Advertisement
ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಹನಿಗವಿತೆಗಳು

ವಿಶ್ವನಾಥ ಎನ್. ನೇರಳಕಟ್ಟೆ ಬರೆದ ಹನಿಗವಿತೆಗಳು

ಕಡಿದ ಮರದ ಸೀಳಿನೆಡೆಯಿಂದ
ಟಿಸಿಲೊಡೆದ ಹೊಸ ಚಿಗುರು
ಸಾರ್ವತ್ರಿಕ ಸತ್ಯವೊಂದನ್ನು ನುಡಿಯಿತು-
“ಏನಾದರಾಗಲಿ ಮರಳಿ ಚಿಗುರು”

***

ಕನ್ನಡಿಯೆದುರು ನಿಂತ ನನ್ನಲ್ಲಿ ಪ್ರಶ್ನೆಯಿತ್ತು-
“ನಾನು ಸತ್ಯವೋ? ಅಲ್ಲಾ ಕನ್ನಡಿಯೊಳಗಿನವನೋ?”
ಕನ್ನಡಿಯೊಳಗಿನವನಿಗೂ ಅದೇ ಪ್ರಶ್ನೆ
ಇದ್ದಿರಬಹುದು

***

ಅನ್ಯಮತೀಯರ ಮೇಲೆಸೆದ
ಕಲ್ಲನ್ನು ಎತ್ತಿಕೊಂಡು ನೋಡಿದೆ
ಅಲ್ಲಿ ನನ್ನಿಷ್ಟದ ದೇವರು
ಕಣ್ಣೀರು ಸುರಿಸುತ್ತಿದ್ದ

***

ಪಂಜರದ ಗಿಳಿಯನ್ನು ಹೊರಬಿಟ್ಟೆ
ಮರಳಿ ಬಂದು ನನ್ನನ್ನೇ ಪ್ರಶ್ನಿಸಿತು-
“ನೀನು ‘ಮುಕ್ತ’ನಾಗುವುದು ಯಾವಾಗ?”

***

ನಿದ್ರೆ ಕದಿಯುವ ಕನಸುಗಳು
ಬದುಕಿನ ಪಯಣಕ್ಕೆ
ನೆರವಾಗುವ ಅಡಿಗಲ್ಲುಗಳಾಗುತ್ತವೆ

***

ಕೆಲವೊಮ್ಮೆ ಹೀಗಾಗುತ್ತದೆ
ಅಂಗಿಯ ಕಿಸೆ ದೊಡ್ಡದಾದಷ್ಟೂ
ಹೃದಯದ ಬಾಗಿಲು ಚಿಕ್ಕದಾಗುತ್ತದೆ

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ