Advertisement
ಓ. ಎಲ್. ಎನ್ ಅನುವಾದಿಸಿದ ಪುವಿಯರಸು ಕವಿತೆ

ಓ. ಎಲ್. ಎನ್ ಅನುವಾದಿಸಿದ ಪುವಿಯರಸು ಕವಿತೆ

ಒಂದು ಮುಖ್ಯ ಪ್ರಕಟಣೆ
ನನ್ನ ಹೆಂಡತಿ ಕಾಣೆಯಾಗಿದ್ದಾಳೆ!

ಹುಡುಕಿ ಕೊಟ್ಟವರಿಗೆ
ಅಥವಾ ಸುಳಿವು ನೀಡಿದವರಿಗೆ
ಸೂಕ್ತ ಬಹುಮಾನವನ್ನು
ಧಾರಾಳವಾಗಿ ನೀಡಲಾಗುವುದು.

ಕೆಲವು ದಿನಗಳ ಹಿಂದೆ
ನ್ಯಾಯಬೆಲೆ ಅಂಗಡಿಯಿಂದ ಹಿಂದಿರುಗಿದಾಗ
ಅವಳ ಕಾಲುಗಳು ಕಾಣಲಿಲ್ಲ,
ಸೀಮೆಎಣ್ಣೆ ಕ್ಯೂನಲ್ಲಿ
ಖಾಲಿ ಡಬ್ಬದ ಬದಲಾಗಿ
ಕಾಲುಗಳನ್ನು ಬಿಟ್ಟು ಬಂದುದಾಗಿ ತಿಳಿಸಿದಳು.

ಗಾಬರಿಯಾಗಿ ನಾನು
ಅವಳ ಕೈ ಹಿಡಿದು
ಸಮಾಧಾನ ಮಾಡಲು ಹೋದರೆ
ಕೈಗಳೇ ಕಾಣಲಿಲ್ಲ,
ಸಕ್ಕರೆ ಕ್ಯೂನಲ್ಲಿ ಬಿಟ್ಟು ಬಂದಿದ್ದಳಂತೆ.

“ನಿನ್ನ ಹೃದಯವನ್ನು ಎಲ್ಲಿ ಬಿಟ್ಟು ಬಂದೆ?”
ಎಂದೆ.
“ಸಿನಿಮಾ ಥೇಟರಿನಲ್ಲಿ” ಎಂದಳು.

ಅಳಿದುಳಿದ ಹೆಂಡತಿ ಅವಳನ್ನು
ಗಂಟುಕಟ್ಟಿ ಅಡುಗೆ ಮನೆಗೆ ಎಸೆದೆ.
ಅಂದಿನಿಂದ ಅವಳೇ ಕಾಣುತ್ತಿಲ್ಲ.
ಕಂಡು ಹಿಡಿದು ಕೊಟ್ಟವರಿಗೆ
ತಕ್ಕ ಸನ್ಮಾನ ಮಾಡಲಾಗುವುದು
****

“ನನ್ನ ಪ್ರೀತಿಯ ಹೆಂಡತಿಯೇ
ನೀನು ಎಲ್ಲಿದ್ದರೂ ಕೂಡಲೆ
ಹಿಂದಿರುಗುವುದು.
ನೀನಿಲ್ಲದೆ ನಾವು ಪರಿತಪಿಸುತ್ತಿದ್ದೇವೆ.
ಇನ್ನು ಮೇಲೆ
ನಿನ್ನನ್ನು
ರೇಷನ್ ಅಂಗಡಿಗೆ, ಸಿನಿಮಾಕ್ಕೆ
ಕಳಿಸುವುದಿಲ್ಲ,
ನಾನೇ ಅಲ್ಲಿಗೆಲ್ಲ ಹೋಗಿ
ಕಳೆದು ಹೋಗುತ್ತೇನೆ,-

ಇಂತು,
ಇನ್ನೂ ಕಳೆದು ಹೋಗದೆ ಪರಿತಪಿಸುತ್ತಿರುವ
ನಿನ್ನ ಪ್ರೀತಿಯ ಮಕ್ಕಳು ಮತ್ತು ಪತಿ

 

ತಮಿಳು ಮೂಲ: ಪುವಿಯರಸು
ಅನುವಾದ: ಓ ಎಲ್ ನಾಗಭೂಷಣ ಸ್ವಾಮಿ
(ಮುಖಪುಟ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ