ಸಾಸಿವೆ ಕಳುವಾಗಿದೆ
ಈ ಧರೆ
ತನ್ನೊಡಲ ಮೊಳೆಯಿಸುವ ಶಕುತಿಯ ಅದೆಲ್ಲಿಂದ
ಹೊತ್ತು ತಂದಳೋ?
ನಮ್ಮವ್ವಂದಿರ
ಸೆರಗ ಕಥೆಗಳ ಗುಡುಸೊಂದು
ಕಳುವಾಗಿದೆ
ಆ ಆಗಸ
ತನ್ನಾಸು ದೇಹವ
ಅದೆಲ್ಲಿಂದ
ಹೊಂದು ತಂದನೋ?
ನಮ್ಮವರ ಅನಂತ ಬಾಹುಗಳಲಿ
ಕಾರಳ್ಳೊಂದು
ಕಳುವಾಗಿದೆ
ಈ ಸೂರಿಯ
ತನ್ನಾಳದ ಝಳವ
ಅದೆಲ್ಲಿಂದ
ಕದ್ದು ತಂದನೋ?
ನಮ್ಮವರ
ಎದೆಯುರಿಯ ಮೆದೆಯಲಿ
ಸಾಸಿವೆಯೊಂದು ಕಳುವಾಗಿದೆ
ಆ ಮೇಘಗಳು
ತನ್ನಿಂಪು ಗರ್ಭವ
ಬತ್ತದಂತೆ
ಅದೆಲ್ಲಿಂದ
ಕಾದು ತುಂಬಿತೋ?
ನಮ್ಮವರ ಕಣ್ಣ ಕಡಲಲಿ
ಬೊಗಸೆ ಕಳುವಾಗಿದೆ
ಈ ವೃಕ್ಷಸಂಕುಲ
ತನ್ನಿರುವಿಕೆಯ ಉಸಿರ
ಅದೆಲ್ಲಿಂದ
ಕಾಡಿ ತಂದಿತೋ?
ನಮ್ಮವರ
ನಿಟ್ಟುಸಿರ ಬಿಂಬ
ಕಳುವಾಗಿದೆ
ಆ ನೀರ ಸೆಳೆಗಳು
ತನ್ನುದ್ದದ ಅಲೆಯ
ಅದೆಲ್ಲಿಂದ
ಅದ್ದಿ ತಂದಿತೋ?
ನಮ್ಮವರ
ಬೆವರ ಲೋಕದಲೊಂದು
ಹಟ್ಟಿ ಕಳುವಾಗಿದೆ
ಆ ಬೆಟ್ಟಸಾಲುಗಳು
ತನ್ನೊರಟು ಗುಣವ
ಅದೆಲ್ಲಿಂದ
ನುಂಗಿ ತಂದಿತೋ?
ನಮ್ಮವರ
ದವಡೆ ತಿಕ್ಕಾಟದಲ್ಲಿ
ಮೊನೆ ಚೂರು ಕಳುವಾಗಿದೆ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ