Advertisement
ಕವಿತಾ ಅಡೂರು ಬರೆದ ಈ ದಿನದ ಕವಿತೆ

ಕವಿತಾ ಅಡೂರು ಬರೆದ ಈ ದಿನದ ಕವಿತೆ

ಕಿವಿಮಾತು…

ಉತ್ತುಂಗ ಶಿಖರವನು
ಮೆಟ್ಟಿ ನಿಲ್ಲುವ ಛಲದಿ
ಮುನ್ನುಗ್ಗಿ ನಡೆಯುತಿಹ
ಓ ಮುದ್ದು ಬಾಲೆ…
ಒಂದರೆಗಳಿಗೆ ನಿಲ್ಲು!
ಕೇಳು ನನ್ನೆದೆಯ ಸೊಲ್ಲು…

ನಿನ್ನಾಯ್ಕೆಯ ಹಾದಿಯಲ್ಲಿ
ಅಸ್ಥಿ ಪಂಜರಗಳಿವೆ,
ಬಿಕ್ಕಳಿಸುವ ಶವಗಳಿವೆ,
ಸುಟ್ಟು ಕರಕಲಾದ…
ಕನಸಿನ ಗೋಪುರಗಳಿವೆ,

ನಿನ್ನ ಸುಕೋಮಲ ಪಾದಕ್ಕೆ
ಮೆತ್ತಿಕೊಂಡಿದೆ ನೋಡು
ಕಪ್ಪು ನೆತ್ತರು!
ಜಿಗುಟುವ ಕಣ್ಣೀರು!

ಹೀಗೆ ನಿನ್ನ ಹಾಗೆಯೇ
ಅವಸರದಿ ಹೊರಟವರು
ಮಣ್ಣಿನಾಳಕ್ಕುರುಳಿದರು
ಉರುಳು ಕೆಡವಿತೆ ಅವರ?
ಗಟ್ಟಿ ಧ್ವನಿಯ ಕೂಗೂ
ಹೂತು ಹೋಯಿತು
ಒರಟು ದನಿಗಳ ಅಬ್ಬರಕ್ಕೆ
ಮಾತುಗಳ ಮರೆತರೆ?

ಆದರೆ…
ದಾರಿಗುಂಟ ಅವರು ನೆಟ್ಟ
ದೀವಟಿಗೆಗಳು
ಇನ್ನೂ ಉರಿಯುತ್ತಿವೆ
ದಾವಾಗ್ನಿಯ ಹಾಗೆ
ಮಗಳೇ…
ನಿನ್ನ ಪುಟ್ಟ ಕಂಗಳಲ್ಲಿರುವ
ಆವೇಶದ ಸೊಡರನ್ನು ತಂಪಾಗಿಸು
ಪ್ರೀತಿ ಪ್ರಣತಿಯನು ಬೆಳಗು
ನೆತ್ತರಿಳಿಯುವ ದಾರಿಯಿಂದತ್ತ ಸರಿ
ಯಾರನ್ನೋ ಹಿಂದಿಕ್ಕುವ
ಭುಜಕೆ ಭುಜ ಕೊಟ್ಟು
ಸಮಾನವೆನ್ನುವ ಛಲವೇಕೆ?
ಮಾತಿಗಿರದ ಮೌಲ್ಯ
ಮೌನ ನಡೆಗಿದೆ!
ಇಲ್ಲಿ ನೋಡು, ಅಳಿಯದುಳಿದ
ಅಕ್ಕನಿಟ್ಟ ಆಳ ಹೆಜ್ಜೆ
ನಿನಗದುವೆ ಮೆಟ್ಟಿಲು.
ಬೋರ್ಗರೆಯುವ ಅಲೆಯ ಮೇಲೆ
ಸಾಗುವಂತೆ ನಾವೆಯು
ಸಾವಧಾನದಿಂದ ನಡೆ
ನಿನಗೆ ನೀನೆ ಎಂದಿಗೂ.

ಕವಿತಾ ಅಡೂರು ಪುತ್ತೂರಿನವರು
ಸುದಾನ ವಸತಿ ಶಾಲೆಯಲ್ಲಿ ಶಿಕ್ಷಕಿ
ನೇತ್ರದಂದದೆ ನೋಟ(ಕಗ್ಗದ ಬೆಳಕಿನಲ್ಲಿ ಕಂಡ ಕಾಣ್ಕೆ), ಪದಕುಸಿಯೆ ನೆಲವಿಹುದು(ವಿಜಯವಾಣಿ ಅಂಕಣ ಬರಹಗಳ ಸಂಗ್ರಹ) ಪ್ರಕಟಿತ ಕೃತಿಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

4 Comments

  1. ಶ್ರೀವಲ್ಲಿ

    ಸೊಗಸಾದ ಕವನ

    Reply
  2. Srinivasa Kunjathaya B

    ಚೆನ್ನಾಗಿದೆ…

    Reply
  3. ಮಧುರಕಾನನ ಗಣಪತಿ ಭಟ್ಟ

    ಚಂದವಾಗಿದೆ,,ಅರ್ಥವತಾದ ಕವನ

    Reply
  4. ನಾಗರಾಜ್ ಹರಪನಹಳ್ಳಿ

    ವಚನ ಸಾಹಿತ್ಯದ ಅಕ್ಕ ಮಹಾದೇವಿ ಕಾಡದ ಕನ್ನಡದ ಕವಯಿತ್ರಿಯರು ವಿರಳ…
    ಅಕ್ಕನ ಬಿಡುಗಡೆ, ಎಚ್ಚರಿಕೆ ಕನ್ನಡ ಮಹಿಳಾ ಕಾವ್ಯವನ್ನು ತಟ್ಟಿಹೋಗದಿರದು.

    ಕವಿತೆ ಚೆಂದ ಅರಳಿದೆ

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ