Advertisement
ಡಾ. ಮಲರ್‌ ವಿಳಿ ಕೆ ಅನುವಾದಿಸಿದ ತಮಿಳಿನ ಸಂಗಂ ಸಾಹಿತ್ಯದ ಒಂದು “ಪುರನಾನೂರು” ಕವಿತೆ

ಡಾ. ಮಲರ್‌ ವಿಳಿ ಕೆ ಅನುವಾದಿಸಿದ ತಮಿಳಿನ ಸಂಗಂ ಸಾಹಿತ್ಯದ ಒಂದು “ಪುರನಾನೂರು” ಕವಿತೆ

(ನನ್ನನ್ನು ಚೆನ್ನಾಗಿ ಅರಿತ ನಿನ್ನ ಹೇಗಾದರೂ ಬೆಂಬತ್ತಿ ಸುತ್ತಿ ಉಡುಗೊರೆ ಪಡೆವೆ)
ಇಳಂ ಕುಮಣನ್‌ ತನ್ನ ಅಣ್ಣನ ಆಳ್ವಿಕೆಯನ್ನು ವಶಪಡಿಸಿಕೊಂಡಾಗ, ಕಾಡಿನಲ್ಲಿ ಬಾಳುತ್ತಿದ್ದ ಕುಮಣನ್‌ ಎಂಬ ಅರಸನ ಬಳಿ ಪೆರುಂದಲೈ ಸಾತ್ತನಾರ್‌ ಹಾಡುವ ಹಾಡೇ ಇದು! ಎಂದು ಓದುಗರಾದ ನಮ್ಮ ಮನ ಗಾಬರಿಗೊಳಗಾಗುತ್ತದೆ. ಆದರೆ ಹಾಡಿದ ಕವಿ ಎಂಥ ಇಕ್ಕಟ್ಟಿನಲ್ಲಿ ಇದ್ದಿದ್ದರೆ ಕುಮಣನ್‌ʼ ನ ಬಳಿ ಹೋಗಿರಬೇಕು ಎಂಬುದನ್ನು ಕವಿಯ ಹಾಡು ಸ್ಪಷ್ಟಪಡಿಸುತ್ತದೆ.

ಹಲವು ಜೋಡಿಸಿದ,
ಮೀಟುವಂತಹ ತಂತಿಯನ್ನುಳ್ಳ
ಚರ್ಮದಿಂದ ಹೊದಿಸಲ್ಪಟ್ಟ ಒಳ್ಳೆಯ ಯಾಳ್! (ಚಿಕ್ಕ ವೀಣೆ)
ಲೇಪ ಹಚ್ಚಿದ ಮದ್ದಳೆ ಆದಿಯಾಗಿ
ಇವುಗಳೆಲ್ಲ ಇರುವ
ನಾಟ್ಯತಂಡದವರ ಬಡತನವ ನೀಗಿಸುವ
ಮನೆತನದಲ್ಲಿ ಹುಟ್ಟಿದವನೇ!ʼ
ಶ್ರೇಷ್ಠ ಯುದ್ಧ ಮಾಡುವ ಕುಮಣನೇ!
ನನ್ನ ಮನೆಯಲ್ಲಿ
ಅಡುಗೆ ಮಾಡುವುದನ್ನೇ
ಹಲವು ದಿವಸ
ಮರೆತು ಹೋದುದರಿಂದ
ಒಲೆಯ ಬದಿಗಳು ಸವೆಯದೆ
ಎತ್ತರವಾಗಿವೆ.
ಆ ಒಲೆಯಲ್ಲಿ
ಅಣಬೆಗಳು ಅರಳಿವೆ
ದೇಹವ ಕೃಶವಾಗಿಸುವ ಹಸಿವಿನಿಂದ
ನನ್ನ ಹೆಂಡತಿ ಬಾಡಿ ಬಸವಳಿದಿದ್ದಾಳೆ;
ಅವಳ ಎದೆಯಲಿ ಹಾಲು ಉತ್ಪತ್ತಿಯಾಗದ ಕಾರಣ
ಸಣ್ಣಗಾಗಿ, ಬಾಡಿ, ರಂಧ್ರ ಮುಚ್ಚಿ
ಅವಳ ಮೊಲೆ ಬರಿದಾಗಿ ಹೋಯಿತು
ಅಳುವ ತನ್ನ ಮಗು ಆ ಮೊಲೆಯಲಿ
(ಹಾಲು) ಕುಡಿವಾಗಲೆಲ್ಲಾ ಕಂದನ ಮೊಗವ ನೋಡಿ
ಅವಳ ಎವೆಗಳು ಕಣ್ಣೀರಿನಿಂದ ನೆನೆಯುತ್ತಿವೆ
ಅವಳ ವ್ಯಥೆಯ ಕಂಡ ನಾನು,
ನಮ್ಮ ಬವಣೆಯ ನೀಗಿಸುವುದಕ್ಕೆ
ಅರ್ಹನು ನೀನೇ ಎಂದೆಣಿಸಿ
ನಿನ್ನ ಬಳಿ ಬಂದೆನು.

ನನ್ನ ಬಡತನದ ಸ್ಥಿತಿಯನ್ನು
ನಿನ್ನಿಂದ ಚೆನ್ನಾಗಿ ಅರಿಯಲು ಸಾಧ್ಯ ಎಂಬುದರಿಂದ
ನನ್ನ ಇಂಥ ಸ್ಥಿತಿಯಲ್ಲೂ
ನಿನ್ನ ಸುತ್ತಿ ಬಳಸಿಯಾದರೂ,
ಉಡುಗೊರೆ ಪಡೆಯದೆ ಇರಲಾರೆ.

ತಮಿಳು ಮೂಲ: ಪ್ರೊ. ಸಾಲಮನ್‌ ಪಾಪಯ್ಯ
ವಿಶೇಷಾಂಶ: ಕುಮಣನೆಂಬ ಅರಸನ ತಮ್ಮ ತನ್ನ ಅಣ್ಣನ ನಾಡನ್ನು ಅಪಹರಿಸಿಕೊಂಡಿದ್ದಾಗ ಕಾಡಿನಲ್ಲಿ ಬಾಳುತ್ತಿದ್ದ ಕುಮಣನ್‌ ಎಂಬ ಅರಸನ ಬಳಿ ಕವಿ ಪೆರುಂದಲೈಸಾತ್ತನಾರ್‌ ಹಾಡುವ ಹಾಡು ಇದು. ಎಂಥ ಕಿತ್ತು ತಿನ್ನುವ ಬಡತನವಿದ್ದರೆ ಹೀಗೆ ಹೋಗಿ ಹಾಡಿರಬೇಕು ಅನ್ನಿಸುತ್ತದೆ.

About The Author

ಡಾ. ಮಲರ್ ವಿಳಿ

ಡಾ. ಮಲರ್ ವಿಳಿ ಮೂಲತಃ ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಪ್ರಸ್ತುತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಮಾಸ್ತಿ ಮತ್ತು ಪುದುಮೈಪಿತ್ತನ್ ಸಣ್ಣ ಕಥೆಗಳ ಒಂದು ಅಧ್ಯಯನ” ಎಂಬ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಕಳೆದ ಎರಡು ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ-ತಮಿಳು ಭಾಷೆಯ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.  “ವೈರಮುತ್ತುರವರ 33 ಕವಿತೆಗಳು”, “ಒಂಭತ್ತನೆಯ ತಿರುಮುರೈ”,“ಧ್ಯಾನಲಿಂಗ ಗುರು ತಂದ ಗುರು”  “ಪುದುಮೈಪಿತ್ತನ್” , ಡಾ. ಸಿದ್ದಲಿಂಗಯ್ಯನವರ “ಕನ್ನಡ ಕವಿಞರ್ ಸಿದ್ಧಲಿಂಗಯ್ಯವಿನ್ ನಾರ್ಪದು ಕನ್ನಡ ಕವಿದೈಗಳ್” ಜೊತೆಗೆ ಇನ್ನೂ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ