Advertisement
ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.

ಶ್ರೀಕಲಾ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು.

ಋತು

ಮುಂಗಾರಿನ ರಾತ್ರಿಗೆ
ಹೊಳೆಯುವ ಕೋಟಿ ಕಣ್ಣುಗಳು

ಉರಿಯುವ ಹಸಿವಿನ
ಮಂಪರಿನ ನಿದ್ದೆಯಲ್ಲಿ
ಕರಗದ ಇರುಳು

ನಾಳೆಗಳನ್ನು ಬೆಳಗಿಸದ
ಸ್ವಾಗತವೇ ಇಲ್ಲದೆ
ಅವತರಿಸುವ ಬೆಳಗುಗಳು

ಮೋಡದ ವ್ಯಾಮೋಹವಿಲ್ಲದ
ಕಾಡು – ಕಡಲು
ಕೋಟೆ – ಕಟ್ಟಡಗಳು

‘ಇಲ್ಲ’ ಎನ್ನುವ
ಸಾಧ್ಯತೆಯಲ್ಲಿ
ಅಸಾಧ್ಯ ಆಕರ್ಷಣೆ
ಕಾದು ನೋಡುವ ಅನಿವಾರ್ಯತೆ

ಕಾಯುವಿಕೆಯ ಅವಧಿಯಲ್ಲಿ
ಕುಸಿಯುವ ಭರವಸೆಗಳಲ್ಲಿ
ಯಾರಿಗೆ ಯಾರು
ಅನುಕಂಪ ಹಂಚುವುದು?
ಉಳುಮೆಯಿಲ್ಲದ ನೆಲಕ್ಕೋ
ಕಾಯಿಲ್ಲದ ಮರಕ್ಕೋ
ಅಮಾನ್ಯವಾಗುವ ವರಕ್ಕೋ?!

ಅಲ್ಲಲ್ಲಿ ಮಳೆನೀರು
ಅಲ್ಲಲ್ಲಿ ಕಣ್ಣೀರು
ಮುಳುಗುವುದೆಲ್ಲೋ?
ಮುಗಿಯುವುದೆಲ್ಲೋ?!

ಲವ್ @44

ಇಷ್ಟವಾಗುವವನ ಬಗ್ಗೆ
ಬೆಟ್ಟದಷ್ಟು ಕನಸು ಕಾಣಲು
ಸಮಯವಿದೆ; ಆದರೆ
ಈಗ ಕನಸುಗಳ ಕಾಲವಿಲ್ಲ.

ಬಾಗಿಲು ತೆರೆದಿಟ್ಟು
ಗಹಗಹಿಸಿ ನಗುವ ಕಲ್ಪನೆಗಳಲ್ಲಿ
ಗಹನ ಯೋಚನೆಗಳಿಲ್ಲ;
ಆದರೆ
ತಣ್ಣನೆ ನಿರಾಳವಿದೆ.

ಉಸಿರಾಟದಷ್ಟೇ ಸಲೀಸು
ಚೌಕಟ್ಟಿನೊಳಗಿನ
ಚಿತ್ರವಾಗಿಬಿಡುವುದು;
ಆದರೆ ಹಾಗಿದ್ದೂ
ಚಿತ್ತಕ್ಕೆ ಬಿಡುವಿಲ್ಲ.

ಮನೆಯ ಹತ್ತು ಜನರಲ್ಲಿ ನಾನೊಬ್ಬಳು
‘ನಾನು’ ಬರೀ ಇಷ್ಟೇ ಅಲ್ಲ;
ಹಲವು ಪಾತ್ರಗಳು
ಒಳಗೇ ಹುದುಗಿವೆ.

ಗಮನವಿಟ್ಟು ನೋಡಲು
ಎಲ್ಲರಿಗೂ ಅವರದೇ ಆದ
ಆಕಾಶಗಳಿವೆ;
ನನ್ನ ಕಿಟಕಿಯೂ
ಪುಟ್ಟ ಆಕಾಶವನ್ನು ತೋರಿಸುತ್ತದೆ.

ಈ ಆಕಾಶದ ಬಗೆಗೊಂದು
ಪ್ರೀತಿ ಹುಟ್ಟಿಕೊಂಡಿದೆ.

ಈ ವಯಸ್ಸಿನಲ್ಲಿ
ಇನ್ನೇನನ್ನು ಪ್ರೀತಿಸುವುದು?
ಈ ವಯಸ್ಸಿನಲ್ಲಿ
ಏನನ್ನೂ ಪ್ರೀತಿಸಬಹುದು.
ಲವ್ @44

 

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ