Advertisement
ಅಲಂಕಾರ: ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಕವಿತೆ

ಅಲಂಕಾರ: ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಕವಿತೆ

ಅಲಂಕಾರ

ದಿನವು
ಸೂರ್ಯಕಾಂತಿಯನ್ನು
ಮುಡಿಗೇರಿಸಿಕೊಂಡಾಗ
ಗಿಡ ಮರಗಳ ತಲೆ ಬಳಸಿ
ಹೆಗಲೇರಿ ಕುಳಿತ
ಬತ್ತಲೆ ಚಳ್ಳೆಪಿಳ್ಳೆ ಮೊಗ್ಗುಗಳು ಕಣ್ಣರಳಿಸಿ ‘ಆಹಾ’! ಎಂದು ಉದ್ಗರಿಸುತ್ತವೆ.

ಹದಿಹರೆಯದ ಮೊಗ್ಗೊಂದು ಬಣ್ಣದ
ಕುಪ್ಪಸ ತೊಟ್ಟು ನಿಂತ
ಚಂದಕೆ ಅದರ ಪ್ರತಿಬಿಂಬವೇ
ಮೈಮರೆಯುತ್ತದೆ.
ನೀಳ ದಂಟುಕೊರಳ ಮೇಲಿನ
ಅದರ ಚೂಪು ಮೊಗವನ್ನು
ಮುದ್ದಿಸಲೆಂದೇ ಕಿರಣಗಳ ಗಡ್ಡದ ಬೆಳಕು ಮುಖವು ಬಾಗಿದಾಗ
ನಾಚುತ್ತಲೇ ಅದು ಮೈತೆರೆಯುತ್ತದೆ.

ಮಿಂದು ಚಂಡಿಪುಂಡಿಯಾದ
ಹಂಸಪಕ್ಷಿಗಳು
ಒದ್ದೆ ಒಜ್ಜೆ
ಮೋಡ ಪುಕ್ಕಗಳ ಪಕ್ಕೆಗಳನ್ನು
ಕತ್ತು ಕೊಂಕಿಸಿ ಕುಕ್ಕುತ್ತ
ಕೋಮಲ ಮೈಯನ್ನು ಜಾಡಿಸಿ ಫಟ್ ಫಟ್ಟೆಂದು ಕೊಡವಿದಾಗ
ಮಳೆ ಸುರಿಯುತ್ತದೆ.

ಸೂರ್ಯನು ತನ್ನ ಮೈಯ ಬೆಂಕಿ ಕಾಪಾಡಲು ಬೆಳಕು
ಕೊಡೆ ಬಿಡಿಸುತ್ತಾನೆ,
ಖಾಂಡವದಹನ ಕಾಲದಲ್ಲಿ
ಅರ್ಜುನ ಅಗ್ನಿಗೆ ಬಿಲ್ಗೊಡೆ ಬಿಡಿಸಿದ ನೆನಪಲ್ಲಿ.

ಮಳೆಬಿಲ್ಲು ಖಮಾಜ್ ರಾಗದಲ್ಲಿ
ಹೋಲಿ ಹಾಡನ್ನು ಹಾಡುತ್ತ
ಮೈಮುರಿದು ಬಿದ್ದು
ಎರಡು ಹೋಳುಗಳಾಗಿ
ನಲ್ಲ – ನಲ್ಲೆಯರಾಗುತ್ತವೆ.
ಹೆಣ್ಣು, ಗಂಡಿನ
ತೋಳಲ್ಲಿ ಕಾಮನ ಬಿಲ್ಲಾಗಿ
ಚುಂಬನವೇ ಹೂಬಾಣವಾಗಿ
ಹೃದಯಗಳು ಹೂ ಮಾಲೆಯಾಗುತ್ತವೆ.

ಮೈಗೆ ಮೈ ಉಯ್ಯಾಲೆಯಾಗಿ
ಬೆಂಕಿತುಟಿಗಳ ನೀಳ ಉಸಿರು
ಹೊಲಗಳಲ್ಲಿ ಪೈರುಗಳಾಗಿ
ತಲೆದೂಗುತ್ತವೆ.
ಎರಡು ಹೋಳುಗಳು ಒಂದಾಗಿ
ಚಂದ್ರನಾಗುತ್ತವೆ.

ಗುಲಾಬಿ ಪಕಳೆಗಳ
ಒಂದೊಂದು ಹನಿ
ಕಣ್ಣಲ್ಲೂ ಪ್ರೀತಿಯ ಬಣ್ಣ ಹೊಳೆಯುತ್ತಲೇ
ಅಗಲಿಕೆಯ ಬೇಸರ ಜಾರಿ
ಉದುರುತ್ತವೆ.

About The Author

ಕಾತ್ಯಾಯಿನಿ ಕುಂಜಿಬೆಟ್ಟು

ಕಾತ್ಯಾಯಿನಿ ಕುಂಜಿಬೆಟ್ಟು ಉಡುಪಿಯ ಕಾಪು ಬಳಿಯ ಕರಂದಾಡಿಯವರು. ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತ ತುಳು ಎರಡೂ ಭಾಷೆಯ ಲೇಖಕಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೨೬ ಕೃತಿಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ