Advertisement
ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ತೇಜಸ್ವಿ ಕಾಡುತ್ತಾರೆ!

ತೇಜಸ್ವಿ ನೆನಪಾಗುತ್ತಾರೆ;
ಹಚ್ಚನೆಯ ಹಸಿರೊಳಗೂ
ಬೆಚ್ಚನೆಯ ಕಾಡೊಳಗೂ
ಗಟ್ಟಿ ದನಿಯಾಗಿ!

ಅದೇಕೋ ಕುಬಿ ಇಯಾಲರು,
ಲೈನ್ ಮೆನ್ ದುರ್ಗಪ್ಪ
ಅಬಚೂರಿನ ಪೋಸ್ಟ್ ಆಫೀಸು
ಅಣ್ಣನ ನೆನಪು ಸದಾ ಕಾಡುತ್ತಿರುತ್ತದೆ!

ಮನೆಗೆ ಬಂದ ಹೊಸ ನಾಯಿಗೂ
‘ಕಿವಿ’ಯೆಂದೇ ಹೆಸರು!
ಮೂಡಿಗೆರೆಯ ಬೀದಿಯೊಕ್ಕರೆ
ಪೂರ್ಣಚಂದ್ರನದೇ ಉಸಿರು.
ಬೇಲಿಯ ಮೇಲಿನದು ಹೂವೇ ಇರಲಿ
ಹಾರುವ ಓತಿಯ ಕಲ್ಪನೆ ಅರಳುತ್ತದೆ!

ನನ್ನೊಳಗೆ ಅದೋ ಆ ನೈಲ್ ನದಿನಂತೆ,
ಬರಪೀಡಿತ ಈಜಿಪ್ಟ್, ಕರ್ವಾಲೋ
ಗೌರಿ ಆನೆ, ತಬರನ ಪಿಂಚಣಿ,
ರಕ್ಕಸ ಬಂಡೆ ಅಚ್ಚರಿಯೆಬ್ಬಿಸಿ
ವಿಚಾರಗಳು ಹರಿದಾಡುತ್ತವೆ!

ಅಚಾನಕ್ಕಾಗಿ ಎಲ್ಲೋ ಯಾವುದೋ
ಹೆಂಗಸಿನ ದನಿ ಗಟ್ಟಿಯಾದರೆ,
ಕಿರುಗೂರಿನ ಮಾರ್ದನಿ ಕೇಳುತ್ತದೆ!
ಬಿರಿಯಾನಿ ಅಂದರೆ ಕರಿಯಪ್ಪ ಎಲ್ಲೋ?
ಸುಮ್ಮನೆ ಪ್ರಶ್ನೆ ಮೂಡುತ್ತದೆ!

ತೇಜಸ್ವಿ ಸದಾ ಕಾಡುತ್ತಿರುತ್ತಾರೆ;
ಅದೇಷ್ಟೆಂದರೆ,
ರಂಗು ರಂಗಿನ ಸಾವಿರಾರು
ಚಿಟ್ಟೆಗಳ ನಡುವೆಯೂ
ಏರೋಪ್ಲೇನ್ ಚಿಟ್ಟೆಯೇ
ಮೋಹಕವೆನಿಸುವಷ್ಟು!

About The Author

ಮನು ಗುರುಸ್ವಾಮಿ

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಬ್ಬೆರಗು (ನಾಟಕ), ಅವಳೂ ಕತೆಯಾದಳು (ನೀಳ್ಗತೆ), ಕಲ್ಲು ದೇವರು ದೇವರಲ್ಲ (ಸಂಶೋಧನಾ ನಿಬಂಧ), ಗಾಂಧಿ ನೀ ನನ್ನ ಕೊಂದೆ (ನಾಟಕ) ಇವರ ಪ್ರಕಟಿತ ಕೃತಿಗಳು. ನಿನ್ನ ಇಚ್ಛೆಯಂತೆ ನಡೆವೆ (ಲೇಖನ ಸಂಕಲನ), ವ್ಯಭಿಚಾರಿ ಹೂವು ( ಕವನ ಸಂಕಲನ) ಅವಳು ಮತ್ತು ಸಾವು (ಗೀಚು ಬರಹ), ಹುಡುಗಿಯರ ಸೇಫ್ಟಿಪಿನ್ ಅಲ್ಲ ಹುಡುಗರು ( ವ್ಯಕ್ತಿತ್ವ ವಿಕಸನ), ಮೈಮನ ಮಾರಿಕೊಂಡವರು (ನೀಳ್ಗತೆ) ಪ್ರಕಟಣಾ ಹಂತದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ