Advertisement
ರಜನಿ ಗರುಡ ಬರೆದ ದಿನದ ಕವಿತೆ

ರಜನಿ ಗರುಡ ಬರೆದ ದಿನದ ಕವಿತೆ

ಅಭಾವ ಗೀತೆ

ನಸುಗಂಪು ಹೂ ಕೈಬೆರಳ ತುದಿಯಲ್ಲಿ ಅರಳಿತ್ತು
ಬೆಳಗು ಕಾಣುವ ಮೊದಲೆ ಪಕಳೆಯೆಲ್ಲ ಉದುರಿ ಹೋಯಿತು

ನಡುನೆತ್ತಿ ತಂಪಾಗಿ ಹಿತವಾದ ಧಾರೆ ಸುರಿಯುತ್ತಿತ್ತು
ಮೈಯ ಸೋಕದೆ ಬೆನ್ನಹುರಿಗುಂಟ ಹರಿದು ಹೋಯಿತು

ಕತ್ತಲೆಯಲಿ ಕೃತಿಕಾ ಪುಂಜದಂತೆ
ನಗುವು ಹೊಳೆಯುತ್ತಿತ್ತು
ಮುಖಮಾತ್ರ ಸವರಿ ಕನಸ ಸಂಧಿಸದೆ ಹಾದುಹೋಯಿತು

ಬಿಂಕದ ಬೆಳದಿಂಗಳು ಕನಸುತ್ತ ಸಂಭ್ರಮಿಸಿ ಮಲಗಿತ್ತು
ಘನವಾದ ನಿರ್ಲಕ್ಷ್ಯವು ತಬ್ಬಿ ಮಿಸುಕಾಡದಂತೆ ಹಿಡಿದಿತ್ತು

ಇನಿದಾದ ದನಿ ತನ್ಮಯದಿ ತನ್ನಷ್ಟಕ್ಕೆ ಹಾಡಿಕೊಂಡಿತ್ತು
ತಣ್ಣಗಿನ ಕೈ ಭರವಸೆಯ ಕೊರಳ ಕೊಯ್ಯುತ್ತಿತ್ತು

ಹೊಸತಾಗಿ ಹಸಿರು ಚಿಗಿಯಲು ಹಳೆಕೊಂಬೆ ಕಾಯುತ್ತಿತ್ತು ಮಳೆಭರವಸೆಯ ಕಪ್ಪುಮೋಡ
ಸುಮ್ಮನೆ ದಾಟಿಹೋಯಿತು

ಉದುರಿದ್ದು, ಹರಿದಿದ್ದು, ಹಾದುಹೋಗಿದ್ದು, ಹಿಡಿದಿದ್ದು,
ಕೊಯ್ದಿದ್ದು, ದಾಟಿದ್ದು…..
ಎಲ್ಲವೂ ಕೈ ಮುಗಿದು ನಿಂತಿದ್ದವು
ಅಶಕ್ತ ಪ್ರೇಮದ ಎದುರು

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ರಜನಿ ಗರುಡ

ಮೂಲತಃ ಶಿರಸಿಯವರು. ಈಗ ಧಾರವಾಡದಲ್ಲಿ ನೆಲಸಿದ್ದಾರೆ. ನೀನಾಸಂ ರಂಗಶಿಕ್ಷಣ ಪಡೆದು ರಂಗಭೂಮಿಯ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಗೊಂಬೆಮನೆ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸಂಗೀತ, ನೃತ್ಯ, ನಟನೆ, ನಿರ್ದೇಶನ, ರಂಗತರಬೇತಿ ಶಿಬಿರಗಳು, ಗೊಂಬೆ ತಯಾರಿಕೆ ಮತ್ತು ಪ್ರದರ್ಶನ ಹೀಗೆ ಹಲವು ಆಸಕ್ತಿಯ ಕ್ಷೇತ್ರಗಳು. ಹವ್ಯಾಸಿ ಬರಹಗಾರರು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ