Advertisement
ಗುರುರಾಜ ಹೇರ್ಳೆ ಬರೆದ ಈ ದಿನದ ಕವಿತೆ

ಗುರುರಾಜ ಹೇರ್ಳೆ ಬರೆದ ಈ ದಿನದ ಕವಿತೆ

ಅಪರಂಜಿ…

ಮುಂಜಾವಿನಲಿಯೆದ್ದು ಮುಂಗುರುಳ ಸರಿಸುತಲಿ
ನನ್ನವಳು ನಗಲೆಂಥ ಸೊಗಸುಗಾತಿ,
ಕರಗಳೆರಡನು ಮುಗಿದು ದೇವಿಯರ ಬೇಡುವುದ
ಅವಳ ಬೆಡಗಿಗೆ ಸೋತು ಮರೆತೆ ಪೂರ್ತಿ…

ಕೆಂಡಸಂಪಿಗೆಯಂದದಲಿ ಅವಳ ನಾಸಿಕವು
ತೊಂಡೆಯ ಹಣ್ಣಂತೆಯಿರುವ ಅಧರ,
ಪೋಣಿಸಿಟ್ಟಂತಿರುವ ದಾಳಿಂಬೆ ಕಾಳುಗಳ
ದಂತ ಪಂಕ್ತಿಯ ಸಾಲು ಮಧುರ ಮಧುರ…

ಸೂಜಿಗಲ್ಲಂತೆ ಸೆಳೆಯುವ ಮೀನ ಕಣ್ಣುಗಳು
ಕಡೆದಿಟ್ಟ ಬೆಣ್ಣೆ ಲೇಪಿಸಿದ ಕದಪು,
ಕಮಲದ ಎಸಳಂತೆ ಕೋಮಲದ ಕರ್ಣಗಳು
ಮಾವನ ಹೆಣ್ಣಿವಳ ಗಲ್ಲ ನುಣುಪು…

ಪುಟ್ಟ ಕೆಂಪನೆ ಬಿಂದಿ ಹಣೆಯ ಸಿಂಗರಿಸಿರಲು
ಮೂಗಿನಲಿ ನತ್ತೊಂದು ಹೊಳೆಯುತಿಹುದು,
ಕಿವಿಗಳಲಿ ಮಿನುಗುತಿದೆ ಜೋಲಾಡುವ ಜುಮುಕಿ
ಕೊರಳಲ್ಲಿ ತಾಳಿ ಸರ ಬೆಳಗುತಿಹುದು…

ಕಡೆದಿಟ್ಟ ಶಿಲೆಯಂಥ ಇವಳ ಸಿಂಹದ ಕಟಿಯು
ಬಳುಕುತ್ತ ನಡೆದುಬರಲೆಷ್ಟು ಚೆಂದ,
ಉದ್ದ ಸೆರಗನು ಸೆಳೆದು ಹೊಟ್ಟೆಯಲಿ ಸಿಕ್ಕಿಸಲು
ಎಂತು ವರ್ಣಿಸಲಿ ನಾನದರ ಅಂದ…

ಲಜ್ಜೆಯಲಿ ಹೆಜ್ಜೆಯಿಡುವವಳ ಗೆಜ್ಜೆಯ ದನಿಗೆ
ಸೋತಿತೆನ್ನಯ ಹೃದಯ ಜೊತೆಗೆ ಮನವು,
ಕೈಬಳೆಯ ಸಪ್ಪಳವು ತಾಳಕ್ಕೆ ಸಹಕರಿಸೆ
ಮತ್ತಿನಲಿ ವಾಲುತಿದೆಯೆನ್ನ ತನುವು…

ನನ್ನೆದೆಯ ಗೂಡಿನಲಿ ಬಾಯ್ದೆರೆದ ಚಿಪ್ಪಿನೊಳ
ಬೆಳಗುತಿಹ ಅಪರೂಪ ಮುತ್ತು ನೀನು,
ಅಪರಂಜಿಯ ಗುಣದ ಅಪ್ಸರೆಯೆ ಬಾ ಸನಿಹ
ಮುತ್ತು ಮಳೆಯಭೀಷೇಕಗೈವೆ ನಾನು…

ಗುರುರಾಜ ಹೇರ್ಳೆ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದ ಸಮೀಪದ ಸಾಲಿಗ್ರಾಮದವರು.
ಕಳೆದ 10 ವರ್ಷಗಳಿದ ಗಲ್ಫ್ ನಾಡಿನಲ್ಲಿದ್ದು, ಪ್ರಸ್ತುತ ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಕೆಲಸದ ನಿಮಿತ್ತ ವಾಸವಾಗಿದ್ದಾರೆ.
ಹಾಡುವುದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. Name *suchitra R Shetty

    ಚೆಂದ ಮುಡಿ ಆಯ್ತ್

    Reply
  2. Jyoti hegde

    ವರ್ಣನೆ ಕೇಳಿ ನಿಮ್ಮವಳ ನೋಡುವ ಆಸೆಯಾಗ್ತಿದೆ ಮಾರಾಯ್ರೆ

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ