Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಸ್ವಪ್ನ-ದರ್ಶಿನಿ (ಕವಿತೆ)

ಕನಸುಗಳು ಮಾರಾಟಕ್ಕಿವೆ-
ಎಂದು ಕೂಗುವವರ ಬಳಿ
ತಕ್ಕಡಿ ಇರಲಿಲ್ಲ; ಮತ್ತು-
ತೂಕದ ಬಟ್ಟುಗಳೂ..

ಹಸಿದವರಿಗೆ ಅಂದವಾದ ಮೊರಗಳಲ್ಲಿ
ಅನ್ನದ ಕನಸುಗಳನ್ನು
ಸುರಿಯಬಹುದವರು..

ತುಂಬ ಹಂಬಲಿಸುವವರಿಗೆ
ಉಡಿತುಂಬ ಕನಸುಗಳದೇ ಬಾಗಿನ..

ನಿಂತು ನೋಡುವವರನ್ನು
ಹೋಗಾಚೆ!: ಎಂದು ಎಂದೂ
ತಳ್ಳಿದವರಲ್ಲ; ಒಳ್ಳೆಯವರು..

ಹಣಿಕಿಣಿಕಿ, ಥರಾವರಿ
ಕನಸುಗಳ ವ್ಯೆಖರಿ, ಕುಸುರಿ;
ಯಾರು ಬೇಕಾದರೂ ಕಣ್ದೆರೆದು
ನೋಡಲು- ಉಚಿತ ಪ್ರದರ್ಶನ!

ಯಾರ್ಯಾರಿಗೆ ಕನಸುಗಳು
ಬಹುಶಃ ಎಂದೋ ಕಂಡ
ಅಥವಾ ಕಾಣಬಯಸಿದ್ದು
ಇದ್ದಿರಬಹುದವು… ಅಥವಾ
ಆಗಾಗ ಹೇಗೋ ನುಸುಳಿ, ಕದ್ದು
ತೂರಿಬಂದಂಥವು..

ಇನ್ನು ಕೆಲವು, ಯಾಕಾದರೂ ಇಂಥ
ಕನಸು ಮನಸಲ್ಲಿ ಮೂಡಿತ್ತೋ-
ಸಾಕು-ಸಾಕೆಂದು ಕೈಚೆಲ್ಲಿದಂಥವು..

ತುಂಬ ಸುಂದರವಾದ ಕನಸುಗಳೂ
ಇವೆ- ಅವರ ಬಳಿಯಲ್ಲಿ!

ಹೂವ ಹಾಸಿನ ಮೇಲೆ ಪಲ್ಲಕ್ಕಿಯೊಳಗೆ
ಮಲ್ಲಿಗೆಯ ಪರಿಮಳವೇ ಮೈವೆತ್ತ- ಕನಸು!
ದಡದ ಗೊಂಡಾರಣ್ಯದಲಿ ಮುಗಿಲೆತ್ತರ ಮರದ
ತುದಿಯಲಿ ಜೋತಾಡುವ ಸೀತಾಳೆ- ಕನಸು!
ಸೂರ್ಯನನು ಬೊಗಸೆಯಲಿ ತುಂಬಿಸಿ
ಕೆಂಪುಕಾದ ಬೆರಳುಗಳಗುಂಟ
ಹರಿವ ಬೆಳಕನು ಹರಿಸಿ
ಜೀವ ತಬ್ಬುವ- ಕನಸು!

ಸೊಗಸು..
ಒಮ್ಮೆ ‘ಕಣ್ಣುʼ ಬಿಡುವತನಕ!

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ