Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಸ್ವಪ್ನ-ದರ್ಶಿನಿ (ಕವಿತೆ)

ಕನಸುಗಳು ಮಾರಾಟಕ್ಕಿವೆ-
ಎಂದು ಕೂಗುವವರ ಬಳಿ
ತಕ್ಕಡಿ ಇರಲಿಲ್ಲ; ಮತ್ತು-
ತೂಕದ ಬಟ್ಟುಗಳೂ..

ಹಸಿದವರಿಗೆ ಅಂದವಾದ ಮೊರಗಳಲ್ಲಿ
ಅನ್ನದ ಕನಸುಗಳನ್ನು
ಸುರಿಯಬಹುದವರು..

ತುಂಬ ಹಂಬಲಿಸುವವರಿಗೆ
ಉಡಿತುಂಬ ಕನಸುಗಳದೇ ಬಾಗಿನ..

ನಿಂತು ನೋಡುವವರನ್ನು
ಹೋಗಾಚೆ!: ಎಂದು ಎಂದೂ
ತಳ್ಳಿದವರಲ್ಲ; ಒಳ್ಳೆಯವರು..

ಹಣಿಕಿಣಿಕಿ, ಥರಾವರಿ
ಕನಸುಗಳ ವ್ಯೆಖರಿ, ಕುಸುರಿ;
ಯಾರು ಬೇಕಾದರೂ ಕಣ್ದೆರೆದು
ನೋಡಲು- ಉಚಿತ ಪ್ರದರ್ಶನ!

ಯಾರ್ಯಾರಿಗೆ ಕನಸುಗಳು
ಬಹುಶಃ ಎಂದೋ ಕಂಡ
ಅಥವಾ ಕಾಣಬಯಸಿದ್ದು
ಇದ್ದಿರಬಹುದವು… ಅಥವಾ
ಆಗಾಗ ಹೇಗೋ ನುಸುಳಿ, ಕದ್ದು
ತೂರಿಬಂದಂಥವು..

ಇನ್ನು ಕೆಲವು, ಯಾಕಾದರೂ ಇಂಥ
ಕನಸು ಮನಸಲ್ಲಿ ಮೂಡಿತ್ತೋ-
ಸಾಕು-ಸಾಕೆಂದು ಕೈಚೆಲ್ಲಿದಂಥವು..

ತುಂಬ ಸುಂದರವಾದ ಕನಸುಗಳೂ
ಇವೆ- ಅವರ ಬಳಿಯಲ್ಲಿ!

ಹೂವ ಹಾಸಿನ ಮೇಲೆ ಪಲ್ಲಕ್ಕಿಯೊಳಗೆ
ಮಲ್ಲಿಗೆಯ ಪರಿಮಳವೇ ಮೈವೆತ್ತ- ಕನಸು!
ದಡದ ಗೊಂಡಾರಣ್ಯದಲಿ ಮುಗಿಲೆತ್ತರ ಮರದ
ತುದಿಯಲಿ ಜೋತಾಡುವ ಸೀತಾಳೆ- ಕನಸು!
ಸೂರ್ಯನನು ಬೊಗಸೆಯಲಿ ತುಂಬಿಸಿ
ಕೆಂಪುಕಾದ ಬೆರಳುಗಳಗುಂಟ
ಹರಿವ ಬೆಳಕನು ಹರಿಸಿ
ಜೀವ ತಬ್ಬುವ- ಕನಸು!

ಸೊಗಸು..
ಒಮ್ಮೆ ‘ಕಣ್ಣುʼ ಬಿಡುವತನಕ!

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ