Advertisement
ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ

ಪಾಂಚಾಲಿ ಸ್ವಗತ

ಗಂಡರೈವರಿಗೂ ಗಂಡೆದೆ ಇತ್ತು!
ಜಗತ್ತೇ ಬಲ್ಲದದನು.
ಬಿಟ್ಟರೆ ಎದೆಯನು ಸೀಳುವ ಕಲಿಗಳು
ಚಿತ್ತವನರಿಯದೆ ತೆಪ್ಪಗೆ ಕೂತರು
ದುರುಳನೊಬ್ಬ ಮುಂದಲೆಗೆ
ಕೈಯಿಟ್ಟು ಸೆಳೆದಾಗ
ಅದೇ ಕೈಗಳು ಸೆರಗಿಗೆ ಜಾರಿದಾಗ!

ಭೀಮ ಹಲ್ಲು ಕಚ್ಚುತ್ತಿದ್ದ; ಆತನಿಗೋ?
ಎಲ್ಲರಿಗಿಂತ ಕೊಂಚ ಅನುರಾಗ
ನನ್ನ ಮೇಲೆ.. ಆದರೂ…
ಪಾಪ! ಅಣ್ಣನಾಜ್ಞೆಯನು ಮೀರದಾದ!

ಆಜ್ಞೆ…?! ಯಮನ ಮಗನ ಕಟ್ಟಾಜ್ಞೆ!
“ಅವನೊಬ್ಬ ತಿಳಿಗೇಡಿ!”
ತಪ್ಪೆನುವಿರಾ ಇದನು?
ಬಾಯಿ ಜಾರಿದ ಮಾತಲ್ಲ!
ಬೇಕಂತಲೇ ನುಡಿದ ತಿರುಳು.

ಅರ್ಜುನ.. ಅಬ್ಬಾ! ಬಿಲ್ವಿದ್ಯೆ ಪ್ರವೀಣ!
ಶಿವನಿಂದ ಪಾಶುಪತಾಸ್ತ್ರ ಪಡೆದವನು.
ಸಕಾಲಕ್ಕೆ ಸಲ್ಲದ ಶಸ್ತ್ರಗಳ
ಒಡೆಯನಿಗೆ ಏನೆನ್ನಬೇಕೋ?

ಭೂತ ಭವಿಷ್ಯಗಳ ಬಲ್ಲವನಂತೆ
ಸಹದೇವ? ದಿವ್ಯಜ್ಞಾನಿ!
ಬಾಯ್ತೆರೆದರೆ ಸಾವಿತ್ತೆ?
ಸಾವೇ ಹೆಚ್ಚಾಯ್ತೆ?
ಸಮರ್ಥಿಸಲು ಸಮಯವಿಲ್ಲ
ಅವನೀಗ ಅಸಹಾಯಕ;
ನಕುಲ? ಪಾಪ ಅಮಾಯಕ!

ಮತ್ಸ್ಯದೇಶದೊಳ್ ಕೀಚಕ ಬೆನ್ನತ್ತಿದಾಗ
ಎಲ್ಲಾ ಎಲ್ಲೆಗಳ ಮೀರಿದವನು
ಕಂಬನಿಯೊಡನೆ ಮಿಡಿದವನು
ಕಲಿಭೀಮ! ನನ್ನ ಬಲಭೀಮ!

ಉಳಿದವರಿಗೇನು ಹಕ್ಕುಂಟು;
ನನ್ನ ಪಕ್ಕದಲ್ಲಿರಲು?
ನನಗೆ ಗಂಡನೋರ್ವನೆ!
ಭೀಮನಷ್ಟೆ! ನಾ ಭೀಮನಿಗಷ್ಟೇ!

ಜಗಕೆ ನಾ ಪಾಂಚಲಿಯಾದರೂ
ಪಾಂಡವೈವರ ಅರ್ಧಾಂಗಿಯಾಗಲಾರೆ,
ನನ್ನನ್ನೇ ನಾನು ಚೂರುಗೊಳಿಸಲಾರೆ
ಏಕೆಂದರೆ
ನನ್ನ ಹೃದಯ ಸದಾ ನಿಷ್ಕಲ್ಮಶ!
ಅನುರಾಗವೂ ಕೂಡ.

About The Author

ಮನು ಗುರುಸ್ವಾಮಿ

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಬ್ಬೆರಗು (ನಾಟಕ), ಅವಳೂ ಕತೆಯಾದಳು (ನೀಳ್ಗತೆ), ಕಲ್ಲು ದೇವರು ದೇವರಲ್ಲ (ಸಂಶೋಧನಾ ನಿಬಂಧ), ಗಾಂಧಿ ನೀ ನನ್ನ ಕೊಂದೆ (ನಾಟಕ) ಇವರ ಪ್ರಕಟಿತ ಕೃತಿಗಳು. ನಿನ್ನ ಇಚ್ಛೆಯಂತೆ ನಡೆವೆ (ಲೇಖನ ಸಂಕಲನ), ವ್ಯಭಿಚಾರಿ ಹೂವು ( ಕವನ ಸಂಕಲನ) ಅವಳು ಮತ್ತು ಸಾವು (ಗೀಚು ಬರಹ), ಹುಡುಗಿಯರ ಸೇಫ್ಟಿಪಿನ್ ಅಲ್ಲ ಹುಡುಗರು ( ವ್ಯಕ್ತಿತ್ವ ವಿಕಸನ), ಮೈಮನ ಮಾರಿಕೊಂಡವರು (ನೀಳ್ಗತೆ) ಪ್ರಕಟಣಾ ಹಂತದಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿನ ಬಡಮಕ್ಕಳ ಅನುಕೂಲಕ್ಕಾಗಿ ಕುವೆಂಪು ಪುಸ್ತಕ ಮನೆ ಎಂಬ ಹೆಸರಿನ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ