Advertisement
ಡಾ. ಅಜಿತ್ ಹರೀಶಿ ಬರೆದ ಈ ದಿನದ ಕವಿತೆ

ಡಾ. ಅಜಿತ್ ಹರೀಶಿ ಬರೆದ ಈ ದಿನದ ಕವಿತೆ

ಮುತ್ತುಗದೆಲೆಯ ಮೇಲಿನ ಬೆಲ್ಲ

ಇತ್ತಿತ್ತಲಾಗೆ ವೃಷ್ಟಿ ಎಂದರೆ ಎದೆಯೊಳಗೆ
ಭತ್ತ ಕುಟ್ಟಿದ ಹಾಗೆ
ಬಂತೋ ಬರೋಬ್ಬರಿ
ಇಲ್ವೋ ಕಣ್ಣೀರ ಬೆವರ ಹನಿ ಖಾತರಿ

ಸುರಿದು ಸುರಿಯದೆ ಹರಿದು ಹರಿಯದೆ
ಅದೆಷ್ಟು ಮಂದಿಯ
ತೇಲಿಸಿತೋ ಮುಳುಗಿಸಿತೋ ಈ ಮಳೆ
ಬಯಲು ತೊಯ್ಯಲಿ ಕಾಲುವೆ ಉಕ್ಕಲಿ
ನೆರೆ ಬಂದು ಹೋಗಲಿ
ಕೆರೆ ಕೋಡಿ ಬೀಳಲಿ ಬೆಳೆ ಸಮೃದ್ಧವಾಗಲಿ
ಜಲಾಶಯಗಳಲ್ಲಿ ನೀರು ಭರ್ತಿಯಾಗಲಿ

ನಿಲ್ಲಲಿ ಎಂದರೂ ನಿಲ್ಲದೀ ಮಳೆ
ಹೊಯ್ಯುತಿದೆ ನದಿ ಹಾದಿ ಒಂದಾಗುತಿದೆ
ಹೊಡಸಲ ಕಾವು ಕಂಬಳಿಗೆ
ಕಾದ ಮನದ ಮೇಲೆ ಸೋರುತಿಹ ಮನೆಯ
ಮಾಡಿನಿಂದ ಬಿದ್ದ ಒಂದು ಹನಿ ‘ಚುರ್’
ಚೂರು ಬಿರುಕಿನ ಮಣ್ಣಿನ ಗೋಡೆ
ಬಾಯಿ ಬಿಟ್ಟಿದೆ ಹೆಚ್ಚು ಹಸಿದು
ಪೈರು ಬರಲಿನ್ನೂ ಇದು ಮುಂಗಾರು

ಹೊನ್ನ ಹೊಗೆಯಾಡಲು ಕಾರಣವಾದ
ಹೊಲವೀಗ ಅಸ್ಥಿರ
ಕಳೆದಿವೆ ಕೃತ್ತಿಕಾ ರೋಹಿಣಿ ಮೃಗಶಿರ
ಕಣಜ ಕಾಣೆಯಾದ ಜಾಗದಲ್ಲಿ ಪಾಸ್ ಬುಕ್ಕು
ನಗದು ರಹಿತ ಚಲಾವಣೆ
ಮುಂಗಡ ಸುಸ್ತಿ ಸಾಲದ ಸುಸ್ತು

ಮಳೆಯ ಕಾರಿಡಾರಿನಲ್ಲಿ ಮನುಷ್ಯ
ಕಾಲಿಟ್ಟು ಗಂಧರ್ವ ಲೋಕ ಸೃಷ್ಟಿ
ಅತಿವೃಷ್ಟಿಗೆ ಕೃತಕ ಜಗತ್ತು ಮಣ್ಣುಪಾಲು
ಸವಾಲಿನಲ್ಲಿ ಪ್ರಕೃತಿಯ ಕೈಮೇಲು

ಕಾಡಿ ಕಾಡಿ ಪಡೆದ ಕಾಡಿನ ಭೂಮಿ
ದೈತ್ಯ ಯಂತ್ರಗಳೆದುರು ದೀನ
ಬೆಂಗಾಡಾದ ಮಲೆನಾಡಿಗೀಗ
ಮಳೆ ಬೇಡದ ಅತಿಥಿಯಲ್ಲ

ಒಂದು ಗಿಡ ನೆಡದ ಸ್ವಾರ್ಥ
ನಿತ್ಯ ಹರಿದ್ವರ್ಣ ವನವು ಸುಡುಗಾಡು
ಮಸಣದಲ್ಲಿ ಅರಳದ ಹೂವು
ಬದುಕ ತುಂಬಾ ಬರೀ ಬೇವು

About The Author

ಡಾ. ಅಜಿತ್ ಹರೀಶಿ

ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು; ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಕೃತಿಕರ್ಷ (ವಿಮರ್ಶಾ ಕೃತಿ) ಕಥಾಭರಣ (ಸಂಪಾದಿತ ಕಥಾಸಂಕಲನ) ಪ್ರಕಟಗೊಂಡಿವೆ. ಇವರ ಕನಸಿನ ದನಿ ಕವನ ಸಂಕಲನಕ್ಕೆ ಕಸಾಪ ದತ್ತಿ ಪ್ರಶಸ್ತಿ ದೊರೆತಿದೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ