Advertisement
ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು

ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು

ಹನಿ ಜಾರಿ
ಹನಿಗೆ
ಅದರೊಳಗಿನ
ನೀರೇ ಭಾರ.
ಜೊತೆಗೀಗ
ಸುತ್ತ ಸುಳಿವ
ತೇವದುಸಿರ
ಸಂಗಾತ.

ದಯಾಳು
ಉಸಿರ ಹೆಗಲಿಗೆ
ನಾಜೂಕಿನಲಿ
ತನ್ನ ಭಾರವಾನಿಸಿ,
ಒದ್ದೊದ್ದೆ
ತೆಳ್ಳಾನೆ ಹನಿಯೀಗ
ಕೆನ್ನೆ ಗಲ್ಲ ಎದೆ…..
ಕರುಳು ಪಾದ….
ತೋಯಿಸಿ ಜಾರುತ್ತಾ
ಮಣ್ಣು ಸೋಕಿ
ತಟ್ಟನೆ ಮಾಯ!

ಹುಡುಕುತ್ತಿದೆ ಕಣ್ಣು…..
ಬೆತ್ತಲೆ ಹನಿಗಾಗಿ!

ನೋವೀಗ….ಮೊದಲಿನಂತಿಲ್ಲ

ನೋವೆಂದರೆ….
ಈಗ ಮೊದಲಿನಂತಿಲ್ಲ
ಅನುಭವಿಸಲೇಬೇಕೆಂದೇನಿಲ್ಲ
ನಾವೂ… ಅವರೂ

ತಾತ್ಕಾಲಿಕ ನೋವು ನಿವಾರಕಗಳಿವೆ
ನಿಶ್ಚೇತಗೊಳಿಸುವ ಅನಸ್ತೇಶಿಯಾವಿದೆ
ನೋವು ಮರಗಟ್ಟಿಸುವ,
ಮರೆಸುವ ಮಾಂತ್ರಿಕ ಮದ್ದಿದೆ.
ಸದ್ಯ ನೋವೀಗ
ಕೋಮಾ ತಲುಪಿದೆ.
ಮೇಲೆ ಕಾಣಲಂತೂ ಸತ್ತಿದೆ!

ಒಳಗೆ….
ಕೇವಲ ನೋವಿನ ಬಿಕ್ಕು
ಮಿಡಿಯುವ ಪ್ರತಿ ಹೆಜ್ಜೆಯ ಸದ್ದು
ಇರಿಯುವ ಹರಿತ
ತಣ್ಣಗೆ ಆವರಿಸುತ್ತಿದೆ
ಇಡೀ ಜೀವದಾಳಕ್ಕೂ

ನಾವೀಗ
ನೋವು ಅನುಭವಿಸಲೇಬೇಕಿಲ್ಲ
ಒಂದಿಷ್ಟೂ ಕಷ್ಟವಿಲ್ಲದೇ ಮರಗಟ್ಟಿಸಿ
ಕೋಮಾದಲ್ಲಿಡುವುದನ್ನವರು ಕಲಿತಿದ್ದಾರೆ
ನೋವನ್ನೂ!
ಎಂಥಹಾ ಧನ್ಯತೆಯೀಗ!
ನಮ್ಮ ನೋವೀಗ ಹಿಂಸೆಯಾಗುವುದಿಲ್ಲ ಯಾರಿಗೂ!

ನಮಗೂ ಅವರಿಗೂ….

About The Author

ರೂಪ ಹಾಸನ

ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಒಂದು ಕಿರುಪದ್ಯಗಳ ಸಂಕಲನವೂ ಸೇರಿ ಐದು ಕವನ ಸಂಕಲನಗಳು ಪ್ರಕಟವಾಗಿವೆ. ಹಲವು ಭಾಷೆಗಳಿಗೆ ಕವಿತೆಗಳು ಭಾಷಾಂತರಗೊಂಡಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೂಲತಃ ಮೈಸೂರಿನವರು, ಸದ್ಯದ ನೆಲೆ ಹಾಸನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ