Advertisement
ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

ಪ್ರೀತಿಗೆ ಹಲವು ಭಾಷೆ

ಒಲವಿನ ಬೆರಗ ಬೇನೆಯ
ಮೌನ ಮುರಿಯಲೆಂದೇ
ಮಲ್ಲಿಗೆ ಮಾತ ಹರಡಿದವಳ
ಕೆನ್ನೆಗಡರಿದ ಕೆಂಪ
ದೃಷ್ಟಿಸುತ್ತ ನಕ್ಕ ಅವನಿಗೆ
ಕಾಣದಿರಲೆಂದೇ ಬಚ್ಚಿಟ್ಟುಕೊಂಡ
ಕೈಗಳ ಬೆವರ ಬಿಸಿಗೆ
ಒಂದಾಗಿಸಿದ ಬೆರಳುಗಳಲಿ
ಬೇರೆಯಾಗದಿರಲೆಂಬಂತೆ ಬೆಸುಗೆ

ಹೇಳದಿದ್ದರೆ ತಿಳಿಯುವುದು ಹೇಗೆ?
ಎಂದು ಒಗಟುಗಳ ಎಸೆದು
ಉತ್ತರವ ಕಾದಳು ಪ್ರತಿಘಳಿಗೆ
ಇನ್ನೂ ಹೇಳಬೇಕೆ? ಎಂದವನು
ಹಾರಿಸಿದ ಹುಬ್ಬಿನ ಭಾಷೆಯ ಬಗ್ಗೆ
ದುಮ್ಮಾನ, ಅನುಮಾನ, ಅಭಿಮಾನ
ಕಂಡಷ್ಟೂ ಮತ್ತೆ ನೋಡುವಾಸೆ
ತಣಿಯಲಾರದು ಅವಳ ಬಾಯಾರಿಕೆ

ಸರಿ, ತಪ್ಪುಗಳ ನೆಪಮಾಡಿ
ಹಾರಿಬಿಡುವೆ ಕೈಗೆ ಸಿಗದ ಹಾಗೆ
ಎಂದೇನೋ ಹೇಳಿದವಳಿಗೆ
ಅಂತರ ಸಹಿಸಲಾಗದು
ಪೂರ್ಣ ತೆರೆದುಕೊಂಡರೆ ಕ್ರಮಿಸಲು
ದಾರಿ ಉಳಿಯಲಾರದು
ಎಂಬ ಹೊಸದೊಂದು ಕನಲಿಕೆ

ರಮ್ಯತೆಯ ರಮಿಸಬೇಕೆಂದರೆ
ಕನಸುಗಳು ಕದಲದಿರಲಿ
ವಿರಹ ಬಳಿಬಾರದೆ ಚಂಡಿಹಿಡಿಯಲಿ
ಎಂಬ ಅವಳಾಸೆ
ತಿಳಿಸಿ, ಸಂಕೀರ್ಣವಾಗಹೊರಟವಳ
ತುಟಿಯ ಮೇಲೆ ಬೆರಳಿರಿಸಿ
ಬರಸೆಳೆದು ತಬ್ಬಿ ಹೇಳಿದ
“ಆಗಲಿ, ಒಂದಾಗಿರೋಣ ಎಂದು ಹೀಗೇ
ಪ್ರೀತಿಗೆ ಹಲವು ಭಾಷೆ”

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ