ಪ್ರತಿ ವರ್ಷದಂತೆ ಈ ಬಾರಿಯೂ ಈ ಹೊತ್ತಿಗೆಯ ವಾರ್ಷಿಕ ಕಥಾ ಮತ್ತು ಕಾವ್ಯ ಪ್ರಶಸ್ತಿಗಳು ಪ್ರಕಟಗೊಂಡಿವೆ. ಕವಿ, ವಿಮರ್ಶಕಿ, ಚಿತ್ರದುರ್ಗದ ಡಾ. ತಾರಿಣಿ ಶುಭದಾಯಿನಿ ಅವರ ಅಪ್ರಕಟಿತ ಕವನ ಸಂಕಲನ, ‘ಪೆನಲೊಪಿ’ ೨೦೨೬ ನೇ ಸಾಲಿನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಮತ್ತು ಕತೆಗಾರ, ಕಾದಂಬರಿಕಾರ, ಕಾರ್ಕಳದ ಮನೋಹರ ಎಂ. ಪೈ ಅವರ ಅಪ್ರಕಟಿತ ಕಥಾಸಂಕಲನ, ‘ಲಾಧಾಕ್ಲಿಸ್ಣ ಮತ್ತು ಇಂದಿಲಾ ಕ್ಯಾಂಟೀನು’ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಪಡೆದುಕೊಂಡಿವೆ.
ಕಾವ್ಯ ವಿಭಾಗಕ್ಕೆ ಹಿರಿಯ ಕವಿಗಳಾದ ಶ್ರೀ. ಆನಂದ ಝುಂಜರವಾಡ ಅವರು ತೀರ್ಪುಗಾರರಾಗಿದ್ದರು ಮತ್ತು ಕಥಾವಿಭಾಗಕ್ಕೆ ಹಿರಿಯ ಸಾಹಿತಿ ಶ್ರೀಮತಿ. ಜಯಶ್ರೀ ದೇಶಪಾಂಡೆ ಅವರು ತೀರ್ಪುಗಾರರಾಗಿದ್ದರು. ಎರಡೂ ಪ್ರಶಸ್ತಿಗಳು ತಲಾ ೧೦,೦೦೦ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿವೆ. ಬರುವ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ, ವಿಜೇತ ಕೃತಿಗಳ ಬಿಡುಗಡೆಯನ್ನು ಮಾಡಲಾಗುವುದು ಎಂದು ಈ ಹೊತ್ತಿಗೆ ಟ್ರಸ್ಟ್ ನ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ್ ಅವರು ತಿಳಿಸಿದ್ದಾರೆ.
ಡಾ. ತಾರಿಣಿ ಶುಭದಾಯಿನಿ
ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ, ಪೂರ್ವಭಾಷಿ ಹಾಗು ವಿವೇಕಿಯ ಸ್ವಗತ ಇವು ಕವಿ, ವಿಮರ್ಶಕಿಯಾಗಿ ಖ್ಯಾತರಾದ ಡಾ. ತಾರಿಣಿ ಶುಭದಾಯಿನಿ ಅವರ ಪ್ರಕಟಿತ ಕವನ ಸಂಕಲನಗಳು. ಹೆಡೆಯಂತಾಡುವ ಸೊಡರು, ಗಳಿಗೆ ಬಟ್ಟಲು, ಸನ್ನೆಗೋಲು, ಸಾಮಯಿಕ ಹಾಗು ಅಂಗುಲಹುಳುವಿನ ಇಂಚುಪಟ್ಟಿ, ಇವು ವಿಮರ್ಶಾ ಸಂಕಲನಗಳು,ಡಯಾಸ್ಪೋರಾ ವಿಮರ್ಶಾ ಪರಿಭಾಷೆಯ ಸಂಕಥನದ ಪುಸ್ತಕ. ‘ಮಹಿಳಾ ವಿಚಾರ ಸಾಹಿತ್ಯ ಚರಿತ್ರೆ’ ಇದು ಇವರ ಸಂಪಾದಿತ ಕೃತಿ.
ಎಂ ಮನೋಹರ ಪೈ
ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಎಂ. ಮನೋಹರ ಪೈ ಯವರು ದೇಶ, ವಿದೇಶಗಳಲ್ಲಿನ ಉದ್ಯೋಗದ ಬಳಿಕ ಈಗ ಹುಟ್ಟೂರು ಕಾರ್ಕಳದಲ್ಲಿ ವಾಸವಾಗಿದ್ದಾರೆ.
“ಕೊಳೆತ ಮಾವಿನ ಹಣ್ಣು” ಮತ್ತು “ನಾನು ಗುಣಿಸು ಎರಡು” ಎಂಬ ಕಥಾ ಸಂಕಲನಗಳು, “ತಂ ತಂ ತಥಾಸ್ತು” ಎಂಬ ಮಕ್ಕಳ ಪುಸ್ತಕ, “ಹರಿವ ನಿಲ್ಲಿಸದಿರು ತಾಯೇ…”, “ಪತ್ನೀ ಸಮೇತ ಪ್ರಣವ”, “ಅಕ್ಷಿ”, ಹಾಗೂ “ಸ್ವಾತಿ ಬೊಂಬಾಟ್” ಎಂಬ ನಾಲ್ಕು ಕಾದಂಬರಿಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
