Advertisement
ಭುವನಾ ಹಿರೇಮಠ ಬರೆದ ಹೊಸ ಕವಿತೆ

ಭುವನಾ ಹಿರೇಮಠ ಬರೆದ ಹೊಸ ಕವಿತೆ

ಮಡಿಲ ಹೂವು

ಖಾಲಿ ಹಾಳೆಯ ಮೇಲೆ ಕಪ್ಪು ಕುಳಿ
ಘೋರ ಆಗಸಕ್ಕೆ ಧುಮುಕಿದ ಎಳೆಗೂಸು ನಕ್ಷತ್ರ
ಈಜು ಹೊಡೆಯುವ ಧಾವಂತದಲ್ಲಿ ಕೈಕಾಲು ಬಡಿಯುತ್ತಾ
ಬಿದ್ದೆನೋ ಎದ್ದೆನೋ ತಿಳಿಯದೆ
ಭ್ರಮೆಯ ಅಂತರದಲ್ಲೇ ತೇಲುತಿರಲು
ಅರ್ಥ ಕಾಮ ಮೋಕ್ಷಗಳಿಗಾಗಿ
ನೆಲಕ್ಕುರುಳುವ ಸ್ವರ್ಗ ಅಚಾನಕ್ಕು ಕಣ್ಣಿಗೆ ಬಿದ್ದು

ಬಿಕನಾಸಿ ಜ್ಯೋತಿರ್ವರ್ಷಗಳಷ್ಟು ದೂರ ಸಾಗುತ್ತಾ ಸಾಗುತ್ತಾ
ಎಲ್ಲಿ ಕಣ್ಣು ನೆಟ್ಟರೂ
ಅರ್ಧ ತಾಯಿ
ಅರ್ಧ ತಂದೆ
ಅರ್ಧ ನೆರಳು
ಉಳಿದರ್ಧವೆಲ್ಲ ಕುಲಿಗೇಡಿ ಕ್ಯಾಲೆಂಡರುಗಳು
ತಿರುವಿದಷ್ಟೂ ಅನಾಥ ತಾರೀಖುಗಳ ಹಾವಳಿ,
ಮುಂದಿನ ವರ್ಷದ ದಿನಗಳ ಹಡೆದವರು
ನಡುವಿಶ್ವದಲಿ ಅನೀತಿ ಕೈಬಿಟ್ಟು
ಹಿಂತಿರುಗಿಯೂ ನೋಡಲಾಗದೆ
ಕಳವಳವನೆಲ್ಲ ಈ ಕೂಸಿನ ಉಡಿಯೊಳಗೇ ಬಿಟ್ಟು ಹೋದರಂತೆ
ಅರ್ಥ ಕಾಮ ಮೋಕ್ಷ
ಮತ್ತು ಸ್ವರ್ಗಕ್ಕಾಗಿ

ಯಾವುದೋ ರೈಲ್ವೆ ನಿಲ್ದಾಣದ ಪಡಸಾಲೆಯಲ್ಲಿ
ಅಡ್ಡಾದಿಡ್ಡಿ ನಿದ್ದೆಹೋದ ಯಾತ್ರಿಕರ ಹಿಂಡಿನಲ್ಲಿ
ಎದ್ದು ನಡೆವ ಕನಸುಗಳ ತಡವಿದಾಗ
ಅವ್ವಂದಿರ ಮಡಿಲಲ್ಲಿ ದೇವಪುಷ್ಪಗಳು ಅರಳುತ್ತವೆ

ಚರ್ಮಕ್ಕೊಪ್ಪುವ ಬಣ್ಣ ಮನಸು
ಉಟ್ಟುಕೊಂಡು ತೊಟ್ಟುಕೊಂಡು,
ಒಳಗೊಳಗೇ ಮುಗುಚಿ ಮುಗುಚಿ
ಮೊಣಕಾಲೊರೆಸಿಕೊಂಡು ಮುಲಾಮು ಸವರುತ್ತ
ಉಗುಳು ಅಡ್ಡ ದಾಟುತ್ತಲೇ
ಮುಳ್ಳು ಕೊಂಪೆಗಳ ತನ್ನದೇ ನೆರಳಿಗೆ ಬಿಗಿದು ಕಟ್ಟಿ
ಇಟ್ಟ ಹೆಜ್ಜೆಗಳ ಕರಾಮತಿ ಕಳೆಯುತ್ತ;
ಮುಂದಿನ ಊರಿನ ಟಿಕೆಟ್ಟು
ಟಿಕ್ ಟಿಕ್ ಪಂಚ್ ಮಾಡುವಷ್ಟೊತ್ತಿಗೆ
ಕ್ಯಾಲೆಂಡರು ತಂತಾನೇ ತಿರುವಿಕೊಂಡು ಹರವಿಕೊಂಡು
ಅಪ್ಪಿಕೊಂಡು ಕೈಹಿಡಿಯುವ ಅಪರಂಜಿ ದಿನ ಜಲ್ಮ ದುತ್ತನೆ ಎದ್ದೇಳುತ್ತದೆ.

ನಡೆಯುವುದೇ ನಡೆಯುವುದು ನಡೆಯುವುದೇ ನಡೆಯುವುದು
ಅರ್ಥ ಕಾಮ ಮೋಕ್ಷ
ಮತ್ತು ಸ್ವರ್ಗಕ್ಕಲ್ಲದಿದ್ದರೂ

 

ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ