Advertisement
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

ಬೊಗಸೆ ತುಂಬುವ ಬುತ್ತಿ

ಕಾಲದ ಹಾದಿಯ ನಿರಂತರ ನಡಿಗೆಯಲ್ಲಿ
ನೆತ್ತಿಯ ಮೇಲೆ ಹೊಳೆದದ್ದು ಅದೆಷ್ಟೋ ತಾರೆ.
ಬಿರು ಗಾಳಿಗೆ ಸುಡು ಬಿಸಿಲಿಗೆ
ಕಣ್ಣು ಕತ್ತಲು ಕವಿದಂತಾಗಿ
ನಡೆಯಲಾಗದೆ ನಿಂತ ಕ್ಷಣಗಳಲ್ಲಿ,
ಕುಸಿಯಲು ಎಂದೂ ಬಿಟ್ಟಿಲ್ಲ ನಂಬಿ ನಿಂತ ನೆಲದೂರು.

ಏರಿದ ಏರಿಗೆ ಕೈಹಿಡಿದು
ಜಾರಿದ ಮಣ್ಣಿಗೂ ಕೈಕೊಟ್ಟವರಿಂದಲೇ
ನೆಲದ ಹಸಿರು ಇನ್ನೂ ನಳನಳಿಸುತ್ತಿದೆ.
ಬೇಸರಿಲ್ಲದ ಹಾಗೆ ಎದ್ದು ನಿಂತು
ಮತ್ತೆ ಮತ್ತೆ ನಡೆಯುವಷ್ಟು ಕಸುವೂ
ಹಾಗೆಯೇ ಉಳಿದುಕೊಂಡಿದೆ.

ಭೂಮಿ ಆಕಾಶ ಸಂಧಿಸದೇ ಉಳಿದಲ್ಲಿ
ಸದಾ ಕಣ್ಮಿಟುಕಿಸಿ ಕರೆಯುವ ಬಯಲು.
ಚಲಿಸುವ ಚಕ್ರಗಳು ಮುರಿದ ಕಡೆಯಲ್ಲೆಲ್ಲಾ
ಹಾರುವ ಬಣ್ಣಬಣ್ಣದ ಚಿಟ್ಟೆಗಳ ನೆರಳು
ಹಿಡಿ ಹಿಡಿ ಎಂದು ಸವಾಲೆಸೆದು
ಮುಟ್ಟದಂತೆ ಮುಟ್ಟಿ
ಹತ್ತಿರವಾದಂತೆ ದೂರ ಸರಿದು
ಸದಾ ಸೆಳೆಯುವ ಸಂತಸದ ಹೊನಲು.

ಯಾವುದು ನಿಜ? ಯಾವುದು ಸುಳ್ಳು?
ಯಾವುದದು ಸಿಕ್ಕಿದರೆ ಸಾಕೆನ್ನಿಸುವ ಕೆಳೆಕೂಟ?
ಇಲ್ಲಿಂದಲ್ಲಿ: ಅಲ್ಲಿಂದಿಲ್ಲಿ.
ಯಾವುದದು ಮತ್ತೆ ಮರಳುವ ಹಂಬಲವನ್ನೇ
ಮರೆಸುವ ನೋಟ?

ಚಿಟ್ಟೆಯಾಗುವ ಬೆಳಕಿನಲ್ಲಿ
ಹಾದಿಯ ತುಂಬಾ
ಕೋಶವಾಗಿಯೇ ಕಾಯುವ
ನೂರು ಕನಸ ತತ್ತಿ.
ನೆಲಮುಗಿಲ ನೆನಪಳಿದು
ನಿಂತಾಗ ಸುಮ್ಮನೆ,
ಬದುಕು ನಿರಂತರ
ಬೊಗಸೆ ತುಂಬುವ ಬುತ್ತಿ.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

1 Comment

  1. ಅಮರದೀಪ್ .ಪಿ.ಎಸ್‌.

    ಚೆನ್ನಾಗಿದೆ ಸರ್

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ