Advertisement
ಕಾರ್ತಿಕ್ ಕೃಷ್ಣ ಬರೆದ ಈ ದಿನದ ಕವಿತೆ

ಕಾರ್ತಿಕ್ ಕೃಷ್ಣ ಬರೆದ ಈ ದಿನದ ಕವಿತೆ

ಒಂದೈದು ನಿಮಿಷ ತಡೆದು ಹೊರಡೋಣ ಗೆಳತಿ,
ಮುಂಗಾರು ಈಗಷ್ಟೇ ಧರೆಗಿಳಿಯುತಿದೆ.
ದಿನಮಣಿಯ ತೆರೆಗೆ ನೂಕಿ,
ಕಡು ಮೋಡವು ಹರುಷದಿ ಹಿಗ್ಗಿದಂತೆ,
ಮುಂಗಾರು ಹನಿ ಹನಿಯಾಗಿ ಧರೆಗಿಳಿಯುತಿದೆ!

ಇನ್ನೂ ಕೊಂಚ ಸುರಿಯಲಿ ಬಿಡು,
ಮಣ್ಣಿನ ಕೆಂಪು ಹರಡಲಿ ಬಿಡು,
ಇನ್ನೇನು ಬಾಡುವ ದಾಸವಾಳಕೆ
ಸಿಹಿಮುತ್ತಿನ ವಿದಾಯವ ಹೇಳಲು ಬಿಡು!

ಪ್ರಕೃತಿಯ ಶೃಂಗಾರ ಕಾವ್ಯವಿದು,
ಇಳೆಯೊಡನೆ ಒಡನಾಡುವ ದಾಟಿಯಿದು.
ಕಣ್ತೆರೆದು ನೋಡು ಗೆಳತಿ,
ಮುತ್ತಿನ ಹಾರದಂತೆ ಹೊಳೆಯುವ
ಜೇಡರ ಬಲೆಯನ್ನು..
ಗಮನವಿಟ್ಟು ಕೇಳು ಗೆಳತಿ,
ತನ್ನ ಸಂಗಾತಿಯ ಕರೆಯುವ
ಗೊರವಂಕದ ಕೂಗನ್ನು!

ಜೀವನದ ಅಸಾಧ್ಯ ಓಟದಲ್ಲಿ
ಕುಂಟಿಕೊಂಡು ಸಾಗುವ ನಾವು,
ಅರೆಕ್ಷಣ ನಿಂತು ಇವೆಲ್ಲನ್ನೂ ನೋಡಬೇಕು ಗೆಳತಿ!
ದಪ್ಪನೆಯ ರೈನುಕೋಟಿನೊಳಗೆ
ಬೆಚ್ಚನೆ ಸಾಗುವ ನಾವು,
ಅಪ್ಪಳಿಸುವ ಮಳೆಹನಿಗೆ ಮೈಯೊಡ್ಡಬೇಕು,
ಕೃತಕ ಹವೆಯ ಎಸಿ ಕಾರಿನ ಕಿಟಕಿಯನು ಇಳಿಸಿ,
ಮಳೆಯನು ಬೊಗಸೆಯಲಿ ಹಿಡಿಯಬೇಕು!

About The Author

ಕಾರ್ತಿಕ್ ಕೃಷ್ಣ

ಕಾರ್ತಿಕ್ ಕೃಷ್ಣ, ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಹವ್ಯಾಸಿ ಬರಹಗಾರ. ದಿನಪತ್ರಿಕೆಗಳಲ್ಲಿ ಇವರ ಹಲವು ಲಲಿತ ಪ್ರಬಂಧಗಳು ಹಾಗೂ ವಿಜ್ಞಾನ ಬರಹಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ