Advertisement
ಡಾ. ಲಕ್ಷ್ಮಣ ವಿ. ಎ. ಕವಿತೆ

ಡಾ. ಲಕ್ಷ್ಮಣ ವಿ. ಎ. ಕವಿತೆ

ದೇವರು ಮಗು

ಹಗಲಿನ
ನೋವುಗಳ ಇರುಳು ನುಂಗು
ವಂತಿದ್ದರೆ
ಹೊಟ್ಟೆಯ ಹಸಿವನು
ಹುಣ್ಣಿಮೆ ಇಂಗಿಸುವಂತಿದ್ದರೆ
ಮನೆ ಮನೆಗಳಲ್ಲಿ ದೇವರ ಪಟವಾದರೂ
ಯಾಕಿರಬೇಕಿತ್ತು?
ಗುಂಡಿ ಗುಂಡಾರಗಳ ಮೇಲೆ ಧರ್ಮದ ಬಾವುಟವಾದರೂ
ಯಾಕಿರಬೇಕಿತ್ತು?

ನಿಮ್ಮ ಧರ್ಮದ ಬಾವುಟವ
ಬೆತ್ತಲೆ ಮೈಗೆ ಸುತ್ತಿ ನಿನ್ನ ದರುಶನಕೆ
ಬೆಟ್ಟ ಏರುತ್ತಿರುವ ಮಕ್ಕಳು
ಪಾಪದ ಕೊಳಗಳಲಿ ಮಿಂದು
ರಕ್ತದ ಮಡುವುಗಳಲಿ ಮುಳುಗಿ
ಮಡಿ ಮೈಯಿಂದ ನಿನ್ನ ಪಾದ ಮುಟ್ಟಿ
ಉಧೋ ಎನ್ನುವಾಗ
ನರಳಿದ ಬೆಟ್ಟಗಳು ದಿಕ್ಕು ತಪ್ಪಿದ ನದಿಗಳು ಇವರ ಬಳಿಯೇ
ಮರಳಿ ಸಾರಿ ಕೇಳುತಿವೆ ಈಗ

ಅಲ್ಲೆಲ್ಲೊ ಸರ ಹದ್ದಿನಾಚೆ
ಬರೇ ರಣ -ಹದ್ದುಗಳ ಸದ್ದಂತೆ
ಕಣ್ಣು ತೆರೆಯುವ ಮನ್ನವೇ
ಕಣ್ಣು ಕಳೆದುಕೊಂಡ ಕಂದಮ್ಮಗಳು
ಬಂದೂಕಿನ ಸದ್ದಿಗೇ ಕಿವುಡಾದ ಕೂಸುಗಳ
ಎತ್ತಿ ಮುದ್ದಾಡಲು ಕೈ ಎತ್ತೋಣವೆಂದರೆ
ಎತ್ತಲು ಕೈಗಳೇ ಇಲ್ಲದ ಕಾಯಗಳು
ಎತ್ತ ನೋಡಿದರತ್ತ ಕತ್ತಲು ಕಣಿವೆ
ನೋವ ನುಂಗುವ ಸೂರ್ಯ
ಹಸಿವು ಇಂಗಿಸುವ ಚಂದ್ರ
ನ ಚಿತ್ರ
ಪಾಳು ಬಿದ್ದ ಶಾಲೆಯ ಕಪ್ಪು ಹಲಗೆಯ ಮೇಲೆ

ಶಾಲೆ ಶುರುವಾಯಿತು ಮತ್ತೆ
ಇಲ್ಲಿ
ಉರಿವ ಭೂಪಟಗಳು ವೃಥಾ
ಬೆನ್ನ ಮೇಲೆ ಯಾಕಿರಬೇಕೆಂದು ನಕಾಶೆ ಮಾರುವ ಬಾಲಕನೊಬ್ಬ
ಉರಿವ ದೇಶದ ಬಾವುಟಗಳ‌
ಸುರಿವ ಮಳೆಯ ನೀರಿಗೆ ಕಿತ್ತೆಸೆದು

ಶಾಲೆಯ ಪ್ರಾರ್ಥನೆ ತಪ್ಪೀತೆಂಬ
ಬೆತ್ತಲು ಮೈಯ್ಯಲ್ಲೇ ಓಡುತ್ತಿದ್ದಾನೆ ಒಂದೇ ಸಮ

About The Author

ಡಾ. ಲಕ್ಷ್ಮಣ ವಿ.ಎ

ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ