Advertisement
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರೆದ ಈ ದಿನದ ಕವಿತೆ

ಗೊತ್ತು ನನಗೆ

ಉದುರುವ ಎಲೆಗಳ ಲೆಕ್ಕ ಗಾಳಿ ಇಟ್ಟುಕೊಳ್ಳುವುದೆ?
ಬೀಸುವುದಷ್ಟೇ ಗೊತ್ತು ಗಾಳಿಗೆ
ಬದುಕ ಲೆಕ್ಕಾಚಾರಗಳಲ್ಲಿ ನನ್ನನ್ನು ಕಟ್ಟದಿರು
ತಪ್ಪಿಸಿಕೊಳ್ಳುವುದು ಗೊತ್ತು ನನಗೆ.

ನಡೆಯುವ ದಾರಿಯ ಮೇಲೆಯೇ
ಒಲವಾಗಿದೆ ಈಗ
ಮನೆಯ ನೆನಪಾಗುವುದಾದರೆ
ಹಿಂದಿರುಗಿಬಿಡು.

ಮೊರೆಯುವ ಅಲೆಗಳ ಕೋಲಾಹಲ ತೀರಕ್ಕೆ ತಾಕುವುದೆ?
ನೋಡುವುದಷ್ಟೇ ಗೊತ್ತು ತೀರಕ್ಕೆ
ಇಲ್ಲದ ದ್ವಂದ್ವಗಳಲ್ಲಿ ನನ್ನನ್ನು ಸಿಲುಕಿಸದಿರು
ಕಲ್ಲಾಗಿರಲು ಗೊತ್ತು ನನಗೆ.

ಬದುಕ ಆಳದಲ್ಲಿ ಮುಳುಗುವ
ಹುಚ್ಚು ಅತಿಯಾಗಿದೆ
ತೇಲುವ ಆಸೆಯಿನ್ನೂ ಇದ್ದರೆ
ಮರೆತುಬಿಡು.

ಸುಡುವ ರೆಕ್ಕೆಗಳ ನೆನಪು ದೀಪಕ್ಕೆ ಕಾಡುವುದೆ?
ಉರಿಯುವುದಷ್ಟೇ ಗೊತ್ತು ದೀಪಕ್ಕೆ
ನೆನಪ ಬಾಣಗಳಲ್ಲಿ ನನ್ನನ್ನು ಇರಿಯದಿರು
ಮರೆತುಬಿಡುವುದೂ ಗೊತ್ತು ನನಗೆ.

ಪ್ರೇಮದಲ್ಲಿ ಉರಿದುಹೋಗುವ
ಖಯಾಲಿ ಶುರುವಾಗಿದೆ
ಬದುಕು ದೊಡ್ಡದು ಅನ್ನಿಸಿದರೆ
ಹೊರಟುಬಿಡು.

About The Author

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು

3 Comments

  1. ಧರ್ಮಾನಂದ ಶಿರ್ವ

    ಪ್ರಕೃತಿಯೊಡನೆ ಒಂದಾಗಿ ಬೆರೆತು ಬಾಳುವ ಬದುಕಿಗಿರುವ ಸವಾಲುಗಳನ್ನು ಎದೆಗುಂದದೆ ಎದುರಿಸುವ, ಹಾಗೆಯೇ ಮುನ್ನಡೆಯುವ ಛಲವನ್ಮು ಕವನ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದೆ. ಅಭಿನಂದನೆಗಳು

    Reply
  2. Vijayalaxmi

    ನೆನಪುಗಳ ಸ್ವಗತದಲ್ಲಿ ತನ್ನತನವೇನೆಂಬ ಆತ್ಮವಿಶ್ವಾಸ ದ ನುಡಿಗಳು ಸಶಬ್ದವಾಗಿ ಗಟ್ಟಿತನವನ್ನು ಸಾರಿದ ಕವಿತೆ….ಚಂದದ ಸಾಲುಗಳು

    Reply
  3. ರವಿರಾಜ ರಾವ್ ನಗರಿ

    ಹೀಗೂ ಗೊತ್ತಿದೆ ಎಂದು ಓದಿದ ಮೇಲೆ ಗೊತ್ತಾಯಿತು!!!. ಗಜ಼ಲ್ ಶೈಲಿಯ ಪದಸಾಲುಗಳು ಖುಷಿ ನೀಡುತ್ತವೆ. ಅಭಿನಂದನೆಗಳು.

    Reply

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ