದಂತೆ ರೈತರ ಪರ ಆಲೋಚನೆಗಳು ಪ್ರಭುತ್ವಕೇಂದ್ರಿತ ಸಮಾಜವನ್ನು ಅನುಮಾನಿಸಿ ವಿಮರ್ಶಿಸುವ ಮಟ್ಟಕ್ಕೆ ಬಂದು ನಿಂತಿದೆ. ಕೃಷಿಯ ಪಾರಂಪರಿಕ ಪದಗಳ ಜೊತೆ ಜೊತೆಗೆ ಕುಲುಮೆಯ ಕಸುಬು ಬೇರೆತುಕೊಂಡು, ಕೋಮು ಸೌಹಾರ್ದವನ್ನೂ ಹಾಳು ಮಾಡುವ ಜನರನ್ನು ಹಣಿಯಬೇಕು ಎನ್ನುವ ಕವಿತೆಯ ಆಶಯ ಅದ್ಭುತವಾಗಿದೆ.
    ಒಟ್ಟಾರೆಯಾಗಿ ಅಪ್ಪನ ಮೊಂಡ ಕುಡ ಬಸವನ ಆಶಯಗಳು ಸಮಕಾಲೀನ ಸಮಾಜಕ್ಕೆ ಬೇಕಿದೆ ಎನ್ನುವುದನ್ನು ನೆನಪಿಸುತ್ತದೆ. ಈ ಕವಿತೆಗೆ ಕಾವ್ಯದ ಗ್ಯೆಯತೆಯ ಜೊತೆಗೆ ಲಯ ಮತ್ತು ಭಾಷೆಯ ಕಸುವು ಚೆನ್ನಾಗಿ ಮೂಡಿದೆ. – ಕಲ್ಲಪ್ಪ ಎಂ ಬಿ. ಮೇಲನಹಳ್ಳಿ.

    Reply
  3. Etimasaheb Yaragal

    ಮೊಂಡ ಕುಡ….
    ಆಪ್ತ ಕವಿತೆ.

    Reply
  4. Name *ಪ್ರಶಾಂತ್ ದಿಡುಪೆ

    ಉತ್ತಮ ಕವಿತೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ