Advertisement
ಅಶೋಕ ಹೊಸಮನಿ ಬರೆದ ಎರಡು ಕವಿತೆಗಳು

ಅಶೋಕ ಹೊಸಮನಿ ಬರೆದ ಎರಡು ಕವಿತೆಗಳು

ಧ್ಯಾನ

ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಹಣ್ಣಿನ ಗಾಯಗಳು
ಮುಕ್ಕಳಿಸತೊಡಗಿದವು
ನದಿಗಳು

ಹೃದಯವನ್ನೆ ಗುರಿಯಾಗಿಸಿಕೊಂಡ
ಕದನಗಳು
ಕದನ ವಿರಾಮಗಳು
ಛಿದ್ರ ಛಿದ್ರ ಹೂವುಗಳು

ಪಾದಗಳ ಕವುಚಿ
ರಕ್ತ ಸಿಕ್ತ ಬೆಳದಿಂಗಳ
ಹೆಗಲಿಗೇರಿಸಿ
ಮತ್ತದೇ ಬಾಂಬು, ಬಂದೂಕುಗಳು
ಬೊಬ್ಬಿಡುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಇನ್ನೇನು ಧ್ಯಾನಿಸಲಿ
ನೆತ್ತರ ಕಡಲಲಿ
ಈಜಿ
ಹೊತ್ತು ಕಳೆದೀತು ಹೇಗೆ?
ಕನಸಿದ ಕನಸ ಮುರುಟಿ
ನಿರಿಗೆಗಳು ಚೂರು ಚೂರಾಗುವಾಗ
ಕೂಸಿನಂತೆ
ಚಿಟ್ಟನೆ ಚೀರಿತು
ಹೃದಯ

ಮುಖದ ಚೂರು

ಭಿಕ್ಷೆಗಿಳಿದಿದ್ದೇನೆ
ಬಿಂಬದ ಹೂರಣವ
ಅಲ್ಲಗಳೆಯುವಾಗಲೇ

ಭಿಕ್ಷೆಗಿಳಿದಿದ್ದೇನೆ
ಸವೆದ ಮುಖವ ನೇವರಿಸಿ
ಎದೆಯ ಬಿರುಕುಗಳ
ಹೊಲೆಯುವಾಗಲೇ

ಭಿಕ್ಷೆಗಿಳಿದಿದ್ದೇನೆ
ಮುಸ್ಸಂಜೆಯ ನಿಟ್ಟುಸಿರಲಿ
ನೀಳ ಇರುಳ ಬಿಕ್ಕಳಿಕೆಯಲಿ

ಭಿಕ್ಷೆಗಿಳಿದಿದ್ದೇನೆ
ಬೊಗಸೆಯ
ನದಿಯು
ಕಲ್ಲುಬಂಡೆಯ
ಧರಿಸುವಾಗಲೇ

ಭಿಕ್ಷೆಗಿಳಿದಿದ್ದೇನೆ
ಮಣ್ಣ ಮಿದ್ದು
ಕಣ್ಣೀರ
ತುಳುಕಿಸುವಾಗಲೇ

ಭಿಕ್ಷೆಗಿಳಿದಿದ್ದೇನೆ
ಬಾಲ್ಯದ ಕರಂಡಿಕೆಯಲಿ
ತೊಗಲು ತೊಗಲ ಹಿಂಡುವಾಗಲೇ
ಮೃಗವಾದಾಗಲೇ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ಶೇಖರಗೌಡ ವೀ ಸರನಾಡಗೌಡರ್

    ಅರ್ಥಪೂರ್ಣ ಕವನಗಳು. ಅಭಿನಂದನೆಗಳು.

    Reply
  2. DEVARAJ

    ಚಂದ ಸರ್

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ