Advertisement
ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಕವಿತೆಗಳು

ಕಿರಸೂರ ಗಿರಿಯಪ್ಪ ಬರೆದ ಎರಡು ಹೊಸ ಕವಿತೆಗಳು

ಅಲೆಮಾರಿ ಚುಕ್ಕಿಗಳು

ತಲೆಗೆ ಸುತ್ತಿದ ನಿರಿಗೆ ಸರಿಪಡಿಸುತ್ತಾ
ಅಂಗಳದ ತುದಿಯಲಿ
ಹೊರಳಾಡುವ
ಎಳೆಯ ಪಾದದ ತುಟಿಗೆ ಮುತ್ತಿಡುತ್ತಾ
ನೆಲಗಂಬಕ್ಕೆ ಆತುಕೊಂಡಳು
ನಿಟ್ಟುಸಿರ ಕಾವಿನಲಿ

ಮೋಡದ ಮರೆಯಲಿ
ಚಂದ್ರ ನಿದ್ಯಾಗ ಹೊಕ್ಹಂಗ
ಚುಕ್ಕಿಗಳು ಅಲೆಮಾರಿಯಾಗಿ ಕಾಣಿಸಿದವು

ಕಾಲ ಬೆರಳಡಿಯಲಿ
ಮುಳ್ಳಿನ ಗಾಯ ಹೊತ್ತ
ಹೂವಿನ ದನಿಗಳು
ಸಾಲು ನೆರಳಿನ ಇರುವೆಯ ಹೆಜ್ಜೆಗಳಾಗಿವೆ
ಅವಳ ಮೈಮಿಡಿವಳಗ
ನಿರಂತರ ಉರಿವ ಚಿಮಣಿ ಬತ್ತಿ
ಹಾಸಿಗೆಯ ಬೆಚ್ಚನೆಯ ಕಣ್ಣುಗಳಲಿ
ತೇವಕಾಯುವ ನೇಯ್ಗೆ

ಕತ್ತಲ ಕೂಟದಲಿ ಕೂದಲ ಹೆರಳೊಳಗೆ
ಬೀಡುಬಿಟ್ಟ ಚುಕ್ಕಿಗಳ ವಿಹಾರ
ಗುಪ್ತ ನಿದ್ರ್ಯಾಗ ಸಿಕ್ಹಂಗ
ಅವಳ ರೆಕ್ಕೆಗಳಲಿ ಬೆವರಿನ ದೂಪವಾಗಿ ಗೋಚರ

ಪಾದಗಳಿಗೆ ನೆಲದ
ನೆರಳಾಗಿ ಮೂಡಿದ ಕಂದೀಲು
ನೆನಪುಗಳ ನೆಲೆಯಾಗಿ
ಮೂಡುವ ಹೊತ್ನ್ಯಾಗ
ಹೊಗೆ ಜಂತಿಯ ಕಣ್ಣಾಗ ನವಿಲುಗರಿಯಾಗಿ ಹರಿಡಿದ್ಹಂಗ

ಹೀಗೆ!
ಮಿನುಕು ನೋಟದ ಬಾವಲಿ ಕಣ್ಣುಗಳ ಹಾಗೆ
ಇರುಳ ಮೈ ಸುತ್ತುವ ಅವಳ ಯಾನದಲಿ
ಕರುಳ ಬಳ್ಳಿಯ ಬೇರುಬಿಟ್ಟ
ಚಿಮಣಿಯ ಬತ್ತಿಯ ನಾಡಿ ಜೀವ ಐತಿ

ಹಸಿವಿಗೆ ಗೋರಿಯಾದ ಪ್ರಸಾದ

ಥರಗುಟ್ಟುವ ಚಳಿಯ ಹೊಡೆತಕ್ಕೆ
ಬಿರುಕ ನೆಲದಂತಾದ ತುಟಿಗಳ ಹೊತ್ತು
ಗಾಳಿ ಗೋಪುರಗಳ ದಾಟಿ
ಬೆಂಕಿಯ ನಾಲಿಗೆಯಲಿ ಬೆಚ್ಚನೆಯ ಕಾವಿಗೆ
ದಾಪುಗಾಲಿಟ್ಟಾಗಲೇ ಘಂಟೆಯ ನಾದ ಢಣ! ಢಣ!

ಅವುಡುಗಚ್ಚಿ ಓಟಕಿತ್ತಿದ ಓಣಿಯ ಹೆಂಗಸರೆಲ್ಲಾ
ನೆತ್ತರದ ಪಾದಗಳಲಿ
ಸೀಳುನಾಯಿಗಳ ತೆವಲುಗಳ ನುಂಗಿ
ದ್ವಾರಬಾಗಿಲದ ಹೊಸ್ತಿಲಲಿ
ಸಾಲುಗಟ್ಟಿವೆ ಪ್ರಸಾದದ ಸರದಿಯ ನೋಟದತ್ತ

ಕರುಳು ಕುಡಿಗಳ ಬಗಲಲ್ಲಿ ತಿವಿಯುತ
ಬೀದಿ ಬದಿಯಲ್ಲಿ ಕಾಳಗ ಹೂಡಿದಂತೆ
ಅನ್ನದಗಳುಗಳ ನೆಕ್ಕಲು ಹಂದಿಗಳ ತಿಕ್ಕಾಟ
ಎಂಜಲೆಲೆಯ ಮ್ಯಾಲೆ ಕಣ್ಣಿಡುವ
ಬಳಗದ ಬರೆ ತಣಿಸಲು
ಕಾತುರದ ನಿರ್ಧಾರದ ಹೊಸ್ತಿಲಲಿ ಕಾಗೆಗಳ ಕೂಗಿನಾಟ

ನಿಬ್ಬೆರಗಣ್ಣಲಿ ಕಲ್ಲುದೇವರ ಮುಂದೆ
ಮುಂಗೈಚಾಚಿದ ನಂಬಿಕೆಗಳು
ಹಸಿವಿನ ಕುಣಿಕೆಗೆ ಸಿಲುಕಿದ್ದು ಸೋಜಿಗ!

ಅಳುವ ಮಗುವಿನ ನೆತ್ತಿಗೆ
ಅಂಗಾರದ ತಿಲಕವಿಟ್ಟು ಪ್ರಸಾದ ಚಪ್ಪರಿಸುವ
ಗಂಟಲುಗಳು ಮೂಕವೇದನೆಯ ರೋಧನ
ಹಸಿವಿಗೆ ಸಮಾಧಿಯಾದ ಪ್ರಸಾದ
ನಿಟ್ಟುಸಿರುಗಳ ನೆಲೆಗಳಿಗೆ
ವಿಷದ ಬಟ್ಟಲು ಉಣಬಡಿಸಿದ್ದು ಖೇದಕರ

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.

 

(ಕಲೆ: ವಿನ್ಸೆಂಟ್ ವ್ಯಾನ್ ಗಾಗ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ