Advertisement
ಪರಮೇಶ್ವರ ಗುರುಸ್ವಾಮಿ ಬರೆದ  ದಿನದ ಕವಿತೆ

ಪರಮೇಶ್ವರ ಗುರುಸ್ವಾಮಿ ಬರೆದ ದಿನದ ಕವಿತೆ

ಬಿಕ್ಕುವ ಜೋಗುಳ

ಕಚ್ಚಲು ಬೆದೆಗೊಂಡಿರುವ ಹುಚ್ಚುನಾಯಿ
ಜೊಲ್ಲ ಸುರಿಸುತ್ತಾ ಅಟ್ಟಾಡಿಸುತ್ತಿದೆ
ನಾಲಿಗೆಯನಿಳಿಬಿಟ್ಟು
ಊಳಿಡುತಿದೆ ಕಗ್ಗತ್ತಲೆಯ ಮುಸುಕಿನಲ್ಲಿ
ಮುರುಕು ಮಂಟಪದಲಿ ಸುಳಿವ ಗಾಳಿಯಂತೆ

ಖಾಲಿಯಾಗಿದೆ ಮುರಳಿಯ ಉಸಿರು
ಖಾಲಿ ತೊಟ್ಟಿಲಿಗೆ ಬಿಕ್ಕುವ ಜೋಗುಳ
ತೂಗುವ ಕೈಗಳೆ ನೇಣಿನ ಕುಣಿಕೆ
ಹಸುಳೆಯ ಹೆಣ ದಡದಲ್ಲಿ ಮಕಾಡೆ
ಬಣ್ಣಬಣ್ಣದ ಬಟ್ಟೆ ಆವಾರದಿ ತೇಲಿ
ಅನಾಹತ ಆಕ್ರಂದನ

ಮಗುಚಿಕೊಂಡ ಮರದ ಫಲಪುಷ್ಪ
ಸೊರಸೊರ ಹೀರಿದ ಸರಕಾರ
ನೀಗಿಸಲಾಗದ ಹಸಿವೆಯ ಮರಣ

ಬರಿದಾದ ಬತ್ತಳಿಕೆ
ಹೊರೆಹೊತ್ತ ಗರ್ಭ
ಪಾಷಾಣದ ಕವಚ

ಚಿಟ್ಟೆಯ ರೆಕ್ಕೆ ಒಣಗಿದ ಜಾಲಂದ್ರ
ಜಾಲಂದ್ರದ ಕಣ್ಣಲಿ ಸಾವಿರ ಗೋರಿ
ಗೋರಿಯ ಒಳಗೆ ದುಡಿಯುವ ಮನಸು
ಮನಸು ನಡೆದಿದೆ ಮಿಣುಕುಹುಳದ ಬೆಳಕಲಿ

ಕಾಲಬೇಕು, ಕಾಯಬೇಕು
ಮೆಟ್ಟಿಲ ಮೆಟ್ಟುವ ಮೆಟ್ಟುಗಳಿಗೆ
ಕುಸಿದ ಕೆಡವಿದ ಕಲ್ಯಾಣ ಚಿಗುರಲು
ಕಳಚಿದಾಸರೆಯ ನಿಲ್ಲಿಸಿ ಹಬ್ಬಲು ಹಂದರ

ಇವು
ಅನ್ನದ ಮಾತುಗಳಲ್ಲ
ಚಿನ್ನದ ಮಾತುಗಳೂ ಅಲ್ಲ
ಓಟಿನ ಮಾತುಗಳೂ ಅಲ್ಲ
ಜೀವದ ಮಾತುಗಳು

ಮೈಸೂರು ಮೂಲದ ಪರಮೇಶ್ವರ ಗುರುಸ್ವಾಮಿ ಬೆಂಗಳೂರುವಾಸಿ.
ಸಿನೆಮಾ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಆಸಕ್ತಿ.
ಸಿನೆಮಾ ತಾಂತ್ರಿಕತೆ ಮತ್ತು ಸಾಹಿತ್ಯದಲ್ಲಿ ಕಥನ ಪ್ರಯೋಗಗಳ ಬಗ್ಗೆ ವಿಶೇಷ ಆಸಕ್ತಿ.

 

(ಕಲೆ: ರೂಪಶ್ರೀ ಕಲ್ಲಿಗನೂರ್)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ