Advertisement
ಡಾ. ದಿಲೀಪ್ ಎನ್ಕೆ ಬರೆದ ಈ ದಿನದ ಕವಿತೆ

ಡಾ. ದಿಲೀಪ್ ಎನ್ಕೆ ಬರೆದ ಈ ದಿನದ ಕವಿತೆ

ಸಾಸಿವೆ ಕಳುವಾಗಿದೆ

ಈ ಧರೆ
ತನ್ನೊಡಲ ಮೊಳೆಯಿಸುವ ಶಕುತಿಯ ಅದೆಲ್ಲಿಂದ
ಹೊತ್ತು ತಂದಳೋ?
ನಮ್ಮವ್ವಂದಿರ
ಸೆರಗ ಕಥೆಗಳ ಗುಡುಸೊಂದು
ಕಳುವಾಗಿದೆ

ಆ ಆಗಸ
ತನ್ನಾಸು ದೇಹವ
ಅದೆಲ್ಲಿಂದ
ಹೊಂದು ತಂದನೋ?
ನಮ್ಮವರ ಅನಂತ ಬಾಹುಗಳಲಿ
ಕಾರಳ್ಳೊಂದು
ಕಳುವಾಗಿದೆ

ಈ ಸೂರಿಯ
ತನ್ನಾಳದ ಝಳವ
ಅದೆಲ್ಲಿಂದ
ಕದ್ದು ತಂದನೋ?
ನಮ್ಮವರ
ಎದೆಯುರಿಯ ಮೆದೆಯಲಿ
ಸಾಸಿವೆಯೊಂದು ಕಳುವಾಗಿದೆ

ಆ ಮೇಘಗಳು
ತನ್ನಿಂಪು ಗರ್ಭವ
ಬತ್ತದಂತೆ
ಅದೆಲ್ಲಿಂದ
ಕಾದು ತುಂಬಿತೋ?
ನಮ್ಮವರ ಕಣ್ಣ ಕಡಲಲಿ
ಬೊಗಸೆ ಕಳುವಾಗಿದೆ

ಈ ವೃಕ್ಷಸಂಕುಲ
ತನ್ನಿರುವಿಕೆಯ ಉಸಿರ
ಅದೆಲ್ಲಿಂದ
ಕಾಡಿ ತಂದಿತೋ?
ನಮ್ಮವರ
ನಿಟ್ಟುಸಿರ ಬಿಂಬ
ಕಳುವಾಗಿದೆ

ಆ ನೀರ ಸೆಳೆಗಳು
ತನ್ನುದ್ದದ ಅಲೆಯ
ಅದೆಲ್ಲಿಂದ
ಅದ್ದಿ ತಂದಿತೋ?
ನಮ್ಮವರ
ಬೆವರ ಲೋಕದಲೊಂದು
ಹಟ್ಟಿ ಕಳುವಾಗಿದೆ

ಆ ಬೆಟ್ಟಸಾಲುಗಳು
ತನ್ನೊರಟು ಗುಣವ
ಅದೆಲ್ಲಿಂದ
ನುಂಗಿ ತಂದಿತೋ?
ನಮ್ಮವರ
ದವಡೆ ತಿಕ್ಕಾಟದಲ್ಲಿ
ಮೊನೆ ಚೂರು ಕಳುವಾಗಿದೆ

About The Author

ಡಾ. ದಿಲೀಪ್ ಎನ್ಕೆ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ