Advertisement
ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ…

ನಾಗರಾಜ್ ಹರಪನಹಳ್ಳಿ ಬರೆದ ಈ ದಿನದ ಕವಿತೆ…

ಗುಲಾಮನಾಗುವುದೆಂದರೆ….

ಗುಲಾಮನಾಗಿರುವುದು ಎಷ್ಟು ಸೊಗಸು !?
ನಿನ್ನ ಪಾದಗಳ ಬಳಿ ಕುಳಿತು
ವಿನಯಿಯಾಗುವುದು
ಮಧುಪಾತ್ರೆಗೆ ಬೇಡುವುದು ಚೆಂದ
ಬೇಗಂ

ಜೀವನವಿಡೀ ಗುಲಾಮನಾಗಿಯೇ ಇರುವೆ
ನೀ ಕನ್ನಡಿ ಎದುರು ವೈಯಾರದಿ ನಿಂತು
ಹೆರಳು ಚೆಲ್ಲಿ
ಕಿವಿಯೋಲೆ ಬಿಚ್ಚುತ್ತಾ ಅಣಿಯಾಗುವಾಗ
ನಾ ಮಗುವಿನಂತೆ ಸೆರಗು ಹಿಡಿದೇ
ಹಿಂದೆ ಸುತ್ತುವುದು
ನೆನೆದೇ ರೋಮಾಂಚಿತನಾಗುತ್ತೇನೆ

ನಿನ್ನ ಬಳಿ ಬೊಗಸೆಯೊಡ್ಡಿ ಬೇಡುವುದು
ಎಷ್ಟು ಸುಂದರ ಭಿಕ್ಷೆ

ಒಂದೇ ಒಂದು ಹನಿ ಪ್ರೀತಿಗಾಗಿ
ನಾನು ಭೂಮಿಗೆ ಇಳಿಯುವುದು
ಚೆಲುವಿನ ಚೆಲುವು

ನಿನಗೆ ಗುಲಾಮನಾಗುವುದೆಂದರೆ
ನಿನ್ನೊಳಗಿನ ಬೆಳಕೇ ನಾನಾಗುವುದು

ತುಟಿಗಳ ಬೆಸೆಯುವುದು
ಸಾಮಾನ್ಯವೇ ?!!!

ಗುಲಾಮನಾಗುವುದೆಂದರೆ
ಒಂದೇ ಜನ್ಮ ಸಾಲದು
ಎಷ್ಟು ಜನ್ಮಗಳನೆತ್ತಿದರೂ
ಸನಿಹಕೆ ಕಾಯುತ್ತಾ ಕುಳಿತುಕೊಳ್ಳುವೆ
ಬೆರಳ ಸಂಗೀತವ ಕೇಳುವೆ
ಧಮನಿಗೆ ಕಿವಿಯಾಗುವೆ
ಕಂಗಳಿಗೆ ಭಾಷ್ಯ ಬರೆಯುವೆ
ತುಟಿಗಳ ಮೇಲೆ ನದಿ ಹರಿಸುವೆ
ಎದೆಯ ಹಾಡಿಗೆ ಕಡಲ ಬಿತ್ತುವೆ

ನಡುವ ಬಯಲಿನಲ್ಲಿ ಜಿಂಕೆಗಳ ಚಂಚಲತೆಯ ನಿಲ್ಲಿಸುವೆ

ಗುಲಾಮನಾಗುವೆ ನಿನಗೆ
ನಿನ್ನ ಚರಣಗಳಿಗೆ ಹಣೆಯಿಕ್ಕುವೆ
ನಿನ್ನ ಹಣೆಗೆ ಚಂದ್ರ ಬಿಂಬವಾಗುವೆ

About The Author

ನಾಗರಾಜ್ ಹರಪನಹಳ್ಳಿ

ಹರಪನಹಳ್ಳಿ ಹುಟ್ಟೂರು. ಓದು‌ ಧಾರವಾಡ. ಬದುಕು ಕಾರವಾರ. ವೃತ್ತಿಯಿಂದ ಪತ್ರಕರ್ತ. ಪ್ರಕೃತಿ ಜೊತೆ ಒಡನಾಟ,‌ ಜನ ಸಾಮಾನ್ಯರ ಜೊತೆ ಹೆಚ್ಚು ಬೆರೆಯುವುದು,  ಓದು, ಬರಹ, ಹಾಡು ಕೇಳುವುದು ಉಸಿರು.  ದಿನಕ್ಕೊಮ್ಮೆ ಪಿ.ಲಂಕೇಶರನ್ನು ನೆನಪಿಸಿಕೊಳ್ಳುವುದು, ಅವರ ಬರಹಗಳನ್ನು ಓದುವುದು...

1 Comment

  1. Premalatha

    ಆಹಾ…ಎಂತಾ ಪ್ರೇಮ ಪರವಶತೆಯ ಸಾಲುಗಳು.ಸೊಗಸಾದ ಕವನ.

    Reply

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ