Advertisement
ಅಭಿಷೇಕ್‌ ವೈ.ಎಸ್.‌ ಬರೆದ ಈ ದಿನದ ಕವಿತೆ

ಅಭಿಷೇಕ್‌ ವೈ.ಎಸ್.‌ ಬರೆದ ಈ ದಿನದ ಕವಿತೆ

ಬದುಕೆಂಬ ಬಯಲಿನಲ್ಲಿ

ಎದೆಯ ತುಂಬಾ
ಹುಚ್ಚೆದ್ದು ಹರಿಯುವ
ಕೆಂಡದ ನದಿ
ನನ್ನೊಳಗಿನ ಎಲ್ಲ
ಪ್ರಶ್ನೆಗಳನ್ನೂ
ಸುಡುತ್ತಿರುವಾಗ
ಉತ್ತರಗಳನ್ನು ಹುಡುಕುವುದರಲ್ಲಿ
ಯಾವ ಸುಖವಿದೆ?

ತಪ್ಪುಗಳನ್ನು ಬರೆಯುವಾಗ
ಒರಟು ಕೈಬೆರಳಿನ
ಮೇಲೆ ನಿನ್ನ ನುಣುಪಿನ
ಕೈಬೆರಳುಗಳೂ ಸಹಕರಿಸಿದ್ದವು;
ಬೆಸೆದ ಮೇಲೂ ಬೆಸೆದುಕೊಳ್ಳದ
ಸಂಬಂಧಗಳನ್ನು ತಪ್ಪು-ಒಪ್ಪಿನ
ಕಟಕಟೆಯಲ್ಲಿ ನಿಲ್ಲಿಸಿಬಿಟ್ಟೆ;
ಜೊತೆಯಿದ್ದರೂ
ಒಂಟಿಯಾಗಿರುವುದ ಕಲಿಸಿಕೊಟ್ಟೆ

ರಾತ್ರಿಗಳು
ನೆನಪಿನ ವೀರ್ಯದೊಳಗೆ
ಮಿಂದೆದ್ದು ಹಣ್ಣಾದರೂ
ಮತ್ತಷ್ಟು ಬೇಕೆನಿಸುತ್ತದೆ;
ಇನ್ನೇನೋ ಕೊರತೆ
ಕಾಡುತ್ತದೆ;
ಮತ್ತೊಮ್ಮೆ ನೀಗುತ್ತದೆ;
ಈ ಶಹರದೊಳಗಿನ
ಅವಶೇಷಗಳೊಳಗೆ
ಜೀವಂತವಿರುವ ನನ್ನಂಥ
ಎಷ್ಟೋ ತಪ್ತ ಜೀವಗಳ
ನಿಟ್ಟುಸಿರ ಲೆಕ್ಕ ಇಡುವವರಾರು?
ಸಾವಿಲ್ಲದ ಮನೆಯಿಂದ
ಸಾಸಿವೆ ತರಲಾಗದಂತೆಯೇ
ಪ್ರೀತಿಸದವನ ಮನೆಯಿಂದ
ಒಂದುಕಾಳು
ಸಾಸಿವೆಯನ್ನೂ ತರಲಾಗದು

ಕಣ್ಣೊಳಗಿನ ನಿದ್ರೆ ಸುಟ್ಟು
ದಿನಗಳು ಕಳೆದವು
ಕನವರಿಕೆ, ಬಿಕ್ಕಳಿಕೆಗಳು
ಜೊತೆಯಾದವು;
ಹಲ್ಲಿಗಳ ಮಿಥುನ
ಗೋಡೆಯನ್ನು ಸಿಂಗರಿಸುವಾಗ
ಕತ್ತಳಾಳದ ಕರಾಳ ರತಿಸುಖವನ್ನು
ಹೇಗೆ ಅನುಭವಿಸಲಿ??

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ